Advertisement

ನೂರಾರು ರೋಗಿಗಳ ಹಸಿವು ನೀಗಿಸುವ ಸೈಯ್ಯದ್‌

02:13 PM May 13, 2024 | Team Udayavani |

ಬೆಂಗಳೂರು: “ತಾವಾಯಿತು, ತಮ್ಮ ಕೆಲಸವಾಯಿತು, ಬೇರೆಯವರ ರಗಳೆ ನಮಗೆ ಏಕೆ’ ಎನ್ನು ತ್ತಿರುವ ಕಾಲಘಟ್ಟದಲ್ಲಿ ಇಲ್ಲೋರ್ವ ಹಸಿವಿನ ಮಹತ್ವ ಅರಿತು ಆಸ್ಪತ್ರೆಗಳ ರೋಗಿಗಳಿಗೆ ಅನ್ನ ದಾಸೋಹಿಯಾಗಿದ್ದಾರೆ. ಚಳಿ ಗಾಳಿ ಮಳೆ ಎನ್ನದೇ ಪ್ರತಿದಿನ ನಗರದ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಖುದ್ದು ತೆರಳಿ, ನೂರಾರು ರೋಗಿಗಳು ಹಾಗೂ ಅವರ ಸಂಬಂಧಿಕರ ಹಸಿವು ನೀಗಿಸುತ್ತಿದ್ದಾರೆ.

Advertisement

ಅವರೇ ಸೈಯ್ಯದ್‌ ಗುಲಾಬ್‌. ಎಲೆಮರೆಯ ಕಾಯಿಯಂತೆ ಅನ್ನ ದಾಸೋಹದಲ್ಲಿ ತೊಡಗಿರುವ ಇವರು, ನಿತ್ಯ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ರಾಜೀವ್‌ ಗಾಂಧಿ ಆಸ್ಪತ್ರೆ, ಸಂಜಯ್‌ ಗಾಂಧಿ ಆಸ್ಪತ್ರೆ ಮತ್ತು ನಿಮ್ಹಾನ್ಸ್‌ ಆಸ್ಪತ್ರೆಗೆ ಚಿಕಿತ್ಸೆ ಗೆಂದು ಬಂದಿರುವ 250 ರಿಂದ 260 ಬಡ ರೋಗಿ ಗಳು ಮತ್ತು ಅವರ ಪೋಷಕರ ಹಸಿವು ತಣಿಸುತ್ತಿದ್ದಾರೆ. ಕಳೆದ 8 ವರ್ಷಗಳಿಂದ ದಾನಿಗಳ ಸಹಾಯ ಹಾಗೂ ತಮ್ಮದೇ ರೋಟಿ ಟ್ರಸ್ಟ್‌ ಸ್ಥಾಪಿಸಿಕೊಂಡು ವ್ಯಾನ್‌ನಲ್ಲಿ ಆಸ್ಪತ್ರೆಗಳಿಗೆ ತೆರಳಿ ಆಹಾರದ ಪೊಟ್ಟಣ ಹಂಚುವ ಪುಣ್ಯ ಕಾರ್ಯದಲ್ಲಿ ನಿರತರಾಗಿದ್ದಾರೆ.

ಜಯನಗರದ ತಿಲಕ್‌ನಗರ ನಿವಾಸಿಯಾಗಿರುವ ಸೈಯ್ಯದ್‌, ತಮ್ಮದೇ ಆದ ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ. ಆದರೂ, ಬಡವರಿಗೆ ಸಹಾಯವಾಗ ಲೆಂದು ಪ್ರತಿದಿನ ಮಧ್ಯಾಹ್ನ 12.30ರ ಸುಮಾರಿಗೆ ನಿಮ್ಹಾನ್ಸ್‌ ಆಸ್ಪತ್ರೆ ಬಳಿಯ ಸಿದ್ಧಾಪುರ ಪೊಲೀಸ್‌ ಠಾಣೆಯ ಮುಂಭಾಗದಲ್ಲಿ ನೂರಾರು ಮಂದಿಯ ಹಸಿವು ನೀಗಿಸುವ ಕೆಲಸ ಮಾಡುತ್ತಾರೆ. ಸೈಯ್ಯದ್‌ ಅವರ ವಾಹನ ಬರುವುದನ್ನು ರೋಗಿಗಳು ಕಾದು ಕುಳಿತಿರುತ್ತಾರೆ.

ಊಟದ ವಾಹನ ಬಂದು ರಾಜೀವ್‌ ಗಾಂಧಿ ಆಸ್ಪತ್ರೆಯ ಗೇಟ್‌ ಮುಂಭಾಗದಲ್ಲಿ ನಿಲ್ಲಿಸಿದ ಕೂಡಲೇ ಎಲ್ಲರೂ ಸರದಿಯಲ್ಲಿ ನಿಂತು, ಆಹಾರದ ಪೊಟ್ಟಣವನ್ನು ಸ್ವೀಕರಿಸುತ್ತಾ, ಸೈಯ್ಯದ್‌ ಅವರಿಗೆ ಧನ್ಯವಾದ ತಿಳಿಸುತ್ತಾರೆ. ಕಳೆದ ಮಾರ್ಚ್‌ಗೆ 8 ವರ್ಷಗಳನ್ನು ಪೂರೈಸಿದ ರೋಟಿ ಟ್ರಸ್ಟ್‌, ಇಲ್ಲಿಯವರೆಗೂ ಮಳೆ, ಚಳಿ, ಬಿಸಿಲು ಎನ್ನದೇ ಹಬ್ಬ-ಹರಿದಿನಗಳನ್ನು ಲೆಕ್ಕಿಸದೇ ಒಂದು ದಿನವೂ ತಪ್ಪದೇ ಉಚಿತ ಆಹಾರ ವಿತರಿಸುವ ಮಹತ್ಕಾರ್ಯ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ನಿಮ್ಹಾನ್ಸ್‌, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗಳಲ್ಲಿ ಮಕ್ಕಳು, ರೋಗಿಗಳು ಅನೇಕ ತಿಂಗಳುಗಳ ವರೆಗೆ ದಾಖಲಾಗಿರುತ್ತಾರೆ. ರೋಗಿಗಳಿಗೆ ಆಸ್ಪತ್ರೆ ಯಲ್ಲಿ ಊಟ-ತಿಂಡಿ ವ್ಯವಸ್ಥೆ ಇರುತ್ತದೆ. ಆದರೆ, ರೋಗಿ ನೋಡಿಕೊಳ್ಳಲು ಬಂದಿರುವವರು ಊಟಕ್ಕಾಗಿ ಪರದಾಡುತ್ತಿದ್ದದ್ದನ್ನು ಕಂಡು ಉಚಿತ ಊಟ ನೀಡಲು ತೀರ್ಮಾನಿಸಿದೆ.

