Advertisement

ಪ್ರಕೃತಿ ವಿಕೋಪ ತಡೆಗೆ ಅಗತ್ಯ ಕ್ರಮ ಕೈಗೊಳ್ಳಿ: ಉಭಯ ಜಿಲ್ಲಾಧಿಕಾರಿಗಳ ಸೂಚನೆ

12:26 AM May 15, 2024 | Team Udayavani |

ಮಂಗಳೂರು: ಪ್ರಕೃತಿ ವಿಕೋಪದಿಂದ ಉಂಟಾಗುವ ಸಮಸ್ಯೆಗಳ ಕುರಿತಂತೆ ಅವಲೋಕನ ನಡೆಸಿ, ನಿಗಾವಹಿಸಿ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ “ಕುಡಿಯುವ ನೀರು ಹಾಗೂ ವಿಪತ್ತು ನಿರ್ವಹಣೆ ಪ್ರಾ ಧಿಕಾರ’ದ ಸಭೆಯಲ್ಲಿ ಅವರು ಮಾತನಾಡಿದರು.

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಳೆಯ ಕಾರಣದಿಂದ ಯಾವುದೇ ಸಮಸ್ಯೆ ಆದಲ್ಲಿ ಮೆಸ್ಕಾಂ ತ್ವರಿತವಾಗಿ ಕಾರ್ಯ ಪ್ರವೃತ್ತರಾಗಬೇಕು. ವಿದ್ಯುತ್‌ಕಂಬ ಧರೆಗುರುಳಿ ಸಂಪರ್ಕ ಕಡಿತ ವಾದಲ್ಲಿ ಸಮಸ್ಯೆಗಳನ್ನು ಎದುರಿಸಲು ಮೆಸ್ಕಾಂ ಮುಂಜಾಗ್ರತಾ ಕ್ರಮವಾಗಿ ಸಿಬಂದಿ ನಿಯೋಜಿಸಬೇಕು. ವಿದ್ಯುತ್‌ ಸಮಸ್ಯೆ ಉಂಟಾದ 6 ಗಂಟೆಯಒಳಗೆ ಪರಿಹಾರ ಒದಗಿಸಬೇಕು. ಜನಸಾಮಾನ್ಯರಿಗೆ ಅನುಕೂಲ ವಾಗುವಂತೆ ಕಂಟ್ರೋಲ್‌ ರೂಂ ತೆರೆಯಬೇಕು ಎಂದು ಸೂಚಿಸಿದರು.

ನೀರು ಪೋಲು ಮಾಡಿದರೆ ದಂಡ
ಈಗಾಗಲೇ ಜಿಲ್ಲೆಯ ಕೆಲವು ಕಡೆ ಟ್ಯಾಂಕರ್‌ಗಳ ಮೂಲಕ ನೀರನ್ನು ಸರಬರಾಜು ಮಾಡುತ್ತಿದ್ದು, ಅನಗತ್ಯ ಪೋಲು ಮಾಡುವವರಿಗೆ ದಂಡ ವಿ ಧಿಸಬೇಕು, ಟ್ಯಾಂಕರ್‌ ನೀರು ಹಾಗೂ ನೀರಿನ ಮೂಲಗಳು ಶುದ್ಧವಾಗಿರುವ ಬಗ್ಗೆ ಕಡ್ಡಾಯವಾಗಿ ಪರೀಕ್ಷೆ ಮಾಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಕಾಯಿಲೆ ಹರಡದಂತೆ ಎಚ್ಚರಿಕೆ
ಮಳೆ ಸಂದರ್ಭ ಡೆಂಗ್ಯೂ-ಮಲೇರಿಯಾ ಮೊದಲಾದ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುವುದರ ಜತೆಗೆ ಮಳೆಯಿಂದ ಹಾನಿ ಸಂಭವಿಸುವ ಪ್ರದೇಶದಲ್ಲಿ ಚಿಕಿತ್ಸೆಯನ್ನು ಒದಗಿಸಲು ಸಿದ್ಧರಾಗಿರುವಂತೆ ತಿಳಿಸಿದರು. ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದವರು ಜಂಟಿಯಾಗಿ ವಿದ್ಯುತ್‌ ತಂತಿಗಳಿಗೆ ತಗಲುವ ಮರದ ರೆಂಬೆಗಳನ್ನು ಕತ್ತರಿಸಬೇಕು ಎಂದರು.

