Advertisement

Telangana election: ತೆಲಂಗಾಣ: ಕಣದಲ್ಲಿ  ಬರ್ರೆಲಕ್ಕನ  ಸದ್ದು ಜೋರು

03:16 PM Nov 29, 2023 | Team Udayavani |

ಕೋಲಾರ: ತೆಲಂಗಾಣ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಆಡಳಿತಾರೂಢ ಟಿಆರ್‌ಎಸ್‌ ಅಧಿಕಾರ ಉಳಿಸಿಕೊಳ್ಳುತ್ತದೋ, ಕಾಂಗ್ರೆಸ್‌ ವಿಜಯೋತ್ಸವ ಆಚರಿಸುತ್ತದೋ, ಬಿಜೆಪಿ ಸರ್ಕಾರ ರಚನೆ ಮಾಡುತ್ತದೋ ಎಂಬ ಚರ್ಚೆಗಳ ನಡುವೆಯೂ ಎಮ್ಮೆಗಳಕ್ಕ (ಬರ್ರೆಲಕ್ಕ)ಸೀಟಿ ಊದುತ್ತಾ ಜೋರಾಗಿ ಸದ್ದು ಮಾಡುತ್ತಿದ್ದಾರೆ.

Advertisement

ತೆಲಂಗಾಣ ಮತ್ತು ಆಂಧ್ರಪ್ರದೇಶದ ಗಡಿಯಲ್ಲಿರುವ ಕೊಲ್ಲಾಪುರ ಕ್ಷೇತ್ರದಿಂದ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿರುವ ಎಮ್ಮೆಗಳಕ್ಕ ಯಾರು?. ಆಕೆಯ ಹಿನ್ನೆಲೆಯೇನು, ಪ್ರಚಾರದ ವೈಖರಿಯೇನು ಇತ್ಯಾದಿ ವಿಚಾರಗಳೇ ಚುನಾವಣಾ ಕಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಕೊಲ್ಲಾಪುರ ಕ್ಷೇತ್ರದ ಮಾರಿಕಲ್‌ ಕುಗ್ರಾಮದ ಕಡುಬಡ ಕುಟುಂಬದ ದಲಿತ ಯುವತಿ ಶಿರೀಷಾ ಅಲಿಯಾಸ್‌ ಎಮ್ಮೆಗಳಕ್ಕ. ತೆಲಂಗಾಣ ಚುನಾವಣಾ ಕಣದಲ್ಲಿ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ, ಸಾವಿರಾರು ಎಕರೆ ಜಮೀನು ಹೊಂದಿರುವ ಹಣಬಲ, ಜಾತಿ ಬಲ, ರಾಜಕೀಯ ಪಕ್ಷ ಬಲದ ಅಭ್ಯರ್ಥಿಗಳಿಗೆ ನಡುಕ ಹುಟ್ಟಿಸಿರುವುದು ಬೆವರುವಂತೆ ಮಾಡಿರುವುದು ಇವರಿಗೆ ಸಿಕ್ಕ ಮೊದಲ ಗೆಲುವಾಗಿದೆ.

ಇನ್ಸ್ಟಾಗ್ರಾಂ ಪೋಸ್ಟ್‌ ವೈರಲ್‌: ತಂದೆ ತೊರೆದ ಕುಟುಂಬದಲ್ಲಿ ತಾಯಿಯೊಂದಿಗೆ ವಾಸಿಸುತ್ತಿರುವ ಈಕೆ ಕಷ್ಟಪಟ್ಟು ಬಿ.ಕಾಂ. ವ್ಯಾಸಂಗ ಮಾಡಿ ಕೆಲಸ ಸಿಗದಿದ್ದಾಗ ಎಮ್ಮೆ ಖರೀದಿಸಿ ಅದನ್ನು ಮೇಯಿಸುತ್ತಾ, ಹಾಯ್‌ ಫ್ರೆಂಡ್ಸ್‌ ಕೆಲಸ ಸಿಗಲಿಲ್ಲವೆಂದು ಬೇಸರ ಪಟ್ಟುಕೊಳ್ಳದೆ ಎಮ್ಮೆ ಮೇಯಿಸುತ್ತಿದ್ದೇನೆ ಎಂದು ಹಾಕಿದ್ದ ನ್ಸ್ಟಾ ಪೋಸ್ಟ್‌ ವೈರಲ್‌ ಆಗಿ ಜನಪ್ರಿಯರಾಗಿಬಿಟ್ಟರು. ಹೀಗೆ, ಜನಪ್ರಿಯರಾದ ಎಮ್ಮೆಗಳಕ್ಕನಿಗೆ ಫಾಲೋವರ್ಸ್‌ ಹೆಚ್ಚಾದರು. ಅದೇ ಸಮಯಕ್ಕೆ ತೆಲಂಗಾಣ ಚುನಾವಣೆ ಘೋಷಣೆಯಾಯಿತು. ಪಕ್ಷೇತರ ಅಭ್ಯರ್ಥಿಯಾಗಿ ತೆಲಂಗಾಣದ ಸಮಸ್ತ ನಿರುದ್ಯೋಗಿಗಳ ಪರವಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ಘೋಷಿಸಿ ಚುನಾವಣಾ ಕಣಕ್ಕೆ ಧುಮುಕಿದರು.

