Advertisement

ಉತ್ತಮ ಪರಿಸರದಿಂದ ಒತ್ತಡ ಶಮನ

03:35 PM Nov 29, 2019 | Naveen |

ತರೀಕೆರೆ: ದೈನಂದಿನ ಬದುಕಿನಲ್ಲಿ ಒತ್ತಡದ ನಡುವೆ ಜೀವನ ಸಾಗಿಸುತ್ತಿರುವ ಮನುಷ್ಯ ಜೀವನದುದ್ದಕ್ಕೂ ಸಂಕಷ್ಟಗಳ ಸರಮಾಲೆ ಎದುರಿಸುತ್ತಿದ್ದಾನೆ. ಉತ್ತಮ ಪರಿಸರ, ಪ್ರಕೃತಿಯ ನಡುವೆ ಜೀವಿಸಿದರೆ ಒತ್ತಡ ಶಮನವಾಗುತ್ತದೆ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

Advertisement

ಗುರುವಾರ ತಾಲೂಕಿನ ಲಿಂಗದಹಳ್ಳಿ ಸಮೀಪದ ಶ್ರೀ ಕ್ಷೇತ್ರ ಕಲ್ಲತ್ತಿಗಿರಿ ಶ್ರೀ ವೀರಭದ್ರೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಆಯೋಜಿಸಲಾಗಿದ್ದ ಕಾರ್ತಿಕೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದ ಅವರು, ಮನುಷ್ಯ ಒತ್ತಡದಿಂದ ಹೊರಬಂದು ಜೀವಿಸುವುದನ್ನು ಕಲಿಯಬೇಕೆಂದು ಕಿವಿಮಾತು ಹೇಳಿದರು.

ದೇಶದಲ್ಲಿ ಧರ್ಮ ಇಂದಿಗೂ ಜೀವಂತವಾಗಿದೆ. ಧರ್ಮದ ನಡುವೆಯೇ ಮನುಷ್ಯ ಜೀವನ ಸಾಗಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾನೆ. ಜೀವನದಲ್ಲಿ ಶ್ರದ್ಧೆ ಇದ್ದವನು ಸಾಧನೆಯ ಸಂಕಲ್ಪ ಮಾಡಬಲ್ಲ. ಧರ್ಮದ ಆಧಾರದ ಮೇಲೆಯೇ ಮಕ್ಕಳನ್ನು ಬೆಳೆಸಿ ಸತ್ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದರು. ನೀರು ಹಿತಮಿತವಾಗಿ ಬಳಸುವ ಮೂಲಕ ನೀರನ್ನು ಉಳಿಸುವ ಕಾಯಕದಲ್ಲಿ ನಾವು ತೊಡಗಬೇಕಿದೆ. ನೀರು ಪೋಲಾಗದಂತೆ ನೀರಾವರಿ ಯೋಜನೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಜಗಳೂರು ಮತ್ತು ಭರಮಸಾಗರದಲ್ಲಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ 1,200 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ ಎಂದರು.

ಯೋಜನೆಗೆ ಸರ್ಕಾರ ಈಗಾಗಲೇ 1,200 ಕೋಟಿ ರೂ. ಮಂಜೂರು ಮಾಡಿದ್ದು, ಟೆಂಡರ್‌ ಕೂಡ ಕರೆಯಲಾಗಿದೆ. ಸದ್ಯದಲ್ಲೇ ಎರಡು ಯೋಜನೆಯ ಕಾಮಗಾರಿ ಆರಂಭಗೊಳ್ಳಲಿದೆ. ತಾಲೂಕಿನ ಜನತೆಗೆ ಗೋಂದಿ  ಅಣೆಕಟ್ಟಿನಿಂದ ನೀರಾವರಿ ವ್ಯವಸ್ಥೆ ಕಲ್ಪಿಸಲು ಜಿಲ್ಲಾ ಸಚಿವ ಸಿ.ಟಿ.ರವಿ ಹಾಗೂ ಶಾಸಕ ಡಿ.ಎಸ್‌. ಸುರೇಶ್‌ ಸರ್ಕಾರದೊಂದಿಗೆ ಮಾತನಾಡಿ ಕೂಡಲೇ ಕಾರ್ಯರೂಪಕ್ಕೆ ತರಬೇಕು. ಅಂದುಕೊಂಡಂತೆ ಯೋಜನೆಗೆ ಚಾಲನೆ ದೊರೆತರೆ ತಾಲೂಕಿನ ಬಹುತೇಕ ಕೆರೆಗಳು ತುಂಬಲಿವೆ ಎಂದು ಹೇಳಿದರು.

ಶಾಸಕ ಡಿ.ಎಸ್‌.ಸುರೇಶ್‌ ಮಾತನಾಡಿ, ಸಿರಿಗೆರೆ ಶ್ರೀಗಳು ನೀರಾವರಿ ಯೋಜನೆಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅವರ ಆಶಯದಂತೆ ಗೋಂದಿಯಿಂದ ಲಿಂಗದಹಳ್ಳಿ ಹೋಬಳಿ ಕೆರೆಗಳನ್ನು ತುಂಬಿಸುವ ಯೋಜನೆಗೆ ಡಿಪಿಆರ್‌ ತಯಾರಿಸಲಾಗಿದ್ದು, ಸರ್ಕಾರ 4 ಕೋಟಿ ರೂ. ಬಿಡುಗಡೆ ಮಾಡಿ ಟೆಂಡರ್‌ ಕರೆದಿದೆ. ಶ್ರೀಗಳ ಮಾರ್ಗದರ್ಶನದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.

Advertisement

ಇದೇ ಸಂದರ್ಭದಲ್ಲಿ ಕಲ್ಲತ್ತಿಗಿರಿ ಶ್ರೀಕ್ಷೇತ್ರದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಯಾತ್ರಿ ನಿವಾಸ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಜಿಪಂ ಸದಸ್ಯ ಕೆ.ಆರ್‌.ಆನಂದಪ್ಪ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಡಿ.ಶಂಕರಲಿಂಗಪ್ಪ, ಶ್ರೀಕ್ಷೇತ್ರ ಕಲ್ಲತ್ತಿಗಿರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಾರ್ಗದ ಎಂ.ವಿಶ್ವನಾಥ್‌, ಸದಸ್ಯ ಎಲ್‌.ಎಂ.ಮಧು ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next