Advertisement

Sirsi: ಶ್ರೀ ಸ್ವರ್ಣವಲ್ಲೀಯಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವ… ಯಾಗ ಶಾಲೆಯಲ್ಲಿ ಧರ್ಮ ಯಜ್ಞ

04:59 PM Feb 19, 2024 | Team Udayavani |

ಶಿರಸಿ: ಸ್ವರ್ಣವಲ್ಲೀ‌ ಮಠದಲ್ಲಿ ಶಿಷ್ಯ ಸ್ವೀಕಾರ ‌ಮಹೋತ್ಸವಕ್ಕೆ ಧಾರ್ಮಿಕ ಸಂಭ್ರಮ ಧರ್ಮ ಯಜ್ಞದ ಜೊತೆಗೆ ಆಗಮಿಸುವ ಭಕ್ತರಿಗೆ ಸಕಲ ಸೌಲಭ್ಯ, ಸೌಕರ್ಯ ಒದಗಿಸಲು ಕಾರ್ಯಕರ್ತರು ಸೇವಾ ಯಜ್ಞಕ್ಕೆ ಕಂಕಣ ತೊಟ್ಟಿದ್ದಾರೆ.

Advertisement

ಫೆ.18 ರಿಂದ ಐದು ದಿನಗಳ ಕಾಲ ಸ್ವರ್ಣವಲ್ಲೀ‌ ಮಠದಲ್ಲಿ ನಡೆಯುವ ಶಿಷ್ಯ ಸ್ವೀಕಾರಕ್ಕೆ ಪ್ರತಿ‌ ದಿನ 600ಕ್ಕೂ ಅಧಿಕ ಕಾರ್ಯಕರ್ತರು ಅವಿರತ ಕೆಲಸ ಮಾಡುತ್ತಿದ್ದಾರೆ. ಶ್ರೀ ಮಠದಲ್ಲಿಯೇ 250ಕ್ಕೂ ಅಧಿಕ ಸ್ವಯಂ ಸೇವಕರು ಐದೂ ದಿನಗಳ ಕಾಲ ವಾಸ್ತವ್ಯ ಮಾಡಿ ಸೇವೆ ನೀಡಲು ಅಕ್ಷರಶಃ ‘ಪಣ’ ತೊಟ್ಟಿದ್ದಾರೆ.

ಸ್ವಯಂ ಸೇವಕರಾಗಿ ಉದ್ಯೋಗಿಗಳು, ಇಂಜನೀಯರುಗಳು, ರೈತರು, ವಿದ್ಯಾರ್ಥಿಗಳು, ವರ್ತಕರು, ಮಾತೃ ಮಂಡಳಿ, ಮಠದ ವಿವಿಧ ಸಮಿತಿಗಳು, ಅಂಗ ಸಂಸ್ಥೆಯ ಪ್ರಮುಖರು, ಕಾರ್ಯಕರ್ತರು, ಶ್ರದ್ದಾಳುಗಳು ಸೇರಿದಂತೆ ಅನೇಕರು ಸೇವಾ ಯಜ್ಞದಲ್ಲಿ ತೊಡಗಿದ್ದಾರೆ. ಹವ್ಯಕ, ರಾಮಕ್ಷತ್ರೀಯ, ಮರಾಠ, ಸಿದ್ಧಿ, ಹಾಲಕ್ಕಿ, ಗೌಳಿ, ಕುಣಬಿ ಹಾಗೂ ಇತರ‌ ಸಮಾಜದವರು ಸೇವಾ ಮನೋಭಾವದಲ್ಲಿ ಕೆಲಸ‌ ಮಾಡುತ್ತಿದ್ದಾರೆ. ಶಿಷ್ಯ ಸ್ವೀಕಾರ ಮಹೋತ್ಸವದ ಯಶಸ್ವಿಗೆ, ಗುರುಗಳ ಸಂಕಲ್ಪಕ್ಕೆ ಕಟಿಬದ್ಧರಾಗಿದ್ದಾರೆ.

