Advertisement

ನ್ಯಾಯಮೂರ್ತಿಗಳ ನಡುವೆಯೇ ಸಮರ!

03:45 AM Mar 11, 2017 | Team Udayavani |

ನವದೆಹಲಿ: ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದಂತಹ ವಿಶೇಷ ವಿದ್ಯಮಾನವೊಂದು ನಡೆದಿದೆ. ಇದೇ ಮೊದಲ ಬಾರಿಗೆ ಕಲ್ಕತ್ತಾ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್‌.ಸಿ.ಕರ್ಣನ್‌ ವಿರುದ್ಧ ಸುಪ್ರೀಂ ಕೋರ್ಟ್‌ ಬಂಧನ ವಾರಂಟ್‌ ಜಾರಿ ಮಾಡಿದೆ.

Advertisement

ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ನ್ಯಾಯಾಲಯದ ಮುಂದೆ ಹಾಜರಾಗುವಲ್ಲಿ ವಿಫ‌ಲವಾದ ನ್ಯಾ.ಸಿ.ಎಸ್‌. ಕರ್ಣನ್‌ ವಿರುದ್ಧ ಶನಿವಾರ ಸಿಜೆಐ ಜೆ.ಎಸ್‌. ಖೆಹರ್‌ ನೇತೃತ್ವದ ನ್ಯಾಯಪೀಠ ಬಂಧನ ವಾರಂಟ್‌ ಜಾರಿ ಮಾಡಿ ಅಚ್ಚರಿಯ ಆದೇಶ ಹೊರಡಿಸಿದೆ. ಮಾ.31ರೊಳಗೆ ಅವರನ್ನು ಕೋರ್ಟ್‌ಗೆ ಹಾಜರುಪಡಿಸುವಂತೆಯೂ ಪಶ್ಚಿಮ ಬಂಗಾಳ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಿದೆ. ಹೀಗಾಗಿ, ಬಂಧನ ವಾರಂಟ್‌ ಪಡೆದ ಮೊತ್ತಮೊದಲ ಹಾಲಿ ಜಡ್ಜ್ ಎಂದು ನ್ಯಾಯಾಂಗ ಇತಿಹಾಸದ ಪುಟಗಳಲ್ಲಿ ನ್ಯಾ.ಕರ್ಣನ್‌ ಹೆಸರು ದಾಖಲಾಗಲಿದೆ.

ಇದಾದ ಬೆನ್ನಲ್ಲೇ ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ,  ನ್ಯಾ. ಕರ್ಣನ್‌ ಅವರು, ತಮ್ಮ ವಿರುದ್ಧ ಬಂಧನ ವಾರಂಟ್‌ ಹೊರಡಿಸಿದ 7 ಮಂದಿ ನ್ಯಾಯಮೂರ್ತಿಗಳ ವಿರುದ್ಧವೇ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿದ್ದಾರೆ ಹಾಗೂ ತಮ್ಮ ವಿರುದ್ಧದ ವಾರಂಟ್‌ಗೆ ತಡೆಯಾಜ್ಞೆ ಕೊಟ್ಟುಕೊಂಡಿದ್ದಾರೆ. ಶನಿವಾರ ನಡೆದಿರುವ ಈ ನಾಟಕೀಯ ಬೆಳವಣಿಗೆಗಳು ದೇಶದ ಜನತೆಯ ಕುತೂಹಲಕ್ಕೆ ಕಾರಣವಾಗಿದೆ. ಜತೆಗೆ, ನ್ಯಾಯಾಧೀಶ ಮತ್ತು ನ್ಯಾಯಪೀಠದ ನಡುವಿನ ಸಂಘರ್ಷ ಎಲ್ಲಿಗೆ ತಲುಪಬಹುದು ಎಂದು ಕಾದುನೋಡುವಂತಾಗಿದೆ.

