Advertisement

ಕಾರವಾರ: ಸೀಬರ್ಡ್‌ ನೌಕಾನೆಲೆಗೆ ನುಸುಳಿದ ಶಂಕಿತರು?

09:46 AM Jun 23, 2017 | Karthik A |

ಕಾರವಾರ: ಇಲ್ಲಿನ ಸೀಬರ್ಡ್‌ ನೌಕಾನೆಲೆ ಪ್ರದೇಶಕ್ಕೆ ಶಂಕಿತರು ನುಸುಳಿದ್ದಾರೆಂಬ ಸುದ್ದಿ ಗುರುವಾರ ಬೆಳಗ್ಗಿನಿಂದ ಹಬ್ಬಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ನೌಕಾನೆಲೆಯ ಮುಖ್ಯದ್ವಾರ ಸಮೀಪದ ಬಿಣಗಾ ಮತ್ತು ಅರಗಾ ಗ್ರಾಮಗಳ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾರ್ಯ ನಡೆಯುತ್ತಿದ್ದು, ನೌಕಾನೆಲೆಯ ಆವರಣ ಗೋಡೆ ಹೆದ್ದಾರಿಗೆ ಹೊಂದಿಕೊಂಡಿದೆ. ಆವರಣದ ಗೋಡೆಯನ್ನು ಕೆಲವು ಕಡೆ ಕಲ್ಲಿನಿಂದ ನಿರ್ಮಿಸಲಾಗಿದೆ. ಆಳ ಮತ್ತು ತಗ್ಗು ಪ್ರದೇಶ ಇರುವಲ್ಲಿ, ಸಮುದ್ರಕ್ಕೆ ಹೊಂದಿಕೊಂಡ ಪ್ರದೇಶಕ್ಕೆ ತಗಡಿನ ಆವರಣ ಹಾಕಲಾಗಿದೆ. ಮಳೆ ನೀರು ಹರಿಯಲು ಕಲ್ಲಿನ ಗೋಡೆಗೆ ಅಲ್ಲಲ್ಲಿ ರಂಧ್ರ ಬಿಟ್ಟಿದ್ದು, ಇದೇ ರಂಧ್ರವೊಂದರ ಮೂಲಕ ಶಂಕಿತರು ನೌಕಾನೆಲೆ ಒಳಗೆ ನುಸುಳಿದ್ದಾರೆ. ಈ ದೃಶ್ಯ ಸಿಸಿ ಕೆಮರಾದಲ್ಲಿ  ಸೆರೆಯಾಗಿದೆ ಎನ್ನಲಾಗುತ್ತಿದೆ.

Advertisement


ಗುರುವಾರ ಮುಂಜಾನೆ ಕದಂಬ ನೌಕಾನೆಲೆಯೊಳಗೆ ಮೂವರು ಶಂಕಿತರು ಕಾಣಿಸಿ ಕೊಂಡಿರುವುದನ್ನು ನೌಕಾನೆಲೆಯ ಭದ್ರತಾ ಸಿಬಂದಿ ಖಚಿತಪಡಿಸಿದ್ದಾರೆ. ಕೂಡಲೆ, ಕಾರವಾರ ನಗರ ಪೊಲೀಸರಿಗೆ ತಿಳಿಸಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪೊಲೀಸರು ನಾಕಾಬಂದಿ ಮಾಡಿ ಗಸ್ತು ತಿರುಗುತ್ತಿದ್ದಾರೆ. ಇನ್ನೊಂದೆಡೆ ನೌಕಾನೆಲೆಯ ಆವರಣ ಗೋಡೆ ಕೊರೆದಿರುವುದು ಕಂಡು ಬಂದಿದ್ದು, ಈ ಕಿಂಡಿಯನ್ನು ತತ್‌ಕ್ಷಣ ಮುಚ್ಚಲು ಕ್ರಮ ತೆಗೆದುಕೊಳ್ಳಲಾಗಿದೆ. ನುಸುಳುಕೋರರು ಇದೇ ಕಿಂಡಿ ಮೂಲಕ ನೌಕಾನೆಲೆ ಪ್ರವೇಶಿಸಿರುವುದು ನೌಕಾನೆಲೆ ಸಿಬಂದಿಗೆ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ನೌಕಾನೆಲೆಯ ಸಿಬಂದಿ ಈ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ಈ ಭಾಗದಲ್ಲಿ ಆತಂಕ ಸೃಷ್ಟಿಯಾಗಿದೆ. ನೌಕಾನೆಲೆ ಸಿಬಂದಿಯನ್ನು ಹೆಚ್ಚು ಜಾಗೃತ ಸ್ಥಿತಿಯಲ್ಲಿ ಇಡಲಾಗಿದ್ದು, ಕೋಸ್ಟ್‌ ಗಾರ್ಡ್‌ ಮತ್ತು ಕರಾವಳಿ ಕಾವಲು ಪಡೆಗಳು ಗಸ್ತು ಹೆಚ್ಚಿಸಿವೆ. ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ಹೆಚ್ಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next