Advertisement

ತಂತ್ರ ಶಾಕ್ತವೂ ಹೌದು ಬೌದ್ಧವೂ ಹೌದು

06:50 AM Dec 10, 2017 | Harsha Rao |

ಭಾರತ ಎಂದರೆ ಕೇವಲ ಅಧ್ಯಾತ್ಮ, ಯೋಗ, ಧ್ಯಾನ ಎಂಬ ಜನಪ್ರಿಯ ಪರಿಕಲ್ಪನೆ ಮೂಡಿದ್ದು ಬ್ರಿಟಿಷ್‌ ವಸಾಹತುಶಾಹಿ ಕಾಲದಲ್ಲಿ. ಹಲವು ಸ್ತರ, ಹಲವು ಪಂಥ, ಅನೇಕ ಜಾತಿ, ಉಪಜಾತಿ, ವರ್ಣವ್ಯವಸ್ಥೆ ಅದರ ಗರ್ಭವನ್ನು ಸೀಳಲು ಹೊರಟ ನಾಥ, ಸಿದ್ಧ ಇತ್ಯಾದಿ ಪಂಥಗಳ ಸಂಕೀರ್ಣ ಪ್ರಪಂಚ ಭಾರತ. ಆದ್ದರಿಂದ ಇಲ್ಲಿ ವಿಜ್ಞಾನ, ಲೋಹಶಾಸ್ತ್ರ, ವಾಸ್ತು, ಜ್ಯೋತಿಷ, ಕಾಮಶಾಸ್ತ್ರ ರಸವಿದ್ಯೆ (Alchemy), ಆಯುರ್ವೇದ, ಆಹಾರಶಾಸ್ತ್ರ ಮುಂತಾದ ಹಲವಾರು ಜೀವನೋಪಯೋಗಿ ದಾರಿಗಳು ತೆರೆದುಕೊಂಡವು, ಅದರಲ್ಲಿ ಕೆಲವಕ್ಕೆ ಸಂಸ್ಕೃತ, ಕನ್ನಡ ಮೊದಲಾದ ರಾಜಪ್ರಭುತ್ವ ಮನ್ನಣೆ ಹೊಂದಿದ ಭಾಷೆಗಳಲ್ಲಿ ಮಾನ್ಯತೆ ದೊರೆಯಿತು. ಉಳಿದಂತೆ ಎಷ್ಟೋ ವಿವರಗಳು ಜಾನಪದರಲ್ಲಿ ಸೇರಿತು, ಗುಹ್ಯ ಸಮಾಜಗಳ ಮೂಲಕ ಉಳಿದು ಬಂದಿತು. ಅದರಲ್ಲಿ ಕಾಲಕಾಲಕ್ಕೆ ಪರಿಷ್ಕಾರ, ಆವಿಷ್ಕಾರ ಸಾಧ್ಯವಾಗದೇ ಇರಲು ಸಾಮಾಜಿಕ ನಿಷೇಧವೊಂದು ಕಾರಣವಾದರೆ ಗ್ರಾಮ್ಯ ಎಂಬ ನಿರ್ಲಕ್ಷ್ಯ ಮತ್ತೂಂದು ಕಡೆ. ಒಟ್ಟಿನಲ್ಲಿ ಲಕ್ಷ್ಮೀಧರನ ಈ ಪಟ್ಟಿಯೇನೂ ಸಂಪೂರ್ಣವಾಗಿ ಎಲ್ಲ ತಂತ್ರಗಳನ್ನೂ ಹೆಸರಿಸುವುದಿಲ್ಲ. ಕಾಲಕ್ರಮೇಣ ಇದರಲ್ಲಿ ಸೇರ್ಪಡೆ, ಮಾರ್ಪಾಟುಗಳೂ ಆಗಿವೆ.

