Advertisement

ಶರಣರ ತತ್ವ ಪರಿಚಾರಕ; ಧರ್ಮಜ್ಯೋತಿ ಬೆಳಗಿದ ಸಾಧಕ

05:56 PM Dec 10, 2021 | Team Udayavani |

ಬಾಗಲಕೋಟೆ: ಬಸವಾದಿ ಶರಣರ ತತ್ವ ಪರಿಪಾಲಕ, ಪ್ರಚಾರ ಹಾಗೂ ವಾಗ್ಮಿಯಾಗಿದ್ದ ಜಮಖಂಡಿ ತಾಲೂಕಿನ ಹುನ್ನೂರಿನ ಡಾ|ಈಶ್ವರ ಮಂಟೂರ ಅವರು ಉತ್ತರಕರ್ನಾಟಕದಲ್ಲಿ ಮನೆಮಾತಾಗಿದ್ದರು.

Advertisement

ಡಾ|ಈಶ್ವರ ಮಂಟೂರ ಅವರು ಕವಿಯಾಗಿ, ಚಿಂತಕರಾಗಿ, ಅನುಭಾವಿ ಪ್ರವಚನಕಾರರಾಗಿ, ಸಾಹಿತಿ ಗಳಾಗಿ, ಸಮಾಜೋದ್ಧಾರ್ಮಿಕ ಕಾರ್ಯ ಮಾಡುತ್ತ ಮುನ್ನಡೆದವರು. ಕಲ್ಲು ಮನಸ್ಸಿನ ಹೃದಯಗಳನ್ನು ಹೂವಿನಂತೆ ಅರಳಿಸುವ ಕ್ರೂರಿಗಳ ಭಾವದಲ್ಲಿ ದಯೆಯನ್ನು ತುಂಬುವ, ದ್ವೇಷಿಗಳ ಮನದಲ್ಲಿ ಪ್ರೀತಿಯ ಹಣತೆಯನ್ನು ಹಚ್ಚುವ, ವಿನಯಗುಣ ಸರಳ ಸಂಪನ್ನರಾದ ಅವರ ತ್ಯಾಗ, ಸೇವೆ ಮಾದರಿಯಾಗಿತ್ತು.

ಜಮಖಂಡಿ ತಾಲೂಕಿನ ಹುನ್ನೂರಿನ ಕಲಾನೇಕಾರ ಕುಟುಂಬದಲ್ಲಿ 23-03-1972ರಂದು ತಂದೆ ಶ್ರೀಶೈಲಪ್ಪ, ತಾಯಿ ಅನ್ನಪೂರ್ಣ ಶರಣ ದಂಪತಿಗಳ ಪುತ್ರರಾಗಿ ಜನಿಸಿದರು. ಬಾಲ್ಯದಲ್ಲಿ ಶಿಕ್ಷಣದೊಂದಿಗೆ ಸಂಗೀತ, ಸಾಹಿತ್ಯ, ಭಜನೆ, ಪುರಾಣ, ಪ್ರವಚನ ಮುಂತಾದ ಕಲೆ ಮೈಗೂಡಿಸಿಕೊಂಡು ಬೆಳೆದವರು. ತಿಳಿಯಲಾರದ ಘನವನ್ನು ತಿಳಿಯುವ, ಕಾಣಬಾರದ ಪರವಸ್ತುಗಳನ್ನು ಕಾಣುವ ಅಂತರಂಗದ ರತ್ನವಾದ ಆತ್ಮವಿದ್ಯೆ ಕಡೆಗೆ ಒಲವು ತೋರಿದವರು.

