Advertisement

ಎಕರೆಗೆ 20 ಸಾವಿರ ರೂ. ಪರಿಹಾರ ನೀಡಲು ಒತ್ತಾಯ

05:43 PM Aug 09, 2019 | Team Udayavani |

ಸುರಪುರ: ನೆರೆ ಪ್ರವಾಹದಿಂದ ನಷ್ಟವಾಗಿರುವ ಬೆಳೆ ಸರ್ವೆ ಮಾಡಿಸಿ ಸರಕಾರ ಸೂಕ್ತ ಪರಿಹಾರ ಒದಗಿಸಬೇಕು. ಪ್ರತಿ ಎಕರೆಗೆ 20 ಸಾವಿರದಂತೆ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಸಂಘಟನಾ ಕಾರ್ಯದರ್ಶಿ ಅಣ್ಣಪ್ಪಗೌಡ ದೇಸಾಯಿ ಆಗ್ರಹಿಸಿದರು.

Advertisement

ನಗರದ ಟೇಲರ್‌ ಮಂಜಲ್ನಲ್ಲಿ ನಡೆದ ರೈತ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ನಿರಂತವಾಗಿ ಸುರಿಯುತ್ತಿರುವ ಮಳೆಯಿಂದ ಉತ್ತರ ಕರ್ನಾಟಕದ ಐದು ಜಿಲೆಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ನೆರೆ ಹಾವಳಿಯಿಂದ ಬೆಳಗಾವಿ, ವಿಜಯಪುರ, ಧಾರವಾಡ, ಬಾಗಲಕೋಟೆ, ಯಾದಗಿರಿ ಜಿಲ್ಲೆಯ ನದಿ ತೀರದ ಬಹುತೇಕ ಜಮೀನುಗಳು ಸಂಪೂರ್ಣ ಜಲಾವೃತವಾಗಿದೆ. ಪ್ರತಿ ಜಿಲ್ಲೆಯಲ್ಲಿ ಕೋಟ್ಯಂತರ ರೂ. ಬೆಳೆ ನಷ್ಟವಾಗಿದೆ. ಆದರೆ ಸರಕಾರ ಕೇವಲ 20 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿರುವುದು ನಾಚಿಗೇಡಿನ ಸಂಗತಿ ಎಂದು ಹರಿಹಾಯ್ದರು.

ಈಗಾಗಲೇ ರಾಜ್ಯದ ನೆರೆ ಪೀಡಿತ ಐದು ಜಿಲ್ಲೆಗಳಲ್ಲಿ ಸಂಚರಿಸಿದ್ದೇವೆ. ಯಾದಗಿರಿ, ರಾಯಚೂರು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಈ ಭಾಗದ ರೈತರಿಗೆ ಒಂದೆಡೆ ಪ್ರವಾಹಕ್ಕೆ ತುತ್ತಾದರೆ ಇನ್ನೊಂದೆಡೆ ಮಳೆ ಇಲ್ಲದೆ ಬರಗಾಲ ಆವರಿಸಿ ಒಣ ಬರದಿಂದ ನಷ್ಟ ಅನುಭವಿಸಿದ್ದಾರೆ. ಕಾರಣ ಸರಕಾರ ಕೂಡಲೇ ಈ ಐದು ಜಿಲ್ಲೆಗಳಿಗೆ ಬರಗಾಲ ಘೋಷಣೆ ಮಾಡಬೇಕು. ಮುಖ್ಯಮಂತ್ರಿಗಳು ಕೇವಲ ವೈಮಾನಿಕ ಸಮೀಕ್ಷೆ ಮಾಡಿದರೆ ಸಾಲದು. ವಾಸ್ತವ ಸಂಗತಿ ಅರಿಯಲು ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸುಮತಿಶ್ರೀ ನವಲಿ ಮಾತನಾಡಿ, ಉತ್ತರ ಕರ್ನಾಟಕ ಭಾಗದ ರೈತರು ಕಳೆದ ಎರಡ್ಮೂರು ವರ್ಷಗಳಿಂದ ಬರಗಾಲದಿಂದ ನಲುಗಿ ಹೋಗಿದ್ದಾರೆ. ಈಗ ಮತ್ತೆ ಪ್ರವಾಹಕ್ಕೆ ತುತ್ತಾಗಿ ಅಪಾರ ಪ್ರಮಾಣದಲ್ಲಿ ನಷ್ಟು ಅನುಭವಿಸಿದ್ದಾರೆ. ಬೆಳಗಾವಿ, ಬಾಗಲಕೋಟೆ ನಿಪ್ಪಾಣಿ. ಕಲಘಟಗಿ, ಆಲಗೂರ ಗ್ರಾಮಗಳ ರೈತರ ಬದುಕು ಅಕ್ಷರಶಃ ನರಕ ಸದೃಶ್ಯವಾಗಿದೆ. ಕೂಡಲೇ ಸರಕಾರ ರೈತರ ನೆರವಿಗೆ ಬರಬೇಕು. ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಬಾಗಲಕೋಟೆ ಜಿಲ್ಲೆ ಗಂಜಿ ಕೇಂದ್ರಗಳಲ್ಲಿ ಊಟ, ವಸತಿ ಬಿಟ್ಟರೆ ಜಿಲ್ಲಾಡಳಿತ ಸಂತ್ರಸ್ತರಿಗೆ ಯಾವೊಂದು ಸೌಲಭ್ಯ ನೀಡಿಲ್ಲ. ಸಂತ್ರಸ್ತರ ಪಶುಗಳಿಗೆ ಸಮರ್ಪಕ ಮೇವು ವಿತರಣೆೆ ಮಾಡಿಲ್ಲ ಎಂದು ಆರೋಪಿಸಿದರು.

Advertisement

ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿ ಮಾತನಾಡಿ, ಜಲಾಶಯ ಸಾಕಷ್ಟು ಭರ್ತಿಯಾಗಿದೆ. ಡ್ಯಾಂ ಅಧಿಕಾರಿ ಮತ್ತು ನೀರಾವಾರಿ ಸಮಿತಿ ಆಡಳಿತ ಮಂಡಳಿಯವರು ಈಗಲೇ ಎಚ್ಚೆತ್ತುಕೊಳ್ಳಬೇಕು. ವ್ಯರ್ಥವಾಗಿ ನೀರು ನದಿಗೆ ಹರಿಬಿಡದೆ ಎರಡು ಬೆಳೆಗಾಗುವಷ್ಟು ಉಳಿಸಿಕೊಂಡು ರೈತರಿಗೆ ಈ ವರ್ಷ ಎರಡು ಬೆಳೆಗೆ ಕೊಡಬೇಕು. ಕೆರೆ ತುಂಬುವ ಯೋಜನೆ ಅನುಷ್ಠಾನಕ್ಕೆ ತಂದು ಹೆಚ್ಚುವರಿ ನೀರನ್ನು ಕಾಲುವೆ ಹರಿಸಿ ಕೆರೆ ತುಂಬಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಧಾರವಾಡ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಮ್ಮ ಹೆಬಸೂರ, ವಿಜಯಲಕ್ಷ್ಮೀ ಕುಲಗೋಡ, ಕಸ್ತೂರಿ ಹಂಚಿನಾಳ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶರಣ ಸಾಹು ರುಕ್ಮಾಪುರ, ಹಣಮಂತ್ರಾಯ ಮಡಿವಾಳರ್‌, ವೆಂಕಟೇಶ ಕುಪಗಲ್, ಆದಪ್ಪ ಕುಂಬಾರ, ಲಕ್ಷ್ಮೀಕಾಂತ ನಾಯಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next