Advertisement

ನನ್ನ ಜೀವನದ ಗುರು ಅನಂತ ಕಾಮತ್‌

11:12 PM Sep 04, 2019 | mahesh |

ಇಂದು ಶಿಕ್ಷಕರ ದಿನಾಚರಣೆ. ನಮ್ಮ ಜೀವನವೆಂಬ ರಥವನ್ನು ಮುನ್ನಡೆಸಲು ಪಾಠ ಕಲಿಸಿದ ಶಿಕ್ಷಕರಷ್ಟೇ ಮಹತ್ತರವಾದ ಸ್ಥಾನವನ್ನು ಕಾಯಕ ಕಲಿಸಿದ ಗುರು ಕೂಡ ಹೊಂದಿದ್ದಾರೆ. ಅಂತಹ ಗುರುಗಳ ಬಗ್ಗೆ ಆಯ್ದ ಕೆಲವರು ನೆನಪಿಸಿಕೊಂಡದ್ದು ಹೀಗೆ…

Advertisement

ನನಗೀಗ 84ರ ಹರೆಯ. ಪ್ರಾಥಮಿಕ ಶಾಲೆಯಲ್ಲಿ ಬೋಧಿಸಿದ ಉಪಾಧ್ಯಾಯರ ಹೆಸರು, ಬೋಧನಾಕ್ರಮ ಅಚ್ಚಳಿಯದೆ ನೆನಪಿದೆ. ಅವರು ಕಲಿಸುತ್ತಿದ್ದ ರೀತಿಹಾಗಿತ್ತು. ನನ್ನ ಮೆಚ್ಚಿನ ಗುರು ಅನಂತ ಕಾಮತ್‌. ಬಸ್ರೂರು ಹಿಂದೂಹಿ.ಪ್ರಾ. ಶಾಲೆಯಲ್ಲಿ ಕಲಿಸುತ್ತಿದ್ದ ಅವರು ಪಾಠವನ್ನಷ್ಟೇ ಮಾಡದೆ ಸಾಮಾಜಿಕ ಜವಾಬ್ದಾರಿ ಕಲಿಸುತ್ತಿದ್ದರು. ಮಕ್ಕಳ ಮನೆಗಳಿಗೆ ಭೇಟಿ ನೀಡಿ ಪ್ರೋತ್ಸಾಹಿಸುತ್ತಿದ್ದರು. ಸ್ವಾತಂತ್ರ್ಯ ಚಳವಳಿ ಮುಂಚೂಣಿಯಲ್ಲಿದ್ದ ದಿನಗಳಲ್ಲಿ ನಮಗೆ ಗಾಂಧಿಯಂತಹ ಹೋರಾಟಗಾರರ ಕುರಿತು ಹೇಳುತ್ತಿದ್ದರು.

ತರಗತಿಯಲ್ಲಿ ಕೀಟಲೆ ಮಾಡಿದರೆ ಪರಂಗಿ ಮಣೆಯಂತೆ ನಿಲ್ಲುವ ಶಿಕ್ಷೆಯೂ ಇತ್ತು. ಇದಕ್ಕೆ ಮನೆಯಲ್ಲೂ ವಿರೋಧ ಇರಲಿಲ್ಲ. ಮನೆಯಲ್ಲೂ ದುರ್ವರ್ತನೆಗೆ ಅಧ್ಯಾಪಕರ ಬಳಿ ಹೇಳುವುದಾಗಿ ಹೆದರಿಸುತ್ತಿದ್ದರು.

ಗುರು ಹಿರಿಯರಿಗೆ ಗೌರವ ನೀಡಲು, ಜೀವನದಲ್ಲಿ ಶಿಸ್ತು ಅಳವಡಿಸಿ ಕೊಳ್ಳಲು, ಈ ನೆಲದ ಸಂಸ್ಕೃತಿ ತಿಳಿದುಕೊಳ್ಳಲು ನೆರ ವಾಗುತ್ತಿದ್ದರು. ವಿದ್ಯಾರ್ಥಿಯ ಸರ್ವತೋಮುಖ ಏಳಿಗೆಯೇ ಅವರ ಗುರಿಯಾಗಿತ್ತು. ತನ್ನ ವಿದ್ಯಾರ್ಥಿಗಳು ನನಗಿಂತ ಉತ್ತಮ ಸ್ಥಾನ ಪಡೆಯಬೇಕೆಂದು ಅವರ ಕಾಳಜಿಯಾಗಿತ್ತು. ಮಣಿಪಾಲ ಪ್ರೌಢಶಾಲೆಯಲ್ಲಿ ಬಾಲಕೃಷ್ಣ ನಾಯಕ್‌, ಪುಂಡಲೀಕ ಶೆಣೈ -ಹೀಗೆ ಸಣ್ಣ ತರಗತಿಗಳ ಅಧ್ಯಾಪಕರ ಹೆಸರು ಇಂದಿಗೂ ನೆನಪಿದೆ; ಇದಕ್ಕೆ ಅವರು ಬೋಧಿಸುತ್ತಿದ್ದ, ನಮ್ಮ ಮೇಲೆ ಬೀರುತ್ತಿದ್ದ ಪ್ರಭಾವ ಕಾರಣ.

Advertisement

Udayavani is now on Telegram. Click here to join our channel and stay updated with the latest news.

Next