Advertisement

Teacher’s Day; ಶಿಕ್ಷಕರಾಗಲು ಬಗೆಬಗೆ ಅವಕಾಶ, ಪರಿಶ್ರಮ ಮಾತ್ರ ಅತ್ಯಗತ್ಯ

12:39 AM Sep 05, 2023 | Team Udayavani |

ಮಣಿಪಾಲ: “ದೊಡ್ಡ ದೊಡ್ಡ ಕಟ್ಟಡಗಳು, ಅತ್ಯಾಧುನಿಕ ಬೋಧನ ಉಪಕರಣಗಳು ಯಾವತ್ತೂ ಮಕ್ಕಳನ್ನು ಸತøಜೆಗಳಾಗಿ ರೂಪಿಸುವ ಸ್ಫೂರ್ತಿದಾಯಕ ಶಿಕ್ಷಕನಿಗೆ ಸಮನಲ್ಲ’ ಎಂಬ ಡಾ|ರಾಧಾಕೃಷ್ಣನ್‌ ಅವರ ಮಾತುಗಳನ್ನು ಶಿಕ್ಷಕರ ದಿನಾಚರಣೆ ಸಂದರ್ಭ ನೆನಪಿಸಿಕೊಳ್ಳ ಬೇಕು. ಈಗ ಪರಿಶ್ರಮ ಪಟ್ಟು ಓದಿದರೆ ಶಿಕ್ಷಕರಾಗಲು ಬಗೆಬಗೆಯ ಅವಕಾಶಗಳಿವೆ. ಹಿಂದಿನಂತೆ “ಬಡಶಿಕ್ಷಕ’ ಎಂಬ ಸ್ಥಿತಿಯೂ ಇಲ್ಲ. ಉತ್ತಮ ವೇತನವಿದೆ. ವಿದ್ಯಾರ್ಥಿಗಳನ್ನು ಸರ್ವರೀತಿಯಲ್ಲಿ ಅಭಿವೃದ್ಧಿ ಪಡಿಸುವ ಹೊಣೆಗಾರಿಕೆಯೂ ಶಿಕ್ಷಕರಿಗಿದೆ ಎಂದು ಉಡುಪಿ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆ ಉಪಪ್ರಾಂಶುಪಾಲ, ಉಡುಪಿ ವಲಯದ ಪ್ರಭಾರ ಬಿಇಒ ಡಾ| ಅಶೋಕ್‌ ಕಾಮತ್‌ ಮತ್ತು ಉಡುಪಿ ತೆಂಕನಿಡಿಯೂರು ಸ. ಪ್ರ. ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ, ತರಬೇತುದಾರ ಪ್ರಶಾಂತ್‌ ನೀಲಾವರ ತಿಳಿಸಿದರು.

Advertisement

ಶಿಕ್ಷಣ ಕ್ಷೇತ್ರದ ವಿವಿಧ ಹಂತಗಳಲ್ಲಿ ಶಿಕ್ಷಕರಾಗಲು ಬೇಕಾದ ಅರ್ಹತೆಗಳು, ಕೋರ್ಸ್‌ಗಳು? ಇವುಗಳಿಗೆ ಇರುವ ಅವ ಕಾಶಗಳು ಏನು? ಎಂಬ ಬಗ್ಗೆ “ಉದಯವಾಣಿ’ಯು ರವಿವಾರ(ಸೆ.3)ರಂದು ಮಣಿಪಾಲದ ಪ್ರಧಾನ ಕಚೇರಿಯಲ್ಲಿ ಶಿಕ್ಷಕರ ದಿನಾಚರಣೆ (ಸೆ. 5) ಪ್ರಯುಕ್ತ ಹಮ್ಮಿಕೊಂಡಿದ್ದ ಫೋನ್‌ ಇನ್‌ ಕಾರ್ಯಕ್ರಮಕ್ಕೆ ಬಂದಿರುವ ಕರೆಗಳಿಗೆ ಅವರು ಉತ್ತರ ನೀಡಿದರು.

ಅರ್ಹತಾ ಪರೀಕ್ಷೆ
ಪ್ರಾಥಮಿಕ, ಪ್ರೌಢ, ಪ.ಪೂ.ತರಗತಿಗಳಿಗೆ ಸರಕಾರದ ಖಾ ಯಂ ಶಿಕ್ಷಕರು/ಉಪನ್ಯಾಸಕರಾಗಲು ಪದವಿ, ಸ್ನಾತಕೋತ್ತರ ಪದವಿಯ ಜತೆಗೆ ಬಿ.ಇಡಿ ಕಡ್ಡಾಯ ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆ ಪಾಸಾಗಿರಬೇಕು. ಪದವಿ, ಸ್ನಾತಕೋತ್ತರ ಪದವಿಗೆ ಉಪನ್ಯಾಸಕರಾಗಲು ಯುಜಿಸಿ ನಡೆಸುವ ರಾ. ಅರ್ಹತಾ ಪರೀಕ್ಷೆ(ನೆಟ್‌) ಅಥವಾ ರಾಜ್ಯ ಸರ ಕಾರದ ರಾಜ್ಯ ಅರ್ಹತಾ ಪರೀಕ್ಷೆ(ಕೆಸೆಟ್‌) ತೇರ್ಗಡೆ ಹೊಂದಬೇಕು.