1993ರಲ್ಲಿ ಬಿ.ಕಾಂ. ಪದವಿ ಪಡೆದು, ಅಣ್ಣಾ ಗೃಹಪಾಠ ಶಿಕ್ಷಣ ಕೇಂದ್ರ ಆರಂಭಿಸಿ ಐದು ವರ್ಷಗಳ ಕಾಲ ಜ್ಞಾನಚಿಂತನದಡಿಯಲ್ಲಿ ಆಧ್ಯಾತ್ಮಿಕ ತಳಹದಿ ಮೇಲೆ ಸಹಸ್ರಾರು ಮಕ್ಕಳಿಗೆ ಜ್ಞಾನದಾಸೋಹ ನೀಡುತ್ತಲೇ ಬ್ಯಾಂಕಿನಲ್ಲಿ ಕರಣಿಕರಾಗಿ ಸೇವೆ ಸಲ್ಲಿಸಿದವರು. ಬಸವಾದಿ ಶಿವಶರಣರ ತತ್ವ ಸಿದ್ಧಾಂತಗಳನ್ನು ಅಪ್ಪಿಕೊಂಡ ಶರಣ ಈಶ್ವರ ಮಂಟೂರ ಅವರು ಪ್ರವಚನಗಳ ಮೂಲಕ ನಾಡಿನ ಜನಮನದಲ್ಲಿ ಬಸವತತ್ವವನ್ನು ಬಿತ್ತರಿಸುವ ಸಂಕಲ್ಪ ತೊಟ್ಟು, ಬ್ಯಾಂಕ್‌
ಹುದ್ದೆಗೆ ರಾಜೀನಾಮೆ ನೀಡಿ, ಶರಣ ಪಥದಲ್ಲಿ ಹೆಜ್ಜೆಯಿರಿಸಿದವರು. ನಾಡಿನ ದೇಶಿ ಕಲೆಗಳನ್ನು ಉಳಿಸಿ ಬೆಳೆಸಲು ರಾಗರಶ್ಮಿ ಎಂಬ ಹತ್ತು ಕಲಾವಿದರ ಜಾನಪದ ಬಳಗ ಕಟ್ಟಿಕೊಂಡು ಹಳ್ಳಿ-ಹಳ್ಳಿಗೆ ಸಂಚರಿಸಿ, ಸುಗಮ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರು.

ಸಮಾಜದ ಏಳ್ಗೆಗಾಗಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾದ ಗಡಿಭಾಗದಲ್ಲೆಲ್ಲ ಶರಣರಂತೆ ಸಂಚರಿಸಿ, ಬೆಹರೀನ್‌, ದುಬೈ ರಾಷ್ಟ್ರಗಳಲ್ಲೂ ಶರಣ ಸಂಸ್ಕೃತಿಯ ಪ್ರಚಾರ-ಪ್ರಸಾರ, ವಚನ-ಪ್ರವಚನ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಶ್ರೇಷ್ಠ ಅನುಭಾವಿ ಪ್ರವಚನಕಾರರಾದ ಶರಣ ಡಾ| ಈಶ್ವರ ಮಂಟೂರ ಅವರು ಗೀತ ರಚನಕಾರರು ಹಾಗೂ ಶ್ರೇಷ್ಠ ಸಂಗೀತಗಾರರು ಕೂಡ ಆಗಿದ್ದರು. ಬಸವಭಾವ ಗೀತೆಗಳು, ಬಸವಭಾವ ಪೂಜೆ, ವಚನವಂದನೆ, ತವರಿನ ತಾವರೆ ಮುಂತಾದ ಭಕ್ತಿ ಪರವಶದ ಹತ್ತಾರು ಸಿಡಿ, ವಿಸಿಡಿಗಳು ಕನ್ನಡಿಗರ ಕೈ ಸೇರುವುದರ ಜತೆಗೆ, ದೇಶ-ವಿದೇಶಗಳಲ್ಲಿರುವ ಕನ್ನಡದ ಮನೆಗಳಲ್ಲೂ ಸ್ಥಳ ಪಡೆದಿದ್ದವು.

Advertisement

ನೆತ್ತಿಗೆ ಬುತ್ತಿ, ಅಂತರಂಗದ ಮೃದಂಗ, ಪುಟ್ಟಹಣತೆ, ವಚನ ಹನಿ, ಮಹಾಂತ ಜೋಳಿಗೆ, ವಚನವೃಕ್ಷ ಮುಂತಾದ ಕೃತಿ ಕುಸುಮಗಳು ಓದುಗರ ಅಭಿಮಾನಕ್ಕೆ ಸಾಕ್ಷಿಯಾಗಿವೆ. ಪ್ರವಚನ ಭಾಸ್ಕರ, ಪ್ರವಚನ ಪ್ರಭಾಕರ, ಪ್ರವಚನ ಚೇತನ, ಪ್ರವಚನ ಭೂಷಣ, ಸಂಗೀತ ಸುಧಾಕರ, ಕಂಚಿನಕಂಠದ ವೀರವಾಣಿ, ಶರಣಶ್ರೀ, ಶ್ರೇಷ್ಠ ಕವಿ, ಅನಾಥ ಮಕ್ಕಳ ತಾಯಿ, ಅಬಲೆಯ ಬಂಧು, ಉತ್ಸಾಹದ ಖಣಿ, ಸಾಹಿತ್ಯದ ಚಿಲುಮೆ, ಮುಂತಾದ ಗೌರವ ಬಿರುದುಗಳಿಗೆ ಭಾಜನರಾಗಿದ್ದರು.