80ಕ್ಕೂ ಅಧಿಕ ವೈದಿಕರ ಜೊತೆಗೆ 90ಕ್ಕೂ ಅಧಿಕ ಪರಿಚಾರಕರು, ದೇವತಾ ಸೇವೆಯಲ್ಲಿ ಪಾರಂಪರಿಕವಾಗಿ ದ್ರವ್ಯ, ಹಣ್ಣುಕಾಯಿ, ಪ್ರಸಾರ ಸೇವೆಯಲ್ಲಿ 40ಕ್ಕೂ ಅಧಿಕ ಜನರು ಪಾಳಿಯ ಪ್ರಕಾರ ಕೆಲಸ ಮಾತ್ತಿದ್ದಾರೆ. ಆಯ್ದ ಕಡೆ ರಕ್ಷಣೆ, ಭದ್ರತೆಗೂ ಕೆಲಸ ಮಾಡುತ್ತಿದ್ದಾರೆ.

ಸ್ವಾಗತ ಹಾಗೂ ಮಾರ್ಗದರ್ಶನಕ್ಕೆ 30 ಜನರು,
ಊಟೋಪಚಾರಕ್ಕೆ 20ರ ತನಕ ಎಲ್ಲ ಸೇರಿ ಪ್ರತಿ ದಿನ 300 ಕಾರ್ಯಕರ್ತರು ಕಾರ್ಯ ಮಾಡುತ್ತಿದ್ದಾರೆ. ಕೊನೆಯ ಎರಡು‌ ದಿನ ಫೆ.21, 22ಕ್ಕೆ 600ರಿಂದ 700 ಕಾರ್ಯಕರ್ತರು ಅನ್ನ ಪ್ರಸಾದ, ಪಾನೀಯ ಸೇವೆ ನೀಡಲು ಸಜ್ಜಾಗುತ್ತಿದ್ದಾರೆ. ಭಕ್ತರಿಗೆ ಊಟೋಪಚಾರ ಒದಗಿಸಲು 40 ಬಾಣಸಿಗರು ಕೆಲಸ ಮಾಡುತ್ತಿದ್ದಾರೆ. ವಿವಿಧ ಸೀಮೆಯ ಶಿಷ್ಯರು ತಾ ಮುಂದು‌ ನಾ ಮುಂದು ಎಂದು ಬರುತ್ತಿದ್ದಾರೆ.

Advertisement

ಸರ್ವ ಸೇವೆಗೆ ಕಂಟ್ರೋಲ್ ರೂಂ ಮಾಡಲಾಗಿದೆ. ಆರೋಗ್ಯ, ಅಗ್ನಿ ಶಾಮಕ ದಳ, ಪೊಲೀಸರ ಸಹಕಾರ ಸೇರಿದಂತೆ ವಿವಿಧ ಇಲಾಖೆಗಳೂ ಸಹಕಾರ ನೀಡುತ್ತಿವೆ.

