Advertisement

ಪುನೀತ್ ರಾಯಭಾರಿಯಾಗಿರುವ “ಚೆಲುವ ಚಾಮರಾಜನಗರ”ಟೀಸರ್ ಬಿಡುಗಡೆ

09:07 PM Nov 11, 2020 | mahesh |

ಚಾಮರಾಜನಗರ: ಜಿಲ್ಲೆಯಲ್ಲಿರುವ ಆಕರ್ಷಕ ಪ್ರವಾಸಿ ತಾಣಗಳನ್ನು ಪರಿಚಯಿಸಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಚೆಲುವ ಚಾಮರಾಜನಗರ ಶೀರ್ಷಿಕೆಯಡಿ ಚಿತ್ರೀಕರಿಸಲಾಗಿರುವ, ಪುನೀತ್ ರಾಜ್‌ಕುಮಾರ್ ಅವರು ರಾಯಭಾರಿಯಾಗಿರುವ ವಿಡಿಯೋ ಚಿತ್ರಣವನ್ನು ಇದೇ ನವೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುವುದೆಂದು ಜಿಲ್ಲಾಧಿಕಾರಿ ಡಾ ಎಂ.ಆರ್. ರವಿ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಡಿಯೋ ಟೀಸರ್ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾಧಿಕಾರಿಯವರು ಚಾಮರಾಜನಗರ ಜಿಲ್ಲೆ ಪ್ರಾಕೃತಿಕ ಹಾಗೂ ಸಾಂಸ್ಕೃತಿಕವಾಗಿ ಸಮೃದ್ದವಾಗಿದ್ದು ಸೊಗಸಾಗಿದೆ. ಇಲ್ಲಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಾಗೂ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸುವ ವಿಫುಲ ಅವಕಾಶಗಳಿವೆ. ಇದನ್ನು ತೋರಿಸುವ ಪ್ರಯತ್ನ ವಿಡಿಯೋ ಮೂಲಕ ನಡೆದಿದೆ ಎಂದರು.

ಚಾಮರಾಜನಗರ ಜಿಲ್ಲೆಯನ್ನು ಒಂದೇ ಪದದಲ್ಲಿ ವರ್ಣಿಸಬಹುದಾದರೆ ಪ್ರಕೃತಿ ಸಂಸ್ಕೃತಿಯ ಸಮಾಗಮ. ಇಲ್ಲಿರುವ ಅನೇಕ ಪ್ರಕೃತಿ ಸೌಂದರ್ಯ ತಾಣಗಳು ಬಹಳಷ್ಟು ಜನರ ಕಣ್ಣಿಗೆ ಕಂಡು ಬಂದಿಲ್ಲ. ಜಿಲ್ಲೆಯ ಸಮೃದ್ದ ಅಸೀಮ ಚೆಲುವು ವಿಡಿಯೋ ಮೂಲಕ ಸಿಗಲಿದೆ. ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ಪರಿಚಯಿಸುವ ಉದ್ದೇಶದೊಂದಿಗೆ ಚೆಲುವ ಚಾಮರಾಜನಗರ ಹುಲಿಗಳ ನಾಡು ಎಂಬ ಟ್ಯಾಗ್‌ಲೈನ್ ನೊಂದಿಗೆ ಪ್ರವಾಸಿ ತಾಣಗಳನ್ನು ಚಿತ್ರೀಕರಿಸಲಾಗಿದೆ. ವಿಶೇಷವೆಂದರೆ ಈ ಪ್ರಮೋಷನಲ್ ವೀಡಿಯೋಗೆ ಜಿಲ್ಲೆಯವರೇ ಆದ ಕನ್ನಡದ ಹೆಸರಾಂತ ಚಲನಚಿತ್ರ ನಾಯಕ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಂದೇಶ ನೀಡಿದ್ದಾರೆ ಎಂದರು.

