Advertisement

ದುಷ್ಟ ಶಕ್ತಿಯ ದಮನ; ಶಿಷ್ಟ ರಕ್ಷಣೆಯ ಅಭಯ

12:43 AM Oct 11, 2024 | Team Udayavani |

ನವಮಿ ಎನ್ನುವ ದಿನವೇ ದುರ್ಗಾ ದೇವಿಯ ದಿನ. ಏಕೆಂದರೆ ಪಾಡ್ಯ ಮೊದ ಲಾದ ದಿನಗಳಲ್ಲಿ ನವಮಿಗೆ ಈ ದುರ್ಗೆ ಯೇ ಅಭಿಮಾನಿ ದೇವತೆ. ಅದರ ಲ್ಲಿಯೂ ಜ್ಞಾನದೇವತೆಯಾದ ದೇವಿಯ ಮಾಸವಾದ ಆಶ್ವಯುಜ ಮಾಸದ ನವಮಿಯ ವಿಶೇಷವೇನೆಂದರೆ ಮಹಿಷ ಮರ್ದಿನಿ ಎಂದೇ ಲೋಕಪ್ರಖ್ಯಾತಳಾದ ದುರ್ಗಾ ದೇವಿಯು ಚಂಡಿಕಾ, ಚಾಮುಂಡಾ, ಬ್ರಹ್ಮಾಣೀ, ಮಾಹೇಶ್ವರೀ, ಕೌಮಾರೀ, ವೈಷ್ಣವೀ, ವಾರಾಹೀ, ನಾರಸಿಂಹೀ, ಐಂದ್ರೀ, ಶಿವದೂತೀ ಎಂಬ ಹತ್ತು ರೂಪಗಳನ್ನು ಪಡೆದು, ಒಂಬತ್ತು ರಾತ್ರಿಗಳಲ್ಲಿ ರಕ್ಕಸರೊಡನೆ ಹೋರಾಡಿ ಧೂಮ್ರಲೋಚನ, ಚಂಡ-ಮುಂಡ, ರಕ್ತಬೀಜಾಸು ರರನ್ನು ಸಂಹರಿಸಿ ಕೊನೆಗೆ ಈ ಎಲ್ಲ ರಕ್ಕಸರ ಅಧಿಪತಿಯಾದ ನಿಶುಂಭ-ಶುಂಭರನ್ನೂ ಸಂಹರಿಸಿದ ದಿನವೇ ಈ ಮಹಾನವಮೀ. ಈ ದಿನದಂದು ವಾಣೀ ತ್ರಿಕಾಲಂ ನೃಭಿರರ್ಚನೀಯಾ ಎಂಬಂತೆ ವಾಗ್ದೇವಿಯನ್ನು ಅರ್ಚಿಸಿ ಪೂಜಿಸುವುದು ಮಹಾ ಫ‌ಲಪ್ರದ. ಈ ಪರ್ವಕಾಲದಲ್ಲಿ ಮೂರ ರಿಂದ ಎಂಟನೇ ವಯಸ್ಸಿನ ಹೆಣ್ಣು ಮಕ್ಕಳಲ್ಲಿ ಕನ್ಯಾಕುಮಾರಿ ಎನಿಸಿದ ದುರ್ಗೆಯನ್ನು ಪೂಜಿಸಿ, ತೃಪ್ತಿಗೊಳಿಸಿ ಮಾಡುವ ಕನ್ನಿಕೆಯರ ಆರಾಧನೆ ದುರ್ಗೆಗೆ ಬಹಳ ಪ್ರೀತಿಕರ.

