Advertisement

ತೇಜಸ್ ಎಕ್ಸ್ ಪ್ರೆಸ್ 2 ಗಂಟೆ ವಿಳಂಬ…IRCTC ಪ್ರಯಾಣಿಕರಿಗೆ ಪರಿಹಾರ ಕೊಟ್ಟಿದ್ದೆಷ್ಟು?

12:37 PM Aug 24, 2021 | Team Udayavani |

ನವದೆಹಲಿ:ಭಾರತದ ಮೊದಲ ಖಾಸಗಿ ರೈಲು ತೇಜಸ್ ಎಕ್ಸ್ ಪ್ರೆಸ್ ಶನಿವಾರ ಮತ್ತು ಭಾನುವಾರದ ಸಂಚಾರದಲ್ಲಿ 2.5 ಗಂಟೆಗಳಷ್ಟು ಕಾಲ ವಿಳಂಬವಾಗಿದ್ದು, ಇದರ ಪರಿಣಾಮ ಇದೇ ಮೊದಲ ಬಾರಿಗೆ ಐಆರ್ ಸಿಟಿಸಿ ಒಟ್ಟು 4.5 ಲಕ್ಷ ರೂಪಾಯಿ ಪರಿಹಾರ ನೀಡುವಂತಾಗಿದೆ.!

Advertisement

ಇದನ್ನೂ ಓದಿ:ವಿಶ್ವನಾಥ್ ಅವರೇ, ನೀವು ಸತ್ಯಸಂಧರ ರೀತಿ ಮಾತಾಡಬೇಡಿ: ಪ್ರತಾಪ್ ಸಿಂಹ

ಶನಿವಾರ ಭಾರೀ ಮಳೆಯಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಗ್ನಲ್ ವೈಫಲ್ಯದಿಂದ ತೇಜಸ್ ರೈಲು ಸುಮಾರು ಎರಡೂವರೆ ಗಂಟೆಗಳಷ್ಟು ಕಾಲ ವಿಳಂಬವಾಗಿ ತಲುಪಿತ್ತು. ಭಾನುವಾರವೂ ಕೂಡಾ ಲಕ್ನೋ-ದೆಹಲಿ ರೈಲು ಒಂದು ಗಂಟೆಗಳಷ್ಟು ಕಾಲ ವಿಳಂಬವಾಗಿ ಆಗಮಿಸಿರುವುದಾಗಿ ವರದಿ ತಿಳಿಸಿದೆ.

ಏನಿದು ಪರಿಹಾರ?

ಭಾರತದಲ್ಲಿ ರೈಲು ಸಮಯಕ್ಕೆ ಸರಿಯಾಗಿ ತಲುಪದೇ ವಿಳಂಬವಾದಲ್ಲಿ ಪ್ರಯಾಣಿಕರಿಗೆ ಪರಿಹಾರ ನೀಡುವ ಮೊದಲ ರೈಲು ತೇಜಸ್ ಎಕ್ಸ್ ಪ್ರೆಸ್.  ರೈಲು ಒಂದು ಗಂಟೆ ವಿಳಂಬವಾದರೆ ಪ್ರಯಾಣಿಕರು ನೂರು ರೂಪಾಯಿ ಪರಿಹಾರ ಸಿಗುತ್ತದೆ. ಎರಡು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ವಿಳಂಬವಾದರೆ ಪ್ರಯಾಣಿಕರಿಗೆ 250 ರೂಪಾಯಿ ಪರಿಹಾರ ದೊರೆಯುತ್ತದೆ.

Advertisement

ಶನಿವಾರ ತೇಜಸ್ ಎಕ್ಸ್ ಪ್ರೆಸ್ ಎರಡು ಟ್ರಿಪ್ ಗಳ ವಿಳಂಬದಿಂದಾಗಿ ಐಆರ್ ಸಿಟಿಸಿ 1574 ಪ್ರಯಾಣಿಕರಿಗೆ ಒಟ್ಟು 3,93,500 ರೂಪಾಯಿ  (ಪ್ರತಿ ಪ್ರಯಾಣಿಕರಿಗೆ 250 ರೂ.) ಪರಿಹಾರದ ಹಣವನ್ನು ಮರು ಪಾವತಿಸಲಾಗಿದೆ. ಅಷ್ಟೇ ಅಲ್ಲ ಭಾನುವಾರ ತೇಜಸ್ ಎಕ್ಸ್ ಪ್ರೆಸ್ ಒಂದು ಗಂಟೆಗಳ ಕಾಲ ವಿಳಂಬವಾಗಿದ್ದಕ್ಕೆ 561 ಪ್ರಯಾಣಿಕರಿಗೆ ತಲಾ 150 ರೂಪಾಯಿಯಂತೆ ಪರಿಹಾರದ ಹಣವನ್ನು ಪಾವತಿಸಲಾಗಿದೆ ಎಂದು ವರದಿ ವಿವರಿಸಿದೆ.

2019ರ ಆಗಸ್ಟ್ 4ರಂದು ವಿಮಾನ ಮಾದರಿ ಸೌಲಭ್ಯಗಳನ್ನೊಳಗೊಂಡ ತೇಜಸ್ ಎಕ್ಸ್ ಪ್ರೆಸ್ ರೈಲನ್ನು ಲಕ್ನೋ ಮತ್ತು ದೆಹಲಿ ನಡುವೆ ಮೊದಲ ಬಾರಿಗೆ ಸಂಚರಿಸಲು ಚಾಲನೆ ನೀಡಲಾಗಿತ್ತು. ಶೇ.99.9ರಷ್ಟು ನಿಗದಿತ ಸಮಯಕ್ಕೆ ರೈಲು ಸಂಚಾರ ಮತ್ತು ತಲುಪುವುದನ್ನು ನಿರ್ವಹಿಸಲಾಗುತ್ತಿದೆ ಎಂದು ಐಆರ್ ಸಿಟಿಸಿ ಹೇಳಿದೆ.

ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಎರಡು ಗಂಟೆಗಳಷ್ಟು ವಿಳಂಬವಾಗಿರುವುದು. ಒಂದು ವೇಳೆ ರೈಲು ಆಗಮಿಸುವುದು ವಿಳಂಬವಾದರೆ ಭಾರೀ ಮೊತ್ತದ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next