Advertisement

Surathkal: ಹೊಸ ಆಕರ್ಷಣೆಗಳಿಲ್ಲದೆ ಸೊರಗುತ್ತಿವೆ ಬೀಚುಗಳು!

03:43 PM Sep 25, 2024 | Team Udayavani |

ಸುರತ್ಕಲ್‌: ದಕ್ಷಿಣ ಕನ್ನಡಕ್ಕೆ ನಿಸರ್ಗದತ್ತ ಕಡಲತೀರ ಒಂದು ಅತಿ ದೊಡ್ಡ ಉಡುಗೊರೆ. ಕೇರಳ, ಗೋವಾದಂಥ ರಾಜ್ಯಗಳು ಕಡಲ ತೀರವನ್ನೇ ಬಂಡವಾಳ ಮಾಡಿಕೊಂಡು ಪ್ರವಾಸೋದ್ಯಮವನ್ನು ಆಕಾಶಕ್ಕೇರಿಸಿವೆ. ಆದರೆ, ದ.ಕ.ಕ್ಕೆ ಆ ಸಾಧನೆ ಸಾಧ್ಯವಾಗಿಲ್ಲ. ಅದರಲ್ಲೂ ಸಾಕಷ್ಟು ಸುಂದರವಾಗಿರುವ ಮಂಗಳೂರಿನ ಬೀಚುಗಳು ಯಾವುದೇ ಆಕರ್ಷಣೆಗಳಿಲ್ಲದೆ ಸೊರಗುತ್ತಿವೆ. ಹೀಗಾಗಿ ಬೀಚ್‌ ಕಡೆಗೆ ಹೋಗುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇದನ್ನು ಸರಿಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.

Advertisement

ಬೆರಳೆಣಿಕೆಯಷ್ಟಿರುವ ಮೂಲಸೌಕರ್ಯಗಳನ್ನು ವೃದ್ಧಿಸುವುದು, ಕ್ರೀಡೆಯೂ ಸೇರಿದಂತೆ ಹೊಸ ಆಕರ್ಷಣೆಗಳನ್ನು ಹುಟ್ಟು ಹಾಕುವುದು, ಸಮುದ್ರಯಾನದ ಅವಕಾಶಗಳನ್ನು ಹೆಚ್ಚಿಸುವುದು ಸೇರಿದಂತೆ ಹೊಸ ಅವಕಾಶಗಳನ್ನು ಸೃಷ್ಟಿಸಬೇಕಾಗಿದೆ.

ನಿಜವೆಂದರೆ, ಉಳ್ಳಾಲ, ತಣ್ಣೀರುಬಾವಿ, ಪಣಂಬೂರು, ಸುರತ್ಕಲ್‌, ಸಸಿಹಿತ್ಲು ಸೇರಿದಂತೆ ಪ್ರಮುಖ ಬೀಚ್‌ಗಳಲ್ಲಿ ಮೂಲ ಸೌಕರ್ಯ ಒದಗಿಸಲು ಸಾಕಷ್ಟು ತಾಂತ್ರಿಕ ತೊಂದರೆಗಳೂ ಇವೆ. ಸರಿಯಾದ ರಸ್ತೆ ಇಲ್ಲದಿರುವುದು, ಸೂಕ್ತ ಜಾಗವಿಲ್ಲದಿರುವುದು ಪ್ರವಾಸೋದ್ಯಮ ವೃದ್ಧಿಗೆ ಹಿನ್ನಡೆಯಾಗಿದೆ. ಇದರ ಲಾಭ ಉಡುಪಿ ಜಿಲ್ಲೆಯ ಬೀಚ್‌ಗಳಿಗೆ ಸಿಗುತ್ತಿದೆ.

ನೌಕಾಯಾನ ಸಚಿವಾಲಯದಡಿ ಬರುವ ಲೈಟ್‌ ಹೌಸ್‌ ಕೇಂದ್ರ, ಸಸಿಹಿತ್ಲು ಬೀಚ್‌ಗಳನ್ನು ಹೆಚ್ಚಿನ ಅನುದಾನದೊಂದಿಗೆ ಅಭಿವೃದ್ಧಿಪಡಿಸದಿದ್ದರೆ ಪ್ರವಾಸಿಗರನ್ನು ಸೆಳೆಯುವುದು ಕಷ್ಟ.

