Advertisement

ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಕರ ಕೌಶಲ ಹೆಚ್ಚಳ ಅಗತ್ಯ: ಕರಂದ್ಲಾಜೆ

09:42 AM May 08, 2022 | Team Udayavani |

ಬಂಟ್ವಾಳ: ಸರಕಾರಿ ಶಾಲೆಗಳ ನಿರ್ವಹಣೆಯ ದೃಷ್ಟಿಯಿಂದ ಸರಕಾರವು ವಾರ್ಷಿಕವಾಗಿ ಸುಮಾರು 15 ಸಾವಿರ ಕೋ.ರೂ.ಗಳನ್ನು ವ್ಯಯಿಸುತ್ತಿದೆ. ಆದರೆ ಪೋಷಕರು ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಸಿಗಲು ತರಬೇತಿಯ ಮೂಲಕ ಶಿಕ್ಷಕರ ಕೌಶಲವನ್ನು ಹೆಚ್ಚಿಸಬೇಕಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಅವರು ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲ್ಪಟ್ಟ ದಡ್ಡಲಕಾಡು ಸಂಭ್ರಮೋತ್ಸವದಲ್ಲಿ ಶ್ರೀ ದುರ್ಗಾ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಎಂಆರ್‌ಪಿಎಲ್‌ ಸಹಯೋಗದೊಂದಿಗೆ ನಿರ್ಮಾಣಗೊಂಡ ನೂತನ ಕೊಠಡಿಗಳು ಹಾಗೂ ಕಲಿಕಾ ಭವನವನ್ನು ಉದ್ಘಾಟಿಸಿ ಮಾತನಾಡಿದರು. ಗುಣಮಟ್ಟದ ಶಿಕ್ಷಣಕ್ಕೆ ದಡ್ಡಲಕಾಡು ಶಾಲೆಯು ಇಡೀ ದೇಶಕ್ಕೆ ಮಾದರಿ. ಆಂಗ್ಲ ಮಾಧ್ಯಮ ಶಿಕ್ಷಣದ ಜತೆಗೆ ಎಲ್ಲ ರೀತಿಯ ಪ್ರಯೋಗಗಳ ಮೂಲಕ ಶಾಲೆಯನ್ನು ಬೆಳೆಸಲಾಗಿದೆ ಎಂದರು.

ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸಿದ್ದರು. ಕುಡುಚಿ ಶಾಸಕ ಪಿ.ರಾಜೀವ್‌ ಮಾತನಾಡಿ, ಪ್ರಕಾಶ್‌ ಅಂಚನ್‌ ಅವರ ನೇತೃತ್ವದ ತಂಡ ದಡ್ಡಲಕಾಡಿನಲ್ಲಿ ಮಾದರಿ ಕಾರ್ಯ ಮಾಡಿದ್ದು, ನಾನು ಕಲಿತ ಶಾಲೆಯ ಅಭಿವೃದ್ಧಿಗೆ ಪ್ರಕಾಶ್‌ ಅಂಚನ್‌ ಅವರನ್ನು ಮಾರ್ಗದರ್ಶಕರನ್ನಾಗಿ ಮಾಡುವ ಇಚ್ಛೆ ಇದೆ ಎಂದರು.

ನಾನು ಅಧಿಕಾರದಲ್ಲಿರುವವರೆಗೆ ನನ್ನ ಅರ್ಧ ವೇತನವನ್ನು ಸರಕಾರಿ ಶಾಲೆಗಳಿಗೆ ಮೀಸಲಿಡುವುದಾಗಿ ಘೋಷಿಸಿದರು. ವಿಧಾನ ಪರಿಷತ್‌ ಸದಸ್ಯರಾದ ಎಸ್‌. ಎಲ್.ಭೋಜೇಗೌಡ, ಡಾ|ಮಂಜುನಾಥ ಭಂಡಾರಿ, ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬುಡಾ ಅಧ್ಯಕ್ಷ ಬಿ.ದೇವದಾಸ್‌ ಶೆಟ್ಟಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿಗಮ ಮಂಡಳಿ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್‌, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್‌ ಮೂಡುಬಿದಿರೆ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ದಡ್ಡಲಕಾಡು ಶಾಲಾ ಸ್ಥಾಪಕ ಶಿಕ್ಷಕ ಸಂಜೀವ ಗೌಡ, ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಎಂಆರ್‌ಪಿಎಲ್‌ ಮ್ಯಾನೇಜರ್‌ ಸಂಪತ್‌ ರೈ, ಬಂಟ್ವಾಳ ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌., ಪಂಜಿಕಲ್ಲು ಗ್ರಾ.ಪಂ. ಪಿಡಿಒ ವಿದ್ಯಾಶ್ರೀ ಶಿವಾನಂದ, ಪ್ರಮುಖರಾದ ಸುದರ್ಶನ್‌ ಬಜ, ಜಗನ್ನಾಥ ಬಂಗೇರ, ಜಗದೀಶ್‌ ಪೂಜಾರಿ, ರಘು ಸಫ‌ಲ್ಯ ಅತಿಥಿಗಳಾಗಿದ್ದರು. ಎಸ್‌ ಡಿಎಂಸಿ ಕಾರ್ಯಾಧ್ಯಕ್ಷ ಪುರುಷೋತ್ತಮ ಅಂಚನ್‌, ಶೇಖರ್‌ ಅಂಚನ್‌, ರಾಮಚಂದ್ರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ದುರ್ಗಾ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಪ್ರಕಾಶ್‌ ಅಂಚನ್‌ ಸ್ವಾಗತಿಸಿದರು. ಮುಖ್ಯಶಿಕ್ಷಕ ರಮಾನಂದ ವಂದಿಸಿದರು. ಶಿಕ್ಷಕಿಯರಾದ ಅನಿತಾ, ಭವ್ಯಶ್ರೀ, ನೇತ್ರಾ ಕಾರ್ಯಕ್ರಮ ನಿರೂಪಿಸಿದರು.

Advertisement

ನೈತಿಕ ಶಿಕ್ಷಣದ ಪಾಠ

ಡಿಜಿಟಲ್‌ ಲೈಬ್ರೆರಿ ಹಾಗೂ ಶಾಲಾ ವೆಬ್‌ಸೈಟ್‌ ಉದ್ಘಾಟಿಸಿದ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಮಾತನಾಡಿ, ಪ್ರಧಾನಿಗಳ ಆಶಯದಲ್ಲಿ ಹೊಸ ಶಿಕ್ಷಣ ನೀತಿ ಜಾರಿಯಾಗುತ್ತಿದ್ದು, ರಾಜ್ಯದ 20 ಸಾವಿರ ಶಾಲೆಗಳ 1ನೇ-2ನೇ ತರಗತಿಗಳಲ್ಲಿ ಎನ್‌ ಇಪಿಯನ್ನು ಜಾರಿಗೆ ತರಲಾಗುತ್ತಿದೆ. ಜತೆಗೆ ವಾರಕ್ಕೆ ಒಂದು ಗಂಟೆ ನೈತಿಕ ಶಿಕ್ಷಣದ ಪಾಠವನ್ನೂ ಮಾಡಲಾಗುತ್ತದೆ. ಗುಣಮಟ್ಟದ ಶಿಕ್ಷಣ ನೀಡಿರುವ ಕಾರಣಕ್ಕೆ ದಡ್ಡಲಕಾಡು ಶಾಲೆಯ ಪ್ರಕಾಶ್‌ ಅಂಚನ್‌ ಹಾಗೂ ಅವರ ತಂಡಕ್ಕೆ ಇಲಾಖೆಯ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next