Advertisement

ಪಾರಿಖ್‌ಗೆ ತಾರೀಫ್

08:03 PM Jan 26, 2020 | Lakshmi GovindaRaj |

ಜಗದೀಶ್‌ ಪಾರಿಖ್‌ ಬೆಳೆಯುವ ಹೂಕೋಸುಗಳ ಸರಾಸರಿ ತೂಕ 15 ಕೆ.ಜಿ ಮತ್ತು ಚೀನಿಕಾಯಿಗಳ ಸರಾಸರಿ ತೂಕ 86 ಕೆ.ಜಿ! ಅವರ ತೋಟದ ಹೀರೆಕಾಯಿಗಳ ಉದ್ದ 7 ಅಡಿ!

Advertisement

ಜನವರಿ 2019ರ ಆರಂಭದಲ್ಲಿ ಅದೊಂದು ದಿನ ಕೃಷಿಕ ಜಗದೀಶ್‌ ಪಾರಿಖ್‌ ಅವರಿಗೆ ರಾಷ್ಟ್ರಪತಿ ಭವನದಿಂದ ಫೋನ್‌ ಕರೆ ಬಂತು: ಅವರು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂಬ ಸಂಭ್ರಮದ ಸುದ್ದಿ ತಿಳಿಸಿತು. ರಾಜಸ್ಥಾನದ ಸಿರ್ಕ ಜಿಲ್ಲೆಯ ಅಜಿತ್‌ಘರ್‌ ಗ್ರಾಮದ 72 ವರ್ಷ ವಯಸ್ಸಿನ ಅಪ್ಪಟ ಸಾವಯವ ಕೃಷಿಕ ಜಗದೀಶ್‌ ಪಾರಿಖ್‌ ಕಳೆದ ಐದು ದಶಕಗಳಿಂದ ಭಾರೀ ಗಾತ್ರದ ಹಾಗೂ ಪೋಷಕಾಂಶಭರಿತ ಸಾವಯವ ತರಕಾರಿ ಬೆಳೆಯುವ ರೈತನೆಂದು ಸುದ್ದಿ ಮಾಡಿದ್ದಾರೆ.

ಅವರು ಬೆಳೆಯುವ ಹೂಕೋಸುಗಳ ಸರಾಸರಿ ತೂಕ 15 ಕೆ.ಜಿ ಮತ್ತು ಚೀನಿಕಾಯಿಗಳ ಸರಾಸರಿ ತೂಕ 86 ಕೆ.ಜಿ! ಅವರ ತೋಟದ ಹೀರೆಕಾಯಿಗಳ ಉದ್ದ 7 ಅಡಿ (ಸಾಮಾನ್ಯ ಹೀರೆಕಾಯಿಗಳ ಉದ್ದ 1.5 ಅಡಿ), ಬದನೆಗಳ ಉದ್ದ 3 ಅಡಿ, ಎಲೆಕೋಸುಗಳ ತೂಕ 8 ಕೆ.ಜಿ. ಇಂಥ ತರಕಾರಿಗಳನ್ನು ಬೆಳೆಸಲು ನಾನು ಯಾವುದೇ ರಹಸ್ಯ ಪೋಷಕಾಂಶಗಳನ್ನು ಬಳಸುವುದಿಲ್ಲ ಎನ್ನುತ್ತಾರೆ ಜಗದೀಶ್‌ ಪಾರಿಖ್‌. ಅವರ ಹೂಕೋಸಿನ ತಳಿಗೆ ರಾಷ್ಟ್ರೀಯ ಅನುಶೋಧನಾ ಪ್ರತಿಷ್ಠಾನದಿಂದ ಪ್ರಶಸ್ತಿ ಲಭಿಸಿದೆ. “ಅಜಿತ್‌ಘರ್‌ ತಳಿ’ ಎಂದು ಅವರು ಹೆಸರಿಸಿರುವ ಆ ತಳಿಗೆ 2001ರಲ್ಲಿ ಪೇಟೆಂಟ್‌ ಕೂಡ ಪಡೆದಿದ್ದಾರೆ.