ಶೇ.70 ಹೊಸ ನೇಮಕಾತಿ, ಶೇ.30 ಭಡ್ತಿ
ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಸೇವಾನುಭವ ಹಾಗೂ ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿ ಭಡ್ತಿ ನೀಡಲು ಅವಕಾಶವಿದೆ. ಪದವೀಧರ ಶಿಕ್ಷಕರ ನೇಮಕಾತಿಯಿಂದ ಶೇ.70ರಷ್ಟು ಹುದ್ದೆ ಭರ್ತಿ ಮಾಡಿಕೊಂಡರೆ, ಶೇ.30ರಷ್ಟು ಹುದ್ದೆಗೆ ಭಡ್ತಿ ನೀಡುವ ಅವಕಾಶ ನಿಯಮದಲ್ಲಿದೆ. ಪದವೀಧರ ಶಿಕ್ಷಕರು ಅಥವಾ ಪ.ಪೂ.ತರಗತಿ ಬೋಧಿಸುವ ಉಪನ್ಯಾಸಕರಿಗೆ ಬಿ.ಇಡಿ ಕಡ್ಡಾಯವಾಗಿರುತ್ತದೆ. ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಪಿಯುಸಿ ಅನಂತರ ಡಿ.ಎಲ್‌.ಇಡಿ/ಡಿಪಿಎಸ್‌ಇ/ಡಿ.ಪಿ.ಇಡಿ ಕೋರ್ಸ್‌ ಮಾಡಿದರೆ ಆಗುತ್ತದೆ. ಇದನ್ನು ಜಿಲ್ಲಾ ಡಯಟ್‌ ಕೇಂದ್ರದ ಮೂಲಕ ನೀಡಲಾಗುತ್ತದೆ.

ಪೂರ್ವ ಪ್ರಾಥಮಿಕ ತರಗತಿಗೂ ಕೋರ್ಸ್‌
ಸರಕಾರವು ಕರ್ನಾಟಕ ಪಬ್ಲಿಕ್‌ ಶಾಲೆ ಸೇರಿದಂತೆ ಕೆಲವು ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭಿ ಸಿದೆ. ಮುಂದೆ ಇನ್ನಷ್ಟು ಶಾಲೆ ಗಳಲ್ಲಿ ಆರಂಭಿಸುವ ಸಾಧ್ಯತೆಯೂ ಇದೆ. ಖಾಸಗಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಯಿದೆ. ಪೂರ್ವ ಪ್ರಾಥಮಿಕ ತರಗತಿಗೆ ಬೋಧಿಸುವ ಶಿಕ್ಷಕರು ಖಾಸಗಿಯವರು ನೀಡುವ ಕಿಂಡರ್‌ಗಾರ್ಡ್‌ ಅಥವಾ ಪ್ರಿ ನರ್ಸರಿ ಡಿಪ್ಲೊಮಾ ಕೋರ್ಸ್‌ ಪೂರೈಸ ಬೇಕು. ಇದು ಎಲ್ಲ ಭಾಗ ದಲ್ಲೂ ಸದ್ಯ ಪ್ರಚಲಿತ ಕೋರ್ಸ್‌ ಆಗಿದೆ.

