Advertisement

Technology: ಇತ್ತೀಚಿನ ದಿನಗಳ ತಂತ್ರಜ್ಞಾನ- ಒಂದು ಪರಿಕಲ್ಪನೆ

12:55 PM Oct 12, 2024 | Team Udayavani |

ಕಾಲವು ಹೇಗೆ ತ್ವರಿತಗತಿಯಲ್ಲಿ ಸಾಗುತ್ತಿದೆಯೋ ಅದೇ ರೀತಿ ಮಾನವನ ಉಗಮವಾದಲ್ಲಿನಿಂದ ಅವನ ಬುದ್ಧಿಶಕ್ತಿಯಲ್ಲೂ ಅತ್ಯಂತ ಕ್ಷಿಪ್ರಗತಿಯಲ್ಲಿ ಬದಲಾವಣೆಯಾಗುತ್ತಿದೆ. ಅದರಲ್ಲೂ ಅದು ಬರಿಯ ಬದಲಾವಣೆಯೆಂದು ವ್ಯಾಖ್ಯಾನಿಸುವುದಕ್ಕಿಂತ ಅದನ್ನು ವಿಕಾಸ ಎಂದು ನಾಮನಿರ್ದೇಶಿಸುವುದೇ ಸೂಕ್ತವಲ್ಲವೇ?

Advertisement

ಪ್ರಸ್ತುತ ಕಾಲಘಟ್ಟದಲ್ಲಿ ತಂತ್ರಜ್ಞಾನವು ಮಾನವ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಆಳವಾದ ಪರಿಣಾಮ ಬೀರುತ್ತಿದೆ. ಜೀವನ ಶ್ರೇಣಿಯು ಉದ್ಯೋಗ, ಶಿಕ್ಷಣ ಮತ್ತು ಸಾಮಾಜಿಕ ಸಂಪರ್ಕವನ್ನು ಬದಲಾಯಿಸುತ್ತದೆ. ಡಿಜಿಟಲ್‌ ಜಗತ್ತಿನ ಬೆಳವಣಿಗೆಗಳ ಜತಜತೆಗೆ ನಮ್ಮ ದಿನಚರಿಯ ಅಂಶವಾಗಿ ಹೋಗಿದೆ.

ಹಲವು ಕ್ಷೇತ್ರಗಳಲ್ಲಿ ಸಹಕಾರಿ
ತಂತ್ರಜ್ಞಾನವು ಮಾನವನ ಸೃಜನಶೀಲತೆಯನ್ನು ಪ್ರೋತ್ಸಾಹಿಸುತ್ತಾ ಮತ್ತು ನವೀನ ಪರಿಕಲ್ಪನೆಗಳಿಗೆ ಅವಕಾಶ ನೀಡುತ್ತಾ ಬಂದಿದೆ. ವಿವಿಧ ರೀತಿಯ ಕ್ಲೌಡ್‌ ಕಂಪ್ಯೂಟಿಂಗ್‌ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಗಳು ಏಕಕಾಲದಲ್ಲಿ ವ್ಯಾಪಾರ ಪ್ರಕ್ರಿಯೆಗಳನ್ನು ಸುಲಭಗೊಳಿಸುತ್ತವೆ. ಕ್ಲೌಡ್‌ ಸೇವೆಗಳ ಮೂಲಕ, ಕಂಪೆನಿಗಳು ತಮ್ಮ ಡೇಟಾವನ್ನು ಸುರಕ್ಷಿತವಾಗಿ ಇಡಲು ಮತ್ತು ಅಗತ್ಯವಿರುವಾಗ ಯಾವುದೇ ಸ್ಥಳದಿಂದ ಪ್ರವೇಶಿಸಲು ಸಾಧ್ಯವಾಗುತ್ತದೆ. ಈ ತಂತ್ರಜ್ಞಾನಗಳು ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಲು ಸಹಾಯ ಮಾಡುತ್ತವೆ.

ಶಿಕ್ಷಣದಲ್ಲಿ, ಆನ್‌ಲೈನ್‌ ಪಾಠಗಳು ಮತ್ತು ಡಿಜಿಟಲ್‌ ಸಂಪತ್ತುಗಳು ವಿದ್ಯಾರ್ಥಿಗಳಿಗೆ ಹೆಚ್ಚು ಸುಲಭವಾಗಿ ಶಿಕ್ಷಣ ಪಡೆಯಲು ಅವಕಾಶ ನೀಡುತ್ತವೆ. ಇದರಿಂದಾಗಿ, ಅಂತರದ ಮತ್ತು ಜಾಗತಿಕ ಶ್ರೇಣಿಯಲ್ಲಿನ ವಿದ್ಯಾರ್ಥಿಗಳು ಸಮಾನ ಶ್ರೇಣಿಯಲ್ಲಿ ಪ್ರಗತಿ ಹೊಂದಲು ಸಾಧ್ಯವಾಗುತ್ತವೆ. ಇಂಟರ್‌ನೆಟ್‌ ಮೂಲಕ ಶಿಕ್ಷಣದ ಒದಗಿಸುವಿಕೆ, ಉನ್ನತ ಗುಣಮಟ್ಟದ ವಿಷಯಗಳ ಮೇಲೆ ಸಂಪೂರ್ಣ ಅಭ್ಯಾಸವನ್ನು ಪಡೆಯಬಹುದಾಗಿದೆ.

