Advertisement

ನೆರೆ ಸಂತ್ರಸ್ತರ ಬದುಕು ಮೂರಾಬಟ್ಟೆ

11:16 AM Aug 19, 2019 | Naveen |

ಸಿದ್ದಯ್ಯ ಪಾಟೀಲ
ಸುರಪುರ:
ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 6.80 ಲಕ್ಷ ಕ್ಯೂಸೆಕ್‌ ನೀರು ಹರಿಬಿಟ್ಟರುವುದು ಇತಿಹಾಸದಲ್ಲಿಯೇ ಮೊದಲು. ಸುಮಾರು 10ರಿಂದ 12 ದಿನಗಳಿಗೂ ಹೆಚ್ಚು ಮೈದುಂಬಿ ಹರಿದ ಕೃಷ್ಣಾ ನದಿ ನೀರಿಗೆ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಹಲವಾರು ಅವಾಂತರಗಳು ಸೃಷ್ಟಿಯಾಗಿದೆ.

Advertisement

ನೆರೆ ಹೊಡೆತಕ್ಕೆ ಸುಮಾರು 10 ಸಾವಿರ ಹೆಕ್ಟೇರ್‌ ಜಮೀನುಗಳಲ್ಲಿ ನೀರು ನುಗ್ಗಿ ಕೋಟ್ಯಂತರ ರೂ. ಬೆಳೆ ನಷ್ಟವಾಗಿದೆ. ಇದರಿಂದ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾದರೆ ಮತ್ತೂಂದೆಡೆ ನದಿ ಪಾತ್ರದ ರಸ್ತೆಗಳು ಸಂಪೂರ್ಣ ಕಿತ್ತು ಹೋಗಿ ಸಂಚಾರಕ್ಕೆ ಆಪತ್ತು ತಂದೊಡ್ಡಿದೆ.

ಹೊಲದಲ್ಲಿ ಕಾಣದಾದ ಬೆಳೆಗಳು: ಹೊಲ, ಗದ್ದೆಗಳಲ್ಲಿ ನಾಟಿ ಮಾಡಿದ್ದ ಭತ್ತದ ಸಸಿ, ಶೇಂಗಾ, ಹತ್ತಿ, ತೊಗರಿ, ಸೂರ್ಯಕಾಂತಿ, ಮೆಣಸಿನಕಾಯಿ, ಸಜ್ಜಿ ಸೇರಿದಂತೆ ಇತರೆ ಬೆಳೆಗಳು ಹರಿಯುವ ನೀರಿನ ರಭಸಕ್ಕೆ ಕಿತ್ತು ಹೋಗಿವೆ. ಬೆಳಗಳಿಲ್ಲದೆ ಹೊಲಗಳು ಪಾಳು ಭೂಮಿಯಂತೆ ಗೋಚರಿಸುತ್ತಿವೆ.

ಜೆಸ್ಕಾಂಗೆ ಅಪಾರ ನಷ್ಟ: ಪ್ರವಾಹದ ಹೊಡೆತಕ್ಕೆ ಜೆಸ್ಕಾಂ ಇಲಾಖೆಗೆ ಅಪಾರ ನಷ್ಟು ಉಂಟಾಗಿದೆ. ನದಿ ತಟದಲ್ಲಿ 500ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ನೀರಿನ ಕೊರೆತಕ್ಕೆ ಉರುಳಿ ಬಿದ್ದಿವೆ. 200ಕ್ಕೂ ಹೆಚ್ಚು (ಟಿ.ಸಿ.) ವಿದ್ಯುತ್‌ ಪರಿವರ್ತಕಗಳು ಕೆಟ್ಟು ಹೋಗಿವೆ. ಇದರಲ್ಲಿ ಶೆಳ್ಳಗಿ ಗ್ರಾಮ ವ್ಯಾಪ್ತಿವೊಂದರಲ್ಲಿ 160 ಟಿಸಿಗಳು ಸುಟ್ಟು ಹೋಗಿವೆ.

ಪಂಪ್‌ಸೆಟ್ ನೀರಪಾಲು: ಜಮೀನುಗಳಲ್ಲಿ ಹಾಕಿಕೊಂಡಿದ್ದ ಪಂಪ್‌ಸೆಟ್‌ಗಳು ಸಂಪೂರ್ಣ ನಾಶವಾಗಿವೆ. ನದಿ ದಂಡೆಯಲ್ಲಿದ್ದ ನೀರೆತ್ತುವ ಮೋಟಾರ ಪುಟ್ಬಾಲ್ಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ಇದರಿಂದ ವಿವಿಧ ಗ್ರಾಮಗಳಲ್ಲಿ ವಿದ್ಯುತ್‌ ಸ್ಥಗಿತಗೊಂಡಿದ್ದು, ಕತ್ತಲಲ್ಲೇ ದಿನನೂಕು ವಂತಾಗಿದೆ. ಅಧಿಕಾರಿಗಳು ನೀರು ಇಳಿಮುಖವಾಗುವುದನ್ನು ಕಾಯುತ್ತಿದ್ದು, ವಿದ್ಯುತ್‌ ಒದಗಿಸಲು ಶತಪ್ರಯತ್ನ ನಡೆಸಿದ್ದಾರೆ.

