Advertisement

ಗಡಿ ಭಾಗದಲ್ಲಿ ಮಾತೃಭಾಷೆ ಉಳಿಸಿ ಬೆಳೆಸಿ

02:33 PM Feb 27, 2021 | Team Udayavani |

ಗೌರಿಬಿದನೂರು: ಗಡಿ ಭಾಗದಲ್ಲಿ ಮಾತೃಭಾಷೆ ಜತೆಗೆ ಕನ್ನಡವನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮೆಲ್ಲರದ್ದಾಗಿದ್ದು, ಅದಕ್ಕಾಗಿ ನಮ್ಮೆಲ್ಲರ ಪ್ರಾಮಾಣಿಕ ಪ್ರಯತ್ನ ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

Advertisement

ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಆಯೋಜಿಸಿದ್ದ ಮಂಚೇನಹಳ್ಳಿ ತಾಲೂಕು ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಒಂದಾಗಬೇಕು: ರಾಜ್ಯದ ಜನರು ಶಾಂತಿ ಬಯಸುವ ಶಾಂತಿಪ್ರಿಯರಾಗಿದ್ದು, ಅನ್ಯ ರಾಜ್ಯ ಮತ್ತು ದೇಶದಿಂದ ಬರುವ ಜನರನ್ನು ಪ್ರೀತಿ ಮತ್ತು ವಿಶ್ವಾಸದಿಂದ ನೋಡಿಕೊಳ್ಳುತ್ತೇವೆ. ಇದಕ್ಕಾಗಿಯೇ ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಕನ್ನಡಿಗರ ಸಂಖ್ಯೆ ವಿರಳವಾಗಿದೆ. ನಾಡು, ನುಡಿ, ನೆಲ, ಜಲ ವಿಚಾರ ಬಂದಾಗ ನಾವೆಲ್ಲರೂ ಪಕ್ಷ, ಜಾತಿಭೇದಬಿಟ್ಟು ಹೋರಾಟಕ್ಕೆ ಮುಂದಾಗಬೇಕು. ನಮ್ಮ ಜಿಲ್ಲೆಯು ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿದ್ದು, ಈ ಭಾಗದಲ್ಲಿ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ಮಾಡುವ ಕನಸು ನಮ್ಮದಾಗಿದೆ ಎಂದು ಹೇಳಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಎನ್‌. ಶ್ರೀನಿವಾಸ್‌ ಮಾತನಾಡಿ, ಬಯಲು ಸೀಮೆಯ ಅರೆಮಲೆನಾಡಿನಲ್ಲಿ ಪ್ರಪ್ರಥಮವಾಗಿ ನಡೆಯುತ್ತಿರುವ ಕನ್ನಡ ಸಮ್ಮೇಳನವು ಐತಿಹಾಸಿಕವಾಗಿದ್ದು, ಕನ್ನಡ ಮನಸ್ಸುಗಳಿಗೆ ಹಬ್ಬವಾಗಿದೆ. ಕನ್ನಡದ ತೇರು ಎಳೆಯಲು ನಾವೆಲ್ಲರೂ ಒಕ್ಕೊರಲಿನಿಂದ ಶ್ರಮಿಸಬೇಕಾಗಿದೆ ಎಂದರು.