Advertisement

ಇದಲ್ಲದೆ ತಂತ್ರಶಾಸ್ತ್ರ  ಗ್ರಂಥಗಳಿಗೆ ಮತ್ತೂಂದು ಸಂಸ್ಕೃತ ಮುಖವಿದೆ, ಅದು ಪ್ರಧಾನವಾಗಿ ವೈದಿಕ ಅದರಲ್ಲೂ ಶಂಕರ ಮೊದಲಾದ ಆಚಾರ್ಯರ ಪರಂಪರೆಯ ಹಿಂಚು ಮುಂಚಿಗೆ ಸೇರಿದ್ದು, ಶಂಕರಾಚಾರ್ಯರು ಅದ್ವೆ„ತದರ್ಶನ ಪ್ರವರ್ತಕರಾಗಿ ತಂತ್ರ ಗ್ರಂಥಗಳನ್ನು ಬರೆಯಲು ಅಸಾಧ್ಯ ಎಂಬ ನಂಬಿಕೆ ಅನೇಕ ವಿದ್ವಾಂಸರಲ್ಲಿದೆ. ಇದಕ್ಕೆ ವಿರುದ್ಧವಾಗಿ ಅದ್ವೆ„ತಿಗಳಾದ ಶಂಕರಾಚಾರ್ಯರು ಸಂಜೆ ವೇಳೆ ವಿವಿಧ ದರ್ಶನಗಳ ವಿದ್ವಾಂಸರೊಡನೆ ವಾಗ್ವಾದ ನಡೆಸಿ, ಬೆಳಗಿನ ವೇಳೆ ಕಾಳಿ, ದುರ್ಗಿ ಗುಡಿಗಳ ಮುಂದೆ ದೇವಿಸ್ತ್ರೋತ್ರಗಳನ್ನು ರಚಿಸುತ್ತಿದ್ದರು ಎಂಬ ಪ್ರತೀತಿಯನ್ನು ಎತ್ತಿ ಹಿಡಿದವರೂ ಇದ್ದಾರೆ. ಶಂಕರಾಚಾರ್ಯರ ಗುರುವಿನ ಗುರು ಗೌಡಪಾದರು ಶಕ್ತಿಸೂತ್ರ, ಸುಭಗೋದಯ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಶಿಷ್ಯ ಗೋವಿಂದ ಭಗವತ್ಪಾದರು ರಸೇಶ್ವರ ಎಂಬ ಪ್ರಾಚೀನ ಮತಕ್ಕೆ ರಸಹೃದಯ ರಚಿಸಿದ್ದಾರೆ. ಗೋವಿಂದರ ಶಿಷ್ಯ ಶಂಕರಾಚಾರ್ಯರ ಹೆಸರಿನ ಜೊತೆ ತಾಯಿತತ್ವ ಮೊದಲಿನಿಂದಲೂ ಸೇರಿಕೊಂಡಿದೆ.

ಇತಿಹಾಸಕಾರ ಎಸ್‌. ಶ್ರೀಕಂಠಶಾಸಿŒ ಅಭಿಪ್ರಾಯ ಪಡುವಂತೆ ಶಂಕರಾಚಾರ್ಯರು- ಶೀವಿದ್ಯಾ ಉಪಾಸಕರಾಗಿದ್ದು ಪ್ರಪಂಚಸಾರ, ಆನಂದಲಹರೀ, ಸೌಂದರ್ಯಲಹರೀ, ಲಲಿತಾ ತ್ರಿಶತೀ ಭಾಷ್ಯ ಮುಂತಾದ ಗ್ರಂಥಗಳನ್ನು ರಚಿಸಿರುವರು. ಮುಖ್ಯ ಪೀಠಗಳಲ್ಲಿ ಶ್ರೀಚಕ್ರಯಂತ್ರ ಸ್ಥಾಪನೆ ಮಾಡಿರುವರು (ಭಾರತೀಯ ಸಂಸ್ಕೃತಿ-1975, ಪುಟ 173).

ವಿಶೇಷವಾಗಿ ವೈದಿಕ ಚೌಕಟ್ಟಿನೊಳಗೆ ಶ್ರೀವಿದ್ಯೆ (ಶ್ರೀಚಕ್ರ) ಯ ಪ್ರಸಾರ, ಪ್ರಭಾವದಲ್ಲಿ ದಕ್ಷಿಣ ಭಾರತದ ಮಟ್ಟಿಗಂತೂ ಶಂಕರಾಚಾರ್ಯರ ಪಾತ್ರ ದೊಡ್ಡದು ಎಂಬುದರಲ್ಲಿ ಸಂದೇಹವಿಲ್ಲ. ತಂತ್ರಶಾಸ್ತ್ರದ ಸಂಸ್ಕೃತ ಪರಂಪರೆಯನ್ನು ಶಂಕರಾಚಾರ್ಯರ ಶಿಷ್ಯ ಲಕ್ಷ್ಮಣದೇಶಿಕರು ಮುಂದುವರೆಸಿ “ಶಾರದಾ ತಿಲಕ’ ರಚಿಸಿದರು, ಇದಕ್ಕೆ ರಾಘವಭಟ್ಟನ (ಕ್ರಿ.ಶ. 1493) ವ್ಯಾಖ್ಯಾನವಿದೆ. ಇದೇ ಕಾಲದಲ್ಲಿ ತಂತ್ರಸಾರ ಗ್ರಂಥದ (ಕತೃì: ಕೃಷ್ಣಾನಂದ ಆಗಮವಾಗೀಶ) ಪ್ರಭಾವದಿಂದ ಬಂಗಾಳದಲ್ಲಿ ಶಾಕ್ತದ ಪ್ರಭಾವ ಹೆಚ್ಚಿತು.

