Advertisement

ಮಕ್ಕಳಲ್ಲಿ ಶಾಸ್ತ್ರೀಯ ಸಂಗೀತದ ಆಸಕ್ತಿ ಮೂಡಿಸಿ: ವಿ|ಮಂಜೂಷಾ ಪಿ. ಕುಲಕರ್ಣಿ

11:46 PM Dec 12, 2021 | Team Udayavani |

ಶಾಲೆಗಳಲ್ಲಿ ಸಂಗೀತ ಸಹಿತ ಎಲ್ಲ ಕಲಾ ಪ್ರಕಾರಗಳಿಗೆ ಆದ್ಯತೆ ನೀಡಬೇಕಿದೆ. ಶಾಸ್ತ್ರೀಯ ಸಂಗೀತದ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಿದರೆ ದೇಶೀಯ ಸಂಗೀತದ ಬೆಳವಣಿಗೆಯ ಜತೆಗೆ ವಿದ್ಯಾರ್ಥಿಗಳಲ್ಲಿ ತಾಳ್ಮೆ, ಏಕಾಗ್ರತೆ, ಕಲ್ಪನಾಶಕ್ತಿ ಹಾಗೂ ಸಾಮಾನ್ಯ ಜ್ಞಾನದ ಅರಿವು ವೃದ್ಧಿಯಾಗುತ್ತದೆ. ಭವಿಷ್ಯದಲ್ಲಿ ಇದು ಅವರ ಔದ್ಯೋಗಿಕ ಜೀವನಕ್ಕೂ ಸಹಕಾರಿಯಾಗಲಿದೆ. ಇದು ಖ್ಯಾತ ಹಿಂದುಸ್ಥಾನೀ ಶಾಸ್ತ್ರೀಯ ಸಂಗೀತ ಗಾಯಕಿ ವಿ| ಮಂಜೂಷಾ ಪಾಟೀಲ್‌ ಕುಲಕರ್ಣಿ ಅವರ ಮಾತುಗಳು.

Advertisement

ಉಡುಪಿ ಶ್ರೀಕೃಷ್ಣಮಠದಲ್ಲಿ ಅದಮಾರು ಮಠ ಪರ್ಯಾಯದ ಮಂಗಲೋತ್ಸವ “ವಿಶ್ವಾರ್ಪಣಂ’ನಲ್ಲಿ ಹಿಂದುಸ್ಥಾನೀ ಶಾಸ್ತ್ರೀಯ ಸಂಗೀತ ಮತ್ತು ಭಜನೆ ಕಾರ್ಯಕ್ರಮ ನೀಡಲು ಪುಣೆಯಿಂದ ಆಗಮಿಸಿದ್ದ ಅವರು ಉದಯವಾಣಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು.

ನಿಮ್ಮ ಸಂಗೀತ ಸಾಧನೆಗೆ ಪ್ರೇರಣೆಯೇನು?
ನಮ್ಮ ಮನೆಯಲ್ಲಿ ಸಂಗೀತಕ್ಕೆ ವಿಶೇಷವಾದ ಸ್ಥಾನವಿತ್ತು. ಅದು ಈಗಲೂ ಮುಂದುವರಿದಿದೆ. ಇದೇ ನನ್ನನ್ನು ಸಂಗೀತದಲ್ಲಿ ಇಷ್ಟು ಬೆಳೆಯುವಂತೆ ಮಾಡಿದ್ದು. ಚಿಕ್ಕವಯಸ್ಸಿನಿಂದಲೇ ಸಂಗೀತಾಭ್ಯಾಸ ಮಾಡುತ್ತಾ ಬಂದಿದ್ದೇನೆ. ನನ್ನ ಗುರು ಪಂ| ಡಿ.ವಿ.ಕಾನೆದುವ ಹಾಗೂ ಪಂ| ಭೀಮಸೇನ್‌ ಜೋಶಿ ಅವರ ಜೀವನ ಸಾಧನೆಯೇ ಪ್ರೇರಣೆ.

