ಗಾಜಿಯಾಬಾದ್: ವಿದ್ಯಾರ್ಥಿಗಳಿದ್ದ ಎಸ್ ಯವಿ ಕಾರೊಂದು ಕಾಲುವೆಗೆ ಬಿದ್ದ ಕಾರಣ ನಾಲ್ವರು ನೀರಿನಲ್ಲಿ ನಾಪತ್ತೆಯಾದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.
ಗಾಜಿಯಾಬಾದ್ ನ ಅಪ್ಪರ್ ಗಂಗಾ ಕಾಲುವೆಯಲ್ಲಿ ಕಾರು ಮುಳುಗಿದೆ. ರವಿವಾರ ಮಧ್ಯರಾತ್ರಿ 12.10ರ ಸುಮಾರಿಗೆ ಈ ಘಟನೆ ನಡೆದಿದೆ.
ಉತ್ತರಾಂಚಲ್ ವಿಶ್ವವಿದ್ಯಾಲಯದ ಇಬ್ಬರು ಯುವತಿಯರು ಸೇರಿದಂತೆ ಒಟ್ಟು ಆರು ಜನ ವಿದ್ಯಾರ್ಥಿಗಳು ಡೆಹ್ರಾಡೂನ್ ನಿಂದ ಮಥುರಾಗೆ ಹೊರಟಿದ್ದರು. ಈ ವೇಳೆ ಕಾರು ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಕಾಲುವೆಗೆ ಬಿದ್ದಿದೆ. ಈಜು ತಿಳಿದಿದ್ದ ಇಬ್ಬರು ವಿದ್ಯಾರ್ಥಿಗಳು ಈಜಿಕೊಂಡು ತಡ ತಲುಪಿದ್ದಾರೆ. ಉಳಿದ ನಾಲ್ವರು ಇನ್ನೂ ಪತ್ತೆಯಾಗಿಲ್ಲ.
ಎಲ್ಲಾ ವಿದ್ಯಾರ್ಥಿಗಳು 20ರಿಂದ 22 ವರ್ಷ ವಯಸ್ಸಿನವರು. ಅವರ ಪೋಷಕರನ್ನು ಗಾಜಿಯಾಬಾದ್ ಗೆ ಬರುವಂತೆ ತಿಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎನ್ ಡಿಆರ್ ಎಫ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ನಾಪತ್ತೆಯಾದವರನ್ನು ಹುಡುಕುವ ಕಾರ್ಯ ನಡೆಯುತ್ತಿದೆ.