ಸುರತ್ಕಲ್‌ ಬೀಚ್‌:ಕಡತವೇ ಮಾಯ!
ಸುರತ್ಕಲ್‌ ಬೀಚ್‌ನಲ್ಲಿ ಉಪ್ಪು ನೀರಿನ ಈಜಾಟಕ್ಕೆ ಜಿಲ್ಲೆಯಲ್ಲಿ ಪ್ರಥಮ ಎನ್ನ ಬಹುದಾದ ಬೃಹತ್‌ ಕೊಳವೊಂದರ (ಸಲೈನ್‌ ವಾಟರ್‌ ಪೂಲ್‌) ನಿರ್ಮಾಣ ಯೋಜನೆಯನ್ನು 2021ರಲ್ಲಿ ಪ್ರಸ್ತಾವಿಸಲಾಗಿತ್ತು. ಇದರೊಂದಿಗೆ ಮೂಲಸೌಕರ್ಯ ವ್ಯವಸ್ಥೆಗಳಾದ ರಸ್ತೆ, ಶೌಚಾಲಯ, ಡ್ರೆಸ್ಸಿಂಗ್‌ ಕೊಠಡಿಗಳು, ಬೃಹತ್‌ ಪಾರ್ಕಿಂಗ್‌ ವ್ಯವಸ್ಥೆ, ರಸ್ತೆಗಳ ವಿಸ್ತರಣೆಯ ಯೋಜನೆಯೂ ಇದರಲ್ಲಿತ್ತು.

Advertisement

ಸುರತ್ಕಲ್‌ನಿಂದ ಎನ್‌ಐಟಿಕೆ ಬೀಚ್‌ವರೆಗೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಅಂದಾಜು 7 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಚಿಂತನೆ ನಡೆದಿತ್ತು. ಇದರಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ 5 ಕೋಟಿ ರೂ. ನೀಡುವ ಕುರಿತಂತೆ ಪ್ರಥಮ ಹಂತದ ಚರ್ಚೆಯೂ ನಡೆದಿತ್ತು. ಆದರೆ ಇದೀಗ ಈ ಪ್ರಸ್ತಾವನೆಗಳು ಕಡತದಿಂದಲೇ ಮಾಯವಾಗಿವೆ.

ಪಣಂಬೂರು ಬೀಚ್‌ಗೆ ಬಂದರು ಅಡ್ಡಿ!
ಪಣಂಬೂರು ಬೀಚ್‌ ಆಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಆದರೆ, ಇದಕ್ಕೆ ಮಂಗಳೂರು ಬಂದರು ಬೆಳೆಯುತ್ತಿರುವುದೇ ಅಡ್ಡಿಯಾಗಿ ಪರಿಣಮಿಸಿದೆ. ಪಣಂಬೂರು ಪರಿಸರದಲ್ಲಿ ಬೀಚ್‌ ಸಮೀಪದವರೆಗೆ ಬೃಹತ್‌ ಉದ್ಯಮಗಳು ತಲೆಯೆತ್ತುತ್ತಿವೆ. ಇದರಿಂದ ಬೀಚ್‌ಗೆ ಬೇಕಾದ ಮೂಲಸೌಕರ್ಯ, ಮನರಂಜನಾ ವ್ಯವಸ್ಥೆ ಕಲ್ಪಿಸಲು ಸ್ಥಳಾವಕಾಶದ ಕೊರತೆಯಿದೆ.

