Advertisement

ಹಳ್ಳಿಗಳಿಗೂ ಸೋಂಕು ಹಬ್ಬುವ ಸಾಧ್ಯತೆ

04:21 PM May 28, 2020 | Naveen |

ತರೀಕೆರೆ: ಹೊರ ರಾಜ್ಯಗಳಿಂದ ಮತ್ತು ವಿದೇಶದಿಂದ ಜನರು ತಮ್ಮ ತವರಿಗೆ ಮರಳುತ್ತಿರುವ ಕಾರಣ ಹಸಿರು ವಲಯದಲ್ಲಿದ್ದ ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಕಂಡುಬಂದಿವೆ. ಹಳ್ಳಿಗಳಿಗೂ ಸೋಂಕು ಹಬ್ಬುವ ಸಾಧ್ಯತೆ ಇದೆ. ಜೂನ್‌ 1 ರಿಂದ ಬಹುತೇಕ ವಲಯಗಳ ಲಾಕ್‌ ಡೌನ್‌ ತೆರವುಗೊಳಿಸುವುದರಿಂದ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ತಾಪಂ ಸಭಾಂಗಣದಲ್ಲಿ ನಡೆದ ಕೋವಿಡ್‌-19 ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಸೋಂಕಿನಿಂದ ಮೃತಪಟ್ಟವರಲ್ಲಿ ಹಿರಿಯ ನಾಗರೀಕರೇ ಹೆಚ್ಚು. ಆದರೂ ಜನರು ಭಯಬೀಳುವ ಅಗತ್ಯವಿಲ್ಲ. ಹಿರಿಯ ನಾಗರೀಕರು, ಗಭೀಣಿಯರು, ಸ್ತ್ರೀಯರು, ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಸೋಂಕು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಭಿನ್ನವಾಗಿದೆ. ಅದರ ಸೈಡ್‌ ಎಫೆಕ್ಟ್ ಕೂಡ ಭಿನ್ನವಾಗಿದೆ. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕೊರೊನಾ ಸೋಂಕಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಲಸಿಕೆ ಕಂಡು ಹಿಡಿಯುವ ತನಕ ಇಂತಹ ಸನ್ನಿವೇಶ ಮುಂದುವರಿಯಲಿದೆ ಎಂದರು.

ಹೋಟೆಲ್‌ಗ‌ಳು, ಸರಕಾರಿ ಶಾಲೆಗಳು, ಹಾಸ್ಟೆಲ್‌ಗ‌ಳನ್ನು ಸಿದ್ಧಪಡಿಸಿಟ್ಟುಕೊಳ್ಳಿ. ಸೋಂಕಿತರು ಹೆಚ್ಚಾದಲ್ಲಿ ಅವರನ್ನು ಕ್ವಾರಂಟೈನ್‌ಮಾಡಬೇಕಾಗುತ್ತದೆ. ಆಸ್ಪತ್ರೆಗಳಲ್ಲಿ ಔಷಧಿಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು ಮತ್ತು ವೆಂಟಿಲೇಟರ್‌ ಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಹೊರ ರಾಜ್ಯದಿಂದ ಬರುವ ವಾಹನಗಳನ್ನು ಸ್ಯಾನಿಟೈಸ್‌ ಮಾಡಬೇಕು ಮತ್ತು ವಾಹನಗಳನ್ನು ಎಲ್ಲಿಯೂ ನಿಲ್ಲದಂತೆ ನೋಡಿಕೊಳ್ಳಬೇಕು ಎಂದರು.

ಹೊರಗಿನಿಂದ ಬರುವವರನ್ನು ಸರಕಾರಿ ಕಟ್ಟಡಗಳಲ್ಲಿ ಕ್ವಾರಂಟೈನ್‌ಮಾಡುವ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಇದೆ. ಕಟ್ಟಡಗಳಲ್ಲಿ ಇರುವವರ ಆರೋಗ್ಯವನ್ನು ವೈದ್ಯಕೀಯ ಸಿಬ್ಬಂದಿ ತಪಾಸಣೆ ಮಾಡುತ್ತಾರೆ. ಜನರು ಅತ್ಯಂತ ಜಾಗ್ರತೆಯಿಂದ ಇರಬೇಕು ಎಂದರು. ತಾಲೂಕು ವೈದ್ಯಾಧಿಕಾರಿ ಡಾ| ಚಂದ್ರಶೇಖರ್‌ಮಾತನಾಡಿ, ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನಲ್ಲಿ ಇಲ್ಲಿಯ ತನಕ 49 ಜನರನ್ನು ಲಿಂಗದಹಳ್ಳಿ ಮತ್ತು ಬಾವಿಕೆರೆಯ ಹಾಸ್ಟೆಲ್‌ಗ‌ಳಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಇವರಲ್ಲಿ 35 ಜನರ ಲ್ಯಾಬ್‌ ಟೆಸ್ಟ್‌ ರಿಪೋಟ್‌ ಬಂದಿದ್ದು, ಅವರಲ್ಲಿ 34 ಮಂದಿಗೆ ನೆಗೆಟಿವ್‌ ವರದಿ ಬಂದಿದೆ. ಇನ್ನೂ 14 ಜನರ ವರದಿ ಬರಬೇಕಾಗಿದೆ ಎಂದರು.

