Advertisement

ಎಸೆಸೆಲ್ಸಿ ಮೌಲ್ಯಮಾಪನಕ್ಕೆ ಮಂಗಳೂರಿಗೆ ಬರಲು ಶಿಕ್ಷಕರಿಗೆ ಸಂಕಷ್ಟ

12:35 AM Jul 09, 2020 | Sriram |

ಮಹಾನಗರ: ಕೋವಿಡ್ ಭೀತಿ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರಗಳಲ್ಲೇ ಎಸೆಸೆಲ್ಸಿ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಅವಕಾಶ ನೀಡಬೇಕೆಂಬ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಕರ ಮನವಿಯನ್ನು ಇಲ್ಲಿಯವರೆಗೆ ಸರಕಾರ ಮಾನ್ಯ ಮಾಡಿಲ್ಲ. ಆದರೆ ಪುತ್ತೂರನ್ನು ಉಪ ಕೇಂದ್ರವನ್ನಾಗಿ ಮಾಡುವ ವಿಚಾರ ಪರಿಶೀಲನ ಹಂತದಲ್ಲಿದೆ.

Advertisement

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿನ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈ ನಡುವೆ ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ಜು. 13ರಿಂದ ಎಸೆಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯ ಆರಂಭವಾಗುತ್ತಿದೆ. ಆದರೆ ದೂರದ ಊರುಗಳಿಂದ ಬರಬೇಕಾದ ಶಿಕ್ಷಕರು ಕೋವಿಡ್ ಭೀತಿಯಿಂದಾಗಿ ಮೌಲ್ಯಮಾಪನಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಏಕೆಂದರೆ ಕೋವಿಡ್ ಕಾರಣದಿಂದಾಗಿ ಜಿಲ್ಲೆಯಲ್ಲಿ ಸರಕಾರಿ ಹಾಗೂ ಖಾಸಗಿ ಬಸ್‌ಗಳ ಸಂಚಾರ ವ್ಯವಸ್ಥೆ ಈಗ ಸಮರ್ಪಕವಾಗಿಲ್ಲ. ಅದರಲ್ಲಿಯೂ ಸ್ವಂತ ವಾಹನದ ವ್ಯವಸ್ಥೆ ಇಲ್ಲದ ಗ್ರಾಮೀಣ ಭಾಗದಿಂದ ಮಂಗಳೂರಿಗೆ ಬರಬೇಕಾದ ಶಿಕ್ಷಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಎಲ್ಲ ಕಾರಣಗಳಿಗೆ ತಾಲೂಕು ಕೇಂದ್ರಗಳಲ್ಲಿ ಈ ಬಾರಿ ಮೌಲ್ಯ ಮಾಪನಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಶಿಕ್ಷಕರು ಆಗ್ರಹಿಸುತ್ತಿದ್ದಾರೆ.

ಜಿಲ್ಲೆಯಲ್ಲಿ 150 ಕಿ.ಮೀ. ದೂರದಿಂದ ಬರುವ ವರೂ ಇರುವುದರಿಂದ ಪುತ್ತೂರಿನಲ್ಲಿ ಉಪಕೇಂದ್ರ ತೆರೆದರೆ, ಆ ಭಾಗದ ಶಿಕ್ಷಕರಿಗೆ ಮೌಲ್ಯಮಾಪನಕ್ಕೆ ಆಗಮಿಸುವುದಕ್ಕೆ ಅನುಕೂಲವಾಗಲಿದೆ. ಆದರೆ ಈ ಬಗ್ಗೆ ಸರಕಾರ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ದ.ಕ. ಜಿಲ್ಲೆಯ ಎಂಟು ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಈ ಎಂಟೂ ಕೇಂದ್ರಗಳು ಮಂಗಳೂರಿನಲ್ಲೇ ಇರುವುದರಿಂದ ಸುಳ್ಯ, ಪುತ್ತೂರು, ಬೆಳ್ತಂಗಡಿ ಕಡೆಯಿಂದ ಬರುವ ಶಿಕ್ಷಕರಿಗೆ ಕೋವಿಡ್ ಆತಂಕ ತಂದೊಡ್ಡಿದೆ.