ದಕ್ಷಿಣಭಾರತದಲ್ಲಿ ಸೌಂದರ್ಯಲಹರಿಯ ಪ್ರಭಾವ ದೊಡ್ಡದಿದ್ದು ಇಂದಿಗೂ ನಗರ ಪ್ರದೇಶಗಳ, ಸಂಸ್ಕೃತಬಲ್ಲ ಮಧ್ಯಮವರ್ಗ, ಮೇಲ್ವರ್ಗಗಳಲ್ಲಿ ಅದರ ಪಠಣೆ ನಡೆಯುತ್ತದೆ. ಲೊಲ್ಲಲಕ್ಷ್ಮೀಧರ, ಡಿಂಡಿಮರ ಮತ್ತು ವ್ಯಾಖ್ಯಾನಗಳಂತೂ ಪ್ರಸಿದ್ಧವಾಗಿವೆ. ಜತೆಗೆ 18ನೇ ಶತಮಾನದಲ್ಲಿ ಭಾಸ್ಕರರಾಯನೆಂಬ ಕನ್ನಡಿಗನು “ಲಲಿತಾ ಸಹಸ್ರನಾಮ’ಕ್ಕೆ ಭಾಷ್ಯ (ಅಂದರೆ ವಿವರಣೆ) ಬರೆದಿದ್ದಾನೆ, ಅದು ಇಂದಿಗೂ ಜನಪ್ರಿಯವಾಗಿದೆ. ಇದರೊಂದಿಗೆ ಉಮಾನಂದನಾಥನು ರಚಿಸಿರುವ ಪರಶುರಾಮ ಕಲ್ಪಸೂತ್ರ ಉಲ್ಲೇಖನೀಯ. ತಂತ್ರ ಗ್ರಂಥಗಳು 18-19ನೇ ಶತಮಾನದ ವಸಾಹತುಕಾಲದ ಪಾಶ್ಚಾತ್ಯ ವಿದ್ವತ್ತಿನ ಕಾರಣ ಬೆಳಕು ಕಂಡವು. ಇದರಲ್ಲಿ ಸರ್‌ ಜಾನ್‌ ವುಡ್ರೋಫ್ನ ಪಾಲು ದೊಡ್ಡದಿದೆ. ಬಂಗಾಲದಲ್ಲಿ ನ್ಯಾಯಾಧೀಶನಾಗಿದ್ದ ಈತನು ಸಂಸ್ಕೃತದಲ್ಲಿದ್ದ ಅನೇಕ ತಂತ್ರ ಗ್ರಂಥಗಳನ್ನು ಇಂಗ್ಲಿಷಿಗೆ ಅನುವಾದಿಸಿ, ಅನೇಕ ಭಾರತೀಯರಂತೆ ಪಾಶ್ಚಾತ್ಯರೂ ತಂತ್ರವೆಂದರೆ ಬೀಭತ್ಸ ಎಂದು ಹೊಂದಿದ್ದ ಭಾವನೆಯನ್ನು ಸಾಕಷ್ಟು ದೂರ ಮಾಡಿದ್ದಾನೆ. Introduction to Tantra Sastra (ತಂತ್ರಶಾಸ್ತ್ರಕ್ಕೆ ಪೀಠಿಕೆ),  Principles of Tantras (ತಂತ್ರಗಳು ಮತ್ತು ತತ್ವಗಳು), Shakti and Sakta  (ಶಕ್ತಿ ಮತ್ತು ಶಾಕ್ತ), The Serpent Power (ಕುಂಡಲಿನಿ ಶಕ್ತಿ), The Tantra of Great Liberation (ಮಹಾನಿರ್ವಾಣ ತಂತ್ರ),  Greathess of Shiva (ಶಿವ ಮಹಿಮೆ), Garland of Letters (ಪತ್ರಮಾಲೆ), Tantraraja Tantra (ತಂತ್ರರಾಜ ತಂತ್ರ) ಇವು ಅವನು ರಚಿಸಿರುವ, ವ್ಯಾಖ್ಯಾನಿಸಿರುವ ಪ್ರಸಿದ್ಧ ಗ್ರಂಥಗಳು. ಆಧುನಿಕ ಕಾಲದಲ್ಲಿ ತಂತ್ರಶಾಸ್ತ್ರದ ಪಿತಾಮಹ ಎನ್ನುವಷ್ಟರಮಟ್ಟಿಗೆ ಅವನ ಸಾಧನೆ ಮತ್ತು ಗ್ರಂಥಗಳ ಅನುವಾದ ಇಪ್ಪತ್ತನೆಯ ಶತಮಾನದ ತಂತ್ರಗಳ ಅಧ್ಯಯನವನ್ನು ಪ್ರಭಾವಿಸಿದೆ. ಇದಲ್ಲದೆ ಪಿ.ಸಿ. ಬಾಗಚಿ (Evolution of Tantras- ತಂತ್ರಗಳ ವಿಕಾಸ), ಎನ್‌.ಎನ್‌. ಭಟ್ಟಾಚಾರ್ಯ (History of the Tantric Religion -ತಾಂತ್ರಿಕ ಮತದ ಇತಿಹಾಸ), ಜ್ಯೋತಿರ್ಲಾಲ್‌ ದಾಸ್‌ (ಕುಬ್ಜಿ ಕಾತಂತ್ರ, ಕಾಮಧೇನುತಂತ್ರ, ಕಾಮಾಖ್ಯ ತಂತ್ರ, ಕುಮಾರೀ ತಂತ್ರ, ಮಾಯಾತಂತ್ರ, ನೀಲತಂತ್ರ, ಯೋನಿತಂತ್ರ- ಇವುಗಳ ಸಂಪಾದನೆ ಮತ್ತು ಅನುವಾದ), ವ್ರಜವಲ್ಲಭ ದ್ವಿವೇದಿ (ಸ್ವತ್ಛಂದ ತಂತ್ರದ ಸಂಪಾದನೆ), ಗೋಪಿನಾಥ ಕವಿರಾಜ (ತಂತ್ರಜಾರ್‌ ಆಗಮಶಾಸ್ತೇರ ದಿಗªರ್ಶನ, ವಾಮಕೇಶ್ವರ ತಂತ್ರ) ಎಂ.ಪಿ. ಪಂಡಿತ್‌ (Gems from the Tantras ತಂತ್ರದ ಮಣಿ ಮೌಕ್ತಿಕಗಳು, ಕುಲಾರ್ಣವ ತಂತ್ರ, ಕುಂಡಲಿನೀ ಯೋಗ), ಎಸ್‌.ಕೆ. ರಾಮಚಂದ್ರರಾವ್‌ (Tantra Mantra Yantra -ತಂತ್ರ ಮಂತ್ರ ಮಂತ್ರ), ಲಲನ್‌ ಪ್ರಸಾದ್‌ ಸಿಂಗ್‌ (Tantra: It’s mystic  & Scientric Basis) ತಂತ್ರದ ಅನುಭಾವಿಕ ಮತ್ತು ವೈಭಾವಿಕ ಮತ್ತು ವೈಜ್ಞಾನಿಕ ಬುನಾದಿ)- ಇನ್ನೂ ಮೊದಲಾದ ವಿದ್ವಾಂಸರ ಪರಿಶ್ರಮದಿಂದ ತಂತ್ರಶಾಸ್ತ್ರದ ಅಧ್ಯಯನ ನಾನಾ ಮುಖಗಳಲ್ಲಿ ಸಾಗಿದೆ.

