Advertisement

ಮಂಗನ ಕಾಯಿಲೆ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳಿ

10:43 AM Jan 19, 2019 | |

ಸಾಗರ: ತಾಲೂಕಿನ ವಿವಿಧ ಭಾಗಗಳಲ್ಲಿ ಹರಡಿರುವ ಮಂಗನ ಕಾಯಿಲೆ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಶುಕ್ರವಾರ ದಲಿತ ಸಂಘರ್ಷ ಸಮಿತಿ ಮತ್ತು ಸಿರಿವಂತೆ ಚಿತ್ರಸಿರಿ ಸಂಸ್ಥೆ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಲೇಖಕ ವಿಲಿಯಂ, ತಾಲೂಕಿನ ಬೇರೆಬೇರೆ ಭಾಗದಲ್ಲಿ ಮಂಗನ ಕಾಯಿಲೆ ವ್ಯಾಪಕವಾಗಿ ಹಬ್ಬುತ್ತಿದೆ. ಆದರೆ ಕಾಯಿಲೆ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಗಂಭೀರ ಕ್ರಮಗಳು ನಡೆಯುತ್ತಿಲ್ಲ. ರಾಜ್ಯ ಸರ್ಕಾರ ನಿಷ್ಕ್ರಿಯವಾಗಿದ್ದು ಹಲವು ಜನರು ಮಂಗನ ಕಾಯಿಲೆಗೆ ತುತ್ತಾಗಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಕಾಯಿಲೆ ಭೀತಿಯಿಂದ ಜನರು ಮನೆಯಿಂದ ಹೊರಗೆ ಬರಲು ಹೆದರುವ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ತಕ್ಷಣ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಚಿಂತಕ ದೇವೇಂದ್ರ ಬೆಳೆಯೂರು ಮಾತನಾಡಿ, ಸರ್ಕಾರಕ್ಕೆ ನಾಚಿಕೆಯಾಗಬೇಕು. ಜನರು ದಿನೇದಿನೇ ಆಸ್ಪತ್ರೆ ಸೇರುತ್ತಿದ್ದಾರೆ. ಆದರೂ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಗಂಭೀರ ಕ್ರಮ ಕೈಗೊಂಡಿಲ್ಲ. ಕಾಯಿಲೆಯಿಂದ ಮೃತಪಟ್ಟ ಜನರಿಗೆ ಜೀವನ ಭದ್ರತೆ ಇಲ್ಲವಾಗಿದೆ. ಕಾಯಿಲೆಯಿಂದ ಚಿಕಿತ್ಸೆ ಪಡೆಯುತ್ತಿರುವವರು ಮಣಿಪಾಲ ಆಸ್ಪತ್ರೆಯಲ್ಲಿದ್ದಾರೆ. ಅವರ ಕುಟುಂಬವು ಉಪವಾಸ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಇಂತಹ ಕುಟುಂಬಗಳಿಗೆ ಆರ್ಥಿಕ ನೆರವು ಕಲ್ಪಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ತಿಳಿಸಿದರು.

ಪತ್ರಕರ್ತ ಅ.ರಾ. ಶ್ರೀನಿವಾಸ್‌ ಮಾತನಾಡಿ, 1957ರಲ್ಲಿ ಕ್ಯಾಸನೂರು ಅರಣ್ಯದಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದ್ದು, ಅಂದಿನಿಂದ ಇಂದಿನವರೆಗೂ ಅದಕ್ಕೆ ಔಷಧಿ ಕಂಡು ಹಿಡಿಯಲಿಲ್ಲ. ಇನ್ನಾದರೂ ಔಷಧ ಕಂಡು ಹಿಡಿಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆ ಮೂಲಕ ಗಮನ ಹರಿಸಬೇಕು ಎಂದರು.

ಸಿರಿವಂತೆ ಚಿತ್ರಸಿರಿ ಸಂಸ್ಥೆ ಚಂದ್ರಶೇಖರ್‌ ಮಾತನಾಡಿ, ಈಗಾಗಲೇ ಕಾಯಿಲೆ ಉಲ್ಬಣಗೊಂಡಿದ್ದು ಮಂಗ ಸಾಯುತ್ತಿರುವ ಕಾಡಿನ ಭಾಗಗಳಲ್ಲಿ ಕೂಂಬಿಂಗ್‌ ಪ್ರಕ್ರಿಯೆ ಶೀಘ್ರಗೊಳಿಸಬೇಕು ಎಂದು ಒತ್ತಾಯಿಸಿದರು.