ಏನಿದು ಪ್ರಕರಣ?: ನ್ಯಾ.ಕರ್ಣನ್‌ ಅವರು ಮದ್ರಾಸ್‌ ಹೈಕೋರ್ಟ್‌ನಲ್ಲಿದ್ದಾಗ, 2011ರಲ್ಲಿ ಸುದ್ದಿಗೋಷ್ಠಿ ಕರೆದು ಇನ್ನೊಬ್ಬ ಜಡ್ಜ್ ವಿರುದ್ಧ ಜಾತಿ ತಾರತಮ್ಯ ಆರೋಪ ಹೊರಿಸಿದ್ದರು. ಬಳಿಕ, 2015ರ ಏಪ್ರಿಲ್‌ನಲ್ಲಿ ನ್ಯಾ.ಸಂಜಯ್‌ ಕಿಶನ್‌ ಕೌಲ್‌ ಅವರು ತಮ್ಮನ್ನು ದಲಿತ ಎಂಬ ಕಾರಣಕ್ಕಾಗಿ ಕೀಳಾಗಿ ನೋಡುತ್ತಿದ್ದಾರೆ ಮತ್ತು ಮಹತ್ವವಲ್ಲದ ಹುದ್ದೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ, ನ್ಯಾ.ಕರ್ಣನ್‌ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದರು. ಕಳೆದ ವರ್ಷದ ಫೆಬ್ರವರಿಯಲ್ಲಿ ಮತ್ತೆ ನ್ಯಾ.ಕೌಲ್‌ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿದ್ದರು.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅದೇ ತಿಂಗಳು ನ್ಯಾ.ಕರ್ಣನ್‌ ಅವರನ್ನು ಕಲ್ಕತ್ತಾ ಹೈಕೋರ್ಟ್‌ಗೆ ವರ್ಗಾಯಿಸಿ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿತ್ತು. ಇದರಿಂದ ಕ್ರುದ್ಧರಾದ ನ್ಯಾ. ಕರ್ಣನ್‌, ತಮ್ಮ ವರ್ಗಾವಣೆ ಆದೇಶಕ್ಕೆ ತಾವೇ ತಡೆಯಾಜ್ಞೆ ವಿಧಿಸಿದರು. ಈ ವಿಚಾರ ತಿಳಿದೊಡನೆ ಸುಪ್ರೀಂ ಕೋರ್ಟ್‌, ನ್ಯಾ.ಕರ್ಣನ್‌ ತಡೆಯಾಜ್ಞೆಯನ್ನು ರದ್ದುಗೊಳಿಸಿತ್ತು. ಬಳಿಕ, ತಾವು ಮಾನಸಿಕವಾಗಿ ಬಹಳ ನೊಂದಿದ್ದರಿಂದ ಹೀಗೆಲ್ಲ ವರ್ತಿಸಿದೆ ಎಂದು ಹೇಳಿದ್ದ ನ್ಯಾ.ಕರ್ಣನ್‌ ಅವರು ಕಲ್ಕತ್ತಾಗೆ ತೆರಳಿದ್ದರು. ಇದಾದ ನಂತರ, ಹೈಕೋರ್ಟ್‌ ಹಾಗೂ ಸುಪ್ರೀಂನ ಕೆಲವು ನಿವೃತ್ತ ಹಾಗೂ ಹಾಲಿ ನ್ಯಾಯಮೂರ್ತಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ, ಅವರ ಪಟ್ಟಿಯನ್ನು ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರಿಗೆ ಕಳುಹಿಸಿಕೊಟ್ಟಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡ ಸುಪ್ರೀಂ ಕೋರ್ಟ್‌ ಇತ್ತೀಚೆಗೆ, “ನಿಮ್ಮ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಬಾರದು’ ಎಂದು ಪ್ರಶ್ನಿಸಿ ನ್ಯಾ. ಕರ್ಣನ್‌ಗೆ ನೋಟಿಸ್‌ ಜಾರಿ ಮಾಡಿತ್ತು. ಜತೆಗೆ, ನ್ಯಾಯಾಲಯಕ್ಕೆ ಹಾಜರಾಗುವಂತೆಯೂ ಸೂಚಿಸಿತ್ತು. ಆದರೆ, ಅವರು ಹಾಜರಾಗಿರಲಿಲ್ಲ.

