Advertisement

ಕಲಬುರಗಿ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಸೇನಾನಿ ಹೆಸರಿಡಿ

04:42 PM Jan 20, 2020 | Naveen |

ಸುರಪುರ: ಕಲಬುರಗಿ ವಿಮಾನ ನಿಲ್ದಾಣಕ್ಕೆ ಸುರಪುರ ಸಂಸ್ಥಾನದ ಸ್ವಾತಂತ್ರ್ಯ  ಸೇನಾನಿ ರಾಜಾ ನಾಲ್ವಡಿ ವೆಂಕಟಪ್ಪ ನಾಯಕರ ಹೆಸರಿಡಬೇಕು ಎಂದು ಸುಪ್ರೀಂಕೋರ್ಟ್‌ ಖ್ಯಾತ ವಕೀಲ ರಾಜಾ ವೆಂಕಟಪ್ಪ ನಾಯಕ ಒತ್ತಾಯಿಸಿದರು.

Advertisement

ನಗರದ ಅರಮನೆ ಕನ್ನಡಿ ಮಹಲ್‌ನಲ್ಲಿ ಸಂಸ್ಥಾನದ ವತಿಯಿಂದ ರವಿವಾರ ಹಮ್ಮಿ ಕೊಂಡಿದ್ದ ಸುರಪುರ ಸಂಸ್ಥಾನ ಹಾಗೂ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದ ನೇತೃತ್ವ ವಹಿಸಿದ್ದರು.

ಪ್ರೌಢಾವಸ್ಥೆಯಲ್ಲಿಯೇ ಬ್ರಿಟಿಷರ ವಿರುದ್ಧ ಹೋರಾಡಿ ವೀರಸ್ವರ್ಗ ಸೇರಿದ್ದಾರೆ. ಅವರ ಹೆಸರು ಅಜರಾಮರವಾಗಿ ಉಳಿಯಬೇಕಾದರೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಸೇನಾನಿ ಹೆಸರಿಡುವುದು ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದರು.

ದೇಶದ ಅನೇಕ ಅರಸು ಮನೆತನಗಳಲ್ಲಿ ಸುರಪುರ ಸಂಸ್ಥಾನ ಒಂದಾಗಿದೆ. ಕಿತ್ತೂರು, ಚಿತ್ರದುರ್ಗ ಸೇರಿದಂತೆ ಇತರೆ ಸಂಸ್ಥಾನಕ್ಕೆ ನೀಡಿದಷ್ಟು ಮಹತ್ವ ಸುರಪುರ ಸಂಸ್ಥಾನಕ್ಕೆ ನೀಡದಿರುವುದು ಖೇದನೀಯ. ಇದು ಇತಿಹಾಸಕಾರರ ಪ್ರಮಾದವೋ ಅಥವಾ ನಮ್ಮನ್ನಾಳುವ ಸರಕಾರಗಳ ಇಚ್ಛಾಶಕ್ತಿ ಕೊರತೆಯೋ ಗೊತ್ತಿಲ್ಲ. ಒಟ್ಟಾರೆಯಾಗಿ ಸುರಪುರ ಸಂಸ್ಥಾನ ಕಡೆಗಣಿಸಿರುವುದು ಈ ಭಾಗದ ಜನರ ಭಾವನೆಗೆ ಧಕ್ಕೆಯಾಗಿದೆ.

ಅದರಲ್ಲಿ ವಿಶೇಷವಾಗಿ ಇಲ್ಲಿನ ಅರಸರ ಶೌರ್ಯ, ಸಾಹಸಗಳ ಕುರಿತು ಪಠ್ಯದಲ್ಲಿ ಸೇರಿಸದಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಹಂಪಿ, ಕಿತ್ತೂರು ಸೇರಿದಂತೆ ಇತರೆ ಉತ್ಸವ ನಡೆಸುವ ಸರಕಾರ ಸುರಪುರ ಉತ್ಸವ ಆಚರಿಸಲು ಆಸಕ್ತಿ ತೋರದಿರುವುದು ಖಂಡನೀಯ.

Advertisement

ಮುಂಬರುವ ದಿನಗಳಲ್ಲಿ ಮೂರು ದಿನಗಳ ವರೆಗೆ ವೇಣುಗೋಪಾಲಸ್ವಾಮಿ ಉತ್ಸವ ನಡೆಸುವ ಮೂಲಕ ಸುರಪುರ ಉತ್ಸವ ಆಚರಿಸಬೇಕು. ಕ್ಯಾಪ್ಟನ್‌ ನ್ಯೂಬೇರಿ ಹತ್ಯೆ ಅಂಗವಾಗಿ ಸುರಪುರ ವಿಜಯೋತ್ಸವ ದಿನ ಆಚರಿಸಬೇಕು ಎಂದು ಒತ್ತಾಯಿಸಿದರು. ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಮುಖ್ಯಸ್ಥ, ಖ್ಯಾತ ವಕೀಲ ಭಾಸ್ಕರರಾವ ಮುಡಬೂಳ, ಹಂಪಿ ವಿಶ್ವವಿದ್ಯಾಲಯದ ಉಪನ್ಯಾಸಕ ಅಮರೇಶ ಯಥಗಲ್‌ ಮಾತನಾಡಿ ರಾಜಾ ರಾಘವ ಪಾಮನಾಯಕ ಅವರು ಸೇರಿ ಕೊನೆ ಅರಸರ ವರೆಗೂ ಕಲೆ ಸಾಹಿತ್ಯ ಸಂಗೀತಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರಜಾ ಕಲ್ಯಾಣಕ್ಕೆ ಒತ್ತು ಜತೆಗೆ ಉತ್ತಮ ಆಡಳಿತ ನೀಡಿರುವ ಕುರಿತು ಇತಿಹಾಸದಿಂದ ತಿಳಿದು ಬರುತ್ತದೆ. ಶ್ರೇಷ್ಠ ಶ್ರೀಮಂತಿಕೆ ಹೊಂದಿರುವ ಸುರಪುರ ಸಂಸ್ಥಾನದ ಇತಿಹಾಸ ಜನರ ಕಣ್ಣಿಂದ ಮರೆಯಾಗದಂತೆ ಉಳಿಸಲು ಕಲಬುರಗಿ ನೂತನ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಸೇನಾನಿ ಹೆಸರಿಡಬೇಕು ಎಂದು ಒತ್ತಾಯಿಸಿದರು.