Advertisement

ವಾಟ್ಸ್‌ಆ್ಯಪ್‌ ಗ್ರೂಪ್‌
ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಪರಿಹಾರಗಳ ಬಗ್ಗೆ ಚರ್ಚಿಸಬೇಕು. ಈ ನಿಟ್ಟಿನಲ್ಲಿ ವಾಟ್ಸ್‌
ಆ್ಯಪ್‌ ಗ್ರೂಪ್‌ಗಳನ್ನು ಸಿದ್ಧಪಡಿಸಬೇಕು. ದಿನದ 24 ಗಂಟೆಯೂ ಅವುಗಳನ್ನು ವೀಕ್ಷಿಸಲು ಸಿಬಂದಿ ಯನ್ನು ನಿಯೋಜಿಸ ಬೇಕು. ಮುಂಜಾಗ್ರತೆ ಕ್ರಮವಾಗಿ ರಾಜಕಾಲುವೆಗಳ ಹೂಳೆತ್ತಬೇಕು, ಕೊಟ್ಟಾರ, ಪಂಪ್‌ವೆಲ್‌ನಂತಹ ಪ್ರದೇಶಗಳಲ್ಲಿ ಈ ವರ್ಷವೂ ನೆರೆ ಸಂಭವಿಸದಂತೆ ಖುದ್ದು ಅಧಿ ಕಾರಿಗಳೇ ಭೇಟಿ ನೀಡಿಪರಿಶೀಲಿಸಬೇಕು ಎಂದು ಸೂಚಿಸಿದರು.

ಭೂ ಕುಸಿತ ಪ್ರದೇಶಗಳ ಪಟ್ಟಿ
ಚಾರ್ಮಾಡಿ ಘಾಟಿ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುವ ಪ್ರದೇಶಗಳನ್ನು ರಾಷ್ಟ್ರೀಯ ಹೆದ್ದಾರಿಯವರು ಪಟ್ಟಿ ಮಾಡಬೇಕು. ಘಾಟಿ ಪ್ರದೇಶಗಳಲ್ಲಿ ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾದ ಬಗ್ಗೆ ಗೂಗಲ್‌ನ ಮುಖಾಂತರ ಮಾಹಿತಿ ಜನರಿಗೆ ತಲುಪುವ ವ್ಯವಸ್ಥೆ ಆಗಬೇಕು. ರಸ್ತೆ ಕುಸಿತ ಉಂಟಾದರೆ ಪರ್ಯಾಯ ರಸ್ತೆಗಳ ವ್ಯವಸ್ಥೆಯನ್ನು ಕಲ್ಪಿಸುವಂತೆ ತಿಳಿಸಿದರು.

ಮೀನುಗಾರರ ರಕ್ಷಣೆಗೆ ತಂಡ
ಅಧಿಕ ಮಳೆಯ ಸಂದರ್ಭ ಮೀನುಗಾರಿಕೆಗೆ ಹೋಗದಂತೆ ಮೀನುಗಾರರ ಸಭೆ ನಡೆಸಬೇಕು. ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಮುಂದಾಳತ್ವದಲ್ಲಿ ಅಪಾಯಕ್ಕೆ ಸಿಲುಕಿದ ಮೀನುಗಾರರನ್ನು ರಕ್ಷಿಸಲು ತಂಡ ಸಿದ್ಧಪಡಿಸಬೇಕು. ಕೋಸ್ಟ್‌ಗಾರ್ಡ್‌ನ ವತಿಯಿಂದ ಸಿಬಂದಿ ಒದಗಿಸಬೇಕು. ಮೀನುಗಾರರ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ ಮಾಹಿತಿ ರವಾನಿಸುವ ಕೆಲಸವಾಗಬೇಕು ಮೀನುಗಾರಿಕಾ ಇಲಾಖೆಗೆ ಸೂಚಿಸಿದರು.

ಜಿ.ಪಂ. ಸಿಇಒ ಡಾ| ಆನಂದ್‌ ಕೆ, ಎಸ್‌ಪಿ ಸಿ.ಬಿ. ರಿಷ್ಯಂತ್‌, ಮನಪಾ ಆಯುಕ್ತ ಆನಂದ್‌ ಸಿ.ಎಲ್‌., ಡಿಸಿಪಿ ಸಿದ್ದಾರ್ಥ್ ಗೋಯಲ್‌, ಡಿಸಿಎಫ್‌ ಆಂಟೋನಿ ಮರಿಯಪ್ಪ, ಪುತ್ತೂರು ಉಪ ವಿಭಾಗಾಧಿ ಕಾರಿ ಜುಬಿನ್‌ ಮಹೋಪಾತ್ರ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಅಪಾಯಕಾರಿ ಜಾಹೀರಾತು ಫಲಕ ತೆರವು
ಅಣೆಕಟ್ಟುಗಳಲ್ಲಿ ಸಿಲುಕಿಕೊಂಡಿರುವ ಕಸ ಮರದ ತುಂಡುಗಳನ್ನು ತೆರವುಗೊಳಿಸಬೇಕು, ಸುತ್ತಲಿನ ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗದಂತೆ ನೋಡಿಕೊಳ್ಳಬೇಕು. ವಿಪರೀತ ಗಾಳಿಯಿಂದ ಬಿದ್ದು ಜನರ ಜೀವಕ್ಕೆ ಹಾನಿ ಉಂಟು ಮಾಡುವ ಜಾಹಿರಾತು ಫಲಕಗಳನ್ನು ಕೂಡಲೆ ತೆರವುಗೊಳಿಸಬೇಕು ಎಂದರು.