ಗ್ವಾಲಿಯರ್‌ ಘರಾನಾದಲ್ಲಿ ಕಾಣುವ ವಿಶೇಷತೆ ಏನು?
ನನ್ನ ಗುರು ಪಂ| ಡಿ.ವಿ.ಕಾನೆದುವ ಅವರು ಆಗ್ರಾ ಮತ್ತು ಗ್ವಾಲಿಯರ್‌ ಘರಾನಾ ಪರಂಪರೆಯವರಾದ್ದರಿಂದ ನನಗೂ ಅದೇ ಬಂದಿದೆ. ಶಾಸ್ತ್ರೀಯ ಸಂಗೀತದಲ್ಲಿ ಹಲವು ಘರಾನಾಗಳಿದ್ದರೂ ಗ್ವಾಲಿಯರ್‌ ಘರಾನಾ ಎಲ್ಲದಕ್ಕೂ ಮೂಲ ಎಂಬ ಮಾತಿದೆ.

ಗುರುವಿನ ಮೂಲಕ ಅಭ್ಯಾಸ, ಔಪಚಾರಿಕ ಶಿಕ್ಷಣ(ಕಾಲೇಜುಗಳಿಂದ ಸಂಗೀತ ಪದವಿ) ಕಲಾವಿದರಿಗೆ ಹೇಗೆ ನೆರವಾಗಲಿದೆ?
ಗುರುವಿನ ಮಾರ್ಗದರ್ಶನಕ್ಕೆ ಪರ್ಯಾಯವಿಲ್ಲ. ಗುರು-ಶಿಷ್ಯರ ಸಂಬಂಧ ಅನನ್ಯ. ಗುರುವಿನಿಂದ ಕಲಿತ ವಿದ್ಯೆ ಎಂದಿಗೂ ಮಾಸದು. ಔಪಚಾರಿಕ ಶಿಕ್ಷಣದಲ್ಲಿ ಕಲಿಯುವ ಸಂಗತಿಗಳು ವೃತ್ತಿ ಜೀವನದಲ್ಲಿ ಸಹಾಯಕ್ಕೆ ಬರುತ್ತದೆ. ವೃತ್ತಿಯ ಜತೆಗೆ ಪ್ರವೃತ್ತಿ ಎಂಬಂತೆ ಜೀವನ ಸಾಗಿಸಲು ಪದವಿ ಪಡೆಯಬೇಕು. ಗುರುವಿನಿಂದ ಸಂಗೀತ ಅಭ್ಯಾಸ ಮಾಡಬೇಕು.

Advertisement

ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಸಂಗೀತದ ಆಸಕ್ತಿ ಕಡಿಮೆಯಾಗುತ್ತಿದೆಯೇ?
ಶಾಲಾ ಕಾಲೇಜುಗಳಲ್ಲಿ ಶಾಸ್ತ್ರೀಯ ಸಂಗೀತದ ಪ್ರಚಾರ ಹೆಚ್ಚಾಗಬೇಕು. ವಿದ್ಯಾರ್ಥಿಗಳಲ್ಲಿ ಸಂಗೀತದ ಅಭ್ಯಾಸ ಹೆಚ್ಚಿದಂತೆ ತಾಳ್ಮೆ ಹಾಗೂ ತನ್ಮಯತೆ ತಾನಾಗಿಯೇ ಬರುತ್ತದೆ. ಶಾಸ್ತ್ರೀಯ ಸಂಗೀತದ ಅಭ್ಯಾಸಕ್ಕೂ ತಾಳ್ಮೆ ಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಅನಂತರ ಸಂಗೀತ ಸಹಿತವಾಗಿ ಎಲ್ಲ ಕಲಾ ಪ್ರಕಾರಗಳಿಗೆ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಒತ್ತು ಸಿಗುವ ನಿರೀಕ್ಷೆಯಿದೆ.