ನಂತರ ನಡೆದ ಸಭೆಯಲ್ಲಿ ಕಲಬುರಗಿ ವಿಮಾನ ನಿಲ್ದಾಣಕ್ಕೆ ರಾಜಾ
ನಾಲ್ವಡಿ ವೆಂಕಟಪ್ಪ ನಾಯಕ ಅವರ ಹೆಸರಿಡಲು ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಣಯ ತೆಗೆದುಕೊಳ್ಳಲಾಯಿತು. ಸರಕಾರದ ಮೇಲೆ ಒತ್ತಡ ತರಲು ಈ ಭಾಗದ ಎಲ್ಲ ಶಾಸಕರು, ಸಂಸದರು, ಸಚಿವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ಇದಕ್ಕೂ ಮೊದಲು ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ
ಅವರು ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಅರಸು ಮನೆತನ ಕುರಿತು ಸಂಶೋಧನೆ ಮಾಡಿದ 9 ಜನರಿಗೆ ಸಂಸ್ಥಾನದ ಗೌರವ ಪ್ರಶಸ್ತಿ, ಕಲೆ ಸಾಹಿತ್ಯ ಸಂಗೀತ, ಶೈಕ್ಷಣಿಕ, ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 49 ಜನ ಸಾಧಕರಿಗೆ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಸುರಪುರ ಅರಸು ಮನೆತದ ಇತಿಹಾಸ ಕುರಿತು ಏರ್ಪಡಿಸಿದ್ದ
ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಪಾರಿತೋಷಕ ವಿತರಿಸಲಾಯಿತು. ರಾಜಾ ವೆಂಕಟಪ್ಪ ನಾಯಕ,
ರಾಜಾ ಸೀತಾರಾಮ ನಾಯಕ, ಎಸ್‌. ಗೋಪಾಲ ನಾಯಕ, ಸಂಸ್ಥಾನದ ಪ್ರಧಾನಮಂತ್ರಿ ಮನೆತನದ ಶರಣಬಸಪ್ಪ ನಿಷ್ಠಿ ಇದ್ದರು.ಸುರಪುರ ಗರುಡಾದ್ರಿ ಕಲೆ ಅಂತಾರಾಷ್ಟ್ರೀಯ ಕಲಾವಿದ ವಿಜಯ ಹಾಗರಗುಂಡಗಿ, ಮೈಸೂರು ವಿವಿ ವಿಶ್ರಾಂತ ಕುಲಪತಿ ಹಣಮಣ್ಣ ನಾಯಕ ದೊರೆ, ಬಾಂಬೆ ವಿವಿಯ ದೇವಿಕಾ ಗುಡಿ, ಕಲಬುರಗಿ ವಿವಿ ಸಂಗೀತ ವಿಭಾಗದ ಮುಖ್ಯಸ್ಥೆ ಸುನಂದಾ ಸಾಲವಡಗಿ, ನಿವೃತ್ತ ಎಸ್‌ಪಿ ಚಂದ್ರಕಾಂತ ಭಂಡಾರೆ, ಸಾಹಿತಿ ಎ. ಕೃಷ್ಣ, ಇತಿಹಾಸಕಾರರಾದ ಡಿ.ಎನ್‌. ಅಕ್ಕಿ, ಬಿ.ಪಿ. ಹೂಗಾರ. ಬಿ.ಆರ್‌. ಸುರಪುರ, ಎಸ್‌. ರೇವಣಸಿದ್ದಯ್ಯ ಸ್ಥಾವರಮಠ, ಬಸವರಾಜ ರೂಮಾಲ, ಶಾಂತಪ್ಪ ಬೂದಿಹಾಳ, ಜನಾರ್ಧನ ಪಾಣಿಭಾತೆ, ಡಾ| ಆರ್‌.ವಿ. ನಾಯಕ, ಡಾ| ಪ್ರಶಾಂತ ಕೆಂಭಾವಿ ಇದ್ದರು.

ರಾಜಾ ಲಕ್ಷ್ಮೀ ನಾರಾಯಣ ನಾಯಕ ಸ್ವಾಗತಿಸಿದರು. ಉಪನ್ಯಾಸಕ
ಡಾ| ಉಪೇಂದ್ರ ನಾಯಕ ಸುಬೇದಾರ ನಿರೂಪಿಸಿದರು. ರಾಜಾ ಪಿಡ್ಡನಾಯಕ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next