Advertisement

ನಿಲುವು ಬದಲಾವಣೆ ಸ್ವಾಗತಾರ್ಹ

01:37 AM Aug 24, 2019 | mahesh |

ಪ್ರಧಾನಿ ನರೇಂದ್ರ ಮೋದಿಗೆ ಸಂಬಂಧಿಸಿದಂತೆ ಕೆಲವು ಕಾಂಗ್ರೆಸ್‌ ನಾಯಕರ ನಿಲುವಿನಲ್ಲಿ ಉಂಟಾಗಿರುವ ಹಠಾತ್‌ ಬದಲಾವಣೆ ಆಶ್ಚರ್ಯ ಹುಟ್ಟಿಸುತ್ತಿದೆ. ಮೋದಿಯ ಕಟ್ಟಾ ವಿರೋಧಿಗಳೆಂದು ಗುರುತಿಸಿಕೊಂಡ ಹಾಗೂ ಕಾಂಗ್ರೆಸ್‌ನ ಚಿಂತಕರ ಗುಂಪಿನ ಪ್ರಮುಖರಾಗಿರುವ ಪಿ.ಚಿದಂಬರಂ, ಜೈರಾಮ್‌ ರಮೇಶ್‌, ಅಭಿಷೇಕ್‌ ಮನು ಸಿಂಘ್ವಿ ಮುಂತಾದ ಘಟಾನುಘಟಿ ನಾಯಕರ ನಿಲುವಿನಲ್ಲೇ ಮೋದಿಗೆ ಸಂಬಂಧಪಟ್ಟಂತೆ ಭಾರೀ ಮಾರ್ಪಾಡು ಕಾಣಿಸಿಕೊಂಡಿದೆ.

Advertisement

ಮೋದಿ ಸ್ವಾತಂತ್ರ್ಯ ದಿನದಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣವನ್ನು ಪಿ.ಚಿದಂಬರಂ ಹೊಗಳಿದ್ದರು. ಜನಸಂಖ್ಯೆಯ ನಿಯಂತ್ರಣ ಮತ್ತು ಪ್ಲಾಸ್ಟಿಕ್‌ ನಿರ್ಮೂಲನೆ ಕುರಿತು ಮೋದಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಚಿದಂಬರಂ ಮೆಚ್ಚುಗೆಗೆ ಪಾತ್ರವಾಗಿದ್ದವು. ಆದರೆ ಇದಾದ ಎರಡೇ ದಿನಗಳಲ್ಲಿ ಚಿದಂಬರಂ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಸೆರೆಯಾಗಿರುವುದು ಬೇರೆ ವಿಚಾರ. ಇದರ ಬೆನ್ನಿಗೆ ಇದೀಗ ಮಾಜಿ ಸಚಿವ ಜೈರಾಮ್‌ ರಮೇಶ್‌ ಅವರು ಮೋದಿಯ ಎಲ್ಲ ಕಾರ್ಯಗಳನ್ನು ಎಲ್ಲಾ ಕಾಲಗಳಲ್ಲಿ ಟೀಕಿಸುವುದು ಸರಿಯಲ್ಲ ಹಾಗೂ ಇದರಿಂದ ಯಾವ ಪ್ರಯೋಜನವೂ ಇಲ್ಲ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ. ಮೋದಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಮಾತನಾಡುತ್ತಾರೆ. ಮೋದಿಯ ಆಡಳಿತ ಶೈಲಿ ಸಂಪೂರ್ಣ ನಕಾರಾತ್ಮಕವಾಗಿಲ್ಲ. ಅವರ ಉತ್ತಮ ಕೆಲಸಗಳನ್ನು ಒಪ್ಪಿಕೊಳ್ಳದೆ ಬರೀ ಟೀಕಿಸುವುದು ವ್ಯರ್ಥ ಎಂದಿದ್ದಾರೆ ಜೈರಾಮ್‌. ಮೋದಿಯ ಉಜ್ವಲ ಯೋಜನೆಯಂಥ ಜನಪ್ರಿಯ ಕಾರ್ಯಕ್ರಮಗಳನ್ನೂ ಅವರು ಹೊಗಳಿದ್ದಾರೆ. ಅವರ ಈ ಅಭಿಪ್ರಾಯಕ್ಕೆ ಅಭಿಷೇಕ್‌ ಮನು ಸಿಂಘ್ವಿ, ಶಶಿ ತರೂರ್‌ ಸೇರಿದಂತೆ ಹಲವು ಹಿರಿಯ ನಾಯಕರ ಬೆಂಬಲ ವ್ಯಕ್ತವಾಗಿರುವುದು ಇನ್ನಷ್ಟು ಅಚ್ಚರಿಗೆ ಕಾರಣವಾಗಿದೆ. ಏಕೆಂದರೆ ಇವರೆಲ್ಲ ಮೋದಿಯ ಕಟ್ಟಾ ವಿರೋಧಿಗಳು. ಸರಕಾರದ ಪ್ರತಿಯೊಂದು ನಡೆ-ನುಡಿಯಲ್ಲಿ ತಪ್ಪನ್ನೇ ಹುಡುಕುತ್ತಿದ್ದವರು. ಸ್ವಚ್ಛ ಭಾರತದಂಥ ಜನಪ್ರಿಯ ಯೋಜನೆಯನ್ನು ಕೂಡಾ ಕಟುವಾಗಿ ಟೀಕಿಸು ತ್ತಿದ್ದವರು. ಸರ್ಜಿಕಲ್ಸ್ಟ್ರೈಕ್‌, ಬಾಲಾಕೋಟ್‌ನಂಥ ಕಾರ್ಯಾಚರಣೆಗಳಿಗೆ ಸಾಕ್ಷಿ ಕೇಳಿದವರು. ಈಗ ಇವರ ನಿಲುವು ಬದಲಾಗಲು ಏನು ಕಾರಣ ಎನ್ನುವುದು ನಿಗೂಢವಾದರೂ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಇಂಥ ಬದಲಾವಣೆ ಕಾಣಿಸಿರುವುದು ಸ್ವಾಗತಾರ್ಹ ಬೆಳವಣಿಗೆ.