Advertisement

ಮಹಾನವಮೀವ್ರತ
ಯಾವ ದುರ್ಗಾ ದೇವಿ ಯಶೋದೆಯ ಗರ್ಭದಲ್ಲಿ ಅವತರಸಿ ಮಥುರೆಗೆ ಬಂದು ಆಕಾಶದಲ್ಲಿದ್ದು ಕೊಂಡೇ ಕಂಸನಿಗೆ ಎಚ್ಚರಿಕೆ ಯನ್ನು ನೀಡಿ ವಿಂದ್ಯಾಚಲದಲ್ಲಿ ನೆಲೆಸಿ ದಳ್ಳೋ ಅಂದಿನಿಂದ ಈ ಲೋಕ ಮಹಾ ನವಮೀವ್ರತವನ್ನು ಆಚರಿಸಲು ಪ್ರಾರಂ ಭಿಸಿತು ಎನ್ನುತ್ತದೆ ಭವಿಷ್ಯತುರಾಣ. (ಅ.131). ಈ ವಿಂಧ್ಯಾವಾಸಿನಿಯಾದ ದುರ್ಗೆಯ ಪ್ರೀತಿಗಾಗಿ ಒಂಬತ್ತು ರಾತ್ರಿಗಳು ಅಥವಾ ಮೂರು ರಾತ್ರಿ ಅಥವಾ ಒಂದು ರಾತ್ರಿಯಾದರೂ ಉಪವಾಸವಿದ್ದು, ಅಯಚಿತವ್ರತವನ್ನು ಆಚರಿಸಿ, ಮಹಾನವಮೀ ದಿನದಂದು ನದೀಸ್ನಾನವನ್ನು ಮಾಡಿ, ವಿಶೇಷವಾಗಿ ಜ್ಞಾನಪ್ರದಳಾದ, ಶತ್ರುಸಂಹಾರಕಳಾದ ದುರ್ಗೆಯನ್ನು ಆರಾಧಿಸಿ, ಕನ್ನಿಕೆಯರಲ್ಲಿ ನೆಲೆಸಿದ ದುರ್ಗಾದೇವಿಯನ್ನು ಸಂತೋಷ ಗೊಳಿಸುವ ವ್ರತವೇ ಮಹಾನವಮೀ ವ್ರತ.

ಆಯುಧಪೂಜೆ
ರಾಜನಾದವನು ದೇಶದ ಒಳಿತಿಗಾಗಿ ಒಂಬತ್ತು ದಿನಗಳ ಕಾಲ ಉಪವಾಸ ದಲ್ಲಿದ್ದು ಆಯುಧಪೂಜೆಯನ್ನು ಮಾಡಬೇಕು. ಹಿಂದೆ ಲೋಹ ಎಂಬ ಅಸುರನು ಲೋಕಕ್ಕೆಲ್ಲ ಉಪಟಳವನ್ನು ಮಾಡುತ್ತಿರಲು ದೇವತೆಗಳು ಅವನನ್ನು ತುಂಡುತುಂಡಾಗಿ ಕತ್ತರಿಸಿ ಭೂಮಿಯಲ್ಲಿ ಎಸೆಯುತ್ತಾರೆ. ಆ ಶರೀರದಿಂದಲೇ ಭೂಮಿಯಲ್ಲಿ ಕಬ್ಬಿಣ ಎಂಬ ಲೋಹ ಹುಟ್ಟುತ್ತದೆ. ಆ ಕಬ್ಬಿಣದಿಂದಾದ ಈ ಆಯುಧಗಳಲ್ಲಿ ಲೋಹ ಎಂಬ ಅಸುರನ ಸಾನ್ನಿಧ್ಯ ಜಾಗೃತವಾಗದೇ ದುರ್ಗಾದೇವಿಯ ಸಾನ್ನಿಧ್ಯ ಜಾಗೃತವಾಗಲಿ ಎಂದು ಬಿಲ್ವಪತ್ರೆಗಳಿಂದ ಅರ್ಚಿಸಿ ಪ್ರಾರ್ಥಿಸಿಕೊಳ್ಳಬೇಕು. ಪಾಂಡವರು ಕೂಡ 12 ವರ್ಷದ ವನವಾಸವನ್ನು ಮುಗಿಸಿ, ಒಂದು ವರ್ಷದ ಅಜ್ಞಾತವಾಸವನ್ನು ಮುಗಿಸಿ ಬನ್ನಿ ಮರದಲ್ಲಿಟ್ಟಿದ್ದ ತಮ್ಮ ಆಯುಧಗಳನ್ನೆಲ್ಲ ಹೊರತೆಗೆದು ಪೂಜಿಸಿರುವುದು ಮಹಾಭಾರತದಲ್ಲಿ ಉಲ್ಲೇಖವಾಗಿದೆ. ಹಾಗಾಗಿ ಈ ದಿನ ಆಯುಧಪೂಜೆ, ವಾಹನ ಪೂಜೆ ಬಹಳ ವಿಶೇಷ ಮತ್ತು ರಕ್ಷಾಪ್ರದ.

