Advertisement

ಉಗ್ರತ್ವ ಮಾನವತೆಯ ಶತ್ರು

05:05 AM Apr 25, 2018 | Team Udayavani |

ಬೀಜಿಂಗ್‌: ಭಯೋತ್ಪಾದನೆ ಎನ್ನುವುದು ಮಾನವನ ಮೂಲಭೂತ ಹಕ್ಕುಗಳ ಶತ್ರು. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಅದಕ್ಕೆ ಬೆಂಬಲ, ಪ್ರಚೋದನೆ ಮತ್ತು ಹಣಕಾಸಿನ ನೆರವು ನೀಡುವ ರಾಷ್ಟ್ರಗಳನ್ನು ಗುರುತಿಸುವಂಥ ಕೆಲಸವನ್ನೂ ಸೇರಿಸಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ. ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಮಂಗಳವಾರ ನಡೆದ ಶಾಂಘೈ ಸಹಕಾರ ಒಕ್ಕೂಟ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಅವರು ಮಾತನಾಡಿದರು. “ಕಳೆದ ಜೂನ್‌ ಬಳಿಕ ಭಾರತ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಹೀಗಾಗಿ, ಜೂನ್‌ನಲ್ಲಿ ನಡೆಯಲಿರುವ ಒಕ್ಕೂಟದ ಪೂರ್ಣ ಪ್ರಮಾಣದ ಸಭೆಯಲ್ಲಿ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಲಿದ್ದೇವೆ’ ಎಂದರು ಸುಷ್ಮಾ. 

Advertisement

ವಿಶ್ವ ಆಧುನಿಕ ಜಗತ್ತಿನಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಅದರಲ್ಲಿ ಭಯೋತ್ಪಾದನೆಯೂ ಒಂದು. ಅದರ ವಿರುದ್ಧ ಹೋರಾಡಲು ಪ್ರಬಲವಾಗಿರುವ ಭದ್ರತಾ ವ್ಯವಸ್ಥೆ ರೂಪಿಸಬೇಕಾಗಿದೆ. ಭಯೋತ್ಪಾದನೆ ಎನ್ನುವುದು ಮಾನವನ ಮೂಲ ಹಕ್ಕು, ಶಾಂತಿ ಮತ್ತು ಅಭಿವೃದ್ಧಿಯ ಶತ್ರು. ಅವುಗಳು ಕೇವಲ ಗಡಿಯಾಚೆಯಿಂದ ಬರುವುದಿಲ್ಲ. ಅಂತಾರಾಷ್ಟ್ರೀಯವಾಗಿರುವ ಸ್ಥಿರತೆಯ ನಾಶಕ್ಕೆ ಅದು ಮುಂದಾಗಿದೆ. ಸಮಾಜದ ನಡುವೆ ಭಯದ ಗೋಡೆ ನಿರ್ಮಿಸುವುದೇ ಅದರ ಆದ್ಯತೆಯಾಗಿದೆ ಎಂದು ಸುಷ್ಮಾ ಕಟುವಾಗಿ ಪಾಕಿಸ್ಥಾನದ ವಿರುದ್ಧ ವಾಗ್ಧಾಳಿ ನಡೆಸಿದರು. ಭಯೋತ್ಪಾದನೆ ವಿರುದ್ಧದ ಹೋರಾಟವೆಂದರೆ, ಅದನ್ನು ಎಲ್ಲಾ ಮೂಲಗಳಿಂದಲೂ ಹೊಡೆದೋಡಿಸುವಂಥದ್ದಾಗಿರಬೇಕು. ಅದಕ್ಕೆ ಹಣಕಾಸಿನ ಮತ್ತು ಇತರ ವಿಚಾರಗಳಲ್ಲಿ ಬೆಂಬಲ ನೀಡುವ ರಾಷ್ಟ್ರಗಳ ಮೇಲೂ ತಡೆಯೊಡ್ಡಬೇಕು ಎಂದರು. 

ಪುನಾರಚನೆಯಾಗಬೇಕು: ವಿಶ್ವಸಂಸ್ಥೆ ಭದ್ರತಾ ಮಂಡಳಿ ಪುನಾರಚನೆಯಾಗಬೇಕೆಂದು ಹೇಳಿದ ಸುಷ್ಮಾ, ಕೆಲವೊಮ್ಮೆ ಅತ್ಯಂತ ಸಂಕೀರ್ಣವಾಗಿರುವ ಭದ್ರತಾ ಸವಾಲುಗಳ ಬಗ್ಗೆ ಭದ್ರತಾ ಮಂಡಳಿ ಕ್ರಮ ಕೈಗೊಳ್ಳಲು ವಿಫ‌ಲವಾಗಿದೆ ಎಂದೂ ಹೇಳಿದರು. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಹೊಂದಬೇಕಾದ ಅಗತ್ಯವಿದೆ ಎಂದರು. ಇಲ್ಲೇ ನಡೆದ ರಕ್ಷಣಾ ಸಚಿವರ ಸಭೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ಕೂಡ ಭಾಗವಹಿಸಿದ್ದರು. ಇವರು ಭಯೋತ್ಪಾದನೆ, ತೀವ್ರವಾದ, ಸೈಬರ್‌ ರಕ್ಷಣೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಮಾತನಾಡಿದರು.


