Advertisement

ಕಿನ್ನಾಳ ಕಲೆಗೆ ಬೇಕಿದೆ ಪ್ರೋತ್ಸಾಹ

11:01 AM Nov 29, 2019 | Naveen |

ಸಿದ್ದಯ್ಯ ಪಾಟೀಲ
ಸುರಪುರ:
ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಹೆಚ್ಚು ಪ್ರಚಲಿತದಲ್ಲಿ ಇರುವ ಕಿನ್ನಾಳ ಕಲೆ ಅಳಿವಿನಂಚಿನಲ್ಲಿದ್ದು, ಸಂರಕ್ಷಿಸಲು ಸರ್ಕಾರದ ಪ್ರೋತ್ಸಾಹದ ಅಗತ್ಯವಿದೆ. ಈ ಮೂಲಕ ಕಿನ್ನಾಳ ಕಲೆ ಕಲಾವಿದರು, ಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಇಂದಿನ ಅವಶ್ಯವಾಗಿದೆ.

Advertisement

ದೇವರ ಪಲ್ಲಕ್ಕಿ ಮತ್ತು ಚಪ್ಪರಗಳು, ರಥಗಳ ಅಲಂಕಾರಿಕ ವಸ್ತುವಿನಲ್ಲಿ ಕಡುಬಣ್ಣದ ಬಟ್ಟೆಗಳ ಮೇಲೆ ವರ್ಣರಂಜಿತವಾಗಿ ಬಿಡಿಸುವ ಚಿತ್ರಗಳನ್ನು ಕಿನ್ನಾಳದ ಕಲೆ ಎನ್ನಲಾಗುತ್ತದೆ. ಇದನ್ನು ಈ ಹಿಂದೆ ಅರಸೊತ್ತಿಗೆ ಸಂದರ್ಭದಲ್ಲಿ ರಾಜ-ಮಹಾರಾಜರು ಬಳಸುತ್ತಿದ್ದರು. ಈಗಲೂ ದೇವರ ಕಾರ್ಯಕ್ರಮಗಳಲ್ಲಿ ಉಪಯೋಗಿಸಲಾಗುತ್ತಿದೆ. ವಿಜಯನಗರ ಸಾಮ್ರಾಜ್ಯದಲ್ಲಿ 1430ರಿಂದ 1450ರ ದಶಕದಲ್ಲಿ ಕಿನ್ನಾಳ ಕಲೆ ಹೆಚ್ಚು ಜನಪ್ರಿಯವಾಗಿತ್ತು.

ಇಲ್ಲಿನ ಕಲಾವಿದರೂ ಕಲೆ ಮೂಲಕವೇ ಜೀವನ ಕಟ್ಟಿಕೊಂಡಿದ್ದರು. ಅರಸೊತ್ತಿಗೆ ಪತನ ನಂತರ ಕಲಾವಿದರು ರಾಜ್ಯದ ವಿವಿಧ ಮೂಲೆಗಳಲ್ಲಿ ಚದುರಿ ಹೋಗಿದ್ದಾರೆ. ಆದರೂ ಅಲ್ಲಲ್ಲಿ ನೆಲೆನಿಂತ ಕಲಾವಿದರೂ ಇಂದಿಗೂ ಕಿನ್ನಾಳ ಕಲೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಇಂತಹ ಕಲಾವಿದರಲ್ಲಿ ರಂಗಂಪೇಟ ದರ್ಶನಕರ್‌ ಕುಟುಂಬವೂ ಒಂದಾಗಿದೆ.

ನೆಲೆ ನಿಂತಿರುವ ಪ್ರದೇಶಗಳು: ಕಿನ್ನಾಳ ಕಲೆ ಮೇಲೆಯೇ ಜೀವನ ಕಟ್ಟಿಕೊಂಡಿರುವ ಕಲಾವಿದರು ಕೊಪ್ಪಳ, ಬಳ್ಳಾರಿ, ಹರಪನಹಳ್ಳಿ, ಆಂಧ್ರಪದೇಶದ ಅನಂತಪುರ ಮತ್ತಿತರ ಪ್ರದೇಶಗಳಲ್ಲಿ ನೆಲೆ ನಿಂತಿದ್ದಾರೆ. ಗ್ರಾಮದೇವತೆಗಳಾದ ಮರಗೆಮ್ಮ, ದುರ್ಗಮ್ಮ, ಕೆಂಚಮ್ಮ, ಪಾಲಕಮ್ಮ, ಮಾರಮ್ಮ, ದ್ಯಾವಮ್ಮ, ಯಲ್ಲಮ್ಮ, ಚೌಡಮ್ಮ ಹೀಗೆ ಅನೇಕ ದೇವತೆಗಳಿಗೆ ಬಣ್ಣ ಮಾಡುವಾಗ ಕಲಾವಿದರು ಕಿನ್ನಾಳ ಕಲೆ ಬಳಸುತ್ತಾರೆ. ಹನಮಂತ, ಬೀರಪ್ಪ, ಕರಿದೇವರು, ಮಾರಮ್ಮ, ಮಹಾಲಿಂಗರಾಯ, ಐಯ್ನಾಳಲಿಂಗೇಶ್ವರ, ಮಲ್ಲಯ್ಯ ಸೇರಿದಂತೆ ಇತರೆ ದೇವರ ಪಲ್ಲಕ್ಕಿ ಮತ್ತು ರಥೋತ್ಸವ ಕಾರ್ಯದಲ್ಲಿ ಕಿನ್ನಾಳ ಕಲೆ ಹೆಚ್ಚು ಉಪಯೋಗಿಸಲಾಗುತ್ತದೆ. ಪಲ್ಲಕ್ಕಿ, ದೇವರ ವಿಗ್ರಹ, ಛತ್ರಿ, ಚಾಮರ, ಪಲ್ಲಕ್ಕಿ ಮೇಲೆ ಹೊದಿಸುವ ಚಪ್ಪರ, ಚೌಕಿ, ರಾಜಿಗೊಂಡೆ ಸೇರಿದಂತೆ ಇತರೆ ವರ್ಣರಂಜಿತ ಚಿತ್ತಾರಗಳನ್ನು ಬಿಡಿಸಲಾಗುತ್ತಿದೆ.