ತನ್ಮಧ್ಯೆ ಆಗಮಿಸುವ ಭಕ್ತರಿಗೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಳೆದ ಎರಡು‌ ದಿನಗಳಿಂದ ಮಠಕ್ಕೆ ನಿತ್ಯ ಒಂದುವರೆ ಸಾವಿರಕ್ಕೂ ಅಧಿಕ ವಾಹನಗಳು ಬರುತ್ತಿದ್ದು, ದ್ವಿಚಕ್ರ, ಕಾರುಗಳ‌ ಪಾರ್ಕಿಂಗ್ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಯತಿಗಳು, ಅತಿ ಗಣ್ಯರು, ಋತ್ವಿಜರು, ಗಣ್ಯರು, ಪದಾಧಿಕಾರಿಗಳಿಗೆ, ಮಾಧ್ಯಮಗಳಿಗೆ, ಭಕ್ತರು, ಕಾರ್ತಕರ್ತರು ಎಂಬ ಪ್ರತ್ಯೇಕ ವಿಭಾಗ ಮಾಡಲಾಗಿದ್ದು, ಸುಮಾರು 11 ಕಡೆ ಸ್ಥಳ ನಿಯೋಜನೆ ಮಾಡಲಾಗಿದೆ. ಮಠದ ಗದ್ದೆಯಲಿ ಫೆ.21, 22ಕ್ಕೆ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 50ಕ್ಕೂ ಅಧಿಕ ಸ್ವಯಂ ಸೇವಕರು ಬಿಸಿಲು ಲೆಕ್ಕಸಿದೇ ಸಮವಸ್ತ್ರದಲ್ಲಿ‌ ವಾಹನ ನಿಲುಗಡೆಗಳಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಠದ ಪ್ರವೇಶ ದ್ವಾರದ ಪಕ್ಕದಲ್ಲಿ ಹೊರೆಗಾಣಿಕೆ ಸ್ವೀಕರಿಸಲು ಮಳಿಗೆ ತೆರೆದಿದ್ದು,ಭಕ್ತರು ಅತ್ಯಂತ ಪ್ರೀತಿಯಲ್ಲಿ ಮನೆಯಲ್ಲಿ ಬೆಳೆದ ದವಸ ಧಾನ್ಯ, ತರಕಾರಿ ನೀಡುತ್ತಿದ್ದಾರೆ.

ತೆಂಗಿನ‌ಕಾಯಿ,‌ ಕುಂಬಳಕಾಯಿ, ಹಾಲು, ತುಪ್ಪ, ಮೊಸರು, ಬಾಳೆ‌ ಎಳೆ, ವೀಳ್ಯದೆಲೆ, ಅಡಿಕೆ, ಅಕ್ಕಿ, ಬೆಲ್ಲ, ಏಲಕ್ಕಿ ಸಲ್ಲಿಕೆ ಆಗುತ್ತಿದ್ದು, ಜೇನು ತುಪ್ಪ ಸಂಗ್ರಹಣೆಗೂ ಭಕ್ತರು ಉತ್ಸುಕರಾಗಿದ್ದಾರೆ.

ಬೆಳಿಗ್ಗೆ 8.30ರಿಂದ ರಾತ್ರಿ 7 ತನಕ ಹೊರಗಾಣಿಕೆ ಸಲ್ಲಿಸಲು ರಥದ ಮನೆಯ ಪಕ್ಕ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕರ್ತರ ವಿಭಾಗದ ಸಂಚಾಲಕರಾದ
ಟಿ.ಎನ್.ಭಟ್ ನಡಿಗೆಮನೆ,‌ ರಮಾಕಾಂತ ಹೆಗಡೆ ವಾನಳ್ಳಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಾಹನ ಸೇವಾ ಕೈಂಕರ್ಯ!
ಸೋಂದಾ‌ ಕತ್ರಿಯಿಂದ ಮಠಕ್ಕೆ, ಮಠದಿಂದ ಊಟೋಪಚಾರ ವ್ಯವಸ್ಥೆಗೆ ವಾಹನ ಸೌಲಭ್ಯ ಮಾಡಲಾಗಿದೆ. ಉಚಿತವಾಗಿ ಭಕ್ತರ ಓಡಾಟಕ್ಕೆ ಸಹಕಾರ ನೀಡುತ್ತಿದ್ದಾರೆ. ಶಿರಸಿಯಿಂದ ವಾಯುವ್ಯ ಸಾರಿಗೆ ಬಸ್ಸಿನ ಸೌಲಭ್ಯವೂ ಇದೆ.