ಸದ್ಯ ಮೋದಿಯನ್ನು ಮೆಚ್ಚುತ್ತಿರುವವರ ಪಟ್ಟಿಯಲ್ಲಿ ಶತ್ರುಘ್ನ ಸಿನ್ಹಾ ಸೇರಿದಂತೆ ಇನ್ನೂ ಕೆಲವು ನಾಯಕರ ಹೆಸರು ಇದೆ. ಸಿನ್ಹಾ ಬಿಜೆಪಿಯಲ್ಲಿರುವಾಗಲೇ ಮೋದಿಯ ಕಟು ಟೀಕಾಕಾರರಾಗಿದ್ದವರು. ಬಳಿಕ ಕಾಂಗ್ರೆಸ್‌ ಸೇರಿಯೂ ಅದನ್ನು ಮುಂದುವರಿಸಿದ್ದರು. ಕಾಶ್ಮೀರದ 370ನೇ ವಿಧಿ ರದ್ದಾದ ಬಳಿಕ ಮೋದಿಗೆ ಸಂಬಂಧಿಸಿದಂತೆ ಸಿನ್ಹಾ ನಿಲುವು ತುಸು ಮೃದುವಾಗಿದೆ. 370ನೇ ವಿಧಿ ರದ್ದುಪಡಿಸುವ ಐತಿಹಾಸಿಕ ನಿರ್ಧಾರದ ಬಳಿಕ ಸಿನ್ಹಾ ಮಾತ್ರವಲ್ಲದೆ ಇನ್ನೂ ಹಲವು ವಿಪಕ್ಷ ನಾಯಕರು ಮೋದಿಯ ಪ್ರಶಂಸಕರಾಗಿ ಬದಲಾಗಿರುವುದು ಕೂಡಾ ಗಮನಾರ್ಹ ಬದಲಾವಣೆಯೇ. ಕಾಂಗ್ರೆಸ್‌ ಈಗಲೂ 370ನೇ ವಿಧಿ ರದ್ದುಪಡಿಸಿದ್ದನ್ನು ಟೀಕಿಸುತ್ತಿದ್ದರೂ ಅದರ ಅನೇಕ ನಾಯಕರು ಇದು ದಿಟ್ಟ ನಿರ್ಧಾರ ಮತ್ತು ಆಗಲೇ ಬೇಕಿದ್ದ ಸುಧಾರಣೆ ಎಂದೆಲ್ಲ ಹೊಗಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆ ಪಕ್ಷದ ರಾಜ್ಯಸಭೆಯ ಸಚೇತಕರೇ ಮೋದಿ ನಿಲುವನ್ನು ಮೆಚ್ಚಿ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ.