Advertisement

ವಾಣಿಜ್ಯ, ಎಂಜಿನಿಯರಿಂಗ್‌ ಅನಂತರ ಬಿ.ಇಡಿ
ಬಿ.ಕಾಂ. ಅಥವಾ ಎಂಜಿನಿಯರಿಂಗ್‌ ಮಾಡಿದ ಅನಂತರದಲ್ಲಿ ಬಿ.ಇಡಿ ಮಾಡಲು ಈಗ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ವಿಭಾಗ ದಲ್ಲಿ ಬಿ.ಇಡಿ ಪೂರೈಸಿದವರು ಸರಕಾರಿ ಶಾಲೆಯಲ್ಲಿ ಖಾಯಂ ಶಿಕ್ಷಕ ರಾಗಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ. ನಿಯಮಾವಳಿ ಗಳಲ್ಲಿ ಬದಲಾವಣೆ ಯಾದರೆ ಇದು ಸಾಧ್ಯ. ಖಾಸಗಿ ಶಾಲೆಗಳಲ್ಲಿ ವಾಣಿಜ್ಯ ಅಥವಾ ಗಣಿತ, ವಿಜ್ಞಾನ ವಿಷಯದ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅವಕಾಶವಿದೆ. ವಿದೇಶ ಗಳಲ್ಲಿ ಬೋಧನೆ ಮಾಡುವವರಿಗೆ ಈ ಕೋರ್ಸ್‌ ಮಾಡಿದರೆ ಹೆಚ್ಚು ಅನು ಕೂಲತೆಯಿದೆ. ಎಂಜಿನಿಯರಿಂಗ್‌ ಪದವಿ ಪೂರೈಸಿದವರು ಡಿಪ್ಲೊಮಾ ಕಾಲೇಜುಗಳಲ್ಲಿ ಬೋಧನೆ ಮಾಡಲು ಅವಕಾಶವಿದೆ. ಇದರಲ್ಲಿ ಉತ್ತಮ ವೇತನವಿದ್ದರೂ ಡಿಪ್ಲೊಮಾ ಕಾಲೇಜು ಗಳಲ್ಲಿ ಶಿಕ್ಷಕರಾಗಲು ಹೋಗುತ್ತಿಲ್ಲ. ಇದಕ್ಕೆ ಮಾಹಿತಿ ಕೊರತೆಯೂ ಕಾರಣವಿರಬಹುದು.

ನೆಟ್‌/ಸ್ಲೆಟ್‌ ಕಡ್ಡಾಯ
ಪದವಿ, ಸ್ನಾತಕೋತ್ತರ ಪದವಿ ಕಾಲೇಜಿಗೆ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಈ ಹಿಂದೆ ಪಿ.ಎಚ್‌ಡಿ, ಎಂ.ಫಿಲ್‌ ಇತ್ಯಾದಿ ಗಳನ್ನು ಪರಿಣಿಸಲಾಗುತ್ತಿತ್ತು. ಆದರೆ ಈಗ ನೆಟ್‌/ಸ್ಲೆಟ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಲೇ ಬೇಕು. ಪರಿಶ್ರಮ ಪಟ್ಟು ಓದಿದರೆ ಸುಲಭದಲ್ಲಿ ಪಾಸ್‌ ಆಗಬಹುದು. ಆನ್‌ಲೈನ್‌ನಲ್ಲಿ ಸಾಕಷ್ಟು ಸ್ಟಡೀ ಮೆಟಿರಿಯಲ್‌ ಸಿಗುತ್ತದೆ. ದೈಹಿಕ ಶಿಕ್ಷಣ ನಿರ್ದೇಶಕ ರಾಗಲೂ ಈ ಪರೀಕ್ಷೆ ಪಾಸಾಗಲೇ ಬೇಕು. ನೆಟ್‌/ಸ್ಲೆಟ್‌ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ನೇಮಕಾತಿಗೆ ಅಧಿಸೂಚನೆ ಹೊರಡಿಸಿದಾಗ ಅರ್ಜಿ ಸಲ್ಲಿಸಬಹುದು.

ಕಿ.ಪ್ರಾ.ಶಾಲೆಗಳಲ್ಲಿ ಹೆಚ್ಚುವರಿ,
ಹಿ.ಪ್ರಾ. ಶಾಲೆಗಳಲ್ಲಿ ಕೊರತೆ
ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಲ್ಲ. ಶಿಕ್ಷಕರು ಹೆಚ್ಚುವರಿಯಾಗಿದ್ದಾರೆ. ಹೀಗಾಗಿ ಅವರನ್ನು ಬೇರೆ ಕಡೆಗಳಿಗೆ ನಿಯೋಜಿಸುವ ಕಾರ್ಯವೂ ನಡೆಯುತ್ತಿದೆ. ಹಿರಿಯ ಪ್ರಾಥಮಿಕ ತರಗತಿಗಳಲ್ಲಿ ಬೋಧಕರ ಕೊರತೆ ಹೆಚ್ಚಿದೆ. ಪ್ರಾಥಮಿಕ ಪದವೀಧರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳ ಲಾಗುತ್ತಿದೆ. ಹಿ.ಪ್ರಾಥಮಿಕ ಶಾಲೆಗಳಲ್ಲಿ 50 ಸಾವಿರ ಶಿಕ್ಷಕರ ಕೊರತೆಯಿದೆ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಷ್ಟೇ ಪ್ರಮಾಣದಲ್ಲಿ ಶಿಕ್ಷಕರು ಹೆಚ್ಚುವರಿ ಯಾಗಿದ್ದಾರೆ. ಹೀಗಾಗಿ ಮುಂದಿನ ಐದಾರು ವರ್ಷಗಳವರೆಗೂ ಕಿ. ಪ್ರಾ.ಶಾಲೆಗೆ ಶಿಕ್ಷಕರ ನೇಮಕಾತಿ ಆಗುವುದಿಲ್ಲ ಹಾಗೂ ನಿವೃತ್ತಿ ಹೊಂದಿದ ಶಿಕ್ಷಕರ ಹುದ್ದೆಗೆ ಸಮಾನಾಗಿ ಹೊಸ ನೇಮಕಾತಿಯೂ ಮಾಡಿಕೊಳ್ಳುತ್ತಿಲ್ಲ.

