Advertisement

ಟಿಡಿಆರ್‌ ಪ್ರಕರಣ: ಮತ್ತೆ ತನಿಖೆಗಿಳಿದ ಎಸಿಬಿ

12:12 PM Aug 26, 2020 | Suhan S |

ಬೆಂಗಳೂರು: ಅಭಿವೃದ್ಧಿ ಹಕ್ಕು ವರ್ಗಾವಣೆ(ಟಿಡಿಆರ್‌) ಕೋಟ್ಯಂತರ ರೂ. ಅವ್ಯವಹಾರ ಪ್ರಕರಣದ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ದಾಳಿ ಮುಂದುವರಿಸಿದ್ದು, ಮಂಗಳವಾರ ಎಂಜಿನಿಯರ್‌ ಸೇರಿ ನಾಲ್ವರ ಮನೆಗಳ ಮೇಲೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಬಿಬಿಎಂಪಿ ಸಹಾಯಕ ಅಭಿಯಂತರ ಎಂ.ಎನ್‌.ದೇವರಾಜು ಅವರ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಹೊಂದಿರುವ ಮನೆ, ಮಧ್ಯವರ್ತಿಗಳಾದ ಬಿ.ನಾಗರಾಜುಗೆ ಸೇರಿದ ದೊಡ್ಡಗುಬ್ಬಿಯ ಯರಪ್ಪನಹಳ್ಳಿಯಲ್ಲಿರುವ ನಿವಾಸ, ಕೆ.ಪಿ.ನಾಗೇಶ್‌ ಅವರ ಬಿದರಹಳ್ಳಿ ಕಣ್ಣೂರಿನಲ್ಲಿರುವ ಮನೆ, ಟಿಡಿಆರ್‌ ಅರ್ಜಿದಾರ ಸುಬ್ಬರಾವ್‌ ಬಿದರಹಳ್ಳಿಯ ರಾಂಪುರದಲ್ಲಿ ಹೊಂದಿರುವ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.

ಏನಿದು ಭೂ ಅಕ್ರಮ ಪ್ರಕರಣ?: ಬಿಬಿಎಂಪಿಯ ಕೆಲ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಬಿಬಿಎಂಪಿ ರಸ್ತೆ ಅಗಲೀಕರಣಕ್ಕೆ ವಶಪಡಿಸಿಕೊಳ್ಳಬೇಕಾದ ಸೈಟುಗಳು ಮತ್ತು ಬಿಲ್ಡಿಂಗ್‌ಗಳ ಜಾಗಕ್ಕಿಂತ ಹೆಚ್ಚು ಜಾಗಕ್ಕೆ ಬೆಲೆ ನಿಗದಿಪಡಿಸಿ ಗ್ರಾಪಂಗಳಲ್ಲಿ ಖಾತಾ ಹೊಂದಿರುವುದನ್ನು ಮರೆಮಾಚಿದ್ದರು. ಕೃಷಿ ಭೂಮಿಯ ದರಗಳನ್ನು ಕಟ್ಟಡಗಳ ಮೌಲ್ಯ ಮಾಪನಗಳನ್ನು ನಿಗದಿಪಡಿಸುವಾಗ ಟಿಡಿಆರ್‌ ವಿಸ್ತೀರ್ಣವನ್ನು ಕಾನೂನು ಬಾಹಿರವಾಗಿ ಹೆಚ್ಚಾಗಿ ವಿತರಣೆ ಮಾಡಿದ್ದರು. ಈ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ ಮಾಡಿದ್ದರು. ಅಲ್ಲದೆ, ಈ ಜಾಗದ ಸ್ವಾಧೀನಾನುಭವದಲ್ಲಿರುವ ಸೈಟ್‌ ಮಾಲೀಕರಿಗೆ ಸರ್ಕಾರದಿಂದ ಪರಿಹಾರ ಸಿಗದಂತೆ ನೋಡಿಕೊಂಡಿದ್ದರು. ಬಿಬಿಎಂಪಿ ಸುತ್ತೋಲೆಯಲ್ಲಿ ಅಂಶಗಳನ್ನು ಸಂಪೂರ್ಣ ಉಲ್ಲಂಘಿಸಿ ಅಕ್ರಮವಾಗಿ ಭೂಮಾಲೀಕರಿಗೆ ಡಿಆರ್‌ಸಿ ವಿತರಣೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದರು.

 

ತನಿಖೆಯಿಂದ ಮಹತ್ವದ ಮಾಹಿತಿ ಬೆಳಕಿಗೆ : 

