Advertisement

ನೀರಿನ ಸಮಸ್ಯೆಯಾಗದಂತೆ ಸ್ಪಂದಿಸಿ

01:21 PM Mar 07, 2020 | Team Udayavani |

ಸುರಪುರ: ಕುಡಿಯುವ ನೀರು, ನರೇಗಾ, ಮನೆಗಳ ನಿರ್ಮಾಣ, ಶೌಚಾಯಲ, ರಸ್ತೆ, ವಿದ್ಯುತ್‌ ಸಮಸ್ಯೆ ಸೇರಿದಂತೆ ಪ್ರಮುಖ ವಿಷಯಗಳ ಚರ್ಚೆಗೆ ವೇದಿಕೆಯಾಗಬೇಕಿದ್ದ ತಾಪಂ ಸಾಮಾನ್ಯ ಸಭೆ ಕಾಟಾಚಾರಕ್ಕೆ ಎನ್ನುವಂತೆ ನಡೆಯಿತು.

Advertisement

ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಶಾರದಾ ಬೇವಿನಾಳ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಪ್ರಮುಖ ವಿಷಯಗಳ ಕುರಿತು ಚರ್ಚೆ ಕಂಡು ಬರಲಿಲ್ಲ. ಬೇಸಿಗೆ ಆರಂಭವಾಗುತ್ತಿದ್ದು, ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಕಾರಣ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಲ ಸದಸ್ಯರು ಒತ್ತಾಯಿಸಿದ್ದು ಬಿಟ್ಟರೆ ಗಂಭೀರ ಚರ್ಚೆ ನಡೆಯಲಿಲ್ಲ.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಹಣಮಂತಪ್ಪ ಅಂಬ್ಲಿ ಇಲಾಖೆ ಪ್ರಗತಿ ಓದಲು ಮುಂದಾಗುತ್ತಿದ್ದಂತೆ ನಿಮ್ಮ ಸುಳ್ಳು ಮಾಹಿತಿ ಕೇಳಿ ಸಾಕಾಗಿ ಹೋಗಿದೆ. ಅವಧಿ ಮುಗಿಯುತ್ತಾ ಬಂದಿದ್ದರೂ ಒಂದು ಕೆಲಸ ಕೂಡ ಸರಿಯಾಗಿ ಮಾಡಲಿಲ್ಲ. ಬರೀ ಸುಳ್ಳು ಹೇಳುವುದು ಬಿಟ್ಟರೆ ಇನ್ನೇನು ಮಾಡಲಿಲ್ಲ. ನಿಮ್ಮ ಕಾರ್ಯವೈಖರಿ ತೃಪ್ತಿದಾಯಕವಾಗಿಲ್ಲ ಎಂದು ಕಿರದಳ್ಳಿ ಸದಸ್ಯ ಕವಿತಾ ಹೆಗೇರಿ ಆಕ್ಷೇಪಿಸಿದರು.

ಇದಕ್ಕೆ ಎಲ್ಲಾ ಸದಸ್ಯರು ಪಕ್ಷಾತೀತವಾಗಿ ದೂರಿದರು. ಬೇಸಿಗೆ ಪ್ರಾರಂಭವಾಗಿದ್ದು, ಮುಂಜಾಗ್ರತ ಕ್ರಮವಾಗಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕು. ಒಟ್ಟಾರೆ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸರ್ವ ಸದಸ್ಯರು ಸೂಚಿಸಿದರು.

ಎಇಇ ಹಣಮಂತ ಅಂಬ್ಲಿ ಪ್ರತಿಕ್ರಿಯಿಸಿ, ತಾಲೂಕಿನ ತಳಳ್ಳಿ, ಯಕ್ತಾಪುರ, ನಗನೂರು, ಶ್ರೀನಿವಾಸಪುರ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಕ್ಷೇತ್ರದಲ್ಲಿ 108 ಆರ್‌ಒ ಪ್ಲಾಂಟ್‌ಗಳಿದ್ದು, 68 ಕಾರ್ಯ ನಿರ್ವಹಿಸುತ್ತಿವೆ. 34 ಬಂದಾಗಿವೆ. ಟಾಸ್ಕ್ಪೋರ್ಸ್‌ ಸಮಿತಿ ಮೂಲಕ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Advertisement