ಉಡುಪಿ: ಮಳೆಗಾಲದಲ್ಲಿ ಸಂಭವಿಸಬಹುದಾದ ನೆರೆ, ಸಿಡಿಲಾ ಘಾತ ಮೊದಲಾದ ಪ್ರಾಕೃತಿಕ ವಿಕೋಪ ಗಳಲ್ಲಿ ಜೀವಹಾನಿ ಹಾಗೂ ಆಸ್ತಿ-ಪಾಸ್ತಿ ಹಾನಿಯನ್ನು ತಪ್ಪಿಸಲು ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಸೂಚನೆ ನೀಡಿದರು.

ಅವರು ಮಂಗಳವಾರ ಮಣಿಪಾಲ ದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರಗಿದ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮುಂಗಾರು ಪೂರ್ವ ಹಾಗೂ ಮುಂಗಾರಿನಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದ್ದು, ಜಿಲ್ಲೆಯಲ್ಲಿ ಪ್ರವಾಹಮತ್ತಿತರ ಅವಘಡಗಳ ಪರಿಸ್ಥಿತಿಎದುರಿಸಲು ಎಲ್ಲ ಇಲಾಖೆಯ ಅಧಿಕಾರಿಗಳು ರಕ್ಷಣ ಸಾಮಗ್ರಿ ಗಳೊಂದಿಗೆ ಸನ್ನದ್ಧರಾಗಿರುವ ಜತೆಗೆನೆರೆ ಸಂಭವಿಸುವ ಪ್ರದೇಶಗಳನ್ನು ಗುರುತಿಸಬೇಕು. ಮಳೆ, ಗುಡುಗು- ಸಿಡಿಲಿನ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಜೀವಹಾನಿಯಾಗದಂತೆ ತಡೆಯಲು ಮುಂಜಾಗ್ರತೆ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆ, ಗ್ರಾ.ಪಂ. ವ್ಯಾಪ್ತಿಯಲ್ಲಿ ಧ್ವನಿವರ್ಧಕಗಳ ಮೂಲಕ ಸುರಕ್ಷಾ ಕ್ರಮ ಕೈಗೊಳ್ಳುವ ಬಗ್ಗೆ ಪ್ರಚಾರ ನೀಡಬೇಕು ಎಂದರು.