ಜಿಲ್ಲೆಯಲ್ಲಿ ಸುಮಾರು 1,500 ಮಂದಿ ಮೌಲ್ಯ ಮಾಪಕರು ಮೌಲ್ಯಮಾಪನ ನಡೆಸಲಿದ್ದಾರೆ. ಈ ಹಿಂದೆ ಮೌಲ್ಯಮಾಪನ ಮುಗಿಯುವವರೆಗೆ ಮಂಗಳೂರಿನಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಆದರೆ ಪ್ರಸ್ತುತ ವಾಸ್ತವ್ಯಕ್ಕೆ ಸಮಸ್ಯೆಯಾಗುತ್ತದೆ. ಸಾರ್ವಜನಿಕ ವಾಹನಗಳಲ್ಲಿ ಬಂದು ಹೋಗುವುದು ಆತಂಕಕಾರಿ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದಲೇ ವಾಹನ ವ್ಯವಸ್ಥೆ ಮಾಡಿದರೂ ಬಂದು ಹೋಗುವುದು ಪ್ರಯಾಸ ದಾಯಕ. ಹೀಗಾಗಿ ತಾಲೂಕು ಕೇಂದ್ರಗಳಲ್ಲೇ ಮೌಲ್ಯ ಮಾಪನಕ್ಕೆ ಅವಕಾಶ ಮಾಡಿಕೊಡುವಂತೆ ಶಿಕ್ಷಕರು ಸರಕಾರವನ್ನು ಆಗ್ರಹಿಸಿದ್ದರು.
ಶಿಕ್ಷಕರ ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಶಿಕ್ಷಣ ಸಚಿವ ಹಾಗೂ ಎಸೆಸೆಲ್ಸಿ ಪರೀಕ್ಷಾ ಮಂಡಳಿಯ ನಿರ್ದೇಶಕರ ಗಮನಕ್ಕೆ ತಂದಾಗ ಮೂಲ ಸೌಕರ್ಯಗಳನ್ನು ತಾಲೂಕು ಕೇಂದ್ರಗಳಲ್ಲಿ ವ್ಯವಸ್ಥೆಗೊಳಿಸಲು ಕನಿಷ್ಠ 20 ದಿನಗಳು ತಗಲುತ್ತವೆ. ಹಾಗಾಗಿ ತಾಲೂಕು ಕೇಂದ್ರಗಳಲ್ಲಿ ತತ್‌ಕ್ಷಣಕ್ಕೆ ವ್ಯವಸ್ಥೆ ಮಾಡುವುದು ಸಾಧ್ಯವಾಗುವುದಿಲ್ಲ ಎಂಬ ಉತ್ತರ ಬಂದಿದೆ.

Advertisement

ಪುತ್ತೂರಲ್ಲಿ ಉಪಕೇಂದ್ರ ತೆರೆಯಿರಿ
ತಾಲೂಕು ಕೇಂದ್ರಗಳಲ್ಲೇ ಮೌಲ್ಯಮಾಪನ ಕೇಂದ್ರ ತೆರೆಯಬೇಕೆಂಬುದು ಶಿಕ್ಷಕರ ಆಗ್ರಹ. ಒಂದು ವೇಳೆ ಸಾಧ್ಯವಾಗದಿದ್ದಲ್ಲಿ ಪುತ್ತೂರಲ್ಲಿ ಉಪಕೇಂದ್ರ ಸ್ಥಾಪಿಸಬೇಕು ಎಂಬ ಮನವಿಯನ್ನು ಸರಕಾರಕ್ಕೆ ಮಾಡಲಾಗಿದೆ. ಪುತ್ತೂರಲ್ಲಿ ಕೇಂದ್ರ ತೆರೆದರೆ ಬೆಳ್ತಂಗಡಿ, ಸುಳ್ಯ, ಪುತ್ತೂರಿನ ಶಿಕ್ಷಕರಿಗೆ ಅನುಕೂಲವಾಗಲಿದೆ. ಬಂಟ್ವಾಳ, ಮೂಡುಬಿದಿರೆ, ಮಂಗಳೂರಿನ ಶಿಕ್ಷಕರು ಮಂಗಳೂರಿನ ಕೇಂದ್ರಗಳಲ್ಲಿ ಮೌಲ್ಯಮಾಪನ ಕಾರ್ಯ ನಡೆಸಬಹುದು ಎಂದು ಕ. ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಶಿರೂರು ತಿಳಿಸಿದ್ದಾರೆ. ಈ ಬೇಡಿಕೆ ಪ್ರಸ್ತುತ ಪರಿಶೀಲನ ಹಂತದಲ್ಲಿದ್ದು, ಶಿಕ್ಷಣ ಸಚಿವರ ಅಭಿಪ್ರಾಯಕ್ಕೆ ಕಾಯಲಾಗುತ್ತಿದೆ.

 ಶಿಕ್ಷಣ ಸಚಿವರಿಗೆ ಒತ್ತಾಯ
ತಾಲೂಕು ಕೇಂದ್ರಗಳಲ್ಲಿ ಮೌಲ್ಯಮಾಪನ ಕೇಂದ್ರ ತೆರೆಯುವುದು ತ್ರಾಸದಾಯಕ ಎಂಬುದಾಗಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆದರೆ ಪುತ್ತೂರಿನಲ್ಲಿ ಉಪಕೇಂದ್ರ ತೆರೆಯುವಂತೆ ಶಿಕ್ಷಣ ಸಚಿವರನ್ನು ಒತ್ತಾಯಿಸಲಾಗಿದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
-ಕೋಟ ಶ್ರೀನಿವಾಸ ಪೂಜಾರಿ
ದ.ಕ. ಜಿಲ್ಲಾ ಉಸ್ತುವಾರಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next