Advertisement

ಸಮರ್ಪಕ ವ್ಯವಸ್ಥೆ ಇಲ್ಲದೆ ತೆರಿಗೆ ಸಂಗ್ರಹ: ಪಾವತಿದಾರರ ಆಕ್ಷೇಪ

09:51 PM Jul 18, 2019 | mahesh |

ಪಾಣೆಮಂಗಳೂರು: ಪುರಸಭೆಯಿಂದ ಸಮರ್ಪಕ ವ್ಯವಸ್ಥೆ ಇಲ್ಲದೆ ಸಾರ್ವತ್ರಿಕ ತ್ಯಾಜ್ಯ ವಿಲೇವಾರಿಗೆ ಹೆಚ್ಚುವರಿ ತೆರಿಗೆ ಸಂಗ್ರಹಕ್ಕೆ ಪಾವತಿ ದಾರರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಪುರಸಭೆಗೆ ಚುನಾಯಿತ ಜನ ಪ್ರತಿನಿಧಿಗಳ ಆಡಳಿತ ವಿಲ್ಲ. ಮಂಗಳೂರು ಸಹಾಯಕ ಕಮಿಷನರ್‌ ಆಡಳಿತಾಧಿಕಾರಿ ಆಗಿದ್ದರೂ ಜನರ ಸಂಕಷ್ಟ ಬಗ್ಗೆ ಗಮನ ಹರಿಸುವುದಿಲ್ಲ ಎಂಬ ಆಕ್ರೋಶವಿದೆ.

Advertisement

ಆರಂಭದಲ್ಲಿ ಸಮರ್ಪಕವಾಗಿದ್ದ ವ್ಯವಸ್ಥೆಗೆ ಪ್ರಸ್ತುತ ಗ್ರಹಣ ಹಿಡಿದಿದೆ. ತ್ಯಾಜ್ಯ ಸಂಗ್ರಹ ವಾಹನ ಸರಿಯಾದ ರಸ್ತೆ ವ್ಯವಸ್ಥೆ ಇರುವಲ್ಲಿ ಮಾತ್ರ ಹೋಗಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಆದರೆ ಹೆಚ್ಚುವರಿ ತೆರಿಗೆಯನ್ನು ಎಲ್ಲರೂ ಭರಿಸಲೇಬೇಕಾಗಿದೆ. ಆಡಳಿತ ವ್ಯವಸ್ಥೆ ಲೋಪ ಸಮಸ್ಯೆಗೆ ಕಾರಣ ಎಂಬ ಆರೋಪವಿದೆ.

ಕಳೆದ ಮಾರ್ಚ್‌ ಬಳಿಕ ಸಾರ್ವತ್ರಿಕ ತ್ಯಾಜ್ಯ ತೆರಿಗೆ ಸಂಗ್ರಹ ಮಾಡುವ ಕ್ರಮ ಆರಂಭವಾಗಿದ್ದು, ಸದಸ್ಯರು ಪಕ್ಷಾತೀತವಾಗಿ ತಗಾದೆ ವ್ಯಕ್ತ ಮಾಡಿದ್ದಲ್ಲದೆ ಆಕ್ಷೇಪಗಳನ್ನು ಲಿಖಿತವಾಗಿ ಸಲ್ಲಿಸಿದ್ದಾರೆ. ಸಮಸ್ಯೆ ಪರಿಹಾರ ಆಗದಿರುವ ಹಿನ್ನೆಲೆಯಲ್ಲಿ ಸಂಘಟಿತ ಪ್ರಯತ್ನಕ್ಕೆ ಮುಂದಾಗಿರುವ ಜನ ಸಾಮಾನ್ಯರು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ರಚಿಸಿ ಜು. 23ರಂದು ಪುರಸಭೆಯ ಎದುರು ದೊಡ್ಡ ಮಟ್ಟದ ಪ್ರತಿಭಟನೆಗೆ ವ್ಯವಸ್ಥೆ ಸಿದ್ಧಗೊಳ್ಳುತ್ತಿದೆ.