ನೀರು ನಿಲ್ಲದಂತೆ ನೋಡಿಕೊಳ್ಳಿ
ಮಳೆಗಾಲದಲ್ಲಿ ನೀರು ನಿಲ್ಲುವು ದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ನೀರು ಎಲ್ಲೆಂದರಲ್ಲಿ ನಿಲ್ಲದಂತೆ ನೋಡಿಕೊಳ್ಳಬೇಕು. ಸಾಂಕ್ರಾಮಿಕ ರೋಗಗಳ ಚಿಕಿತ್ಸೆಗೆ ಅಗತ್ಯ ವಿರುವ ಔಷಧಗಳನ್ನು ದಾಸ್ತಾನು ಇಟ್ಟು ಕೊಂಡಿ ರಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೆದ್ದಾರಿ ಸಹಿತ ರಸ್ತೆಗಳ ಮೇಲೆ ಮರಗಳು ಉರುಳಿ ಬಿದ್ದಾಗ ತತ್‌ಕ್ಷಣಕ್ಕೆ ಸ್ಪಂದಿಸಿ ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಮಳೆಗಾಲದ ಮೊದಲು ಯಾಂತ್ರೀಕೃತ ದೋಣಿ ಬಳಸಿಕೊಂಡು ಮಾಡುವ ಮೀನುಗಾರಿಕೆ ಹಾಗೂ ಆಳಸಮುದ್ರದ ಮೀನುಗಾರಿಕೆಯನ್ನು ನಿಷೇಧಿಸಬೇಕು. ಹವಾಮಾನ ಇಲಾಖೆಯಿಂದ ಬರುವ ಸಂದೇಶಗಳನ್ನು ಮೀನುಗಾರರಿಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮವಾರು ಕಮ್ಯೂನಿಕೇಶನ್‌ ತುರ್ತು ನಿಗಾ ಘಟಕಕ್ಕೆ ಅಗತ್ಯವಿರುವ ಸಾಮಗ್ರಿ ಹಾಗೂ ಕಮ್ಯುನಿಕೇಷನ್‌ ಪ್ಲಾನ್‌ಗಳನ್ನು ಗ್ರಾಮವಾರು ತಯಾರಿಸಿ ಇಟ್ಟುಕೊಳ್ಳಬೇಕು. ಈಜುಗಾರರು ಹಾಗೂ ಸ್ವಯಂ ಸೇವಕರ ಸಂಪೂರ್ಣ ಮಾಹಿತಿ ಪಡೆದಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಳೆಗಾಲ ಪ್ರಾರಂಭ ವಾಗುವ ಮುನ್ನ ಜಿಲ್ಲೆಯ ಗ್ರಾಮೀಣ, ಸ್ಥಳೀಯ ಹಾಗೂ ನಗರ ಪ್ರದೇಶ ವ್ಯಾಪ್ತಿಯಲ್ಲಿ ಚರಂಡಿ ಹಾಗೂ ತೋಡು ಸ್ವತ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು.

ಮಳೆನೀರು ಕೊಯ್ಲು ಅಳವಡಿಸಿ
ಸರಕಾರದ ಬಾವಿ, ಕೊಳವೆಬಾವಿ ಗಳಲ್ಲಿ ನೀರು ಇಂಗುವಂತೆ ಮಳೆ ನೀರು ಕೊಯ್ಲುಗಳನ್ನು ಅಳವಡಿಸಬೇಕು. ಬಾವಿ ಹಾಗೂ ಕೆರೆಗಳ ಹೂಳೆತ್ತುವ ಕಾಮಗಾರಿ ಗಳನ್ನು ಆದ್ಯತೆ ಮೇಲೆ ಕೈಗೊಂಡಲ್ಲಿ ಅಂತರ್ಜಲ ಹೆಚ್ಚಲು ಸಾಧ್ಯ. ಜಿಲ್ಲೆಯಲ್ಲಿ 4,000 ಮಿ.ಮೀ. ಗೂ ಹೆಚ್ಚು ಮಳೆ ಆದರೂ ಸಹ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿರುವುದು ವಿಪರ್ಯಾಸ ಎಂದರು.

ಸಭೆಯಲ್ಲಿ ಜಿ.ಪಂ. ಸಿಇಒ ಪ್ರತೀಕ್‌ ಬಾಯಲ್‌, ಎಡಿಸಿ ಮಮತಾ ದೇವಿ ಜಿ.ಎಸ್‌. ಕುಂದಾಪುರ ಉಪ ವಿಭಾಗ ಸಹಾಯಕ ಆಯುಕ್ತರಾದ ರಶ್ಮಿ ಎಸ್‌, ಪೌರಾಯುಕ್ತ ರಾಯಪ್ಪ ಮೊದಲಾದವರಿದ್ದರು.

24 ಗಂಟೆ ಕಂಟ್ರೋಲ್‌ ರೂಮ್‌
ಕಂಟ್ರೋಲ್‌ ರೂಂ ದಿನದ 24 ಗಂಟೆಗಳಲ್ಲಿಯೂ ತೆರೆದಿದ್ದು, ದೂರುಗಳು ಬಂದಲ್ಲಿ ಕೂಡಲೇ ಸ್ಪಂದಿಸಬೇಕು ಎಂದರು. ಮರಗಳು ಬಿದ್ದು ವಿದ್ಯುತ್‌ ಸಂಪರ್ಕ ಕಡಿತವಾದರೆ ಪುನರ್‌ ಸಂಪರ್ಕವನ್ನು ಶೀಘ್ರದಲ್ಲಿಯೇ ಕಲ್ಪಿಸಬೇಕು. ವಿದ್ಯುತ್‌ ತಂತಿಗೆ ಅಡಚಣೆ ಉಂಟುಮಾಡುವ ಮರಗಳ ಕೊಂಬೆಗಳನ್ನು ತೆರವು ಮಾಡಬೇಕು ಎಂದು ಮೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next