Advertisement

ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸಿ: ಪ್ರೊ.ವೆಂಕಟೇಶ್‌

12:49 PM Nov 26, 2019 | Suhan S |

ಶಿವಮೊಗ್ಗ: ವಿದ್ಯಾಭ್ಯಾಸ ಮತ್ತು ಉದ್ಯೋಗ ಕಾರಣಗಳಿಗಾಗಿ ಕರ್ನಾಟಕಕ್ಕೆ ಬರುವಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ ಮೂಲಕ ಕನ್ನಡ ದೀಕ್ಷೆ ನೀಡುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನದಾಗಿರುತ್ತದೆ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಅಭಿಪ್ರಾಯಪಟ್ಟರು.

Advertisement

ಕುವೆಂಪು ವಿಶ್ವವಿದ್ಯಾಲಯವು ವಿವಿ ಕ್ಯಾಂಪಸ್‌ ನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ, ವ್ಯವಹಾರಿಕ ಹಾಗೂ ಇನ್ನಿತರೆ ದಿನನಿತ್ಯದ ಅಗತ್ಯಗಳನ್ನು ಕನ್ನಡದಲ್ಲಿ ಪೂರೈಸಿಕೊಳ್ಳಲು ನಾವು ಪ್ರಯತ್ನಿಸಬೇಕು.

ಉದ್ಯೋಗ ನಿಮಿತ್ತ ಕರ್ನಾಟಕದಲ್ಲಿ ನೆಲೆಸಿರುವ ಹೊರ ರಾಜ್ಯದ ಜನರಿಗೆ ಹಾಗೂ ಐ.ಸಿ.ಎಸ್‌.ಸಿ ಮತ್ತು ಸಿ.ಬಿ.ಎಸ್‌.ಸಿ. ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಕನ್ನಡವನ್ನು ಸ್ವ ಇಚ್ಛೆಯಿಂದ ಕಲಿಸುವ ಮೂಲಕ ನಮ್ಮ ನೆಲದ ಭಾಷೆಯನ್ನು ಉಳಿಸಿ ಗಟ್ಟಿಗೊಳಿಸಬೇಕಿದೆ ಎಂದು ಸಲಹೆಯಿತ್ತರು.

ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಮಾತನಾಡಿ, ವಿದೇಶದ ವಿವಿ ಪ್ರಾಧ್ಯಾಪಕರು ತಮ್ಮ ಮಾತೃಭಾಷೆಯಲ್ಲಿಯೇ ಸಂಶೋಧನಾಪ್ರಕಟಣೆಗಳನ್ನು ಮಂಡಿಸುತ್ತಾರೆ. ತದನಂತರ ಭಾಷಾಂತರಕಾರನ ಮೂಲಕ ಎಲ್ಲರಿಗೂ ಅದನ್ನು ತಿಳಿಸಲಾಗುತ್ತದೆ. ಭಾರತದಲ್ಲಿಯೂ ಈ ಪ್ರವೃತ್ತಿ ಬೆಳೆಯಬೇಕಿದ್ದು, ಆಗ ಭಾರತೀಯ ಭಾಷೆಗಳಲ್ಲಿ ಜ್ಞಾನ ಸೃಷ್ಟಿ ಸುಲಭವಾಗುತ್ತದೆ. ಭಾಷೆ ಬೆಳೆಸಿದಂತಾಗುತ್ತದೆ ಎಂದರು.

ಕುಲಸಚಿವ ಎಸ್‌.ಎಸ್‌.ಪಾಟೀಲ ಮಾತನಾಡಿ, ಕರ್ನಾಟಕವು ಕನ್ನಡದ ಅಸ್ಮಿತೆ ಒಳಗೊಂಡ ಪ್ರಾಂತ್ಯವಾರು ವೈವಿಧ್ಯಮಯ ಭಾಷಾ ಬಳಕೆ, ಬರವಣಿಗೆ, ಆಹಾರ ಪದ್ಧತಿ ಮತ್ತು ಜೀವನವಿಧಾನಗಳನ್ನು ಒಳಗೊಂಡಿದೆ. ಹೀಗಾಗಿ ಕನ್ನಡ ಕೇವಲ ಭಾಷೆಯಲ್ಲ ಭಾವ-ಬದುಕುಗಳಾಗಿದೆ ಎಂದು ತಿಳಿಸಿದರು.

Advertisement

ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್‌ ಮಾತನಾಡಿ, ರಾಷ್ಟಕವಿ ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಸಂದರ್ಭದಲ್ಲಿ ಕನ್ನಡದಲ್ಲಿಯೇ ಜ್ಞಾನ ಪ್ರಪಂಚ ಸೃಷ್ಟಿಸುವ ಮಹತ್ತರ ಕಾರ್ಯ ಮಾಡಿದರು. ಸೈಕಾಲಜಿ, ತರ್ಕಶಾಸ್ತ್ರ, ಭೌತಶಾಸ್ತ್ರ, ಭೂಗೋಳ ಶಾಸ್ತ್ರ ಸೇರಿದಂತೆ ಹಲವು ವಿಷಯಗಳಲ್ಲಿಪ್ರಸಾರಾಂಗದ ಮೂಲಕ ಕನ್ನಡದಲ್ಲಿಯೇಪುಸ್ತಕಗಳನ್ನು ಬರೆಸಿ, ಪ್ರಕಟಿಸುವ ಮೂಲಕ ಕನ್ನಡದಲ್ಲಿ ಮಾಹಿತಿ ಸೃಷ್ಟಿಸಿದರು. ಕನ್ನಡವನ್ನು ಬೆಳೆಸಲು ಆಚರಣೆಗಿಂತ ಅನುಷ್ಠಾನ ಮುಖ್ಯ ಎಂಬ ಈ ವಿಷಯವು ಇಂದಿನ ದಿನಮಾನದ ಅಧಿಕಾರಿ ಮತ್ತು ಅಧ್ಯಾಪಕ ವರ್ಗದ ದೃಷ್ಟಿಯಿಂದ ಅನುಕರಣೀಯ ಎಂದರು.

ವಿವಿಯ ಹಣಕಾಸು ಅಧಿಕಾರಿ ಡಾ.ರಮೇಶ್‌, ಕನ್ನಡ ಭಾರತೀಯ ಪ್ರೊ. ಶಿವಾನಂದ ಕೆಳಗಿನಮನಿ, ಪ್ರೊ. ಕೇಶವ ಶರ್ಮ,  ಡಾ.ನೆಲ್ಲಿಕಟ್ಟೆ ಸಿದ್ಧೇಶ್‌, ಅಧ್ಯಾಪಕೇತರ ಸಂಘದ ಶ್ರೀನಿವಾಸ್‌ ಮಾತನಾಡಿದರು. ವಿವಿಯ ಎಲ್ಲ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು. ಕನ್ನಡ ರಾಜ್ಯೋತ್ಸವದ ವೇದಿಕೆ ಕಾರ್ಯಕ್ರಮಕ್ಕೂ ಮೊದಲು ವಿವಿಯ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕ್ಯಾಂಪಸ್‌ನಾದ್ಯಾಂತ ವಾದ್ಯಗಳೊಂದಿಗೆ ಜಾಥಾ ನಡೆಸಲಾಯಿತು. ಉದ್ಘಾಟನಾ ಸಮಾರಂಭದ ನಂತರ ಜ್ಞಾನ ಸಹ್ಯಾದ್ರಿ ಕವಿಗೋಷ್ಠಿ ಮತ್ತು ಗೀತ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಯ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next