Advertisement

ಈ ಹಿನ್ನೆಲೆಯಲ್ಲಿ ಶನಿವಾರ ನಡೆದ ವಿಚಾರಣೆ ವೇಳೆ, ಸಿಜೆಐ ಜೆ.ಎಸ್‌.ಖೆಹರ್‌ ಸೇರಿದಂತೆ ಏಳು ಮಂದಿ ನ್ಯಾಯಮೂರ್ತಿಗಳ ಪೀಠವು, ನ್ಯಾ. ಕರ್ಣನ್‌ ವಿರುದ್ಧ ಜಾಮೀನುಸಹಿತ ಬಂಧನ ವಾರಂಟ್‌ ಜಾರಿ ಮಾಡಿದೆ. ಅವರನ್ನು ಹಾಜರಾಗುವಂತೆ ಮಾಡಲು ಬೇರೆ ದಾರಿ ಇರದ ಕಾರಣ, ಹೀಗೆ ಮಾಡುತ್ತಿದ್ದೇವೆ. 31ರಂದು ಅವರನ್ನು ಹಾಜರುಪಡಿಸಬೇಕು ಎಂದು ಪಶ್ಚಿಮ ಬಂಗಾಳ ಡಿಜಿಪಿಗೆ ಸೂಚಿಸಿದೆ. ಇದರ ಬೆನ್ನಲ್ಲೇ, ಕೋಲ್ಕತಾದಲ್ಲಿರುವ ತಮ್ಮ ನಿವಾಸದಲ್ಲೇ ಆದೇಶ ಹೊರಡಿಸಿರುವ ನ್ಯಾ.ಕರ್ಣನ್‌, “ತಮ್ಮ ವಿರುದ್ಧ ವಾರಂಟ್‌ ಜಾರಿ ಮಾಡಿರುವ ನ್ಯಾಯಮೂರ್ತಿಗಳನ್ನು ವಿಚಾರಣೆಗೆ ಒಳಪಡಿಸಿ’ ಎಂದು ಸಿಬಿಐಗೆ ಸೂಚಿಸಿದ್ದಾರೆ ಮತ್ತು “ಸುಪ್ರೀಂ ಕೋರ್ಟ್‌ ಏನೂ ನನ್ನ ಮಾಸ್ಟರ್‌ ಅಲ್ಲ’ ಎಂದು ಹೇಳಿದ್ದಾರೆ.

ಸುಪ್ರೀಂ ನ್ಯಾಯಪೀಠ ಹೇಳಿದ್ದು
– ನ್ಯಾ. ಕರ್ಣನ್‌ ಅವರ ವಿರುದ್ಧ ಬಂಧನ ವಾರಂಟ್‌ ಜಾರಿ ಮಾಡುತ್ತಿದ್ದೇವೆ
– ಮಾ.31ರಂದು ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ವೇಳೆ ಅವರನ್ನು ಹಾಜರುಪಡಿಸಬೇಕು
– ಅವರನ್ನು ಕೋರ್ಟ್‌ ಮುಂದೆ ಹಾಜರಾಗುವಂತೆ ಮಾಡಲು ಬೇರೆ ಯಾವುದೇ ದಾರಿಯಿಲ್ಲ

ನ್ಯಾ.ಕರ್ಣನ್‌ ವಾದವೇನು?
– ನನ್ನ ವಿರುದ್ಧ ಆದೇಶ ಜಾರಿ ಮಾಡಿದ ಎಲ್ಲ ನ್ಯಾಯಮೂರ್ತಿಗಳ ವಿರುದ್ಧ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿದ್ದೇನೆ. ಸುಪ್ರೀಂ ಕೋರ್ಟ್‌ ನನ್ನ ಮಾಸ್ಟರ್‌ ಅಲ್ಲ.
– ನನ್ನ ವಿರುದ್ಧ ಸುಪ್ರೀಂ ಕೋರ್ಟ್‌ ಬಂಧನ ವಾರಂಟ್‌ ಜಾರಿ ಮಾಡಿದೆ. ಹೌದು. ಇಂಥದ್ದೊಂದು ಘಟನೆ ಈವರೆಗೆ ನಡೆದೇ ಇಲ್ಲ. ಹಾಲಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಇದೆಲ್ಲ ಶುರುವಾಗಿದ್ದು. ಕೆಳವರ್ಗದವರನ್ನು ಮತ್ತಷ್ಟು ತುಳಿಯಲು ಆರಂಭಿಸಿದ್ದು.
–  ಸುಪ್ರೀಂನ 9 ನಿವೃತ್ತ ನ್ಯಾಯಮೂರ್ತಿಗಳ ಭ್ರಷ್ಟಾಚಾರದ ಕುರಿತು ಹಿರಿಯ ನ್ಯಾಯವಾದಿ ಶಾಂತಿಭೂಷಣ್‌ ಫೆ.8ರಂದು ಅಫಿಡವಿಟ್‌ ಸಲ್ಲಿಸಿದ್ದರು. ಆದರೆ, ಇನ್ನೂ ಅದರ ವಿಚಾರಣೆ ನಡೆದಿಲ್ಲ. ಆ ನ್ಯಾಯಮೂರ್ತಿಗಳ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಆರೋಪ ಹೊರಿಸುತ್ತಿಲ್ಲ? ಅವರು ಮೇಲ್ವರ್ಗದವರು ಎಂಬ ಕಾರಣಕ್ಕಾಗಿಯೇ?
– ಜಯಲಲಿತಾ ಪರ ತೀರ್ಪು ನೀಡಲು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರಿಗೆ 200 ಕೋಟಿ ರೂ. ಲಂಚ ನೀಡಲಾಗಿತ್ತು ಎಂದು ವಕೀಲರ ಸಂಘವೇ ಆರೋಪಿಸಿದೆ. ಆದರೆ, ಆ ನ್ಯಾಯಮೂರ್ತಿ ವಿರುದ್ಧವೇಕೆ ನ್ಯಾಯಾಂಗ ನಿಂದನೆ ಆದೇಶ ಹೊರಡಿಸಿಲ್ಲ?
– ಇದು ಜಾತಿಗೆ ಸಂಬಂಧಿಸಿದ ವಿಷಯ. ಒಬ್ಬ ದಲಿತ ಜಡ್ಜ್ಗೆ ಕೆಲಸ ಮಾಡಲು ಬಿಡುತ್ತಿಲ್ಲ. ಅದು ದಲಿತ ದೌರ್ಜನ್ಯ ಪ್ರಕರಣ.
– ನಾನು ನನ್ನ ನ್ಯಾಯಾಂಗ ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದೇನೆ. ಎಲ್ಲ 7 ನ್ಯಾಯಮೂರ್ತಿಗಳು ರಾಜೀನಾಮೆ ನೀಡಿ, ವಿಚಾರಣೆ ಎದುರಿಸಬೇಕು.
– ನನ್ನ ವಿರುದ್ಧದ ಬಂಧನ ವಾರಂಟ್‌ ರದ್ದು ಮಾಡಬೇಕೆಂದು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರನ್ನು ಕೇಳಿಕೊಳ್ಳುತ್ತೇನೆ