ನೂತನ ತಂತ್ರಜ್ಞಾನಗಳ ವಿಧವಿಧದ ಗ್ಯಾಜೆಟ್‌ಗಳ ಅನಾವರಣ ಇತ್ತೀಚಿನ ದಿನಗಳಲ್ಲಿ, ಕೇವಲ ದೂರದರ್ಶನ (ಟಿ.ವಿ)ಗಳನ್ನು ನೋಡುವುದಾದರೆ, ಮೊದಲಿಗೆ ಕಪ್ಪು-ಬಿಳುಪಿನ ಜತೆ ಪ್ರಾರಂಭವಾಗಿ, ವರ್ಣಮಯ, ಎಚ್‌ಡಿ, ಫುಲ್‌ ಎಚ್‌ಡಿ, 4ಕೆ, ಹೀಗೆ ಅಭಿವೃದ್ಧಿ ಹೊಂದಿ ಹೊಂದಿ ಈಗ ಕರ್ವ್‌ಡ್‌ ಡಿಸ್‌ ಪ್ಲೇ ಗಳ ಜತೆಗೆ ಅತ್ಯುತ್ತಮ ಸರೌಂಡ್‌ ಆಡಿಯೋ ಔಟ್‌ಪುಟ್‌ ನೀಡುವ ಹಲವಾರು ಕಂಪೆನಿಯ ಟಿವಿಗಳು ಮಾರುಕಟ್ಟೆಯಲ್ಲಿವೆ.

Advertisement

ಅಂದು ಕೇವಲ ಸುದ್ದಿವಾಹಿನಿಗಳನ್ನು, ಮನೋರಂಜನ ವಾಹಿನಿಗಳನ್ನು ಅಥವಾ ಕ್ರೀಡಾ ವಾಹಿನಿಗಳನ್ನು ವೀಕ್ಷಿಸಲು ಟಿ.ವಿ ಬಳಸಲಾಗುತ್ತಿತ್ತು. ಆದರೆ ಈಗ ಟಿ.ವಿಯಲ್ಲಿಯೇ ಆ್ಯಂಡ್ರಾಯ್ಡ ವ್ಯವಸ್ಥೆ ಸಂಯೋಜಿಸಲಾಗಿದೆ. ಮೊಬೈಲ್‌ ಫೋನ್‌ಗಳ ಬಗ್ಗೆ ಹೇಳುವುದಾದರೆ, ಕೇವಲ ಕರೆ ಮಾಡುವ ಉಪಕರಣವಾಗಿದ್ದ ಒಂದು ಉಪಕರಣ ಈಗ ನಮ್ಮ ದೈನಂದಿನ ಕೆಲಸಗಳಲ್ಲಿ ತನ್ನ ಒಂದು ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಕೆಮಾರಾ, ಟಿ.ವಿ, ಕ್ಯಾಲ್ಕುಲೇಟರ್‌, ಕಂಪ್ಯೂಟರ್‌ಗಳ ಒಂದು ರೀತಿಯ ಪರ್ಯಾಯವಾಗಿ ಇಂದು ಮೊಬೈಲ್‌ ಫೋನ್‌ ಸಮಾಜದಲ್ಲಿ ತನ್ನ ಪ್ರಾಬಲ್ಯವನ್ನು ಮೆರೆದಿದೆ. ಅಂದು ಹೆಚ್ಚೆಂದರೆ 5,000 ರೂ.ಗಳಷ್ಟರವರೆಗೆ ಇದ್ದ ಮೊಬೈಲ್‌ ಫೋನ್‌ಗಳ ಬೆಲೆ ಈಗ ಲಕ್ಷಗಳನ್ನೇ ದಾಟಿದೆ.

ಕೇವಲ ಟಿ.ವಿ, ಮೊಬೈಲ್‌ ಫೋನಗಳಷ್ಟೇ ಅಲ್ಲದೇ ನೂತನ ಉಪಕರಣಗಳೂ ಸಹ ಮಾರುಕಟ್ಟೆಯಲ್ಲಿ ನಾವೀಗ ಕಾಣಬಹುದಾಗಿದೆ. ಉದಾಹರಣೆಗೆ ಮೆಟಾ ವಿಆರ್‌, ಆ್ಯಪಲ್‌ ವಿಷನ್‌ ಪ್ರೋ ವಿಆರ್‌ಗಳು, ಸ್ಮಾರ್ಟ್‌ಗ್ಲಾಸ್‌ಗಳು(ಸ್ಮಾರ್ಟ್‌ ಕನ್ನಡಕಗಳು), ಹೂಮೇನ್‌ ಎಐ ಪಿನ್‌, ವೈರ್‌ಲೆಸ್‌ ಚಾರ್ಜರ್‌ಗಳು, ವೈರ್‌ಲೆಸ್‌ ಸಿಸಿಕೆಮರಾಗಳು, ಸ್ಮಾರ್ಟ್‌ಲಾಕ್‌ಗಳು, ಸ್ಮಾರ್ಟ್‌ ಸ್ವಿಚ್‌ಗಳು, ಸ್ಮಾರ್ಟ್‌ಬಲ್ಬುಗಳು, ಸ್ಮಾರ್ಟ್‌ಫ್ಯಾನುಗಳು ಹೀಗೆ ಹೇಳುತ್ತಾ ಹೋದರೆ ತಂತ್ರಜ್ಞಾನದ “ಸ್ಮಾರ್ಟ್‌ನೆಸ್‌’ ನಮಗೆ ತಿಳಿಯುತ್ತದೆ.