ಕರೆ ಮಾಡಿದವರು
ಸೋಮೇಶ್ವರ ಉಚ್ಚಿಲದಿಂದ ವಸಂತಿ,ಉಡುಪಿಯ ಹೇಮಲತಾ, ಚೈತ್ರಾ,ಮಂಜುನಾಥ, ಗಣೇಶ್‌, ಕಾವ್ಯಾ, ವೈಷ್ಣವಿ,
ಮಲ್ಪೆಯಿಂದ ಸ್ಮಿತಾ, ಸುನೀತಾ, ಉದ್ಯಾವರದಿಂದ ನಂದಿನಿ, ಮಂಗಳೂರಿನಿಂದ ರಶ್ಮಿ, ಎಲ್‌. ವಿ.ರಾಜಸೂತ್‌, ವಾರಿಜಾ, ನವೀನ್‌, ಕಡಬದಿಂದ ಶೋಭಾ, ಕುಂದಾಪುರದಿಂದ ಬಿಂದು, ಶ್ರೀಲಕ್ಷ್ಮೀ, ಬೈಂದೂರಿನಿಂದ ಕಿಶೋರ್‌, ನಾಗರಾಜ್‌,ಕಾಪುವಿನಿಂದ ಆನಂದ ಶೆಟ್ಟಿ, ಕೃಷ್ಣ ಶೆಟ್ಟಿ ಐಕಳ,ವಿಟ್ಲದಿಂದ ಹಮೀದ್‌ ಮೊದಲಾದವರು ಕರೆ ಮಾಡಿದ್ದರು.

ಶಿಕ್ಷಕರಿಗೆ ಈಗ ಮೂಲ ವೇತನವೂ ಚೆನ್ನಾಗಿದೆ. ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯವನ್ನು ಡಯಟ್‌ ಮಾಡುತ್ತಿದೆ ಹಾಗೂ ಕಲಿಕ ಸಾಮಗ್ರಿ ಗಳನ್ನು ಸಿದ್ಧಪಡಿಸುತ್ತಿದೆ. ಸರಕಾರಿ ಕಿ.ಪ್ರಾ. ಶಾಲೆಗಳಲ್ಲಿ ಶಿಕ್ಷಕರು ಹೆಚ್ಚಿದ್ದಾರೆ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊರತೆಯಿದೆ.
– ಡಾ| ಅಶೋಕ್‌ ಕಾಮತ್‌, ಡಯಟ್‌ ಉಪಪ್ರಾಂಶುಪಾಲ

ಖಾಯಂ ಉಪನ್ಯಾಸಕರಾಗಲು ಸ್ನಾತಕೋತ್ತರ ಪದವಿ ಜತೆ ನೆಟ್‌/ಸ್ಲೆಟ್‌ ಪಾಸ್‌ ಮಾಡಿ ಅನಂತರದಲ್ಲಿ ಸರಕಾರ ನಡೆಸುವ ಪರೀಕ್ಷೆಯಲ್ಲೂ ತೇರ್ಗಡೆಯಾಗಬೇಕು. ಕಠಿನ ಪರಿಶ್ರಮ, ನಿರಂತರ ಅಧ್ಯಯನಶೀಲತೆ, ಆಧುನಿಕತೆಗೆ ಒಗ್ಗಿಕೊಳ್ಳುವ ಗುಣ ಇದ್ದಾಗ ಮಾತ್ರ ಉತ್ತಮ ಶಿಕ್ಷಕ/ ಉಪನ್ಯಾಸಕರಾಗಲು ಸಾಧ್ಯ.
– ಪ್ರಶಾಂತ್‌ ನೀಲಾವರ, ಸಹಾಯಕ ಪ್ರಾಧ್ಯಾಪಕ

Advertisement

Udayavani is now on Telegram. Click here to join our channel and stay updated with the latest news.

Next