ಬೆಲ್ಟ್ ಆ್ಯಂಡ್‌ ರೋಡ್‌ಗೆ ಬೆಂಬಲವಿಲ್ಲ

ಚೀನಾ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಬೆಲ್ಟ್ ಆ್ಯಂಡ್‌ ರೋಡ್‌ ಮೂಲಸೌಕರ್ಯ ಯೋಜನೆಗೆ ಭಾರತ ಬೆಂಬಲ ನೀಡಿಲ್ಲ. ಶಾಂಘೈ ಸಹಕಾರ ಒಕ್ಕೂಟ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಮುಕ್ತಾಯದಲ್ಲಿ ಹೊರಡಿಸಲಾದ ಪ್ರಕಟಣೆಯಲ್ಲಿ ಚೀನಾದ ಮಹತ್ವಾ ಕಾಂಕ್ಷೆಯ ಯೋಜನೆಗೆ ಭಾರತ ಬೆಂಬಲ ನೀಡಿಲ್ಲ. ಖಜಕಿಸ್ಥಾನ, ಕಿರ್ಗಿಸ್ಥಾನ, ಪಾಕಿಸ್ಥಾನ, ರಷ್ಯಾ, ತಜಕಿಸ್ಥಾನ, ಉಜ್ಬೇಕಿಸ್ಥಾನಗಳ ವಿದೇಶಾಂಗ ಸಚಿವರು ಯೋಜನೆಗೆ ಬೆಂಬಲ ವ್ಯಕ್ತಪಡಿಸಿ ಹೇಳಿಕೆಗೆ ಸಹಿ ಹಾಕಿದ್ದಾರೆ.

ಮಾವೋ ತೋಟದ ಮನೆಯಲ್ಲಿ ಮೋದಿ-ಕ್ಸಿ ಭೇಟಿ
27ರಂದು ಭಾರತದ ಪ್ರಧಾನಿ ಮೋದಿ ನೇರವಾಗಿ ವುಹಾನ್‌ಗೆ ಆಗಮಿಸಲಿದ್ದು, ಅವರು ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮಾತುಕತೆ ಕಮ್ಯೂನಿಸ್ಟ್‌ ಪಾರ್ಟಿ ಆಫ್ ಚೀನಾದ ಸಂಸ್ಥಾಪಕ ಮಾವೋ ಝೆಡಾಂಗ್‌ರ ಖಾಸಗಿ ವಿಲ್ಲಾದಲ್ಲಿ ನಡೆಯಲಿದೆ. ಎರಡೂ ನಾಯಕರ ಭೇಟಿಯಿಂದ ಭಾರತ-ಚೀನಾ ಸಂಬಂಧಕ್ಕೆ ಹೊಸ ಹೊಳಹು ಸಿಗಲಿದೆ. ಜತೆಗೆ ಯಾವುದೇ ಅಧಿಕೃತ ಹೇಳಿಕೆ ಅಥವಾ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮಗಳಿಲ್ಲ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. 1988ರಲ್ಲಿ ಭಾರತದ ಮಾಜಿ ಪ್ರಧಾನಿ ದಿ.ರಾಜೀವ್‌ ಗಾಂಧಿ ಮತ್ತು ಚೀನಾದ ಅಂದಿನ ಅಧ್ಯಕ್ಷ ದಿ.ಡೆಂಗ್‌ ಕ್ಸಿಯಾವೋಪಿಂಗ್‌ ನಡುವೆ ನಡೆದಿದ್ದ ಭೇಟಿಯಷ್ಟೇ ಈ ಭೇಟಿಯೂ ಪ್ರಮುಖವಾಗಿದೆ ಎಂದು ಚೀನಾ ಸರಕಾರದ ಪತ್ರಿಕೆ ‘ಗ್ಲೋಬಲ್‌ ಟೈಮ್ಸ್‌’ ಹೇಳಿಕೊಂಡಿದೆ. ಮತ್ತೂಂದು ಪತ್ರಿಕೆ ‘ಚೈನಾ ಡೈಲಿ’ ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸಿದೆ.

Advertisement

ಭಾರತ ಮತ್ತು ಚೀನಾ ನಡುವೆ ಪರಸ್ಪರ ನಂಬಿಕೆಯ ಕೊರತೆಯಿಂದಾಗಿ ಡೋಕ್ಲಾಂ ಸಮಸ್ಯೆ ಉಂಟಾಯಿತು. ಮುಂದಿನ ದಿನಗಳಲ್ಲಿ ಅಂಥ ಯಾವುದೇ ವಿವಾದ ತಲೆದೋರದಂತೆ ಮಾಡಲು ಬೇಕಾದ ವಾತಾವರಣವನ್ನು ಸೃಷ್ಟಿಸಲಾಗುವುದು.
– ಕಾಂಗ್‌ ಕ್ಸುವಾನ್‌ಯೋ, ಚೀನಾದ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next