ಅಪಾಯವೂ ಹೆಚ್ಚು!
ಕತ್ತಲೇ ಇಲ್ಲದೆ ಹೋಗಿದ್ದರೆ ಬೆಳಕಿಗೆ ಬೆಲೆ ಎಲ್ಲಿದೆ? ತಂತ್ರಜ್ಞಾನಗಳಿಂದ ಎಷ್ಟು ಒಳಿತು, ಉಪಯೋಗವಾಗುತ್ತಿದ್ದರೂ ಅಷ್ಟೇ ಪ್ರಮಾಣದ ಅಥವಾ ಅದಕ್ಕಿಂತ ಒಂದು ಪಟ್ಟು ಹೆಚ್ಚು ಅಪಾಯವೂ ಇರುವುದು ಸತ್ಯಾಂಶ. ಹಾಗಾಗಿ ತಂತ್ರಜ್ಞಾನವನ್ನು ಬಳಸಿದಾಗ ಉಂಟಾಗುವ ಅಪಾಯಗಳಿಗೂ ಜಾಗೃತಿ ಅಗತ್ಯವಿದೆ. ಡೇಟಾ ಭದ್ರತೆ, ವೈಯಕ್ತಿಕ ಮಾಹಿತಿಯ ಅತಿಯಾದ ಬಳಸುವಿಕೆ ಮತ್ತು ಬೇಜವಾಬ್ದಾರಿಯುತವಾಗಿ ತಂತ್ರಜ್ಞಾನದ ಬಳಕೆಯ ಬಗ್ಗೆ ಗಮನಹರಿಸಬೇಕಾಗಿದೆ. ಇವುಗಳು ಯಾದೃಚ್ಛಿಕ ಸಮಸ್ಯೆಗಳಾದರೂ ಸಮಾಧಾನಕರ ಪರಿಹಾರಗಳ ಅಗತ್ಯವಿದೆ.

ಅದೇನೆ ಇದ್ದರೂ ನಾವು ಈ ತಂತ್ರಜ್ಞಾನಗಳ ಸದ್ಬಳಕೆಗೆ ಹೆಚ್ಚು ಗಮನಹರಿಸಬೇಕು. ದೈನಂದಿನ ಸಂವಹನ, ಉದ್ಯೋಗ ಮತ್ತು ಶಿಕ್ಷಣವನ್ನು ಸುಧಾರಿಸಲು ಮತ್ತು ಜೀವಿತಾವಧಿಯನ್ನು ಉತ್ತಮಗೊಳಿಸಲು ತಂತ್ರಜ್ಞಾನಗಳನ್ನು ಬಳಸುವ ಸಲುವಾಗಿ ಬದ್ಧರಾಗಿರಬೇಕು. ಮುನ್ನೋಟಕ್ಕೆ ಎಲ್ಲ ತಂತ್ರಜ್ಞಾನಗಳು ಉತ್ತಮವಾಗಿದ್ದರೂ ಅವುಗಳ ಹಿಂದಿನ ಶಕ್ತಿ ಮಾನವನದ್ದೇ ಆಗಿದೆ. ಇತ್ತೀಚೆಗೆ ಪ್ರಚಲಿತದಲ್ಲಿರುವ ಎಐ ಕೂಡ ಅಷ್ಠೆ. ಅವನ್ನು ಯಾರು ಎಷ್ಟೇ ಜೀವಸಂಕುಲಕ್ಕೆ ಮಾರಕ ಎಂದರೂ, ಅವು ಕೇವಲ ಮಾನವ ಸೃಷ್ಟಿ. ಮಾನವನನ್ನು ಮೀರಿಸಲು ಪ್ರಕೃತಿಗಷ್ಟೇ ಸಾಧ್ಯ ಹೊರತಾಗಿ ಯಾವುದೇ ತಂತ್ರಜ್ಞಾನಗಳಿಗಲ್ಲ.

*ಅವನೀಶ್‌ ಭಟ್‌, ಸವಣೂರು

Advertisement

Udayavani is now on Telegram. Click here to join our channel and stay updated with the latest news.

Next