ಗರ್ಭಿಣಿಗೆ ಸೋಂಕು ಪತ್ತೆ ಯಾಗಿದ್ದು, ಆಕೆಗೆ ಹೇಗೆ ಸೋಂಕು ತಗುಲಿತು ಎನ್ನುವುದು ಇನ್ನೂ ಕೂಡ ಪತ್ತೆಯಾಗಿಲ್ಲ. ಆಕೆ ತುಂಬು ಆಕೆಯನ್ನು ಚಿಕ್ಕಮಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ತಿಂಗಳಿಂದ ಆಕೆ ಎಲ್ಲಿಯೂ ಸಂಚರಿಸಿಲ್ಲ. ಅವಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿವರಲ್ಲಿಯೂ ಕೊರೊನಾ ಸೋಂಕು ಪತ್ತೆಯಾಗಿಲ್ಲ ಎಂದರು. ಸಿಡಿಪಿಒ ಚರಣ್‌ ಮಾತನಾಡಿ, ಗರ್ಭಿಣಿ ಯರು ಮತ್ತು ಬಾಣಂತಿಯರಿಗೆ ಮಾತೃ ಪೂರ್ಣ ಯೋಜನೆಯಲ್ಲಿ ಅವರ ಮನೆ ಬಾಗಿಲಿಗೇ ಆಹಾರ ವಿತರಣೆ ಮಾಡಲಾಗುತ್ತಿದೆ. ಪೌಷ್ಟಿಕತೆ ಕೊರತೆ ಎದುರಿಸುರುವ ಮಕ್ಕಳಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದರು. ಸಭೆಯಲ್ಲಿ ಶಾಸಕ ಡಿ.ಎಸ್‌.ಸುರೇಶ್‌, ತಾ.ಪಂ. ಅದ್ಯಕ್ಷೆ ಪದ್ಮಾವತಿ, ಉಪವಿಭಾಗಾಧಿಕಾರಿ ರೇಣುಕಾಪ್ರಸಾದ್‌, ಡಿವೈಎಸ್‌ಪಿ ರೇಣುಕಾಪ್ರಸಾದ್‌, ತಹಶೀಲ್ದಾರ್‌ ಸಿ.ಜಿ. ಗೀತಾ, ಇಒ ವಿಶಾಲಾಕ್ಷಮ್ಮ, ಅಜ್ಜಂಪುರ ತಹಶೀಲ್ದಾರ್‌ ವಿಶ್ವೇಶ್ವರರೆಡ್ಡಿ, ಮುಖ್ಯಾಧಿಕಾರಿ ಟಿ.ಎಸ್‌.ಗಿರೀಶ್‌, ಕೃಷಿ ಅಧಿಕಾರಿ ಚಿತ್ರಸೇನಾ, ಆಹಾರ ಇಲಾಖೆಯ ಮಲ್ಲಪ್ಪ ಭಾಗವಹಿಸಿದ್ದರು.

Advertisement

ಅಗತ್ಯ ವಸ್ತು ಪೂರೈಸಿ
ಸೀಲ್‌ಡೌನ್‌ ಪ್ರದೇಶದಲ್ಲಿ 211 ಕುಟುಂಬಗಳಿದ್ದು, ಅಲ್ಲಿರುವವರು ಕೂಲಿ ಮಾಡಿ ಜೀವನ ನಡೆಸುವುರಾಗಿದ್ದಾರೆ. ಅವರಿಗೆ ದೈನಂದಿನ ಜೀವನಕ್ಕೆ ತೊಂದರೆ ಉಂಟಾಗಿದೆ. ಅವರಿಗೆ ಹಾಲು, ದಿನಸಿ ಇನ್ನಿತರ ವಸ್ತುಗಳ ಅಗತ್ಯವಿದೆ ಎಂದು ಪತ್ರಕರ್ತರು ಸಭೆಯ ಗಮನಕ್ಕೆ ತಂದರು. ಆಗ, ಸಮಾಜ ಕಲ್ಯಾಣ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಸಮನ್ವಯತೆಯಲ್ಲಿ ಅವರಿಗೆ ಅಗತ್ಯವಿರುವ ವಸ್ತುಗಳು ಪೂರೈಕೆಯಾಗುವಂತೆ ನೋಡಿಕೊಳ್ಳಿ ಎಂದು ಸಂಸದೆ ಶೋಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next