ಲಕ್ಷಾಂತರ ಮಂದಿ ಪಾಲೋವರ್ಸ್‌: ಇವರ ಬ್ಯಾಂಕ್‌ ಬ್ಯಾಲೆನ್ಸ್‌ 1,500 ರೂಪಾಯಿ, ಕೈಯಲ್ಲಿದ್ದ ನಗದು ಕೇವಲ 5 ಸಾವಿರ ರೂಪಾಯಿ. ಸಾಮಾಜಿಕ ಜಾಲ ತಾಣದ ತಮ್ಮ ಅಕೌಂಟ್‌ಗಳಿಗೆ ಇರುವ ಲಕ್ಷಾಂತರ ಮಂದಿ ಪಾಲೋವರ್ಸ್‌ ಸದ್ಯಕ್ಕೆ ಇವರು ಸಂಪಾದಿಸಿರುವ ಆಸ್ತಿಯಾಗಿದೆ. ಪಾಳೇಗಾರಿಕೆ ವ್ಯವಸ್ಥೆಯ ತೆಲಂಗಾಣದಲ್ಲಿ ಈಗಾಗಲೇ ರಾಜಕೀಯವಾಗಿ ಬೇರೂರಿರುವ ಘಟಾನುಘಟಿಗಳ ನಡುವೆ ಚುನಾವಣೆಗೆ ಸ್ಪರ್ಧಿಸಲು ಯಾರೇ ಆಗಲಿ ಹಿಂದೇಟು ಹಾಕುತ್ತಾರೆ. ಇಂತಹವರ ಮಧ್ಯೆ ಚುನಾವಣೆಗೆ ಸ್ಪ ರ್ಧಿಸಿದ ಎಮ್ಮೆಗಳಕ್ಕರ ಧೈರ್ಯಯನ್ನು ತೆಲಂಗಾಣದ ಜನರೇ ಮೆಚ್ಚಿಕೊಂಡಾಡುತ್ತಿದ್ದಾರೆ. ಆನಂತರ ನಡೆದಿದ್ದೆಲ್ಲಾ ರಾಜಕೀಯ ಪವಾಡ.

Advertisement

ಲಕ್ಷಾಂತರ ಮಂದಿ ಸ್ಪಂದನೆ: ಬಾಲ್ಯದಲ್ಲೇ ತೊರೆದು ಹೋಗಿದ್ದ ತಂದೆಯಿಂದಲೇ ಅಪಪ್ರಚಾರ, ಚುನಾವಣಾ ಪ್ರಚಾರಕ್ಕೆ ಅಡ್ಡಿ, ಸಹೋದರನ ಮೇಲೆ ಹಲ್ಲೆ, ಇದ್ದ ಒಂದೇ ಮೊಬೈಲ್‌ ಫೋನ್‌ ಬ್ಲಾಕ್‌ ಮಾಡಿಸಿದ್ದು, ನ್ಯಾಯಾಲಯದಿಂದ ಬೆಂಗಾವಲು ರಕ್ಷಕ ಪಡೆಯ ಸೌಲಭ್ಯ, ಎಫ್‌ಐಆರ್‌ ಮೂಲಕ ಉತ್ಸಾಹ ಕುಗ್ಗಿಸುವ ಪ್ರಯತ್ನ, ಸಾಮಾಜಿಕ ಜಾಲ ತಾಣದ ಪೋಸ್ಟ್‌ಗಳಿಗೆ ಲಕ್ಷಾಂತರ ಮಂದಿ ಸ್ಪಂದನೆ, ಪ್ರಚಾರಕ್ಕೆ ಹರಿದು ಬಂದ ನೆರವಿನ ಮಹಾಪೂರ ಇವು ಎಮ್ಮೆಗಳಕ್ಕನ ಪ್ರಚಾರವನ್ನು ಮತ್ತಷ್ಟು ಪ್ರಖರಗೊಳಿಸುವಂತೆ ಮಾಡಿದೆ.