ಒಎನ್‌ಜಿಸಿ ನೌಕರಿ ಬಿಟ್ಟರು: ಹತ್ತನೇ ವಯಸ್ಸಿನಲ್ಲಿ 1957ರಲ್ಲಿ ಪಾರಿಖ್‌ ಅವರ ಕೃಷಿ ಒಡನಾಟ ಶುರು. “ಮುಂಜಾನೆ ಐದು ಗಂಟೆಗೇ ಎದ್ದು, ತಂದೆ ಮತ್ತು ಮಾವಂದಿರೊಂದಿಗೆ ಹೋಗಿ, ತರಕಾರಿ ಮಾರಾಟಕ್ಕಾಗಿ ಕೂರುತ್ತಿದ್ದೆ. ಮುಂದೆ ಹತ್ತು ವರ್ಷ ದಿನ ಬೆಳಗಾದರೆ ಇದೇ ಕೆಲಸ. ವರ್ಷಗಳು ದಾಟಿದಂತೆ ತರಕಾರಿ ಬೆಳೆಸುವ ಬಗ್ಗೆ ಕುತೂಹಲ ಹೆಚ್ಚಿತು’ ಎಂದು ನೆನಪು ಮಾಡಿಕೊಳ್ಳುತ್ತಾರೆ ಅವರು.

ಯಶಸ್ಸಿಗೆ ಮೂರು ಕಾರಣಗಳು: ಜಗದೀಶ್‌ ಪಾರಿಖ್‌ ಅವರ ಯಶಸ್ಸಿನ ಹಿಂದೆ ಮೂರು ಕಾರಣಗಳು ಇವೆಯಂತೆ: ಉತ್ತಮ ದೇಸಿ ಬೀಜಗಳು, ಎಲ್ಲ ಕೃಷಿಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡುವುದು. ಸಸಿಗಳಿಗೆ ಅಗತ್ಯವಿದ್ದಾಗ ಮಾತ್ರ ನೀರೆರೆಯುವುದು. ಸಸಿಗಳ ಬೆಳವಣಿಗೆ ಗಮನಿಸಿ ಮೂರು ದಿನಗಳಿಗೊಮ್ಮೆ ನೀರೆರೆಯುತ್ತೇನೆ ಅನ್ನುತ್ತಾರವರು. ರೈತರು, ತಾವು ಬೆಳೆಸಿದ ಸಸಿಗಳ ಬೀಜಗಳನ್ನೇ ಮುಂದಿನ ಹಂಗಾಮಿನಲ್ಲಿ ಬಿತ್ತಬೇಕು ಎಂಬುದು ಅವರ ಸಲಹೆ. ಸಸಿಯಿಂದ ಸಸಿಗೆ ಎರಡು ಅಡಿ ಅಂತರ ಮತ್ತು ಏರುಮಡಿಯಿಂದ ಏರುಮಡಿಗೆ 1.5 ಅಡಿ ಅಂತರದಲ್ಲಿ ತರಕಾರಿ ಸಸಿ ಬೆಳೆಸುತ್ತಾರೆ ಪಾರಿಖ್‌. ಇದರಿಂದಾಗಿ ಅಜಿತ್‌ಘರ್‌ ಒಣಪ್ರದೇಶವಾಗಿದ್ದರೂ ಅವರಿಗೆ ನೀರಿನ ಕೊರತೆ ಉಂಟಾಗಿಲ್ಲ.