Advertisement

ನಿತ್ಯ 250-260 ಬಡ ಜನರಿಗೆ ಆಹಾರ ವಿತರಿಸಲಾಗುತ್ತದೆ ಎಂದು ರೋಟಿ ಟ್ರಸ್ಟ್‌ ಸಂಸ್ಥಾಪಕ ಸೈಯ್ಯದ್‌ ಗುಲಾಬ್‌ ಹೇಳುತ್ತಾರೆ.

ಆಸ್ಪತ್ರೆ ಬಳಿ ರೋಗಿಗಳಿಗೆ ಊಟದ ಪೊಟ್ಟಣ ನೀಡುತ್ತಿರುವ ಸೈಯ್ಯದ್‌. ಊಟದ ಪೊಟ್ಟಣ ಪಡೆಯಲು ರೋಗಿಗಳು ಕ್ಯೂ ನಿಂತಿರುವುದು.

ಮಹತ್ಕಾರ್ಯಕ್ಕೆ ಪ್ರೇರಣೆ ಏನು?: ಅದು 2016ರ ಸಂದರ್ಭ. ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತನ್ನ ಸ್ನೇಹಿತನ ಮಗಳನ್ನು ನೋಡಲು ವಾರದಲ್ಲಿ ಎರಡ್ಮೂರು ಬಾರಿ ಆಸ್ಪತ್ರೆ ಬಳಿ ತೆರಳುತ್ತಿದ್ದೆ. ಆಗ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಪೋಷಕರು ಊಟಕ್ಕಾಗಿ ಪರದಾಡುತ್ತಿದ್ದರು. ಅದರಲ್ಲೂ ಭಾನುವಾರ ಆಸ್ಪತ್ರೆ ಕ್ಯಾಂಟೀನ್‌ ಕೂಡ ಮುಚ್ಚಿರುತ್ತಿತ್ತು. ಊಟಕ್ಕಾಗಿ ದೂರದ ಹೋಟೆಲ್‌ಗ‌ಳಿಗೆ ನಡೆದುಕೊಂಡು ಹೋಗಬೇಕಿತ್ತು. ಇದನ್ನು ಕಂಡ ನಂತರ, ಪ್ರತಿ ಭಾನುವಾರದಂದು ಕೈಲಾದಷ್ಟು ಜನರಿಗೆ ಉಚಿತ ಊಟ ವಿತರಿಸಬೇಕು ಎಂದು ನಿರ್ಧರಿಸಿದೆ. ಮೊದಲ 6 ತಿಂಗಳುಗಳ ಕಾಲ ಪ್ರತಿ ಭಾನುವಾರ ಮಧ್ಯಾಹ್ನದ ಊಟ ವಿತರಿಸಿದೆ. ಬಳಿಕ ಇದನ್ನು ಫೇಸ್‌ಬುಕ್‌ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದೆ. ಇದರಿಂದಾಗಿ ಅನೇಕ ಮಂದಿ ತಮ್ಮ ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಮಕ್ಕಳ ಹುಟ್ಟುಹಬ್ಬ ಸೇರಿದಂತೆ ಶುಭ ಸಮಾರಂಭಗಳ ಸಂದರ್ಭದಲ್ಲಿ ನನ್ನ ಜತೆ ಕೈಜೋಡಿಸುತ್ತಿದ್ದರು. ಕೆಲ ದಾನಿಗಳು ನನ್ನ ಬೆನ್ನು ತಟ್ಟಿ, ವಾರಕ್ಕೊಮ್ಮೆ ಬದಲು ಪ್ರತಿದಿನ ಆಹಾರ ವಿತರಿಸುವ ಎಂದು ಭರವಸೆ ನೀಡಿದರು. ಬಳಿಕ “ರೋಟಿ ಟ್ರಸ್ಟ್‌’ ಎಂಬ ಟ್ರಸ್ಟ್‌ವೊಂದನ್ನು ಪ್ರಾರಂಭಿಸಿ, ಇದರ ಹೆಸರಿನಲ್ಲಿ ನಿತ್ಯ ಅನ್ನ, ತರಕಾರಿ ಸಾಂಬಾರು ಜತೆಗೆ ಮಕ್ಕಳಿಗೆ ಬಿಸ್ಕತ್‌ ವಿತರಿಸಲಾಗುತ್ತಿದೆ ಎನ್ನುತ್ತಾರೆ ಸೈಯ್ಯದ್‌ ಗುಲಾಬ್‌.

ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next