Advertisement

ತಂತ್ರಗಳ ಸಂಖ್ಯೆ ಎಷ್ಟು ಎಂಬ ವಿಷಯದಲ್ಲಿ ಏಕಾಭಿಪ್ರಾಯವಿಲ್ಲ. ಮಹಾಸಿದ್ಧಸಾರ ತಂತ್ರದಲ್ಲಿ ಒಂದು ಸ್ವಾರಸ್ಯಕರವಾದ ವಿವರಣೆಯಿದೆ. ಅದರ ಪ್ರಕಾರ ಭಾರತವನ್ನು ವಿಷ್ಣುಕ್ರಾಂತ, ರಥಕ್ರಾಂತ ಮತ್ತು ಅಶ್ವಕ್ರಾಂತ ಎಂದು ವಿಭಜಿಸಿದರೆ ಒಂದೊಂದು ಕ್ರಾಂತಕ್ಕೂ 64 ತಂತ್ರಗಳಿವೆ. ಈ ಪ್ರಕಾರ ಒಟ್ಟು ಭಾರತದಲ್ಲಿ ಸೃಷ್ಟಿಯಾದ ತಂತ್ರಗಳು (ಈ ಗ್ರಂಥದ ಪ್ರಕಾರ) 192. ಈ ಮೂರು ಭೌಗೋಳಿಕ ಗಡಿಗಳ ವಿವರಣೆ ಶಕ್ತಿ ಮಂಗಳ ತಂತ್ರದಲ್ಲಿದೆ.

ತಂತ್ರದಲ್ಲಿ ವೈಷ್ಣವ, ಶಾಕ್ತ, ಬೌದ್ಧ, ಶೈವ ಇತ್ಯಾದಿ ಭೇದಗಳಿರುವಂತೆ ಗೌಡ (ಪೂರ್ವಕ್ಕೆ), ಕೇರಳ (ಮಧ್ಯಭಾಗ), ಕಾಶ್ಮೀರ (ಪಶ್ಮಿಮಕ್ಕೆ), ಮತ್ತು ವಿಲಾಸ ಎಂಬ ನಾಲ್ಕು ಸಂಪ್ರದಾಯಗಳಿರುವುದನ್ನು “ಷಟ್‌ ಸಂಭವ ರಹಸ್ಯ’ ತಿಳಿಸುತ್ತದೆ. ಇದರಲ್ಲಿ ವಿಲಾಸ ಸಂಪ್ರದಾಯವು ದೇಶದ ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾಗದೆ ಎಲ್ಲೆಡೆಗೂ ಹಬ್ಬಿದೆ ಎಂದು ಅಟಲ್‌ ಬಿಹಾರಿ ಘೋಷ್‌ ವಿವರಿಸಿದ್ದಾರೆ.

ಮಹಾಯಾನ ಬೌದ್ಧ ಧರ್ಮದ ಒಂದು ಅವಸ್ಥೆ ತಾಂತ್ರಿಕ ಮುಖದ್ದು, ಇದಕ್ಕೆ “ವಜ್ರಯಾನ’ ಎಂದು ಹೆಸರು. ಇದರಲ್ಲಿ ಮುಖ್ಯ ಕಲ್ಪನೆ ಧ್ಯಾನಿ ಬುದ್ಧರದು. ಈ ಬುದ್ಧರು ಐತಿಹಾಸಿಕ ಬುದ್ಧರಿಗಿಂತ ಭಿನ್ನ. ಈ ಬುದ್ಧರಲ್ಲಿ ಪ್ರತಿಯೊಬ್ಬನು ತನ್ನ ಶಕ್ತಿ ಮತ್ತು ವಿವಿಧ ಯೋಗದ ರೂಢಿಗಳಿಂದ ಮತ್ತು ಸಾಧನದಿಂದ ಬೌದ್ಧತ್ವವನ್ನು ಹೊಂದಬಲ್ಲ.

