Advertisement

ಜನಾಕರ್ಷಿಸಿದ ಗ್ರಂಥಾಲಯ

03:34 PM Oct 23, 2019 | Naveen |

ಸುರಪುರ: ಜ್ಞಾನಾರ್ಜನೆಯ ದೇಗುಲಗಳೆಂದು ಕರೆಯಲ್ಪಡುವ ಗ್ರಂಥಾಲಯಗಳು ಜಿಲ್ಲೆಯಲ್ಲಿ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿದ್ದರೆ ಇದಕ್ಕೆ ಅಪವಾದ ಎಂಬಂತೆ ನಗರದ ನಗರಸಭೆ ಪಕ್ಕದಲ್ಲಿರುವ ಗ್ರಂಥಾಲಯ ಸುಸಜ್ಜಿತ ಕಟ್ಟಡದೊಂದಿಗೆ ಹೆಚ್ಚು ಓದುಗರನ್ನು ಹೊಂದಿದ್ದು, ಯುವ ಸಮುದಾಯ ಆಕರ್ಷಿಸುತ್ತಿದೆ.

Advertisement

1981ರಲ್ಲಿ ಸ್ಥಾಪಿತವಾದ ಗ್ರಂಥಾಲಯ ಮೊದಲು ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ಆರಂಭಿಸಲಾಗಿತ್ತು. 1991-92ರಲ್ಲಿ ರಾಜ್ಯ ಸರಕಾರ ಸ್ವಂತ ಕಟ್ಟಡಕ್ಕೆ ಅನುದಾನ ಒದಗಿಸಿತ್ತು.

1993ರಲ್ಲಿ ಗ್ರಂಥಾಲಯವನ್ನು ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಲಾಯಿತು. ನೂತನ ಕಟ್ಟಡ ನಿರ್ಮಾಣವಾದ ಬಳಿಕ ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿಸಿತು.

ಅಪಾರ ಪುಸ್ತಕಗಳು: ನಗರದ ಗ್ರಂಥಾಲಯದಲ್ಲಿ ಐತಿಹಾಸಿಕ ಗ್ರಂಥಗಳು, ಸಂಶೋಧನಾತ್ಮಕ ಕೃತಿ, ಕಾದಂಬರಿ, ಕಥೆ, ಕವನ, ವಿಮಶಾìತ್ಮಕ ಕೃತಿಗಳು, ದಾರ್ಶಿನಿಕರ, ಮಹಾತ್ಮರ, ಹೋರಾಟಗಾರರ ಜೀವನ ಚರಿತ್ರೆಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪುಸ್ತಕಗಳು ಸೇರಿದಂತೆ ಸುಮಾರು 23 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಹೊಂದಿದೆ.

ಸದಸ್ಯತ್ವ: ಹಿಂದೆ ಸದಸ್ಯರ ಸಂಖ್ಯೆ ಕಡಿಮೆ ಇತ್ತು. ಇತ್ತೀಚಿನ ದಿನಗಳಲ್ಲಿ ಸದಸ್ಯರ ಸಂಖ್ಯೆ ದ್ವಿಗುಣಗೊಂಡಿದೆ. ಪ್ರಸಕ್ತ 1,684 ನೋಂದಣಿ ಮಾಡಿಕೊಳ್ಳಲಾಗಿದೆ. ದಿನವೊಂದಕ್ಕೆ ಕನಿಷ್ಠ 150ರಿಂದ 200 ಜನ ಪುಸ್ತಕಗಳನ್ನು ಓದಲು ಎರವಲು ಪಡೆದು ತೆಗೆದುಕೊಂಡು ಹೋಗುತ್ತಾರೆ. ಪ್ರತಿ 15 ದಿನಗಳಿಗೊಮ್ಮೆ ಪುಸ್ತಕ ಮರಳಿಸಿ ಬೇರೆ ಪುಸ್ತಕಗಳನ್ನು ಕೊಂಡೊಯ್ಯುವ ನಿಯಮ ಜಾರಿಯಲ್ಲಿದೆ.