ಎನ್‌ಡಿಎ ಸರಕಾರ ಜಾರಿಗೊಳಿಸಿರುವ ಜನಪ್ರಿಯ ಯೋಜನೆಗಳನ್ನು ಟೀಕಿಸುವುದರಿಂದ ಕಾಂಗ್ರೆಸ್‌ಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವುದನ್ನು ಈ ನಾಯಕರು ಈಗಲಾದರೂ ಒಪ್ಪಿಕೊಂಡಿದ್ದಾರೆ. ಪ್ರಜಾತಂತ್ರದಲ್ಲಿ ರಚನಾತ್ಮಕ ಟೀಕೆಗಳು ತೀರಾ ಅಗತ್ಯ. ಸರಕಾರದ ತಪ್ಪುಗಳನ್ನು, ಲೋಪದೋಷಗಳನ್ನು ಎತ್ತಿ ತೋರಿಸುವ ಕೆಲಸವನ್ನು ವಿಪಕ್ಷಗಳು ಕಾಲಕಾಲಕ್ಕೆ ಮಾಡುತ್ತಿರಬೇಕು.ಆದರೆ ಈಗೀಗ ವಿಪಕ್ಷಗಳ ವರ್ತನೆ ಜುಗುಪ್ಸೆ ಹುಟ್ಟಿಸುವ ಮಟ್ಟಕ್ಕಿಳಿದಿತ್ತು. ವಿರೋಧಿಸಬೇಕೆಂಬ ಏಕೈಕ ಕಾರಣಕ್ಕೆ ವಿರೋಧಿಸುವುದು ಎಂಬ ನೀತಿಯನ್ನು ಅವುಗಳು ಅಳವಡಿಸಿಕೊಂಡಿದ್ದವು. ಕಾಂಗ್ರೆಸ್‌ ಪಕ್ಷದ ಅಧಿನಾಯಕರು ಮೋದಿಯನ್ನು ಹೊಗಳಿದ ನಾಯಕರನ್ನು ಮೂಲೆಗುಂಪು ಮಾಡುವ ಅಥವಾ ತರಾಟೆಗೆ ತೆಗೆದುಕೊಳ್ಳುವಂಥ ವಿವೇಚನಾರಹಿತ ಕ್ರಮಗಳಿಗೆ ಮುಂದಾಗದೆ ಅವರ ಮಾತಿನ ಅಂತರಾರ್ಥವನ್ನು ಮಥಿಸುವ ಅಗತ್ಯವಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕಂಡ ಸತತ ಎರಡು ಹೀನಾಯ ಸೋಲುಗಳಿಗೆ ಕಾರಣ ಏನು ಎನ್ನುವ ಪ್ರಶ್ನೆಗೆ ಈ ಸಂದರ್ಭದಲ್ಲಿ ಉತ್ತರ ಸಿಗಲೂಬಹುದು.

ಉಜ್ವಲ ಯೋಜನೆಯಂಥ ಜನಪ್ರಿಯ ಕಾರ್ಯಕ್ರಮ ಗಳನ್ನೂ ಹೊಗಳಿದ್ದಾರೆ ಜೈರಾಮ್‌. ಅವರ ಈ ಅಭಿಪ್ರಾಯಕ್ಕೆ ಅಭಿಷೇಕ್‌ ಮನು ಸಿಂಘ್ವಿ, ಶಶಿ ತರೂರು ಸೇರಿದಂತೆ ಹಲವು ಹಿರಿಯ ನಾಯಕರ ಬೆಂಬಲ ವ್ಯಕ್ತವಾಗಿರುವುದು ಇನ್ನಷ್ಟು ಅಚ್ಚರಿಗೆ ಕಾರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next