ಪ್ರವಾಸೋದ್ಯಮ ಇಲಾಖೆ ಕೈಯಲ್ಲಿ ಕನಿಷ್ಠ ಜಾಗವಿದ್ದು, ಇದನ್ನು ಅಂತಾರಾಷೀrÅಯ ಬೀಚ್‌ ಆಗಿ ಪರಿವರ್ತಿಸಲು ಸಾಧ್ಯವಾಗದು ಎಂಬುದು ತಜ್ಞರ ಅಭಿಪ್ರಾಯ. ಇನ್ನೊಂದೆಡೆ ಕೋಸ್ಟ್‌ಗಾರ್ಡ್‌ ನೌಕಾ ನೆಲೆಯೂ ಇರುವುದರಿಂದ ಭದ್ರತೆಯ ಕಾರಣಕ್ಕಾಗಿ ಖಾಸಗಿ ಸಹಭಾಗಿತ್ವವನ್ನು ಪಡೆಯಲು ಹಿನ್ನಡೆಯಾಗಿದೆ. ಎನ್‌ಎಂಪಿಎ ವಶದಲ್ಲಿನ ಭೂಮಿಯನ್ನು ಪ್ರವಾಸೋದ್ಯಮ ಇಲಾಖೆಗೆ ಒಡಂಬಡಿಕೆಯಂತೆ ನೀಡುವ ಬಗ್ಗೆಯೂ ಹೆಚ್ಚಿನ ಪ್ರಗತಿ ಕಂಡಿಲ್ಲ.

ಇನ್ನು ಪಣಂಬೂರು ಬಂದರನ್ನು ಸಂಪರ್ಕಿಸುವ ಪ್ರಧಾನ ರಸ್ತೆಯೇ ಎನ್‌ಎಂಪಿಎ ಬಂದರಿಗೆ ಸೇರಿದ್ದು. ಇದರಲ್ಲಿ ನಿತ್ಯ ನೂರಾರು ಲಾರಿಗಳು ಓಡಾಡುತ್ತವೆ. ಸಣ್ಣ ಮಳೆಗೂ ಕೆಸರಾಗುತ್ತದೆ. ಇಂಥ ಸ್ಥಿತಿಯಲ್ಲಿ ಪ್ರವಾಸಿಗರು ಬೀಚ್‌ಗೆ ಬರಲು ಹೇಸಿಗೆ ಮತ್ತು ಆತಂಕಪಡುವಂತಾಗಿದೆ.

ತಣ್ಣೀರುಬಾವಿ: ಮನೋರಂಜನೆ ಕೊರತೆ
ಮಂಗಳೂರಿನ ಬೀಚ್‌ಗಳಲ್ಲಿ ಈಗ ಸ್ವಲ್ಪವಾದರೂ ಜನಾಕರ್ಷಣೆ ಉಳಿಸಿಕೊಂಡಿರುವುದು ತಣ್ಣೀರುಬಾವಿ ಬೀಚ್‌. ಇದಕ್ಕೆ ಬ್ಲೂ ಫ್ಲ್ಯಾಗ್‌ ಮಾನ್ಯತೆ ಪಡೆಯಲು 8 ಕೋಟಿ ರೂ.ವೆಚ್ಚದಲ್ಲಿ ಸ್ಮಾರ್ಟ್‌ ಸಿಟಿಯ ಕಾಮಗಾರಿ ನಡೆಯುತ್ತಿದೆ. ಆದರೆ, ಇದು ಪ್ರವಾಸಿಗರ ಬೇಡಿಕೆ ಮೂಲಸೌಕರ್ಯಗಳು ಈಡೇರಿಸುತ್ತವೆ ಎನ್ನಲಾಗದು. ಮನೋರಂಜನಾ ವ್ಯವಸ್ಥೆಯ ಕೊರತೆಯೂ ಇಲ್ಲಿ ಕಾಣಿಸುತ್ತಿದೆ.

ಇಲ್ಲಿನ ರಸ್ತೆಯೂ ಬಂದರು ವ್ಯಾಪ್ತಿಗೆ ಬರುವುದರಿಂದ ಪ್ರವಾಸಿಗರ ವಾಹನ ಓಡಾಟಕ್ಕೆ ಅಡಚಣೆ ಆಗುತ್ತಿದೆ. ಬೀಚ್‌ ಬಳಿ ಪ್ರವಾಸಿಗರ ವಾಹನ ನಿಲ್ಲಿಸಲು ಬೃಹತ್‌ ಪಾರ್ಕಿಂಗ್‌, ದ್ವಿಪಥ ರಸ್ತೆಯ ಅಗತ್ಯವಿದೆ.