Advertisement

ಕಾಲಕ್ಕೆ ತಕ್ಕಂತೆ ಶುಲ್ಕ ಹೆಚ್ಚಳ: ಆರಂಭದಲ್ಲಿ ಸದಸ್ಯತ್ವದ ಶುಲ್ಕ ಕೇವಲ 15 ರಿಂದ 20 ರೂ. ಇತ್ತು. ಕಳೆದ ಕೆಲ ವರ್ಷಗಳ ಹಿಂದೆ ಇದನ್ನು 50 ರಿಂದ 100 ರೂ.ಗೆ ಏರಿಕೆ ಮಾಡಲಾಗಿತ್ತು. ಸರಕಾರದ ನಿರ್ದೇಶನದಂತೆ ಇತ್ತೀಚೆಗೆ 100 ರಿಂದ 200 ರೂ. ಹೆಚ್ಚಿಸಲಾಗಿದೆ. ಸ್ಪರ್ಧಾತ್ಮಕ ಪುಸ್ತಕ ಅಗತ್ಯ: ಪ್ರತಿ ಇಲಾಖೆಯ ಸರಕಾರಿ ನೌಕರಿಗೆ ಸರಕಾರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಏರ್ಪಡಿಸುತ್ತದೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದವರಿಗೆ ನೇಮಕಾತಿಯಲ್ಲಿ ಅವಕಾಶ ಸಿಗುತ್ತಿರುವುದರಿಂದ ವಿದ್ಯಾರ್ಥಿ ಸಮುದಾಯ ಸ್ಪರ್ಧಾತ್ಮಕ ಪುಸ್ತಕಗಳಿಗೆ ಅತಿ ಹೆಚ್ಚಿದೆ. ಪುಸ್ತಕ ಕೊಳ್ಳಲಾಗದ ಸ್ಥಿತಿಯಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪುಸ್ತಕಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರ ಗ್ರಂಥಾಲಯಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ಒದಗಿಸಬೇಕಿದೆ.

ಪತ್ರಿಕೆ- ನಿಯತಕಾಲಿಕೆ: ಉದಯವಾಣಿ, ಪ್ರಜಾವಾಣಿ. ವಿಜಯ ಕರ್ನಾಟಕ, ವಿಜಯವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ಡೆಕನ್‌ ಹೆರಾಲ್ಡ್‌, ಇಂಡಿಯನ್‌ ಎಕ್ಸ್‌ಪ್ರೆಸ್‌ ಮತ್ತು ಉರ್ದು ಪತ್ರಿಕೆಗಳನ್ನು ತರಿಸಲಾಗುತ್ತಿದೆ.

ಇದರ ಜೊತೆಗೆ ಸುಧಾ, ಕರ್ಮವೀರ, ನ್ಯಾಯಪಥ ನಿಯತ ಕಾಲಿಕೆಗಳು ದೊರೆಯುತ್ತಿವೆ. ವಿದ್ಯಾರ್ಥಿಗಳಿಗಾಗಿ ಉದ್ಯೋಗ ವಾರ್ತೆ, ಚಾಣಕ್ಯ, ಸ್ಪರ್ಧಾ ವಿಜೇತ, ಸ್ಪರ್ಧಾ ಸ್ಫೂರ್ತಿ, ಸ್ಟಡಿ ಪ್ಲಾನರ್‌, ಜ್ಞಾನಧಾರೆ ಸೇರಿದಂತೆ ವಿವಿಧ ಮ್ಯಾಗಜಿನ್‌ಗಳನ್ನು ತರಿಸಲಾಗುತ್ತಿದೆ.

ಶೌಚಾಲಯ ತೊಂದರೆ: ಕಟ್ಟಡ ನಿರ್ಮಿಸಿರುವ ಸರಕಾರ ಶೌಚಾಲಯ ನಿರ್ಮಾಣ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದನ್ನೇ ಮರೆತುಬಿಟ್ಟಿದೆ. ಇದರಿಂದ ಓದುಗರು ಶೌಚಕ್ಕಾಗಿ ಪರದಾಡುವಂತಾಗಿದೆ.

ಸೌರ ವಿದ್ಯುತ್‌ ಸೌಲಭ್ಯವಿಲ್ಲ: ನಗರದಲ್ಲಿ ವಿದ್ಯುತ್‌ ಲೋಡ್‌ಶೆಡ್ಡಿಂಗ್‌ ನಿಯಮ ಜಾರಿಯಲ್ಲಿರುವುದರಿಂದ ಸಂಜೆ ವಿದ್ಯುತ್‌ ಸಂಪರ್ಕ ಕಡಿತವಾಗುತ್ತದೆ. ಇದರಿಂದ ಓದುಗರಿಗೆ ಕತ್ತಲೆಯ ಅನುಭವ ಎದುರಿಸುವಂತಾಗಿದೆ. ಇದನ್ನು ನಿವಾರಿಸಲು ಸೌರ ವಿದ್ಯುತ್‌ ವ್ಯವಸ್ಥೆ ಮಾಡೋದು ಅವಶ್ಯಕವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next