ತ್ಯಾಜ್ಯ ಸಂಗ್ರಹ ಇಲ್ಲ
ಪುರಸಭೆಯು ಕಟ್ಟಡ ತೆರಿಗೆ ಸಂಗ್ರಹದ ಜತೆಗೆ ತ್ಯಾಜ್ಯ ಸಂಗ್ರಹ ತೆರಿಗೆ ವಸೂಲಿ ಮಾಡುತ್ತದೆ. ಆದರೆ ಪ್ರಸ್ತುತ ತ್ಯಾಜ್ಯವನ್ನು ಕೊಂಡು ಹೋಗುವ ವ್ಯವಸ್ಥೆ ಇರುವುದಿಲ್ಲ. ಇದು ಪ್ರತೀ ಕಟ್ಟಡ ವಿಸ್ತೀರ್ಣಕ್ಕೆ ಅನುಗುಣವಾಗಿ ನಿಗದಿ ಮಾಡಲಾಗುತ್ತದೆ. ಉದಾಹರಣೆಗೆ 200 ಚ.ಅ. ವಿಸ್ತೀರ್ಣದ ಮನೆಗೆ ಕನಿಷ್ಠ 150 ರೂ. ತ್ಯಾಜ್ಯ ಸಂಗ್ರಹ ತೆರಿಗೆ ಎಂದು ಹೆಚ್ಚುವರಿ ಸಂಗ್ರಹ ಮಾಡಲಾಗುತ್ತದೆ. ಇದಲ್ಲದೆ ಇತರ ಸಾಮಾನ್ಯ ತೆರಿಗೆ ಇದೆ.

ಆರ್‌ಸಿಸಿ ಮನೆ, ಬಂಗ್ಲೆ, ಅಂಗಡಿ ಮುಂಗಟ್ಟು, ಹೊಟೇಲ್‌, ಕಚೇರಿ ಇತ್ಯಾದಿ ಕಟ್ಟಡಗಳಿಗೆ, ನೆಲಕ್ಕೆ ಟೈಲ್ಸ್‌, ಮೊಸಾಯಿಕ್‌ ಹಾಕಿದ್ದರೆ ಎಂದಿನ ತೆರಿಗೆಯ ಜತೆಗೆ ಹೆಚ್ಚುವರಿ ತೆರಿಗೆ ಹಾಕಲಾಗುತ್ತದೆ.

Advertisement

ಕುಡಿಯುವ ನೀರಿಗೆ ತಿಂಗಳಿಗೆ ಕನಿಷ್ಠ 60 ರೂ. ಇದ್ದುದನ್ನು ಯಾವುದೇ ಮಾಹಿತಿ ಇಲ್ಲದೆ 90 ರೂ. ಹೆಚ್ಚಿಸಲಾಗಿತ್ತು. ಕಳೆದ ಎಪ್ರಿಲ್‌, ಮೇ ತಿಂಗಳಲ್ಲಿ ನೀರು ಸರಬರಾಜು ಇರಲಿಲ್ಲ. ಜನಸಾಮಾನ್ಯರು ಸ್ವಯಂ ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ ಪುರಸಭೆ ನೀರು ಸರಬರಾಜು ವ್ಯವಸ್ಥೆ ಮಾಡದಿದ್ದರೂ ಎರಡು ತಿಂಗಳ ನೀರಿನ ತೆರಿಗೆಯನ್ನು ವಸೂಲಿ ಮಾಡಿದ್ದಾರೆ. ಪಡೆಯದ ನೀರಿಗೆ ಪಾವತಿ ನೀಡಿದ್ದಾಗಿ ಜನರು ಹೇಳಿಕೊಂಡಿದ್ದಾರೆ.

ಸಮಸ್ಯೆ ಏನು ?
ಮನೆ ತೆರಿಗೆ ಕಟ್ಟಲು ಪುರಸಭೆಗೆ ಹೋದಾಗ ತ್ಯಾಜ್ಯ ಸಂಗ್ರಹದ ತೆರಿಗೆಯನ್ನು ಜತೆಗೆ ವಸೂಲಿ ಮಾಡುತ್ತಾರೆ. ಪುರಸಭೆಯಿಂದ ತ್ಯಾಜ್ಯ ಸಂಗ್ರಹಕ್ಕೆ ಎಲ್ಲೆಡೆ ವಾಹನ ಬರುವುದಿಲ್ಲ. ಹಾಗಿರುವಾಗ ತ್ಯಾಜ್ಯ ಸಂಗ್ರಹ ತೆರಿಗೆಯನ್ನು ಎಲ್ಲರಿದಲೂ ವಸೂಲು ಮಾಡುವುದು ಯಾಕೆ ಎಂಬುವುದು ಪ್ರಶ್ನೆಯಾಗಿದೆ. ಇತರ ತೆರಿಗೆಗಳ ಜತೆಗೆ ತ್ಯಾಜ್ಯ ಸಂಗ್ರಹ ತೆರಿಗೆ ವಸೂಲಿ ಕೂಡದು ಎನ್ನುವುದು ಜನರ ಅಭಿಪ್ರಾಯ.