ಬರ್ರೆಲಕ್ಕನ ಪರ ಪ್ರಚಾರಕ್ಕೆ ನಿಂತ ಯುವಗಣ : ಟಿ.ಆರ್‌ಎಸ್‌, ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು ಸೇರಿ ಒಟ್ಟು 14 ಮಂದಿ ಅಭ್ಯರ್ಥಿಗಳಲ್ಲಿ ಎಮ್ಮೆಗಳಕ್ಕನ ಪರವಾಗಿ ತೆಲಂಗಾಣದ ಯುವಗಣ ಪ್ರಚಾರಕ್ಕೆ ನಿಂತಿದೆ. ನೆರೆ ಜಿಲ್ಲೆ, ರಾಜ್ಯಗಳಿಂದಲೂ ನೂರಾರು ಗುಂಪುಗಳು ಇವರ ಪರವಾಗಿ ಕ್ಷೇತ್ರಕ್ಕೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಸಮಸ್ತ ಜನಸಾಮಾನ್ಯರ ಪ್ರತಿನಿಧಿಯಾಗಿ ಪ್ರಚಾರದಲ್ಲಿ ತಮ್ಮ ಚಿಹ್ನೆಯಾದ ಸೀಟಿಯ ಧ್ವನಿ ಮೊಳಗಿಸುತ್ತಿದ್ದಾರೆ. ಪ್ರಚಾರದಲ್ಲಿ ಹೆಜ್ಜೆಗೂ ಹೆಜ್ಜೆಗೂ ಎದುರಾಗುತ್ತಿರುವ ಟೀಕೆ ಟಿಪ್ಪಣೆ, ದೂರು, ಪ್ರತಿರೋಧ, ಅನುಮಾನ, ಅವಮಾನ, ಎಫ್‌ಐಆರ್‌ ಪರಿಗಣಿಸದೆ ಎಮ್ಮೆಗಳಕ್ಕ ತೆಲಂಗಾಣ ಚುನಾವಣಾ ಕಣದಲ್ಲಿ ಚುರುಕಾಗಿ ಓಡಾಡುತ್ತಿದ್ದಾರೆ. ತಮ್ಮಲ್ಲಿರುವ ಸಂಪನ್ಮೂಲಗಳ ಕೊರತೆಯಿಂದ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ತೆರಳಿ ಮತಯಾಚಿಸಲು ಆಗದಿದ್ದರೂ, ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ.

ಕಣದಲ್ಲಿ ಹೆಚ್ಚು ಚರ್ಚೆಗೊಳಗಾದ ಅಭ್ಯರ್ಥಿ : ಮಂಗಳವಾರ ಬಹಿರಂಗ ಪ್ರಚಾರ ಕೊನೆಗೊಳ್ಳುವ ಮುನ್ನ ಕ್ಷೇತ್ರದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮತಯಾಚಿಸಿದ್ದಾರೆ. ಹಣ, ಜಾತಿ, ಖಂಡ ಬಲಗಳಿಲ್ಲದೆ ಬರ್ರೆಲಕ್ಕ(ಎಮ್ಮೆಗಳಕ್ಕ)ಹೆಸರನ್ನೇ ಬ್ರಾಂಡ್‌ ಮಾಡಿಕೊಂಡು ಪ್ರಚಾರ ನಡೆಸುತ್ತಾ ಕ್ಷೇತ್ರದ ಮತದಾರರನ್ನು ಮಾತ್ರವಲ್ಲದೆ, ತೆಲಂಗಾಣ ರಾಜ್ಯ ಮತ್ತು ದೇಶವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿಬಿಟ್ಟಿದ್ದಾರೆ. ಆ ಮೂಲಕ ತೆಲಂಗಾಣ ಚುನಾವಣಾ ಕಣದಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಚುನಾವಣೆಯಲ್ಲಿ ಎಮ್ಮೆಗಳಕ್ಕ ಶಿರೀಷಾ ಗೆಲ್ಲಬಹುದು ಅಥವಾ ಸೋಲಬಹುದು, ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಸಮಯ, ಸ್ಫೂರ್ತಿ, ಬುದ್ಧಿವಂತಿಕೆ ಹಾಗೂ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚುನಾವಣೆಗೆ ಸ್ಪರ್ಧಿಸಬಹುದು. ಜನರ ಗಮನ ಸೆಳೆಯಬಹುದು ಎನ್ನುವುದಕ್ಕೆ ರೋಲ್‌ ಮಾಡೆಲ್‌ ಆಗಿದ್ದಾಳೆ ಬರ್ರೆಲಕ್ಕ

-ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next