Advertisement

ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಪರಿಹಾರ ಕಲ್ಪಿಸಿ

10:37 AM Jul 29, 2018 | Team Udayavani |

ಕಲಬುರಗಿ: ಪ್ರತಿ ಮೂರು ತಿಂಗಳಿಗೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಕರೆದು ಅಲ್ಪಸಂಖ್ಯಾತ ಸಮುದಾಯಗಳು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಎಂದು ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ನಸೀರ ಅಹ್ಮದ್‌ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.

Advertisement

ಶನಿವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಮತ್ತು ವಕ್ಫ್  ಬೋರ್ಡ್‌ಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಸ್ಲಿಂ, ಜೈನ್‌, ಕ್ರಿಶ್ಚಿಯನ್‌ ಸಮುದಾಯದವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸರಿಯಾಗಿ ದೊರೆಯುತ್ತಿಲ್ಲ
ಎಂಬುದು ಸಮುದಾಯದವರ ದೂರಾಗಿದೆ. ಜೈನ ಸಮುದಾಯದಲ್ಲಿ ಶ್ವೇತಾಂಬರ ಮತ್ತು ದಿಗಂಬರ ಜಾತಿಗಳಿವೆ. ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡವರು ಇದ್ದಾರೆ. ಇವರೆಲ್ಲರೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಬಹಳಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ.

ಪ್ರಸ್ತುತವಿರುವ ನಿಯಮಾವಳಿಯಂತೆ ಈ ಎಲ್ಲ ಅಲ್ಪಸಂಖ್ಯಾತರಿಗೆ ನಿಗದಿತ ಅವಧಿಯೊಳಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಿಸಲು ತಹಶೀಲ್ದಾರ್‌ರಿಗೆ ಅಗತ್ಯ ಸೂಚನೆ ನೀಡಬೇಕು. ನಿರಾಕರಿಸಿದರೆ ಅದಕ್ಕೆ ಕಾರಣ ನೀಡಬೇಕು ಎಂದು ಹೇಳಿದರು.

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಶೇ.50ರ ಆರ್ಥಿಕ ಸಹಾಯಧನದೊಂದಿಗೆ ಜಿಲ್ಲೆಯಲ್ಲಿ 20 ಶಾದಿ ಮಹಲ್‌ ನಿರ್ಮಾಣ ಕಾಮಗಾರಿ ಪ್ರಸ್ತುತ ಪ್ರಗತಿಯಲ್ಲಿವೆ. ಇದಕ್ಕಾಗಿ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ. ಮಹಲ್‌ ನಿರ್ಮಾಣ ಮತ್ತು ಅನುದಾನ ಸಮರ್ಪಕ ಬಳಕೆ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅನುದಾನ ಪಡೆದ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಕ್ಷೇತ್ರದ ಶಾಸಕರ ಸಮಕ್ಷಮ ಸಭೆ ನಡೆಸಿ ಶಾದಿ ಮಹಲ್‌ ನಿರ್ಮಾಣದ ವಸ್ತುಸ್ಥಿತಿ ಪರಿಶೀಲನೆ ಮಾಡಬೇಕು.

Advertisement

ಪೂರ್ಣಗೊಂಡ ಶಾದಿ ಮಹಲ್‌ನಲ್ಲಿ ಕನಿಷ್ಠ ನಿರ್ವಹಣಾ ವೆಚ್ಚದ ದರವನ್ನೆ ಬಾಡಿಗೆ ದರವನ್ನಾಗಿ ನಿಗದಿಪಡಿಸಬೇಕು. ದರವನ್ನು ಶಾದಿ ಮಹಲ್‌ನಲ್ಲಿ ಸಾರ್ವಜನಿಕವಾಗಿ ಪ್ರಕಟಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ ಮಾತನಾಡಿ, ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ 1974ರ ಅಧಿಸೂಚನೆಯಂತೆ ಜಿಲ್ಲೆಯಲ್ಲಿ ವಕ್ಫ್  ಆಸ್ತಿ ಸಾಕಷ್ಟು ಪ್ರಮಾಣದಲ್ಲಿದ್ದು, ಎಲ್ಲ ವಕ್ಫ್  ಆಸ್ತಿಗಳನ್ನು ಕಾಲಂ-11ರಲ್ಲಿ ನಮೂದಿಸಿಕೊಂಡು ಬೋರ್ಡ್‌ನ ಸುಪರ್ದಿಗೆ ಪಡೆಯಲಾಗಿದೆ. ಕೆಲವು ಕಡೆ ವಕ್ಫ್ಆ ಸ್ತಿಗಳನ್ನು ಕಬಳಿಸಿ ಉಳುಮೆ ಮಾಡುವ ಪ್ರಕರಣಗಳು ನಮ್ಮ ಮುಂದಿವೆ. ಇಂತಹ ಪ್ರಕರಣಗಳಲ್ಲಿ ಸಂಬಂಧಿಸಿದವರಿಗೆ ಈಗಾಗಲೆ ನೋಟಿಸ್‌ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್‌ ಫಾತಿಮಾ, ಕರ್ನಾಟಕ ಆಲ್ಪಸಂಖ್ಯಾತ ಆಯೋಗದ ಕಾರ್ಯದರ್ಶಿ ಅನೀಸ್‌ ಸಿರಾಜ್‌, ಸದಸ್ಯರಾದ ಡಾ| ಆರ್‌.ಅಬ್ದುಲ್‌ ಹಮೀದ್‌, ರಫೀ ಬಂಡಾರಿ, ಮಹಮೂದ ಪಟೇಲ್‌, ಆದಿಲ್‌ ಸುಲೇಮಾನ ಸೇಠ್…, ಕೆ. ಮಹೇಂದ್ರ ಜೈನ್‌, ಬಲಜೀತ್‌ ಸಿಂಗ್‌, ಡಾ| ಮೆಟಿಲ್ಡಾ ಡಿಸೋಜಾ ಮುಂತಾದವರಿದ್ದರು. ಇದಕ್ಕೂ ಮುನ್ನ ಆಯೋಗದ ಅಧ್ಯಕ್ಷರು ಹಾಗರಗಾದಲ್ಲಿ
ನಿರ್ಮಿಸಲಾಗುತ್ತಿರುವ ಶಾದಿ ಮಹಲ್‌ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next