Advertisement

ಮಲಗಿದ ಬೆಳೆಗಳು: ಪ್ರವಾಹವು ನದಿ ಪಾತ್ರದ ಸಮೀಪದ ತಮ್ಮ ಹೊಲ ಗದ್ದೆಗಳಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಿ ಹಾಕಿದ್ದ ಬೆಳೆಗಳನ್ನು ಅಡ್ಡಡ್ಡ ಮಲಗಿಸಿ ಹೋಗಿದೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ಬಿತ್ತನೆಗಾಗಿ ಮಾಡಿದ ಸಾಲ ಹೇಗೆ ತೀರಿಸೋದು ಎಂಬ ಆಲೋಚನೆಯಲ್ಲಿ ರೈತರಿದ್ದಾರೆ.

ಮುಳಗಿದ ಪಂಪಹೌಸ್‌: ಕೃಷ್ಣಾ ನದಿ ಪ್ರವಾಹ ಇಳಿಮುಖವಾಗಿದ್ದರೂ ನದಿ ಹರಿವು ಯಥಾ ಸ್ಥಿತಿಯಿದ್ದು, ಸುರಪುರ ನಗರಕ್ಕೆ ಕುಡಿಯುವ ನೀರು ಪೂರೈಸುವ ಪಂಪ್‌ಹೌಸ್‌ ಇನ್ನೂ ನೀರಿನಲ್ಲಿಯೇ ಮುಳುಗಿದೆ. ಹೀಗಾಗಿ ನಗರದ ನೀರು ಸರಬರಾಜು ಇನ್ನೂ ಆರಂಭಗೊಂಡಿಲ್ಲ. ಹರಿವು ಇಳಿಮುಖವಾಗಿ ಪಂಪ್‌ಹೌಸ್‌ ಆರಂಭಿಸಲು ಇನ್ನೂ ಒಂದಿಷ್ಟು ದಿನಗಳು ಬೇಕಾಗುತ್ತವೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಸರ್ವೇ ವಿಳಂಬ: ಶೆಳ್ಳಗಿಯ ಕೃಷ್ಣೆ ತಟದಲ್ಲಿದ್ದ ಮಾರುತಿ ಮಂಟಪ ಪ್ರವಾಹದಿಂದ ಮುಕ್ತವಾಗಿದ್ದು, ಗುಡಿಯೊಳಗೆ ಸಾಕಷ್ಟು ಪ್ರಮಾಣದಲ್ಲಿ ಮಣ್ಣು ಸೇರಿಕೊಂಡಿದೆ. ಪ್ರವಾಹದಿಂದ ಆದ ಹಾನಿ ಮಾಹಿತಿ ಇನ್ನೂ ಸಿಗುತ್ತಿಲ್ಲ. ಪ್ರವಾಹ ಇಳಿದ ಮೇಲೆಯೇ ಹಾನಿಯ ಸರ್ವೇ ಸಾಧ್ಯವಾಗುತ್ತದೆ ಎನ್ನಲಾಗುತ್ತಿದೆ. ನೆರೆ ಸಂತ್ರಸ್ತರು ಮತ್ತೆ ಬದುಕು ಕಟ್ಟಿಕೊಳ್ಳಲು ವಿವಿಧ ತಾಪತ್ರೆಗಳನ್ನು ಅನುಭವಿಸುವ ಸ್ಥಿತಿ ಉದ್ಭವಿಸಿದೆ. ಪ್ರವಾಹ ನಿಂತರೂ ಸಂತ್ರಸ್ತರ ಸಂಕಟಕ್ಕೆ ಕೊನೆಯಿಲ್ಲವಾಗಿದೆ.

ಬೆಳೆ ಹಾನಿ, ರಸ್ತೆ, ಮನೆಗಳ ಸಮಗ್ರ ಸಮೀಕ್ಷೆ ನಡೆಸಿ ಪೂರ್ಣ ಹಾನಿಯ ಚಿತ್ರಣ ಸಿಗಬೇಕಾದರೆ ಇನ್ನೊಂದು ವಾರ ಬೇಕಾಗುತ್ತದೆ. ಹೀಗಾಗಿ ಸರ್ವೇ ಕಾರ್ಯ ವಿಳಂಬವಾಗಲಿದೆ.
ಸುರೇಶ ಅಂಕಲಗಿ,
 ತಹಶೀಲ್ದಾರ್‌ ಸುರಪುರ

ಪ್ರವಾಹ ನುಗ್ಗಿದ ಕಡೆಗಳಲ್ಲಿ ನೀರು ಮಿಶ್ರಿತ ರಾಡಿ ಮಣ್ಣನ್ನು ತನ್ನ ಅವಶೇಷವಾಗಿ ಬಿಟ್ಟು ಹೋಗಿದೆ. ಮಣ್ಣು ಮಿಶ್ರಿತ ಕೊಳಚೆಯಿಂದಾಗಿ ನದಿ ತೀರದ ಜನರು ಸಾಂಕ್ರಾಮಿಕ ರೋಗದ ಭೀತಿಗೆ ಒಳಗಾಗಿದ್ದಾರೆ.
ಶರಣಪ್ಪ, ಶೆಳ್ಳಗಿ ಗ್ರಾಮಸ್ಥ

Advertisement

Udayavani is now on Telegram. Click here to join our channel and stay updated with the latest news.

Next