ತಾಲೂಕು ಆರೋಗ್ಯಾಧಿಕಾರಿ ಡಾ|
ಆರ್‌.ವಿ. ನಾಯಕ ಮಾತನಾಡಿ, ಈ ವರ್ಷ ಕುಷ್ಠ ರೋಗದ 8 ಪ್ರಕರಣಗಳು ಕಂಡು ಬಂದಿವೆ. ಶೇ. 95ರಷ್ಟು ಡಿಇಸಿ ಮಾತ್ರೆಗಳನ್ನು ವಿತರಿಸಲಾಗಿದೆ. 289 ಜನರಲ್ಲಿ ಕ್ಷಯ ರೋಗ ಪತ್ತೆಯಾಗಿದೆ. ಎಚ್‌1ಎನ್‌-1 ಪ್ರಕರಣ ಮತ್ತು 12 ಜನರಿಗೆ ಡೆಂಘೀ, 23 ಜನರಿಗೆ ಚಿಕೂನ್‌ ಗುನ್ಯಾ ಕಂಡು ಬಂದಿದ್ದು, 256 ಜನರಿಗೆ ನಾಯಿ, 72 ಜನರಿಗೆ ಹಾವು ಕಚ್ಚಿದ ಪ್ರಕರಣಗಳು ನಡೆದಿವೆ ಎಂದು ತಿಳಿಸಿದರು.

ಕೆಂಭಾವಿ, ಕೊಡೇಕಲ್‌ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಸಮುದಾಯ ಆರೋಗ್ಯಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಕಟ್ಟಡ ಕಾಮಗಾರಿ ನಡೆದಿದ್ದು, ಶೀಘ್ರದಲ್ಲಿಯೇ ಮುಗಿಯಲಿವೆ. ನಾರಾಯಣಪುರ, ದೇವಾಪುರ, ರುಕ್ಮಾಪುರ ಗ್ರಾಮಗಳಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಈ ವರ್ಷ ಮಂಜೂರಾಗುವ ಸಾಧ್ಯವಿದೆ. ತಿಂಥಣಿ, ಹೆಗ್ಗಣದೊಡ್ಡಿ, ಮುದ್ನೂರು ಬಿ ಗ್ರಾಮಗಳಿಗೂ ಪ್ರಸ್ತಾವನೆ ಹೋಗಿದೆ. ಬೇಸಿಗೆ ಆರಂಭವಾಗಿದ್ದು, ವಾಂತಿ-ಭೇದಿ ಪ್ರಕರಣಗಳು ಶುರುವಾಗುತ್ತವೆ. ಮುಂಜಾಗ್ರತೆ ಕ್ರಮವಾಗಿ ಗ್ರಾಮಗಳಲ್ಲಿ ಹೊಡೆದ ಪೈಪ್‌ ಲೈನ್‌ಗಳನ್ನು ದುರಸ್ತಿ ಮಾಡಿಸಬೇಕು. ಡೆಂಘೀ, ಚಿಕೂನ್‌ ಗುನ್ಯಾ ತಡೆಗೆ ಸ್ವಚ್ಛತೆ ಕೈಗೊಳ್ಳಬೇಕು. ಫಾಗಿಂಗ್‌ ಮಾಡಿಸಬೇಕು. ಕೊರೊನಾ ವೈರಸ್‌ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಯಲ್ಲಿ ಪ್ರತೇಕ ವಾರ್ಡ್‌ ಸ್ಥಾಪಿಸಲಾಗಿದ್ದು, 10 ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಬಿಇಒ ನಾಗರತ್ನಾ ಓಲೇಕಾರ, ಕೃಷಿ ಅಧಿಕಾರಿ ದಾನಪ್ಪ ಕತ್ನಳ್ಳಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತ್ಯನಾರಾಯಣ ದರಬಾರಿ, ಸಿಡಿಪಿಒ ಲಾಲಸಾಬ್‌ ಪೀರಾಪುರ, ಬಿಸಿಎಂ ಅಧಿಕಾರಿ ಬಾಬು ಮಾಹಿತಿ ನೀಡಿದರು.

ತಾಪಂ ಅಧ್ಯಕ್ಷೆ ಶಾರದಾ ಭೀಮಣ್ಣ ಬೇವಿನಾಳ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಂಜುಳಾ ಸಾಹೇಬಗೌಡ, ತಾಪಂ ಇಒ ಅಮರೇಶ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next