Advertisement

Surathkal; ಶ್ರೀನಿವಾಸ ಕಾಲೇಜು: 739 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

11:17 PM Feb 12, 2024 | Team Udayavani |

ಸುರತ್ಕಲ್‌: ಶ್ರೀನಿವಾಸ ಗ್ರೂಪ್‌ ಆಫ್‌ ಕಾಲೇಜುಗಳ ಪದವಿ ದಿನಾಚರಣೆಯು ಶ್ರೀನಿವಾಸ ವಿಶ್ವವಿದ್ಯಾನಿಲಯದ ಮುಕ್ಕ ಕ್ಯಾಂಪಸ್‌ನಲ್ಲಿ ರವಿವಾರ ನಡೆಯಿತು.

Advertisement

ಮುಖ್ಯ ಅತಿಥಿಯಾಗಿದ್ದ ಗ್ಲೋಬಲ್‌ ಇಂಕ್‌ ಸ್ಥಾಪಕ, ಎಫ್‌ಐಸಿಸಿಐ ಸಹ ಅಧ್ಯಕ್ಷ ಡಾ| ಸುಹಾಸ್‌ ಗೋಪಿನಾಥ್‌ ಮಾತನಾಡಿ, ಯುವಕನಾಗಿದ್ದಾಗ ಅಂತರ್ಜಾಲದಲ್ಲಿ ಸಿಗುವ ಮಾಹಿತಿ ಓದುತ್ತಿದ್ದೆ. ಇದು ಭವಿಷ್ಯದಲ್ಲಿ ಸೈಬರ್‌ ಸೆಕ್ಯುರಿಟಿಯ ಶಿಕ್ಷಣ ಹಾಗೂ ಅದನ್ನೇ ಮುಖ್ಯ ವೃತ್ತಿಯಾಗಿ ತೆಗೆದುಕೊಳ್ಳಲು ಕಾರಣವಾಯಿತು. ಪೋಷಕರು ಮಕ್ಕಳ ಪ್ರತಿಭೆಗೆ ತಕ್ಕಂತೆ ಪ್ರೋತ್ಸಾಹ ನೀಡಿದಾಗ ಯಶಸ್ವಿಯಾಗಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಶ್ರೀನಿವಾಸ ವಿ.ವಿ. ಕುಲಾಧಿಪತಿ ಹಾಗೂ ಎ. ಶಾಮರಾವ್‌ ಪ್ರತಿಷ್ಠಾನದ ಅಧ್ಯಕ್ಷ ಡಾ| ಸಿಎ ಎ. ರಾಘವೇಂದ್ರ ರಾವ್‌ ಮಾತನಾಡಿ, ಪದವೀಧರರು ಜೀವನದಲ್ಲಿ ವಿನಮ್ರತೆ, ಇತರರ ಮೇಲೆ ಗೌರವ ಇರಿಸಿಕೊಂಡು ದೇಶದ ಆಸ್ತಿಯಾಗಬೇಕು. ಜೀವನದುದ್ದಕ್ಕೂ ಅಧ್ಯಯನ ಮಾಡಿ, ಜೀವನದ ಪಾಠಗಳು ಬೆಳೆಯಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಸಹಕುಲಾಧಿಪತಿ, ಎ. ಶಾಮ ರಾವ್‌ ಪ್ರತಿಷ್ಠಾನದ ಉಪಾಧ್ಯಕ್ಷ ಡಾ| ಶ್ರೀನಿವಾಸ ರಾವ್‌ ಅವರು, ಭಾರತ ಸರಕಾರವು ಸಂಭಾವನೆಯೊಂದಿಗೆ ಬೆಂಬಲ ನೀಡುವುದರಿಂದ ಯುವ ಪದವೀಧರರು ಕಂಪೆನಿಯನ್ನು ಪ್ರಾರಂಭಿಸಲು ಮುಂದಾಗಬೇಕು ಮತ್ತು ಉದ್ಯಮಿಗಳಾಗಬೇಕು ಎಂದು ಹೇಳಿದರು.

ಆಡಳಿತ ಮಂಡಳಿ ಸದಸ್ಯೆ ಪ್ರೊ| ಎ. ಮಿತ್ರಾ ಎಸ್‌. ರಾವ್‌ ಪ್ರಮಾಣವಚನ ಬೋಧಿಸಿದರು. ಇನ್ನೋರ್ವ ಸದಸ್ಯೆ ಎ. ವಿಜಯಲಕ್ಷ್ಮೀ ಆರ್‌. ರಾವ್‌, ಶ್ರೀನಿವಾಸ ವಿ.ವಿ. ಉಪಕುಲಪತಿ ಡಾ| ಸತ್ಯನಾರಾಯಣ ರೆಡ್ಡಿ, ಫಾರ್ಮಸಿ ಕಾಲೇಜ್‌ ಪ್ರಾಂಶುಪಾಲ ಡಾ| ರಾಮಕೃಷ್ಣ ಶಬರಾಯ, ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನ ಕೇಂದ್ರದ ಡೀನ್‌ ಡಾ| ಉದಯ್‌ ಕುಮಾರ್‌ ರಾವ್‌, ನರ್ಸಿಂಗ್‌ ಸೈನ್ಸ್‌ ಡೀನ್‌ ಡಾ| ಪ್ರದೀಪ್‌ ಎಂ., ಫಿಸಿಯೋಥೆರಪಿ ಮತ್ತು ರಿಸರ್ಚ್‌ ಸೆಂಟರ್‌ ಡೀನ್‌ ಡಾ| ರಾಜಶೇಖರ್‌, ಡೆಂಟಲ್‌ ಸೈನ್ಸಸ್‌ ಡೀನ್‌ ಡಾ| ರೇಷ್ಮಾ ಪೈ, ಶ್ರೀನಿವಾಸ್‌ ವಿ.ವಿ. ರಿಜಿಸ್ಟ್ರಾರ್‌, ಡಾ| ಅನಿಲ್‌ ಕುಮಾರ್‌, ಮೌಲ್ಯಮಾಪನ ರಿಜಿಸ್ಟ್ರಾರ್‌ ಡಾ| ಶ್ರೀನಿವಾಸ ಮಯ್ಯ ಡಿ., ರಿಜಿಸ್ಟ್ರಾರ್‌ ಆಫ್‌ ಡೆವಲಪ್‌ಮೆಂಟ್‌ ಡಾ| ಅಜಯ್‌ ಕುಮಾರ್‌ ಮತ್ತು ವಿವಿಧ ಸಂಸ್ಥೆಗಳ ಡೀನ್‌ಗಳು ಉಪಸ್ಥಿತರಿದ್ದರು.

Advertisement

739 ಪದವೀಧರರು ಪದವಿ ಪ್ರಮಾಣಪತ್ರ ಪಡೆದರು. ಡಾ| ಅಂಬಿಕಾ ಮಲ್ಯ, ಡಾ| ವಿಜಯಲಕ್ಷ್ಮೀ ನಾಯಕ್‌, ಪ್ರೊ| ರೋಹನ್‌ ಫೆರ್ನಾಂಡಿಸ್‌, ಪ್ರೊ| ಶ್ವೇತಾ ಪೈ ಮತ್ತು ಡಾ| ಪದ್ಮಾ ಪ್ರಭು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next