ಯುವ ಪೀಳಿಗೆ ಪಾಶ್ಚಾತ್ಯ ಸಂಗೀತದ ಕಡೆಗೆ ಹೆಚ್ಚು ವಾಲುತ್ತಿದ್ದಾರಲ್ಲ?
ನಾನು ಯುರೋಪ್‌, ಅಮೆರಿಕದ ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸುತ್ತಿದ್ದೇನೆ. ನಮ್ಮ ಯುವಜನತೆ ಸ್ವಲ್ಪಮಟ್ಟಿಗೆ ಪಾಶ್ಚಾತ್ಯ ಸಂಗೀತದೆಡೆಗೆ ಆಕರ್ಷಿತರಾಗಿರಬಹುದು. ಅದರೆ ಅಂತಿಮವಾಗಿ ಅವರು ದೇಶಿ ಸಂಗೀತವನ್ನೇ ಇಷ್ಟಪಡಲಿದ್ದಾರೆ. ಪಾಶ್ಚಾತ್ಯ ಸಂಗೀತವನ್ನು ನಿರಂತರವಾಗಿ ಕೇಳಲು ಸಾಧ್ಯವಿಲ್ಲ. ಅದರೆ ಒಮ್ಮೆ ಲತಾ ಮಂಗೇಶ್ಕರ್‌, ಭೀಮ್‌ಸೇನ್‌ ಜೋಶಿ, ಎಂ.ಎಸ್‌. ಸುಬ್ಬಲಕ್ಷ್ಮೀ ಮೊದಲಾದವರ ಸಂಗೀತ ಕೇಳಿದರೆ ಮತ್ತೆಂದೂ ಶಾಸ್ತ್ರೀಯ ಸಂಗೀತದಿಂದ ಆಚೆ ಹೋಗಲಾರರು. ನಮ್ಮ ಸಂಗೀತಕ್ಕೆ ತಾಳ್ಮೆ ಕಲಿಸುವ ಶಕ್ತಿಯಿದೆ. ಮೌನದಿಂದ ಆಲಿಸುವಂತೆ ಮಾಡುವ ಸಾಮರ್ಥ್ಯವೂ ಇದೆ.

 ನಿಮ್ಮ ಪ್ರಕಾರ ಸಂಗೀತದಲ್ಲಿ ಪ್ರಯೋಗಶೀಲತೆ ಎಂದರೇನು?
ಪ್ರೇಕ್ಷಕರ ಸಂಗೀತದ ಆಸಕ್ತಿಗೆ ಅನುಗುಣವಾಗಿ ಕೆಲವೊಂದು ಪ್ರಯೋಗಶೀಲತೆ ಆವಶ್ಯಕ. ಹಿಂದೆ ಒಂದೇ ರಾಗದಲ್ಲಿ ಕನಿಷ್ಠ 2 ಗಂಟೆ ಹಾಡುತ್ತಿದ್ದೆವು. ಈಗ ಅದು ಒಂದು ಗಂಟೆಯಿಂದ ಅರ್ಧಗಂಟೆಗೆ ಇಳಿದಿದೆ. ಕೇಳುಗರ ತಾಳ್ಮೆಗೆ ಅನುಗುಣವಾಗಿ ಪ್ರಯೋಗಾತ್ಮಕತೆ ತರಬೇಕು. ಅದರೆ ಮೂಲ ರಾಗದಲ್ಲಿ ಬದಲಾವಣೆ ಆಗದಂತೆ ಎಚ್ಚರ ವಹಿಸಬೇಕು. “ಕೃಷ್ಣರಂಗ’ ಎನ್ನುವ ಕಾರ್ಯಕ್ರಮವನ್ನು ನಾನೇ ಡಿಸೈನ್‌ ಮಾಡಿದ್ದೇನೆ. ಇದರಲ್ಲಿ ಕೃಷ್ಣನನ್ನು ನಾನಾ ವಿಧವಾಗಿ ಶಾಸ್ತ್ರೀಯ ಸಂಗೀತದ ಮೂಲಕ ಬಣ್ಣಿಸಲಾಗುತ್ತದೆ. ಎಲ್ಲಿಯೂ ರಾಗ ತಪ್ಪುವುದಿಲ್ಲ. ಹೊಸತನಕ್ಕೆ ಪ್ರೇಕ್ಷಕರು ಕಾಯುತ್ತಿರುತ್ತಾರೆ. ಅದಕ್ಕೆ ನಾವು(ಕಲಾವಿದರು) ಸಿದ್ಧರಾಗಬೇಕು.

