Advertisement

ಡಾ|ಟಿ.ಎಂ.ಎ. ಪೈ, ಟಿ.ಎ. ಪೈ ಅವರ ದೂರದೃಷ್ಟಿ ದಾರಿದೀಪ: ಡಾ|ಶಾಂತಾರಾಮ್‌

09:14 AM May 30, 2019 | Team Udayavani |

ಉಡುಪಿ: ಮಣಿಪಾಲದ ನಿರ್ಮಾತೃಗಳಾದ ಡಾ| ಟಿ.ಎಂ.ಎ. ಪೈ ಮತ್ತು ಟಿ.ಎ. ಪೈ ಅವರು ಹೊಂದಿದ್ದ ದೂರದರ್ಶಿತ್ವವೇ ಅವರು ಮಹತ್ಸಾಧನೆ ಮಾಡಲು ಕಾರಣ ವಾಯಿತು. ಅವರ ದೂರದೃಷ್ಟಿ ನಮಗೆ ದಾರಿ ದೀಪವಾಗಬೇಕು ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಆಡಳಿತಾಧಿಕಾರಿ ಡಾ| ಎಚ್‌. ಶಾಂತಾರಾಮ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement

ಬುಧವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ ಮತ್ತು ಮಣಿಪಾಲ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ವತಿಯಿಂದ ಆಯೋಜಿಸಲಾಗಿದ್ದ ಡಾ| ಟಿ.ಎಂ.ಎ. ಪೈ ಮತ್ತು ಟಿ.ಎ. ಪೈ ಅವರ ಸ್ಮತಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಬ್ಬರೂ ಕೂಡ ಅನೇಕ ಎಡರು ತೊಡರುಗಳನ್ನು ಎದುರಿಸಿ ಕಾರ್ಯ ಸಾಧನೆ ಮಾಡಿದರು. ಇದಕ್ಕೆ ಅವರಲ್ಲಿದ್ದ ದೂರದರ್ಶಿತ್ವ, ದೃಢ ನಿರ್ಧಾರ ಗುರಿ ಮುಟ್ಟುವ ಛಲ ಕಾರಣ. ಅವರ ಧ್ಯೇಯ ಧೋರಣೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕಾಗಿ ಕೆಲಸ ಮಾಡಬೇಕು. ಆಗಲೇ ನಾವು ಅವರ ಸ್ಮತಿಯನ್ನು ಶಾಶ್ವತವಾಗಿ ಉಳಿಸಿಕೊಂಡಂತೆ ಆಗುತ್ತದೆ ಎಂದರು.

ಅನಕ್ಷರತೆ, ಅನಾರೋಗ್ಯ ಕಾರಣ
ಸಮಾಜದಲ್ಲಿರುವ ಸಮಸ್ಯೆಗಳಿಗೆ ಪ್ರಮುಖವಾಗಿ ಅನಕ್ಷರತೆ ಮತ್ತು ಅನಾರೋಗ್ಯ ಕಾರಣ. ಇವೆರಡನ್ನು ಹೋಗಲಾಡಿಸಿದರೆ ಬಡತನ ದೂರವಾಗುತ್ತದೆ ಎಂದು ಡಾ| ಟಿ.ಎಂ.ಎ. ಪೈ ದೃಢವಾಗಿ ನಂಬಿದ್ದರು ಮತ್ತು ಆ ದಿಕ್ಕಿನಲ್ಲಿಯೇ ಕೆಲಸ ಮಾಡಿದರು ಎಂದು ಶಾಂತಾರಾಮ್‌ ಹೇಳಿದರು.

ಮಹಿಳಾ ಸಶಕ್ತೀಕರಣ ಭ್ರಮೆ
“ಮಹಿಳಾ ಸಬಲೀಕರಣದ ಸವಾಲುಗಳು’ ಕುರಿತಾಗಿ ದಿಕ್ಸೂಚಿ ಭಾಷಣ ಮಾಡಿದ ಡಾ| ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಸಮನ್ವಯಾಧಿಕಾರಿ ಡಾ| ಮಹಾಬಲೇಶ್ವರ ರಾವ್‌ ಅವರು “ಮಹಿಳಾ ಸಶಕ್ತೀಕರಣ’ ಆಗಿದೆ ಎಂಬುದು ನಮ್ಮ ಭ್ರಮೆ. ಅಧಿಕಾರ ರಾಹಿತ್ಯ ಸ್ಥಿತಿಯಿಂದ ಪೂರ್ಣ ಅಧಿಕಾರದೆಡೆಗೆ ಸಾಗುವುದು, ದೌರ್ಜನ್ಯಗಳಿಂದ ಮುಕ್ತರಾಗುವುದು, ಆರ್ಥಿಕ ಸ್ವಾವಲಂಬನೆ, ರಾಜಕೀಯ ಪ್ರಾತಿನಿಧ್ಯ (ಸಂಸತ್ತಿನಲ್ಲಿ ಶೇ. 33 ಮಹಿಳಾ ಮೀಸಲಾತಿ), ಉನ್ನತ ಸ್ಥಾನ ಮಾನ ಲಭಿಸಿದಾಗ ಮಹಿಳಾ ಸಶಕ್ತೀಕರಣ ಆಗಿದೆ ಎಂದು ತಿಳಿದುಕೊಳ್ಳಬಹುದಾಗಿದೆ’ ಎಂದರು.