ತ್ಯಾಜ್ಯ ಸಂಗ್ರಹ ತೆರಿಗೆ ಬಗ್ಗೆ ಸಾರ್ವತ್ರಿಕ ಆಕ್ರೋಶವಿದ್ದರೂ ಪುರಸಭೆ ಮಾತ್ರ ಯಾವುದೇ ಮುಲಾಜಿಲ್ಲದೆ ಯಥಾಸ್ಥಿತಿ ಮುಂದುವರಿಸಿದೆ. ತ್ಯಾಜ್ಯ ಕೊಂಡು ಹೋಗುವ ವ್ಯವಸ್ಥೆ ಇಲ್ಲದೆ, ತೆರಿಗೆ ಸಂಗ್ರಹಿಸುವ ನೀತಿಯೇ ಸಮರ್ಪಕವಲ್ಲ ಎನ್ನುತ್ತಾರೆ ತೆರಿಗೆ ಪಾವತಿಸುವವರು.

ತ್ಯಾಜ್ಯ ಸಂಗ್ರಹ ತೆರಿಗೆ
200 ಚ. ಅ. ವಿಸ್ತೀರ್ಣ  ವಾರ್ಷಿಕ ತೆರಿಗೆ 150 ರೂ.
201-800 ಚ.ಅ. ವಿಸ್ತಿರ್ಣ ವಾರ್ಷಿಕ 360 ರೂ.
801-1,500 ಚ. ಅ. ವಿಸ್ತೀರ್ಣ ವಾರ್ಷಿಕ 480 ರೂ.
1,501ರಿಂದ ಮೇಲ್ಪಟ್ಟು  ಪ್ರತಿ ಚ. ಅ. ವಿಸ್ತೀರ್ಣಕ್ಕೆ ತಿಂಗಳೊಂದಕ್ಕೆ 50 ರೂ. ಹೆಚ್ಚುವರಿ
(ಇತರ ತೆರಿಗೆಗಳು ಪ್ರತ್ಯೇಕ)

 ಪ್ರತಿಭಟನೆಗೆ ಸಿದ್ಧತೆ
ಬಂಟ್ವಾಳ ಪುರಸಭೆಯಲ್ಲಿ ತ್ಯಾಜ್ಯ ಸಂಗ್ರಹ ಕ್ರಮವಿಲ್ಲದಿದ್ದರೂ ತೆರಿಗೆ ಸಂಗ್ರಹದ ಕ್ರಮವನ್ನು ಮಾಡುತ್ತಿದ್ದಾರೆ ಎಂಬುದಾಗಿ ಆರೋಪ ವ್ಯಕ್ತವಾಗಿದೆ. ಸ್ಥಳೀಯ ಜನ ಪ್ರತಿನಿಧಿಗಳ ಆಡಳಿತ ಇಲ್ಲದಿರುವುದು ಇಂತಹ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ. ತ್ಯಾಜ್ಯ ಸಂಗ್ರಹಣೆ ಹೆಚ್ಚುವರಿ ತೆರಿಗೆಯನ್ನು ಪುರಸಭಾ ಆಡಳಿತಾಧಿಕಾರಿ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದಲ್ಲಿ ಜು. 23ರಂದು ಬೆಳಗ್ಗೆ 10ಕ್ಕೆ ಸಾರ್ವಜನಿಕರು ಬಂಟ್ವಾಳ ಪುರಸಭೆ ಕಚೇರಿ ಎದುರಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
 -ಬಿ. ಶೇಖರ, ಸಂಚಾಲಕರು, ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ

 ಸರಕಾರದ ಆದೇಶ
ಪುರಸಭೆಗೆ ಸರಕಾರದಿಂದ 2015ರಲ್ಲಿ ಆಸ್ತಿ ತೆರಿಗೆ ಜತೆಗೆ ತ್ಯಾಜ್ಯ ಸಂಗ್ರಹ ತೆರಿಗೆ ವಸೂಲಿಗೆ ಆದೇಶ ಬಂದಿದೆ. ಸೂಚನೆಯಂತೆ ಪ್ರಸ್ತುತ ಅನುಷ್ಠಾನಿಸಿದೆ.
ತ್ಯಾಜ್ಯ ವಿಲೇವಾರಿಗೆ ಪುರಸಭೆ 1.12 ಕೋಟಿ ರೂ. ಗೂ ಹೆಚ್ಚು ವೆಚ್ಚ ಭರಿಸುತ್ತದೆ. ಅಂಕಿಅಂಶ ಪ್ರಕಾರ ನಮಗೆ ಎಲ್ಲರೂ ತ್ಯಾಜ್ಯ ತೆರಿಗೆ ಪಾವತಿಸಿದರೂ 84. 55 ಲಕ್ಷ ರೂ. ಸಂಗ್ರಹಿಸಲು ಸಾಧ್ಯ. ಕಸ ವಿಲೇವಾರಿಗಾಗಿ 3 ಟಿಪ್ಪರ್‌, 1 ಜೆಸಿಬಿ, 2 ಹೊರಗುತ್ತಿಗೆ ವಾಹನ, 1 ಟೆಂಪೋ (407) ವಾಹನವಿದೆ.
 - ಜೆ. ರೇಖಾ ಶೆಟ್ಟಿ, ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next