ಜಿಲ್ಲೆಯ ಸಂಸ್ಕೃತಿ ಹಾಗೂ ಪ್ರವಾಸಿ ತಾಣಗಳನ್ನು ಕಟ್ಟಿ ಕೊಡುವ 4 ನಿಮಿಷಕ್ಕೂ ಹೆಚ್ಚಿನ ಅವಧಿಯ ವೀಡಿಯೋಗೆ ಪುನೀತ್ ರಾಜ್‌ಕುಮಾರ್ ಅವರನ್ನು ಕೇಳಿಕೊಂಡಾಗ ಸಂತೋಷದಿಂದಲೇ ಒಪ್ಪಿಕೊಂಡರು. ಅವರು ಕೇವಲ ಜಿಲ್ಲೆಯ ಪ್ರವಾಸೋದ್ಯಮ ರಾಯಭಾರಿ ಮಾತ್ರವಲ್ಲ. ಈಗಾಗಲೇ ಚಾಮರಾಜನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗಾಗಿ ರಾಯಭಾರಿಯಾಗಿದ್ದಾರೆ. ಮೇರು ನಟ ಪುನೀತ್ ಅವರು ಯಾವುದೇ ಸಂಭಾವನೆ ಇಲ್ಲದೇ ಅಭಿಮಾನದಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ದಿಗೆ ಪೂರಕವಾಗಿರುವ ವೀಡಿಯೋಗೆ ಸಂದೇಶ ನೀಡಿದ್ದಾರೆ. ಇದಕ್ಕಾಗಿ ವೈಯಕ್ತಿಕವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲೆ ಜನತೆ ಪರವಾಗಿ ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸುತ್ತೇನೆ. ವೀಡಿಯೋ ನೀಡಿದ ಸಂದೇಶಕ್ಕಾಗಿ ಧನ್ಯವಾದಗಳನ್ನು ತಿಳಿಸುವ ಪತ್ರವನ್ನು ಸಹ ಪುನೀತ್ ರಾಜ್‌ಕುಮಾರ್ ಅವರಿಗೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದೇ ನ. 25, 26ರಂದು ಮಲೈಮಹದೇಶ್ವರ ಬೆಟ್ಟಕ್ಕೆ ಮುಖ್ಯಮಂತ್ರಿ ಅವರು ಬರುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿಯೂ ಅಧಿಕೃತವಾಗಿ ವಿಡಿಯೋ ಬಿಡುಗಡೆ ಮಾಡಬೇಕು ಎಂಬ ಉದ್ದೇಶ ಇದೆ. ಇದು ಸಾಧ್ಯವಾಗದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದಲೂ ಬಿಡುಗಡೆಗೊಳಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಒಟ್ಟಾರೆ ನವೆಂಬರ್ ತಿಂಗಳಿನಲ್ಲಿಯೇ ಕಾರ್ಯಕ್ರಮ ಆಯೋಜಿಸಿ ವಿಡಿಯೋ ಬಿಡುಗಡೆ ಮಾಡಲಾಗುವುದು. ಈ ಸಂದರ್ಭದಲ್ಲಿ ವರ್ಚುವೆಲ್ ಆಗಿ ಪುನೀತ್ ರಾಜ್‌ಕುಮಾರ್ ಅವರು ಭಾಗವಹಿಸಲು ಕೋರಲಾಗಿದೆ ಎಂದರು.

Advertisement

ಜಿಲ್ಲೆಯಲ್ಲಿ 2 ಹುಲಿ ಸಂರಕ್ಷಿತ ಧಾಮಗಳು ಇವೆ. ಅಗಾಧ ಪ್ರಾಕೃತಿಕ ಸಂಪತ್ತು ಹೊಂದಿರುವ ಪ್ರವಾಸಿ ಸ್ಥಳಗಳ ಕುರಿತು ಮಾಹಿತಿ ನೀಡುವ ಕಾಫಿ ಟೇಬಲ್ ಬುಕ್‌ಗಳನ್ನು ರೆಸಾರ್ಟ್‌ಗಳು, ವಿಮಾನ ನಿಲ್ದಾಣ ಸೇರಿದಂತೆ ಪ್ರವಾಸಿಗರು ಬರುವ ಸ್ಥಳಗಳಲ್ಲಿ ಇಡುವ ವ್ಯವಸ್ಥೆಗೆ ಚಿಂತನೆ ಮಾಡಲಾಗಿದೆ. ಪ್ರವಾಸಿ ತಾಣಗಳಿಗೆ ದೇಶ ವಿದೇಶಿಗರನ್ನು ಆಕರ್ಷಿಸಿ ಇಲ್ಲಿನ ಪ್ರವಾಸೋದ್ಯಮವನ್ನು ಅಭಿವೃದ್ದಿ ಪಡಿಸುವ ಮಹತ್ತರ ಉದ್ದೇಶ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಪ್ರವಾಸೋದ್ಯಮ ಅಭಿವೃದ್ದಿ ಕುರಿತ ಚೆಲುವ ಚಾಮರಾಜನಗರ ವಿಡಿಯೋದ ಟೀಸರ್ ಪ್ರದರ್ಶನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next