Advertisement

ಸೆಗಣಿ- ಸಿಪ್ಪೆ- ಎಲೆ: ಸಾವಯವ ಗೊಬ್ಬರ ತಯಾರಿ ವಿಧಾನದ ಬಗ್ಗೆ ಅವರು ನೀಡುವ ಮಾಹಿತಿ ಹೀಗಿದೆ- “ನನ್ನ ಜಮೀನಿನಲ್ಲಿ 10 x 6 x 3 ಅಡಿ ಅಳತೆಯ ಹೊಂಡ ಮಾಡಿದ್ದೇನೆ. ಇದರಲ್ಲಿ 10 ಸೆಂ.ಮೀ. ದಪ್ಪಕ್ಕೆ ಪ್ರಾಣಿಗಳ ಸೆಗಣಿ ಸಂಗ್ರಹಿಸುತ್ತೇನೆ. ಅದರ ಮೇಲೆ ಸೌತೆಕಾಯಿ ಸಿಪ್ಪೆ, ಬೇವಿನ ಎಲೆಗಳು ಮತ್ತು ಇತರ ಎಲೆಗಳನ್ನು ಹರಡುತ್ತೇನೆ. ಇದನ್ನು ಹಾಗೆಯೇ ಬಿಟ್ಟರೆ 15 ದಿನಗಳಲ್ಲಿ ಗೊಬ್ಬರ ತಯಾರು’. ಈ ಗೊಬ್ಬರ, ಸಸಿಗಳಿಗೆ ಉತ್ತಮ ಪೋಷಕ. ಮಾತ್ರವಲ್ಲ, ಇದಕ್ಕೆ ಯಾವುದೇ ವೆಚ್ಚವಿಲ್ಲ. ಸಸಿಗಳಿಗೆ ರೋಗ ಬಂದಾಗ ಹತೋಟಿಗಾಗಿ ರಾಸಾಯನಿಕಗಳನ್ನು ಪ್ರಯೋಗಿಸುವುದು ಬಹಳ ದುಬಾರಿ ಎನ್ನುವುದು ಪಾರಿಖ್‌ರ ಅಭಿಪ್ರಾಯ.

ಮಾರುಕಟ್ಟೆ ವಿಸ್ತರಣಾ ತಂತ್ರಗಳು: ಜಗದೀಶ್‌ ಪಾರಿಖ್‌ ಬೆಳೆಸಿದ ತರಕಾರಿಗಳು ಸುಲಭವಾಗಿ ಮಾರಾಟವಾಗುತ್ತಿಲ್ಲ. ಈ ಸಮಸ್ಯೆಗೆ ಅವರು ಕಂಡುಕೊಂಡ ಪರಿಹಾರ: ಕಡಿಮೆ ಬೆಲೆಗೆ ತರಕಾರಿಗಳನ್ನು ಮಾರುವುದು. ಉದಾಹರಣೆಗೆ, ಎಲೆಕೋಸಿನ ಮಾರುಕಟ್ಟೆ ಬೆಲೆ ಕಿಲೋಗೆ 40ರೂ. ಇದ್ದಾಗ, ಪಾರಿಖ್‌ ಕಿಲೋಗೆ 15ರೂ. ಬೆಲೆಗೆ ಮಾರುತ್ತಾರೆ. ಹಾಗಿದ್ದೂ ತರಕಾರಿ ಮಾರಾಟದಿಂದ ಪಾರಿಖ್‌ ಗಳಿಸುವ ಆದಾಯ ವರ್ಷಕ್ಕೆ 13 ಲಕ್ಷ ರೂ. ತಾವು ಬೆಳೆಸುವ ತರಕಾರಿಗಳ ಮಾರುಕಟ್ಟೆಯನ್ನು ವೃದ್ಧಿಸಿಕೊಳ್ಳಲು ಪಾರಿಖರು ರೈತರಿಗೆ ತರಬೇತಿ ಮತ್ತು ಉಚಿತ ಬೀಜ ವಿತರಣೆಯಂಥ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಾರೆ.

ಸಾವಯವ ಕೃಷಿ ರಾಕೆಟ್‌ ವಿಜ್ಞಾನವೇನಲ್ಲ. ಸ್ವಲ್ಪ ಹೆಚ್ಚು ಶ್ರಮ, ಗಮನ ಮತ್ತು ಸಹನೆ ಇದ್ದರೆ ಯಾರು ಬೇಕಾದರೂ ಯಶಸ್ಸು ಪಡೆಯಬಹುದು.
-ಜಗದೀಶ್‌ ಪಾರಿಖ್‌

* ಅಡ್ಡೂರು ಕೃಷ್ಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next