ಯಾಗ, ಹವನ, ಜಪಾನುಷ್ಠಾ‌ನ….
ಶಿಷ್ಯ ಸ್ವೀಕಾರ ಮಹೋತ್ಸವದ ಅಂಗವಾಗಿ ವಿ. ನಾಗರಾಜ ಭಟ್ಟರಿಂದ ಮಹಾರುದ್ರ ಹವನದ ಪೂರ್ಣಾಹುತಿ ನಡೆಯಿತು. ಸ್ವರ್ಣವಲ್ಲೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ನೀಡಿದರು. ವಿ. ಚಿನ್ಮಯ ಜೋಶಿ ಬಾಡಲಕೊಪ್ಪ ಹವನದ ಅಧ್ವರ್ಯುವಾಗಿ ವಿ. ಪ್ರಭಾಕರ ಉಪಾಧ್ಯರು ಗೋಕರ್ಣ ಬ್ರಹ್ಮರಾಗಿ, ವಿ. ಭಾಲಚಂದ್ರ ಶಾಸ್ತ್ರಿಗಳು ಸದಸ್ಯರಾಗಿ, ವಿ.ಕೃಷ್ಣ ಜೋಯಿಸರು ಕಲಶಪೂಜೆ ಮಾಡಿದರು. 80ಕ್ಕೂ ಹೆಚ್ಚು ವೈದಿಕರು ಇದ್ದರು. 2500ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ಹಾಗು ಅಕ್ಷರಾಯುತ (3ಲಕ್ಷ20ಸಾವಿರ) ನೃಸಿಂಹ ಮಂತ್ರ ಜಪ ನಡೆಯಿತು. ಉಪನ್ಯಾಸ, ಮಾತೆಯರಿಂದ ಭಜನೆ ಹಾಗು ವಿವಿಧ ಸಾಂಸ್ಕೃತಿಕ ಸಂಭ್ರಮಗಳೂ ನಡೆದವು.

ಶ್ರೀ ಸ್ವರ್ಣವಲ್ಲೀಯಲ್ಲಿ ನಾಳೆ
ಶಿಷ್ಯ ಮಹೋತ್ಸವ ಹಿನ್ನಲೆಯಲ್ಲಿ ಮೂರನೇ ದಿ‌ನ ಮಂಗಳವಾರ ಅಷ್ಟಶ್ರಾದ್ಧ, ಒಂದು ಸಾವಿರ ಗಣಪತ್ಯಥರ್ವಶೀರ್ಷ ಜಪ, ಹವನ, ಮಧ್ಯಾಹ್ನೋತ್ತರ ಲಕ್ಷ್ಮೀನೃಸಿಂಹ ಜಪ ನಡೆಯಲಿದೆ.

ಸಂಜೆ‌ ಶ್ರೀಮಠದ ಇತಿಹಾಸದ ಕುರಿತು ಡಾ. ಲಕ್ಷ್ಮೀಶ ಸೋಂದಾ ಉಪನ್ಯಾಸ, ಭಜನೆ, ಶಂಕರ ಭಟ್ಟ ಉಂಚಳ್ಳಿ ಅವರ ಕೀರ್ತನೆ ನಡೆಯಲಿದೆ.

ತ್ಯಾಜ್ಯ‌ ಸಂಗ್ರಹಣಂ ನಿರಂತರಂ
ಕಸ ಎತ್ತಲೂ ಸೇವಾ‌ ಕೈಂಕರ್ಯ ನಡೆಯುತ್ತಿದೆ. ಒಂದು‌ ಕಸ ಬಿದ್ದರೂ ಆಯ್ದು ಸಂಗ್ರಹಿಸುತ್ತಿದ್ದಾರೆ. ಹದಿನೈದಕ್ಕೂ ಅಧಿಕ ಜನರು‌ ಕಸ ಸಂಗ್ರಹಿಸುತ್ತಿದ್ದಾರೆ. ಮೂರು ಟ್ರಾಕ್ಟರ್ ಮೂಲಕ ಕಸ ವಿಲೇವಾರಿ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next