ಇದೇ ಸಂದರ್ಭ ಬಿವಿಟಿ ಮತ್ತು ಸೆಲ್ಕೋ ಫೌಂಡೇಶನ್‌ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬಿವಿಟಿಯಲ್ಲಿ ತರಬೇತಿ ಪಡೆದ ಮಹಿಳೆಯರು ಸಿದ್ಧಪಡಿಸಿದ ಸಿದ್ಧ ಉಡುಪುಗಳು, ಕರಕುಶಲ ವಸ್ತುಗಳು ಮತ್ತು ಗೃಹ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಉದ್ಘಾಟಿಸಲಾಯಿತು. ತರಕಾರಿ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Advertisement

ಎಂಜಿಎಂ ಪ್ರಾಂಶುಪಾಲ ಡಾ|
ಎಂ.ಜಿ. ವಿಜಯ, ಪವರ್‌ ಸಂಸ್ಥೆಯ
ಸ್ಥಾಪಕಾಧ್ಯಕ್ಷೆ ರೇಣು ಜಯರಾಂ ಉಪಸ್ಥಿತರಿದ್ದರು. ಬಿವಿಟಿ ಸಿಇಒ ಮನೋಹರ ಕಟೆರಿ ಸ್ವಾಗತಿಸಿ ಪ್ರಸ್ತಾವನೆಗೈದರು. ಬಿವಿಟಿ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ ವಂದಿಸಿದರು. ಕೃಷಿ ವಿಜ್ಞಾನಿ ಪಿ. ವೈಕುಂಠ ಹೇಳೆ ನಿರ್ವಹಿಸಿದರು.

ಅಂದು ಪಿಗ್ಮಿ; ಇಂದು ಜನಧನ್‌
ಸಿಂಡಿಕೇಟ್‌ ಬ್ಯಾಂಕ್‌ ಮಣಿಪಾಲ ವಲಯ ಕಚೇರಿಯ ಮಹಾಪ್ರಬಂಧಕ ಎಚ್‌. ಭಾಸ್ಕರ ಹಂದೆ ಅವರು ಮಾತನಾಡಿ “ಡಾ| ಟಿಎಂಎಪೈ ಅವರು 95 ವರ್ಷಗಳ ಹಿಂದೆಯೇ ದೂರದರ್ಶಿತ್ವದಿಂದ ಪಿಗ್ಮಿ ಯೋಜನೆಯನ್ನು ಆರಂಭಿಸಿ ಜನಸಾಮಾನ್ಯರು ಉಳಿತಾಯ ಮಾಡಲು ಕಾರಣರಾದರು. ಈಗ ಸರಕಾರ ಅದೇ ಪರಿಕಲ್ಪನೆಯಲ್ಲಿ ಜನಧನ್‌ ಎಂಬ ಯೋಜನೆ ಮಾಡಿದೆ. ಈ ಮೂಲಕ ಆರ್ಥಿಕ ಸೇರ್ಪಡೆ ಮಾಡುತ್ತಿದೆ. ಆದರೆ ಪೈ ಅವರು ಅಂದೇ ಈ ಬಗ್ಗೆ ಯೋಚನೆ ಮಾಡಿದ್ದರು. ಟಿ.ಎ. ಪೈ ಅವರ ಕಾಲದಲ್ಲಿ ನಿಂತ ಬೆಳೆಗೆ ಸಾಲ ಎಂಬ ಯೋಜನೆ ಆರಂಭಿಸಲಾಯಿತು. ಕೆಲವರು ಇದನ್ನು ಟೀಕೆ ಮಾಡಿದರು. 1969ರಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣ ಆದಾಗ ಇಂದಿರಾ ಗಾಂಧಿ ಅವರು ಇದು ಅತ್ಯುತ್ತಮ ಯೋಜನೆ. ಇದನ್ನು ಎಲ್ಲ ಬ್ಯಾಂಕ್‌ಗಳು ಅಳವಡಿಸಬೇಕು ಎಂದು ಹೇಳಿದ್ದರು. 1975ರ ವೇಳೆಗ ಹಸಿರುಕ್ರಾಂತಿ ಆರಂಭವಾಯಿತು. ಆದರೆ ಅದಕ್ಕೂ ಮೊದಲೇ ಡಾ| ಟಿ.ಎಂ.ಎ. ಪೈ ಮತ್ತು ಟಿ.ಎ ಪೈ ಅವರು ತರಕಾರಿ ಬೀಜಗಳನ್ನು ಮನೆ ಮನೆಗೆ ನೀಡಿ ಹಸಿರುಕ್ರಾಂತಿಗೆ ಕಾರಣರಾಗಿದ್ದರು. ಅದರ ನೆನಪಿನಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಪ್ರಾಯೋಜಕತ್ವದಲ್ಲಿ ತರಕಾರಿ ಬೀಜಗಳನ್ನು ಇಂದಿಗೂ ಉಚಿತವಾಗಿ ವಿತರಿಸಲಾಗುತ್ತಿದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next