ಈ ಹಿಂದೆ ಅವಿಭಜಿತ ಜಿಲ್ಲೆಯ ಜನರನ್ನು ಸೆಳೆಯುತ್ತಿದ್ದ ಬೀಚ್‌ ಫೆಸ್ಟಿವಲ್‌ ಕೂಡ  ಖದರು ಕಳೆದುಕೊಂಡಿದೆ. ಮಲ್ಪೆಯಲ್ಲಿ ನಡೆಯುವ ಬೀಚ್‌ ಉತ್ಸವಕ್ಕೆ ಜನ ಆಕರ್ಷಿತರಾಗುತ್ತಿದೆ. ಸುಲ್ತಾನ್‌ ಬತ್ತೇರಿ, ಬೋಳೂರಿನಿಂದ ಆಕರ್ಷಕ ತೂಗು ಸೇತುವೆ ನಿರ್ಮಿಸುವ ಯೋಜನೆಯೂ ಏದುಸಿರು ಬಿಡುತ್ತಿದೆ.

ಉದ್ಯೋಗಾವಕಾಶ
ಉಳ್ಳಾಲದಿಂದ ಸುರತ್ಕಲ್‌ ಮುಕ್ಕದವರೆಗೆ ಸುಮಾರು 25 ಕಿ.ಮೀವರೆಗೆ ವ್ಯಾಪ್ತಿಯ ನಿಸರ್ಗದತ್ತ ಕಡಲತೀರವಿದ್ದರೂ ಇದರಲ್ಲಿ ಹೆಚ್ಚಿನ ಭೂಮಿ ಕಂದಾಯ ಇಲಾಖೆ, ಖಾಸಗೀ ಒಡೆತನವನ್ನು ಹೊಂದಿದೆ. ಇದು ಕೂಡ ಅಭಿವೃದ್ಧಿಗೆ ಅಡ್ಡಿಯಾಗಿದೆ. ಸರಕಾರ ದಿಟ್ಟ ಹೆಜ್ಜೆಯನ್ನಿಟ್ಟು ಬೀಚ್‌ ಅಭಿವೃದ್ಧಿಗೆ ಮುಂದಾದರೆ ಪ್ರವಾಸೋದ್ಯಮ ವೃದ್ಧಿ ಜತೆಗೆ ಸಾವಿರಾರು ಉದ್ಯೋಗಾವಕಾಶಗಳು ತೆರೆದುಕೊಳ್ಳಲಿದೆ ಎನ್ನುವುದು ಸಾಮಾಜಿಕ ಕಾರ್ಯಕರ್ತ ಯೋಗೀಶ್‌ ಸನಿಲ್‌ ಅವರ ಅನಿಸಿಕೆ.

ನನ್ನ ಕ್ಷೇತ್ರದಲ್ಲಿ ಬೀಚ್‌ ಪ್ರವಾಸೋದ್ಯಮವನ್ನು ಆದಾಯ ಗಳಿಸುವ ಕ್ಷೇತ್ರವಾಗಿ ಮಾಡಬೇಕೆಂಬ ಯೋಜನೆ ಯಿತ್ತು. ಪ್ರಾಥಮಿಕವಾಗಿ ಹಲವು ಯೋಜನೆ ರೂಪಿಸಿದ್ದರೂ ಹಿನ್ನಡೆ ಕಂಡಿದೆ. ಸರಕಾರದ ಮಟ್ಟದಲ್ಲಿ ಆರ್ಥಿಕ ಸಹಕಾರ ಸಿಗದೆ ಯೋಜನೆ ಕಾರ್ಯಗತಗೊಳ್ಳಲು ಅಸಾಧ್ಯ.
-ಡಾ| ಭರತ್‌ ಶೆಟ್ಟಿ ವೈ, ಶಾಸಕರು -ಮಂಗಳೂರು ಉತ್ತರ

-ಲಕ್ಷ್ಮೀ ನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next