ನಲಂದಾ ವಿಶ್ವವಿದ್ಯಾಲಯದಲ್ಲಿ ರತ್ನಸಾಗರ, ರತೊ°àಧಧಿ ಮತ್ತು  ರತ್ನರಂಜಕ ಎಂಬ ಮೂರು ಭವನಗಳಲ್ಲಿ ಗ್ರಂಥಾಲಯವಿತ್ತು. ರತ್ನಸಾಗರದಲ್ಲಿ ಬೌದ್ಧಗ್ರಂಥ ಪ್ರಜ್ಞಾnಪಾರಮಿತ ಸೂತ್ರದೊಡನೆ ಸಮಾಜ ಗುಹ್ಯದಂಥ ತಾಂತ್ರಿಕ ಜಾnನದ ಪುಸ್ತಕಗಳು ಸಂಗ್ರಹಿಸಲ್ಪಟ್ಟಿದ್ದವು ಎಂದು ಖ್ಯಾತ ಇತಿಹಾಸಕಾರ ರಾಧಾಕುಮುದ್‌ ಮುಖರ್ಜಿ ಬರೆಯುತ್ತಾರೆ (ಪ್ರಾಚೀನ ಭಾರತದಲ್ಲಿ ಶಿಕ್ಷಣ, 1978, ಪುಟ 780)

“ಮಂಜಶ್ರೀಕಲ್ಪದ’ ನಂತರ ಬರೆದ ಗುಹ್ಯ ಸಮಾಜ ತಂತ್ರದಲ್ಲಿ (ಕ್ರಿ.ಶ. 3ನೇ ಶತಮಾನ) ತಂತ್ರದ ತಾತ್ವಿಕತೆ ಮತ್ತು ಆಚರಣೆಗಳು ದಾಖಲಾಗಿವೆ. ಇದನ್ನು ಭಟ್ಟಾಚಾರ್ಯರು, ಗುಹ್ಯ ಸಮಾಜ ತಂತ್ರದ ಪೀಠಿಕೆಯಲ್ಲಿ ವಿವರಿಸಿದ್ದಾರೆ. ಬುದ್ಧರ ಕಲ್ಪನೆ ಕುರಿತ ವಿಶೇಷ ವಿವರಣೆ ಇದರಲ್ಲಿದೆ. ಆ ಪ್ರಕಾರ ಬೋಧೀಸತ್ವರ ಸಭೆ ಮತ್ತು ಉಳಿದವರು ಗುಹ್ಯ ಸಮಾಜದ ರಹಸ್ಯವನ್ನು ಪ್ರಶ್ನಿಸಿದರು. ಆಗ ಬುದ್ಧ ಬೇರೆ ಬೇರೆ ಧ್ಯಾನಾವಸ್ಥೆಗಳಲ್ಲಿ ಕುಳಿತನು, ಭಿನ್ನ ಭಿನ್ನ ಮಂತ್ರಗಳನ್ನು ಪಠಿಸಿದನು. ಈ ಹಿನ್ನೆಲೆಯಲ್ಲಿ ಬುದ್ಧನು ಸೃಷ್ಟಿಸಿದ ಐದು ಭಿನ್ನ ರೀತಿಯ ಶಕ್ತಿಗಳಿರುವ ಜ್ಞಾನಿ ಬುದ್ಧರೇ ಅಕ್ಷೊàಭಯ, ವೈರೋಚನ, ರತ್ನಕೇತು, ಅಮಿತಾಭ ಮತ್ತು ಅಮೋಘ ವಜ್ರ. ಈ ಐವರು ಬುದ್ಧರಿಗೆ/ಜ್ಞಾನಿ ಬುದ್ಧರಿಗೆ ಕ್ರಮವಾಗಿ ಐದು ಶಕ್ತಿಗಳನ್ನು ಗುಹ್ಯ ಸಮಾಜ ತಂತ್ರ ಗುರುತಿಸುತ್ತದೆ.

ವಿದ್ವಾಂಸರ ಪ್ರಕಾರ ಹತ್ತನೆಯ ಶತಮಾನದ ವೇಳೆಗೆ ಬೌದ್ಧಧರ್ಮದಲ್ಲಿ ತಂತ್ರಯಾನ/ಮಾರ್ಗದ ಪ್ರವೇಶವಾಯಿತು (ಅದೇ, 1978, ಪುಟ 798).

