Advertisement

T20 Cricket: ಕುಸಿತದಿಂದ ಪಾರಾದುದೇ ದೊಡ್ಡ ಸಾಧನೆ: ಸೂರ್ಯಕುಮಾರ್‌

10:57 PM Jul 31, 2024 | Team Udayavani |

ಪಲ್ಲೆಕೆಲೆ: ಇನ್ನೇನು ಸೋತೇ ಬಿಟ್ಟಿತು ಎಂಬ ಸ್ಥಿತಿಯಲ್ಲಿದ್ದ ಭಾರತ, ಮಂಗಳವಾರದ ಅಂತಿಮ ಟಿ20 ಪಂದ್ಯದಲ್ಲಿ ಶ್ರೀಲಂಕಾವನ್ನು ಸೂಪರ್‌ ಓವರ್‌ನಲ್ಲಿ ಮಣಿಸುವ ಮೂಲಕ ಅಸಾಮಾನ್ಯ ಸಾಹಸಗೈದದ್ದು, ಚಾಂಪಿಯನ್ನರ ಆಟವನ್ನಾಡಿ ಸರಣಿಯನ್ನು 3-0 ಅಂತರದಿಂದ ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡದ್ದು ಈಗ ಇತಿಹಾಸ.

Advertisement

ಈ ಸಂದರ್ಭದಲ್ಲಿ ಮಾತಾಡಿದ ನಾಯಕ ಸೂರ್ಯಕುಮಾರ್‌ ಯಾದವ್‌, ಕೊನೆಯ ಎರಡು ಓವರ್‌ಗಳಿಗಿಂತ 30ಕ್ಕೆ 4 ವಿಕೆಟ್‌, 48ಕ್ಕೆ 5 ವಿಕೆಟ್‌ ಕಳೆದುಕೊಂಡ ಸ್ಥಿತಿಯಲ್ಲಿದ್ದ ಭಾರತ 137ರ ತನಕ ಸಾಗಿದ್ದೇ ದೊಡ್ಡ ಸಾಧನೆ ಎಂದಿದ್ದಾರೆ.

“ಈ ಪಿಚ್‌ನಲ್ಲಿ 140 ರನ್‌ ಮಾಡಿದರೆ ಪಂದ್ಯ ಉಳಿಸಿಕೊಳ್ಳಬಹುದೆಂಬ ನಿರೀಕ್ಷೆ ಇತ್ತು. 220-220 ರನ್‌ ಮಾಡಿ ಗೆಲ್ಲುವುದಕ್ಕಿಂತ ಹೀಗೆ ಕುಸಿತದಿಂದ ಚೇತರಿಸಿಕೊಂಡು ಸಾಮಾನ್ಯ ಮೊತ್ತ ಗಳಿಸಿ ಜಯ ಸಾಧಿಸಿದಾಗ ಲಭಿಸುವ ಸಂತೋಷ ಹೆಚ್ಚು’ ಎಂದರು.

ಗೆಲುವು ಕಳೆದುಕೊಂಡ ಲಂಕಾ
ಭಾರತ 9 ವಿಕೆಟಿಗೆ 137 ರನ್‌ ಗಳಿಸಿದರೆ, ಶ್ರೀಲಂಕಾ 8 ವಿಕೆಟಿಗೆ 137 ರನ್‌ ಮಾಡಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತೆಂದೇ ಹೇಳಬಹುದು. 18 ಓವರ್‌ ಮುಕ್ತಾಯಕ್ಕೆ 4 ವಿಕೆಟಿಗೆ 129 ರನ್‌ ಮಾಡಿದ್ದ ಶ್ರೀಲಂಕಾ, ಅಂತಿಮ 2 ಓವರ್‌ಗಳಲ್ಲಿ 6 ವಿಕೆಟ್‌ಗಳಿಂದ 9 ರನ್‌ ಗಳಿಸದೇ ಹೋಯಿತು!

ಇಲ್ಲಿ ಭಾರತ ಬೌಲಿಂಗ್‌ ಟ್ರಿಕ್ಸ್‌ ಮಾಡಿತು. ಅಲ್ಲಿಯ ತನಕ ಚೆಂಡನ್ನೇ ಕೈಗೆತ್ತಿಕೊಳ್ಳದಿದ್ದ ರಿಂಕು ಸಿಂಗ್‌ 19ನೇ ಓವರ್‌ ಎಸೆಯಲು ಬಂದರು. ಕೇವಲ 3 ರನ್‌ ನೀಡಿ ಇಬ್ಬರನ್ನು ಔಟ್‌ ಮಾಡಿದರು. ಅಂತಿಮ ಓವರ್‌ ಮೊಹಮ್ಮದ್‌ ಸಿರಾಜ್‌ ಪಾಲಾಗಬಹುದೆಂಬುದು ಎಲ್ಲರ ನಿರೀಕ್ಷೆ ಆಗಿತ್ತು. ಅವರು 3 ಓವರ್‌ಗಳಿಂದ ಕೇವಲ 11 ರನ್‌ ನೀಡಿ ನಿಯಂತ್ರಣ ಸಾಧಿಸಿದ್ದರು. ಆದರೆ ಸ್ವತಃ ಸೂರ್ಯಕುಮಾರ್‌ ಯಾದವ್‌ ಬೌಲಿಂಗ್‌ಗೆ

Advertisement

ಇಳಿಯುವ ಮೂಲಕ ಎಲ್ಲರ ಹುಬ್ಬೇರಿಸಿದರು. ಕೇವಲ 5 ರನ್‌ ನೀಡಿ, 2 ವಿಕೆಟ್‌ ಕಬಳಿಸಿ ಪಂದ್ಯವನ್ನು ಸೂಪರ್‌ ಓವರ್‌ಗೆ ಕೊಂಡೊಯ್ದರು!

ಸೂಪರ್‌ ಓವರ್‌…
ಸೂಪರ್‌ ಓವರ್‌ನಲ್ಲೂ ಅಚ್ಚರಿ ಕಾದಿತ್ತು. ಚೆಂಡನ್ನು ವಾಷಿಂಗ್ಟನ್‌ ಸುಂದರ್‌ಗೆ ಹಸ್ತಾಂತರಿಸಲಾಯಿತು. ಈ ನಡೆ ಕೂಡ ಸೂಪರ್‌ ಹಿಟ್‌ ಆಯಿತು. 3 ಎಸೆತಗಳಲ್ಲಿ 2 ರನ್ನಿಗೆ ಲಂಕೆಯ ಎರಡೂ ವಿಕೆಟ್‌ ಬಿತ್ತು. ಬಳಿಕ ಸೂರ್ಯಕುಮಾರ್‌ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿ ಭಾರತದ ಗೆಲುವು ಸಾರಿದರು!
ಶುಕ್ರವಾರ ಏಕದಿನ ಸರಣಿ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next