Advertisement

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ಪರಮೇಶ್ವರ ದೂಗೂರು, ಮಂಜುನಾಥ ಚಿಪ್ಪಳಿ, ಪ್ರಮುಖರಾದ ರಾಮಣ್ಣ ಹಸಲರು, ಯೇಸುಪ್ರಕಾಶ್‌, ನಾಗೇಂದ್ರ ಸಾಗರ, ಶಿವಾನಂದ ಕುಗ್ವೆ, ನಾಗಪ್ಪ ಬೇಳೂರು, ಪುಟ್ಟಪ್ಪ, ಅಣ್ಣಪ್ಪ ಬಾಳೆಗುಂಡಿ, ಬಂಗಾರಪ್ಪ ಶುಂಠಿಕೊಪ್ಪ, ಸುಭಾಷ್‌, ಕೃಷ್ಣ ಗಾಡಿಗ ಇನ್ನಿತರರು ಇದ್ದರು.

ಆಗುಂಬೆ ಭಾಗದಲ್ಲಿ 4 ಮಂಗಗಳ ಶವ ಪತ್ತೆ

ತೀರ್ಥಹಳ್ಳಿ: ತಾಲೂಕಿನ ಆಗುಂಬೆ ಭಾಗದ ಕಾಡಿನಲ್ಲಿ ನಾಲ್ಕು ಮಂಗಗಳ ಶವ ಪತ್ತೆಯಾಗಿದೆ. ಈ ಭಾಗದ ಗ್ರಾಮಸ್ಥರು ಮಂಗನ ಕಾಯಿಲೆ ಆತಂಕಕ್ಕೆ ಒಳಗಾಗಿದ್ದಾರೆ. ಆಗುಂಬೆ ಭಾಗದ ಬಿಳಚಿಕಟ್ಟೆ ಪ್ರದೇಶದಲ್ಲಿ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಶವವನ್ನು ಸುಟ್ಟು ಹಾಕಿದ್ದಾರೆ. ಆಗುಂಬೆ ಭಾಗದಲ್ಲಿ ಮಂಗನ ಕಾಯಿಲೆ ಹರಡದಂತೆ ಗ್ರಾಪಂ ವತಿಯಿಂದ ಜಾಗೃತಿ ಹಮ್ಮಿಕೊಳ್ಳಲಾಗಿದೆ ಎಂದು ಆಗುಂಬೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ| ಅನಿಕೇತ್‌ ತಿಳಿಸಿದ್ದಾರೆ. ಹೊಸನಗರದಲ್ಲಿ ಮಂಗನ ಶವ ಪತ್ತೆ: ಪಟ್ಟಣದ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಬಳಿ ಹಾಗೂ ಹುಲಿಕಲ್‌ ಸಮೀಪದ ಖೈರುಗುಂದಾ ಗ್ರಾಮದಲ್ಲಿ ಬಳಿ ಮಂಗನ ಶವ ಶುಕ್ರವಾರ ಪತ್ತೆಯಾಗಿದೆ. ಸ್ಥಳಕ್ಕೆ ಪಶುವೈದ್ಯರು, ಅರಣ್ಯ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ತೆರಳಿ, ಪರಿಶೀಲನೆ ನಡೆಸಿ ಮಂಗನ ಶವ ದಹನ ಮಾಡಲಾಗಿದೆ. ಸಂಪೆಕಟ್ಟೆ ಹಾಗೂ ಪುರಪ್ಪೆಮನೆ ಗ್ರಾಪಂ ವ್ಯಾಪ್ತಿಯ ದೊಡ್ಡಬೆಳಗೋಡು ಗ್ರಾಮದಲ್ಲಿ ಕೆಎಫ್‌ಡಿ ಲಸಿಕಾ ಶಿಬಿರ ಶೀಘ್ರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಯ ರಮೇಶ ಆಚಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next