ನಿರಂತರ ನಡೆಯಲಿ: ಮಂಚೇನಹಳ್ಳಿ ತಾಲೂಕು ಕಸಾಪ ಅಧ್ಯಕ್ಷ ಜಿ.ಆರ್‌.ಜನಾರ್ದನಮೂರ್ತಿ ಮಾತನಾಡಿ, ಅವಿಭಜಿತ ನೂತನ ತಾಲೂಕಾಗಿರುವ ಮಂಚೇನಹಳ್ಳಿಯಲ್ಲಿ ನಡೆಯುತ್ತಿರುವ ಸಮ್ಮೇಳನವು ಅವಿಸ್ಮರಣೀಯವಾಗಿದೆ. ಈ ಭಾಗದಲ್ಲಿ ಕನ್ನಡಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್, ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಉಪಾಧ್ಯಕ್ಷೆ ಸರಸ್ವತಮ್ಮ ಅಶ್ವತ್ಥನಾರಾಯಣ ಗೌಡ, ಜಿಪಂ ಸದಸ್ಯ ಪಿ.ಎನ್‌.ಪ್ರಕಾಶ್‌, ಪ್ರಾಧ್ಯಾಪಕ ಕೆ.ಪಿ. ನಾರಾಯಣಪ್ಪ, ಎಂ.ಜಿ. ಶ್ರೀನಿವಾಸ್‌,ತಹಶೀಲ್ದಾರ್‌ ಎಚ್‌.ಶ್ರೀನಿವಾಸ್‌, ತಾಪಂ ಇಒ ಎನ್‌. ಮುನಿರಾಜು, ಬಿಇಒ ಕೆ.ವಿ.ಶ್ರೀನಿವಾಸಮೂರ್ತಿ, ಬಿ.ಆರ್‌.ಸಿ.ಎಚ್‌.ಜಗದೀಶ್‌, ಪಿಡಿಒ ಬಸವರಾಜ್‌ಬಳೂಟಗಿ, ಸಾಹಿತಿಗಳಾದ ಸಾ.ನಾ.ಲಕ್ಷ್ಮಣಗೌಡ,ಕೆ.ಪ್ರಭಾನಾರಾಯಣಗೌಡ, ಎಚ್‌.ಎನ್‌.ಕಿರಣ್‌ಕುಮಾರ್‌, ಮುಖಂಡರಾದ ಎಂ.ಆರ್‌.ಲಕ್ಷ್ಮೀ ನಾರಾಯಣಪ್ಪ, ಜೆ.ಸುಬ್ಬರಾವ್‌, ಜೆ.ವಿ.ಹನುಮೇ

Advertisement

ಗೌಡ, ಗಂಗಾಧರಯ್ಯ, ರಿಯಾಜ್, ಪಿ.ಎನ್‌. ಜಗನ್ನಾಥ್‌, ಜಿ.ಆರ್‌.ರಾಜಶೇಖರ್‌, ಹಳೇಹಳ್ಳಿ ಶಿವಕುಮಾರ್‌, ನಾರಾಯಣಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

ವಿಚಾರಗೋಷ್ಠಿ ಮತ್ತು ಕವಿಗೋಷ್ಠಿ: ವೇದಿಕೆಯಲ್ಲಿ ಮಧ್ಯಾಹ್ನದ ಬಳಿಕ ನಿವೃತ್ತ ಪ್ರಾಂಶುಪಾಲರಾದ ಡಾ. ಸಿ.ನಾಗರತ್ನಮ್ಮ ರವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿಹಾಗೂ ಲೇಖಕರಾದ ಕೆ.ಪ್ರಭಾನಾರಾಯಣಗೌಡರವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಸಮ್ಮೇಳನದ ವೇದಿಕೆಯಲ್ಲಿ ಸ್ಥಳೀಯ ಸಾಧಕರನ್ನು ಪ್ರೊ.ಎಂ.ಕೃಷ್ಣೇಗೌಡ ಹಾಗೂ ಕಸಾಪ ಪದಾಧಿಕಾರಿಗಳು ಸನ್ಮಾನಿಸಿದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ :

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನದ ಸರ್ವಾಧ್ಯಕ್ಷ ವಿ.ವಿ.ಗೋಪಾಲ್‌ ಅವರನ್ನು ಶ್ರೀ ಮಹೇಶ್ವರಿ ವೃತ್ತದಿಂದ ಪೂರ್ಣಕುಂಭ ಹಾಗೂ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ನಗರದ ಪ್ರಮುಖ ವೃತ್ತಗಳ ಮೂಲಕ ಮೆರವಣಿಗೆ ಸಾಗಿ ವೇದಿಕೆ ಬಳಿಗೆ ಆಗಮಿಸಿದರು.