  • ಬಿದರಹಳ್ಳಿಯ ರಾಂಪುರದಲ್ಲಿರುವ ಸರ್ವೆ ನಂ.149 ಹಾಗೂ ಈ ಜಾಗದಲ್ಲಿ ಕೊತ್ತನೂರು- ಆವಲಹಳ್ಳಿ ಮುಖ್ಯ ರಸ್ತೆಯ ಅಗಲೀಕರಣಕ್ಕೆ ಸಂಬಂಧಿಸಿದಂತೆ ಟಿಡಿಆರ್‌ ಅರ್ಜಿಯನ್ನು ಪ್ರಸ್ತುತ ಸ್ವಾಧೀನಾನುಭವದಲ್ಲಿರುವ ಕಟ್ಟಡಗಳ ಮಾಲೀಕರಿಂದ ಪಡೆಯದೇ, ಆರ್‌ಟಿಸಿಯಲ್ಲಿ ಹೆಸರಿರುವ ಹಿಂದಿನ ಜಮೀನಿನ ಮಾಲೀಕರಿಂದ ಪಡೆಯಲಾಗಿದೆ.
  • ಬಿಬಿಎಂಪಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಅಳತೆಗಳನ್ನು ಪಡೆದು ರೆವೆನ್ಯೂ ನಕ್ಷೆಯನ್ನು ತಯಾರಿಸಿದ್ದರು. ಈ ನಕ್ಷೆಯಲ್ಲಿ ರಾಂಪುರ ಗ್ರಾಮದ ಒಟ್ಟು 6 ಕಟ್ಟಡಗಳು ರಸ್ತೆ ಅಗಲೀಕರಣಕ್ಕೆ ಒಳಪಡುವುದಾಗಿ ಹಾಗೂ ಈ ಕಟ್ಟಡಗಳ ಮಾಲೀಕರು ಆರ್‌ಟಿಸಿಯಲ್ಲಿ ಹೆಸರಿಸುವ ಈ ಹಿಂದಿನ ಭೂಮಾಲೀಕ ಆರ್‌.ಕೆ. ಸುಬ್ಬರಾವ್‌ ಎಂದು ನಮೂದಿಸಲಾಗಿದೆ. ಆದರೆ, ಕಳೆದ 25 ವರ್ಷಗಳಿಂದ ಇಲ್ಲಿ ಬೇರೆ-ಬೇರೆ ಮಾಲೀಕರು ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ.
  • ರೆವೆನ್ಯೂ ನಕ್ಷೆಯಲ್ಲಿ ನಮೂದಿಸಿದ 6 ಕಟ್ಟಡಗಳ ಮೌಲ್ಯಮಾಪನವನ್ನು ತಯಾರಿಸಿ ಈ ಮೌಲ್ಯವನ್ನು ಡಿಆರ್‌ಸಿ ವಿಸ್ತೀರ್ಣಕ್ಕೆ ಪರಿವರ್ತಿಸುವಾಗ ಗ್ರಾಪಂ ಖಾತಾ ಹೊಂದಿರುವ ಕಟ್ಟಡಗಳನ್ನು ಕೃಷಿ ಭೂಮಿಯಲ್ಲಿರುವುದಾಗಿಉಲ್ಲೇಖೀಸಲಾಗಿತ್ತು. ಕಾನೂನು ಬಾಹಿರವಾಗಿ ಕೃಷಿ ಭೂದರ ಅಳವಡಿಸಿಕೊಂಡು ವಾಸ್ತವವಾಗಿ ನೀಡ ಬೇಕಾಗಿದ್ದ 6,314.44 ಚ.ಮೀ.ಗಳಿಗೆ ಬದಲಾಗಿ ಅಕ್ರಮವಾಗಿ ಬಿಬಿಎಂಪಿ ಅಧಿಕಾರಿಗಳು 1,6151.19 ಚ.ಮೀ.ಗಳ ಡಿಆರ್‌ಸಿಯನ್ನು ವಿತರಿಸಿದ್ದಾರೆ.
  • ಬಿಬಿಎಂಪಿ ಅಧಿಕಾರಿಗಳು ಕಟ್ಟಡ ಮೌಲ್ಯಮಾಪನ ಮಾಡುವ ವೇಳೆ 15 -20 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಹಳೆಯ ಕಟ್ಟಡಗಳನ್ನು 6 ವರ್ಷಗಳ ಕಟ್ಟಡಗಳೆಂದು ನಮೂದಿಸಿ ಕಟ್ಟಡಗಳಿಗೆ ಹೆಚ್ಚು ಮೌಲ್ಯವನ್ನು ಅಕ್ರಮವಾಗಿ ನಿಗದಿಪಡಿಸಿದ್ದರು.
  • ರಸ್ತೆ ಅಗಲೀಕರಣದ ಸಲುವಾಗಿ ಹಕ್ಕು ಬಿಡುಗಡೆ ಪತ್ರವನ್ನು ಬಿಬಿಎಂಪಿ ಹೆಸರಿಗೆ ಪಡೆದ ನಂತರ ರಸ್ತೆ ಅಗಲೀಕರಣಕ್ಕೆ ಒಳಪಡುವ ಜಾಗದಲ್ಲಿರುವ ಕಟ್ಟಡಗಳನ್ನು ಡೆಮಾಲಿಷನ್‌ ಮಾಡಿ ಜಾಗದ ಭೌತಿಕ ಸ್ವಾಧೀನ ಪಡೆಯದೆ, ಸ್ವತ್ತಿ ಖಾತಾವನ್ನು ಬಿಬಿಎಂಪಿ ಹೆಸರಿಗೆ ವರ್ಗಾಯಿಸದೇ, ಈ ವಿವರಗಳನ್ನು ಬಿಬಿಎಂಪಿಯ ರಸ್ತೆ ರಿಜಿಸ್ಟರ್‌ನಲ್ಲಿ ನಮೂದಿಸದೇ, ಅಕ್ರಮವಾಗಿ ಡಿಆರ್‌ಸಿ ಸಂ.002639 ನ್ನು 2013 ಆ.29ರಂದು ವಿತರಣೆ ಮಾಡಲಾಗಿದೆ. ಇದರಿಂದ ಬ್ರೋಕರ್‌ಗಳು ಕೋಟ್ಯಂತರ ರೂ.ಗಳಿಗೆ ಮಾರಾಟ ಮಾಡಿ ಅಕ್ರಮ ಲಾಭ ಮಾಡಿಕೊಂಡಿದ್ದಾರೆ. ಆದರೆ, 6 ವರ್ಷವಾದರೂ ರಸ್ತೆ ಅಗಲೀಕರಣವೇ ಆಗಿಲ್ಲ.
Advertisement
Advertisement

Udayavani is now on Telegram. Click here to join our channel and stay updated with the latest news.

Next