ಹಸಿರು, ಕೆಂಪು, ಹಳದಿ, ನೀಲಿ, ಕಡುಗೆಂಪು, ಸುವರ್ಣ ಬಣ್ಣ, ಬೆಳ್ಳಿ ವರ್ಣ, ಕಂದು ಸೇರಿದಂತೆ ಇತರ ಬಣ್ಣಗಳನ್ನೇ ಬಳಸಲಾಗುತ್ತದೆ. ಬಣ್ಣ ಬಳಸುವುದರಲ್ಲಿ ನೈಪುಣ್ಯತೆ: ಕಿನ್ನಾಳದ ಕಲೆಯೊಂದಿಗೆ ದೇವರ ವಿಗ್ರಹಗಳ ಬಣ್ಣ ಬಳಕೆಯಲ್ಲಿ ದರ್ಶನಕರ್‌ ಕುಟುಂಬ ನೈಪುಣ್ಯತೆ ಪಡೆದಿದೆ. ಹೊಸ ವಿಗ್ರಹಗಳಿಗೆ ಹಳದಿ ಮತ್ತು ಕೆಂಪು ಬಣ್ಣ ಹೆಚ್ಚಾಗಿ ಬಳಸಲಾಗುತ್ತದೆ. ಇದು ಬಹುಕಾಲ ಬಾಳಕೆ ಬರುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.

Advertisement

ತಯಾರಿಸುವ ರೀತಿ: ಮಕಮಲ್‌(ವೆಲ್‌ವೇಟ್‌) ಬಟ್ಟೆ, ಚೀನಾ ರೇಷ್ಮೆ, ಜರತಾರಿ ಬಟ್ಟೆಗಳ ಮೇಲೆ ಕಿನ್ನಾಳ ಕಲೆ ಬಿಡಿಸಲಾಗುತ್ತದೆ. ಪಲ್ಲಕ್ಕಿ, ಚೌಕಿ, ದೇವರ ವಿಗ್ರಹದ ಮಂಟಪಗಳಿಗೆ ಸಾಗವಾನಿ, ನೆಲಮದ್ದಿ, ಮಲೇಗನ್‌, ನೀಲಗಿರಿ, ಭಜ್ಜಿ ಕಟ್ಟಿಗೆಯಿಂದ ಸಿದ್ಧಪಡಿಸಲಾಗುತ್ತದೆ.

ಕಚ್ಚಾ ಸಾಮಗ್ರಿಗಳು: ಛತ್ರಿ, ಚಾಮರ, ಛಪ್ಪರ, ಗೊಂಡೆ, ರಾಜಗೊಂಡೆಗಳ ತಯಾರಿಕೆಗಾಗಿ ಕಚ್ಚಾ ಸಾಮಾಗ್ರಿಗಳನ್ನು ಹೈದರಬಾದ್‌, ಹೊಸಪೇಟೆ, ವಿಜಯಪುರ, ಆಂಧ್ರದ ಅನಂತಪುರದಿಂದ ತರಲಾಗುತ್ತದೆ. ವೆಲ್‌ ವೇಟ್‌, ಚೀನಾ ರೇಷ್ಮೆ, ಜರತಾರಿ ಬಟ್ಟೆಗಳ ಮೇಲೆ ಕೈಯಿಂದಲೇ ಕಸೂತಿ ಕೆಲಸದಿಂದ ಆಕರ್ಷಕವಾಗಿ ಚಿತ್ರಗಳನ್ನು ನೇಯಲಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಿನ್ನಾಳ ಕಲೆ ಉಪಯೋಗಿಸುತ್ತಿರುವುದು ದರ್ಶನಕರ ಏಕೈಕ ಕಟುಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೀದರ, ಕಲಬುರಗಿ, ರಾಯಚೂರು, ವಿಜಯಪುರ ಸೇರಿದಂತೆ ರಾಜ್ಯ ಹಾಗೂ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಅನೇಕ ಭಕ್ತರು ಆಗಮಿಸಿ ದೇವರ ಪಲ್ಲಕ್ಕಿ, ಛತ್ರಿ, ಚಾಮರ, ಗೊಂಡೆ, ರಾಜಗೊಂಡೆ, ಜಗಜಂಪಗಳನ್ನು ಮಾಡಿಸಿಕೊಂಡು ಹೋಗುತ್ತಾರೆ ಎನ್ನುತ್ತಾರೆ ಕಲಾವಿದ ವೆಂಕೋಬ ದರ್ಶನಕರ.

Advertisement

Udayavani is now on Telegram. Click here to join our channel and stay updated with the latest news.

Next