ಎಂ.ಎ. ಪದವಿ ಪಡೆದ ಶರಣರು ಸತತ ಅಧ್ಯಯನ, ಕಠಿಣ ಪರಿಶ್ರಮ, ಅಂದು ಕೊಂಡದ್ದನ್ನು ಸಾಧಿಸುವ ಛಲ, ನಿರಂತರ ಚಿಂತನದ ಫಲವಾಗಿ ಸ್ವತಃ ಖ್ಯಾತ ಪ್ರವಚನಕಾರರಾಗಿರುವುದರಿಂದ ತಮ್ಮ ಪ್ರವಚನ ಕ್ಷೇತ್ರವನ್ನೇ ಆಧಾರವಾಗಿಟ್ಟುಕೊಂಡು ಇದುವರೆಗೂ ಅಧ್ಯಯನಕ್ಕೆ ಒಳಪಡದ ಕನ್ನಡದಲ್ಲಿ ಪ್ರವಚನ ಸಾಹಿತ್ಯ ಪಿಎಚ್‌ಡಿ. ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ 2013 ಡಿಸೆಂಬರ್‌ 21ರ ನುಡಿಹಬ್ಬದ ಸಂಭ್ರಮದಲ್ಲಿ ಗೌರವ ಡಾಕ್ಟರೇಟ್‌ ಪದವಿ ಪಡೆದಿದ್ದರು.

ಜಮಖಂಡಿ ತಾಲೂಕಿನ ಹುನ್ನೂರ-ಮಧುರಖಂಡಿ ಸುಂದರ ಪರಿಸರದಲ್ಲಿ ಬೆಟ್ಟದ ಇಳಿಜಾರಲ್ಲಿ ಬಸವಜ್ಞಾನ ಗುರುಕುಲ ಎಂಬ ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಯೋಗಾಶ್ರಮ ಸ್ಥಾಪಿಸಿದ್ದಾರೆ. ಈ ಆಶ್ರಮದಲ್ಲಿ ನಾಡಿನ ಅನಾಥ ಬಡಮಕ್ಕಳಿಗೆ ಅನ್ನ, ವಸ್ತ್ರ, ಆಶ್ರಯ, ಶಿಕ್ಷಣ, ಸಂಸ್ಕಾರ ನೀಡುವುದರ ಜೊತೆಗೆ ಸಂಗೀತ, ಗಣಕಯಂತ್ರ ಜ್ಞಾನ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ, ಪರಿಸರ ಸಂರಕ್ಷಣೆ, ನೇತ್ರದಾನ, ರಕ್ತದಾನ, ಉಚಿತ ಆರೋಗ್ಯ ಶಿಬಿರಗಳು, ಪುಸ್ತಕ ಪ್ರಕಟಣೆ, ಪ್ರತಿ ತಿಂಗಳ ಕೊನೆಯ ಶನಿವಾರ ಶಿವಾನುಭವ ಸಂಪದ ಮಾಸಿಕ ಕಾರ್ಯಕ್ರಮ ನಿರಂತರವಾಗಿ ನಡೆಸುತ್ತ ಬಂದವರು.

ಪ್ರತಿ ವರ್ಷ ಡಿಸೆಂಬರ್‌ 25, 26 ಮತ್ತು 27 ಮೂರು ದಿನಗಳ ಕಾಲ ಶರಣ ಸಂಸ್ಕೃತಿ ಉತ್ಸವ ಹಾಗೂ ಜಾನಪದ ಕಲಾ ಮಹೋತ್ಸವ ವಿಜೃಂಭಣೆಯಿಂದ ನಡೆಸಿ, ನಮ್ಮ ಪರಂಪರೆ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಮೂಲಕ ನೆಲ-ಜಲ, ಕಲೆ, ಕೃಷಿ, ದಾಸೋಹ ನಾಡು-ನುಡಿ ಸಂಸ್ಕೃತಿ ಸಂವರ್ಧನೆಗಾಗಿ ಶ್ರಮಿಸಿದ ಸಾಧಕರಿಗೆ ರಾಜ್ಯ ಮಟ್ಟದ ಮೂರು ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದ್ದಾರೆ. ನೂರಾರು ಜನ ಎಲೆಮರೆ ಕಾಯಿಯಂತಿರುವ ಸಾಧಕರನ್ನು ಗೌರವಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಎನಗಿಂತ ಕಿರಿಯರಿಲ್ಲ ಎಂಬುದಕ್ಕೆ ರೂಪಕವಾಗಿದ್ದು ಕಾಯಕದಲ್ಲೇ ಕೈಲಾಸ ಇದೆ ಎಂಬುದನ್ನು ಕರಸ್ಥಲದಲ್ಲಿ ಪ್ರತಿಷ್ಠಾಪಿಸಿಕೊಂಡ ಶಿವಾನುಭಾವಿ ಶರಣ ಡಾ|ಈಶ್ವರ ಮಂಟೂರ ಇನ್ನಿಲ್ಲ ಎಂಬುದೇ ದುಃಖದ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next