ಈ ಹಂತದಲ್ಲಿ ಬೌದ್ಧ ಧರ್ಮದ ಹಲವಾರು ಹೊಸ ದೇವತೆಗಳು ಕಾಲದ ಅಗತ್ಯಕ್ಕೆ ತಕ್ಕಂತೆ ಹುಟ್ಟಿಕೊಂಡರು. ಮೊದಲಿದ್ದ ಬುದ್ಧನ ಜೊತೆ ನಂತರ ಮೈತ್ರೇಯ, ಮಂಜುಶ್ರೀ, ಅವಲೋಕಿತೇಶ್ವರ, ಇತರ ಬೋಧಿಸತ್ವರು ಸೇರಿಕೊಂಡರು. ಮುಂದೆ ಸ್ತ್ರೀದೇವತೆಗಳಾದ ಹಾರೀತಿ ಮತ್ತು ತಾರಾ, ಪ್ರಜಾnಪಾರಮಿತಾ, ವಸುಧರಾ ಎಂಬುವರು ಸೇರಿದರು. ಇತಿಹಾಸ ಚಕ್ರ ಉರುಳಿದಂತೆ ಬೌದ್ಧ ದೇವತೆಗಳ ಪರಿವಾರವೂ ಹೆಚ್ಚಿತು.

ಪ್ರಾಯಃ ಬೌದ್ಧತಂತ್ರವು ಶೈವ ಮತ್ತು ಶಾಕ್ತ ಪಂಥಗಳ ಜೊತೆ ಸ್ಪರ್ಧೆ ಹೂಡಬೇಕಾಯಿತು. ಇದರ ಸಂಕೇತವಾಗಿ ಬೌದ್ಧದೇವತೆ ತ್ರೆ„ಲೋಕ್ಯವಿಜಯನು ಮಹೇಶ್ವರ (ಶಿವ) ಮತ್ತು ಗೌರಿ (ಪಾರ್ವತಿ) ಇವರನ್ನು ತುಳಿದು ನಿಂತ ವಿಗ್ರಹಗಳು ರಚನೆಯಾದವು. ಬೌದ್ಧಧರ್ಮ ಈ ಹಂತದಲ್ಲಿ ಅನೇಕ ವೈದಿಕ/ವೈದಿಕಕ್ಕೆ ಸಮೀಪದ ದೇವತೆಗಳನ್ನು ಜೀರ್ಣಿಸಿಕೊಳ್ಳಲು ಅಥವಾ ರೂಪಾಂತರಿಸಲು ನೋಡಿತು. ಉದಾ: ಹೆರುಕ ಎಂಬ ಬೌದ್ಧದೇವತೆ, ರುಂಡಮಾಲೆ ಧರಿಸಿದ್ದಾನೆ ಮತ್ತು ಆತ ಕಮಲದ ಮೇಲೆ ನರ್ತಿಸುತ್ತಾನೆ. ಇದು ಶಿವನನ್ನು ಹೋಲುವ ಚಿತ್ರಣ. ಯಮಾಂತರ ಎಂಬ ಮತ್ತೂಂದು ಬೌದ್ಧದೇವತೆಗೆ ಹೊರ ಚಾಚಿದ ನಾಲಿಗೆಯಿದೆ, ನಾಯಿಯ ಹಲ್ಲುಗಳಂಥ ಹಲ್ಲುಗಳಿವೆ. ದೊಡ್ಡ ಹೊಟ್ಟೆ, ಜತೆಗೆ ರುಂಡಮಾಲೆಯಿದೆ. ಈತನಿಗೆ ಕೋಣವೇ ವಾಹನ. ವೈದಿಕ ಪುರಾಣಗಳಲ್ಲಿ ಜನಪ್ರಿಯವಾಗಿರುವ ಯಮಧರ್ಮನೇ ಪ್ರಾಯಃ ಯಮಾಂತಕನಾಗಿದ್ದಾನೆ. ಹೆಸರನ್ನು ಗಮನಿಸಿದರೆ ವೈದಿಕರ ಯಮನಿಗೆ ಬೌದ್ಧರಲ್ಲಿ ಮೃತ್ಯು ಎಂಬ ಸಂಕೇತವಿದೆ. ನಾಮಪದ, ವಿಗ್ರಹ ರೂಪಾಂತರ ಮತ್ತು ಸಂಕೇತಗಳ ಮಿಶ್ರಣ ಅನ್ವಯದಿಂದ ಮಧ್ಯಕಾಲದಲ್ಲಿ ಧಾರ್ಮಿಕ-ಸಾಂಸ್ಕೃತಿಕ ಸಂಘರ್ಷದ ಅಥವಾ ಭಾಷೆ ರೂಪಗೊಂಡಿತು.

– ಜಿ. ಬಿ. ಹರೀಶ

Advertisement

Udayavani is now on Telegram. Click here to join our channel and stay updated with the latest news.

Next