Advertisement

ಹೆದ್ದಾರಿ ಪ್ರಾಧಿಕಾರದೊಂದಿಗೆ ಮಾತುಕತೆ: ಸುಕುಮಾರ್‌ ಶೆಟ್ಟಿ

09:08 PM Sep 28, 2020 | mahesh |

ಕುಂದಾಪುರ: ಹೆಮ್ಮಾಡಿ ಸಮೀಪದ ಜಾಲಾಡಿ – ಸಂತೋಷನಗರ ಮಧ್ಯೆ “ಡಿವೈಡರ್‌ ಕ್ರಾಸಿಂಗ್‌’ಗೆ ಅನುಮತಿ ಕೊಡಲು ಹೆದ್ದಾರಿ ಪ್ರಾಧಿಕಾರ ನಿರಾಕರಿಸಿರುವ ವಿಚಾರವನ್ನು ಅಲ್ಲಿನ ಗ್ರಾಮಸ್ಥರು ಸೋಮವಾರ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಅವರ ಗಮನಕ್ಕೆ ತಂದಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕರು ಈ ಬಗ್ಗೆ ಕೂಡಲೇ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತನಾಡಿ, ಡಿವೈಡರ್‌ ಕ್ರಾಸಿಂಗ್‌ಗೆ ಅನುಮತಿ ನೀಡಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

Advertisement

ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಹೆಮ್ಮಾಡಿ ಸಮೀಪದ ಜಾಲಾಡಿ – ಸಂತೋಷನಗರ ಮಧ್ಯೆ “ಡಿವೈಡರ್‌ ಕ್ರಾಸಿಂಗ್‌’ಗೆ ಅಲ್ಲಿನ ಜನ ಬೇಡಿಕೆ ಸಲ್ಲಿಸಿದ್ದರೂ ಅದಕ್ಕೆ ಅನುಮತಿ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರಾಕರಿಸಿರುವ ಕುರಿತಂತೆ “ಉದಯವಾಣಿ ಸುದಿನ’ವು ಸೆ. 28ರಂದು ವಿಸ್ತೃತವಾದ ವರದಿ ಪ್ರಕಟಿಸಿತ್ತು. ಈ ವರದಿಯನ್ನು ಆಧರಿಸಿ ಜಾಲಾಡಿ, ಸಂತೋಷನಗರ, ಬುಗುರಿಕಡು ಪರಿಸರದ ಜನ ಶಾಸಕರ ಗಮನಕ್ಕೆ ತಂದಿದ್ದು, ಅವರು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ.

ಜನರ ಬೇಡಿಕೆಯೇನು?
ಜಾಲಾಡಿ ಹಾಗೂ ಸಂತೋಷನಗರದ ಜನ ಹೆಮ್ಮಾಡಿ ಸರ್ಕಲ್‌ ಅಥವಾ ತಲ್ಲೂರು ಜಂಕ್ಷನ್‌ಗೆ ಹೋಗಿ ಸುತ್ತು ಬಳಸಿಕೊಂಡು ಬರಬೇಕಾಗಿದೆ. ಇಲ್ಲದಿದ್ದರೆ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಪ್ರಯಾಣಿಸಬೇಕು ಅಥವಾ 3 ಕಿ.ಮೀ. ದೂರದ ತಲ್ಲೂರು ಪೇಟೆಗೆ ಹೋಗಿ ತಿರುಗಿಸಿ ಬರಬೇಕು. ಕೆಲವರು ಅನಿವಾರ್ಯವಾಗಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದು, ಇದು ಅಪಾಯಕಾರಿಯಾಗಿದ್ದು, ಅನಿರೀಕ್ಷಿತ ಅವ ಘಡಗಳು ಸಂಭವಿಸುತ್ತಿವೆ. ಈ ಕಾರಣಕ್ಕೆ ಹೆಮ್ಮಾಡಿ ಜಂಕ್ಷನ್‌ನಿಂದ ಜಾಲಾಡಿಯವರೆಗೆ ಸರ್ವಿಸ್‌ ರಸ್ತೆ ನಿರ್ಮಿಸಬೇಕು ಎನ್ನುವ ಬೇಡಿಕೆ ಇಲ್ಲಿನ ಜನರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next