ಪುಸ್ತಕ, ಕೋವಿಡ್‌ ಸುರಕ್ಷತಾ ಕುರಿತು ಮಳಿಗೆ :

ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ವಿವಿಧ ಬಗೆಯ ಪೌಷ್ಟಿಕ ಆಹಾರಗಳ ಪ್ರದರ್ಶನ ಹಾಗೂ ಸ್ವಚ್ಛತೆ ಮತ್ತು ಕೋವಿಡ್‌ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಮಳಿಗೆ ತೆರೆದು ಸಮ್ಮೇಳನಕ್ಕೆ ಬರುವವರಿಗೆ ಜಾಗೃತಿ ಮೂಡಿಸಿದರು. ಜತೆಗೆಸಮ್ಮೇಳನದ ಆವರಣದಲ್ಲಿ ಪುಸ್ತಕ ಮಳಿಗೆಗಳು, ಕರಕುಶಲ ವಸ್ತುಗಳ ಮಾರಾಟಮಳಿಗೆಗಳು, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಜಾಗೃತಿ ಮೂಡಿಸುವ ವಸ್ತು ಪ್ರದರ್ಶನ ಆಯೋಜಿಸಿದ್ದರು.

ಮಹನೀಯರ ಸ್ಮರಣೆ ಅಗತ್ಯ :

ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ಕನ್ನಡ ನಾಡಿನ ನೆಲದಲ್ಲಿ ಜನ್ಮ ಪಡೆದು ವಿಶ್ವವಿಖ್ಯಾತಿ ಪಡೆದ ಸಾಕಷ್ಟು ಮಹನೀಯರನ್ನು ನಾವುಗಳು ಸ್ಮರಿಸಬಹುದಾಗಿದೆ. ಕನ್ನಡ ಭಾಷೆ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದ್ದು, ಅದನ್ನು ಮಾತೃ ಭಾಷೆಯನ್ನಾಗಿ ಪಡೆದಿರುವ ನಾವುಗಳು ಧನ್ಯರಾಗಿದ್ದೇವೆ. ಕನ್ನಡ ಭಾಷೆಯಲ್ಲಿ ಮಾತನಾಡಲು ನಮಗೆ ಸಾಕಷ್ಟು ಅವಕಾಶಗಳಿವೆ, ಅದರ ಬಳಕೆ ಅದ್ಭುತವಾಗಿದೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸಮಾಜದಲ್ಲಿನ ಶಿಕ್ಷಕರು, ರಾಜಕಾರಣಿಗಳು ಹಾಗೂ ಮಾಧ್ಯಮದವರ ಮೇಲಿದೆ ಎಂದರು.

ಗಣ್ಯರಿಂದ ಧ್ವಜಾರೋಹಣ :

ಪ್ರಥಮ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಸೇವಾದಳದ ಮುಖಂಡ ಎನ್‌.ಬಾಲಪ್ಪ ನೇತೃತ್ವದಲ್ಲಿ ತಹಶೀಲ್ದಾರ್‌ ಎಚ್‌. ಶ್ರೀನಿವಾಸ್‌ ರಾಷ್ಟ್ರಧ್ವಜ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಎನ್‌.ಶ್ರೀನಿವಾಸ್‌ ನಾಡಧ್ವಜ ಹಾಗೂ ಕಸಾಪ ಅಧ್ಯಕ್ಷ ಆರ್‌.ಜಿ.ಜನಾರ್ದನಮೂರ್ತಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.

ಗಡಿ ಭಾಗದಲ್ಲಿರುವ ನಾವುಗಳು ಅನ್ಯಭಾಷೆಗಳ ನಡುವೆ ಮಾತೃಭಾಷೆ ಮರೆಯದೇ ಅದರ ಪಾವಿತ್ರ್ಯತೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕನ್ನಡ ಏಕೀಕರಣದ ಸಂದರ್ಭದಲ್ಲಿ ಸಾಹಿತಿಗಳು, ಕವಿಗಳು ಹಾಗೂ ಮುಖಂಡರು ನಾಡಿಗೆ ನೀಡಿದ ಕೊಡುಗೆ ಸ್ಮರಿಸಬಹುದಾಗಿದೆ. ಡಾ.ಕೆ.ಸುಧಾಕರ್‌, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next