ನ್ಯಾ. ಕರ್ಣನ್‌ರನ್ನು ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲೇಬಾರದಿತ್ತು. ಅವರನ್ನು ವಾಗ್ಧಂಡನೆಗೆ ಒಳಪಡಿಸಬೇಕು. ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಮಾತ್ರವಲ್ಲ, ಬಂಧನ ವಾರಂಟ್‌ ಕೂಡ ಜಾರಿಯಾಗಿದೆ.
– ಪಿ.ಪಿ. ರಾವ್‌, ಸಂವಿಧಾನ ತಜ್ಞ

ನ್ಯಾ. ಕರ್ಣನ್‌ ವಿರುದ್ಧ ಬಂಧನದ ವಾರಂಟ್‌ ಹೊರಡಿಸುವ ಕಾನೂನು ಅಧಿಕಾರ ಸುಪ್ರೀಂಕೋರ್ಟ್‌ಗೆ ಇದೆ. ಏಕೆಂದರೆ, ಅವರ ಮೇಲೆ ನ್ಯಾಯಾಂಗ ನಿಂದನೆಯ ಪ್ರಕರಣ ಇತ್ತು. ಹಾಜರಾಗುವಂತೆ ಸುಪ್ರೀಂಕೋರ್ಟ್‌ ನೋಟಿಸ್‌ ಕೊಟ್ಟಿತ್ತು. ಗೈರು ಹಾಜರಾಗಿದ್ದಕ್ಕೆ ಬಂಧನದ ವಾರಂಟ್‌ ಹೊರಡಿಸಲಾಗಿದೆ. ಆದರೆ, ಏಳು ನ್ಯಾಯಮೂರ್ತಿಗಳ ವಿರುದ್ಧ ನ್ಯಾ. ಕರ್ಣನ್‌ ಸಿಬಿಐ ತನಿಖೆಗೆ ಆದೇಶ ಮಾಡಿರುವುದು ಮೂರ್ಖತನ. ಆ ರೀತಿ ಆದೇಶ ಮಾಡಲಿಕ್ಕೆ ಬರುವುದೇ ಇಲ್ಲ. ಅಷ್ಟಕ್ಕೂ ಅವರು ನ್ಯಾಯಿಕ ಆದೇಶ ಹೊರಡಿಸಿಲ್ಲ, ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರಷ್ಟೇ.
– ಅಶೋಕ್‌ ಹಾರನಹಳ್ಳಿ, ಮಾಜಿ ಅಡ್ವೋಕೇಟ್‌ ಜನರಲ್‌.

Advertisement

Udayavani is now on Telegram. Click here to join our channel and stay updated with the latest news.

Next