ಫಾಲೋವರ್ಸ್‌ ಎನ್ನುವ ಸಿನೆಮಾ ಸಂಸ್ಕೃತಿ ಶಾಸ್ತ್ರೀಯ ಕಲೆಗೂ ಬರುತ್ತಿದೆ ಎಂದೆನಿಸುತ್ತಿಲ್ಲವೆ?
ಶಾಸ್ತ್ರೀಯ ಸಂಗೀತ ಈವರೆಗೂ ಕ್ಲಾಸ್‌ ಕೇಳುಗರಿಗೆ ಎಂದಿತ್ತು. ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳು ನಡೆದಾಗ ನಿರ್ದಿಷ್ಟ ಸಂಖ್ಯೆಯ ಪ್ರೇಕ್ಷಕರು ಇದ್ದೆ ಇರುತ್ತಾರೆ. ದೊಡ್ಡ ಕಲಾವಿದರು ಬಂದಾಗ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತದೆ. ಶಾಸ್ತ್ರೀಯ ಸಂಗೀತವನ್ನು ಕೇವಲ ಕ್ಲಾಸ್‌ ಪ್ರೇಕ್ಷಕರಿಗೆ ಸೀಮಿತವಾಗದೇ ಮಾಸ್‌ ಪ್ರೇಕ್ಷಕರಿಗೂ ಮುಟ್ಟಿಸಬೇಕು. ಈ ನಿಟ್ಟಿನಲ್ಲಿ ಆಧುನಿಕ ವ್ಯವಸ್ಥೆ ಬಳಸಿಕೊಳ್ಳುವುದರಲ್ಲಿ ತಪ್ಪಿಲ್ಲ. ನಮ್ಮ ಗುರುಕುಲದಲ್ಲಿ ಮಾಸ್‌ ಪ್ರೇಕ್ಷಕರನ್ನು ಗುರಿಯಾಗಿರಿಸಿಕೊಂಡು ಕೆಲವು ಯೋಜನೆಗಳನ್ನು ರೂಪಿಸುತ್ತಿದ್ದೇವೆ.

ಪಂಢರಪುರದ ವಿಟuಲ ಹಾಗೂ ಉಡುಪಿಯ ಶ್ರೀಕೃಷ್ಣನಲ್ಲಿ ನೀವು ಕಂಡ ಸಾಮ್ಯತೆಯೇನು?
ಇದೇ ಮೊದಲ ಬಾರಿಗೆ ಉಡುಪಿಯಲ್ಲಿ ಕಾರ್ಯಕ್ರಮ ನೀಡಿದ್ದು ಮನಸ್ಸಿಗೆ ಧನ್ಯತೆಯ ಅನುಭವವಾಗಿದೆ. ಉಡುಪಿಯ ಶ್ರೀಕೃಷ್ಣ ಹೃದಯಲ್ಲಿದ್ದಾನೆ. ಪಂಢರಪುರದ ವಿಠuಲ ಎಲ್ಲವನ್ನು ಕೊಟ್ಟಿದ್ದಾನೆ. ಗುರುಗಳೊಂದಿಗೆ ಪಂಢರಪುರದ ಗರುಡ ಮಂಟಪದಲ್ಲಿ ಏಕಾದಶಿಯಂದು ಸಂಗೀತ ಸೇವೆ ನೀಡಿದ್ದೇನೆ.

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next