ವಿಜಯದಶಮೀ
ನಿಶುಂಭ-ಶುಂಭಾಸುರರನ್ನು ಸಂಹಾರ ಮಾಡಿದಾಗ ದೇವತೆಗಳೆಲ್ಲರೂ ವಿಜಯೋತ್ಸವವನ್ನು ಆಚರಿಸಿದ ದಿನ ವಿಜಯ ದಶಮೀ. ಉತ್ತರಭಾರತದಲ್ಲಿ ರಾಮಚರಿತ ಮಾನಸದಲ್ಲಿ ತಿಳಿಸಿದಂತೆ ಈ ದಿನದಂದು ರಾಮನು ರಾವಣನನ್ನು ಸಂಹರಿಸಿ ಲೋಕ ಕಲ್ಯಾಣವನ್ನು ಮಾಡಿದ ದಿನವೆಂದು ಸಂಭ್ರಮಿಸುತ್ತಾರೆ. ಈ ದಿನದಂದು ರಾಮ ಲೀಲಾ ಮೊದಲಾದ ರಾಮಾಯಣದ ನಾಟಕಗಳನ್ನು, ಪ್ರದರ್ಶನಗಳನ್ನು ಏರ್ಪಡಿಸಿ ರಾವಣನೇ ಮೊದಲಾದವರ ಪ್ರತಿಕೃತಿಗಳನ್ನು ಸುಟ್ಟು, ನಮ್ಮಲ್ಲಿರುವ ದುರ್ಗುಣ ಗಳೆಲ್ಲ ನಶಿಸಿ, ಸದ್ಗುಣಗಳು ವೃದ್ಧಿಸಲಿ ಎಂದು ಪ್ರಾರ್ಥಿಸಿ ಕೊಳ್ಳುತ್ತಾರೆ.

ಈ ದಿನದಂದು ಈಶಾನ್ಯ ದಿಕ್ಕಿನಲ್ಲಿರುವ ಶಮೀವೃಕ್ಷದ ಬಳಿ ತೆರಳಿ ಮಾಡುವ ಶಮೀ ಪೂಜೆ ನಮ್ಮೆಲ್ಲ ಪಾಪಗಳನ್ನೂ ಪರಿಹರಿಸುತ್ತದೆ. ಶಮೀವೃಕ್ಷ ಇಲ್ಲದಿದ್ದರೆ ಶಮೀಪತ್ರ ವನ್ನಾದರೂ ಪೂಜಿಸಬೇಕು. ಅಂದು ಶಮೀ ವೃಕ್ಷದ ಬುಡದ ಮಣ್ಣನ್ನು ಮನೆಗೆ ತರುವುದು ಮಂಗಳದಾಯಕ.

Advertisement

ಅಮಂಗಳಾನಾಂ ಶಮನೀಂ ಶಮನೀಂ ದುಷ್ಕೃತಸ್ಯ ಚ| ದುಃಖಪ್ರಣಾಶಿನೀಂ ಧನ್ಯಾಂ ಪ್ರಪದ್ಯೆs ಹಂ ಶಮೀಂ ಶುಭಾಮ್‌ ||
ಈ ವಿಜಯದಶಮಿಯಂದು ಹೊಸ ಪೈರಿನ ಭತ್ತದ ತೆನೆಯನ್ನು ಮನೆಗೆ ತಂದು, ಅದರ ಅಕ್ಕಿಯಿಂದ ಅನ್ನವನ್ನು ದೇವರಿಗೆ ಸಮರ್ಪಿಸಿ ಅರಶಿನದ ಅಖಂಡ ಎಲೆಯಲ್ಲಿ ಉಣ್ಣಬೇಕು. ಆಗ್ರಯಣೇಷ್ಟಿಯ ಅಂಗವಾದ ಈ ನವಾನ್ನ ಭೋಜನವನ್ನು (ಪೊಸರ್‌) ಆಶ್ವಯುಜ ಹುಣ್ಣಿಮೆಯಂದು ಮಾಡು ವುದಿದೆ. ಕೃಷಿಕರು ಈ ದಿನ ತಂದ ಭತ್ತದ ತೆನೆಯನ್ನು ವಿಜೃಂಭಣೆಯಿಂದ ಮನೆಗೆ ತಂದು ಮನೆಯ ಎಲ್ಲ ಕೋಣೆಗಳಿಗೆ, ಯಂತ್ರ, ವಾಹನ, ಬಾವಿ, ತುಳಸಿಕಟ್ಟೆ, ದನದಕೊಟ್ಟಿಗೆ, ಹೀಗೆ ಎಲ್ಲ ಕಡೆಗಳಲ್ಲಿಯೂ ಕದಿರು ಕಟ್ಟುವ ಮೂಲಕ ಲಕ್ಷ್ಮೀದೇವಿಯನ್ನು ಮನೆಯಲ್ಲಿ ತುಂಬಿಸಿ ಕೊಳ್ಳಬೇಕು.

ಮಧ್ವಜಯಂತೀ
ಜಿವೋತ್ತಮರೆನಿಸಿದ ಮುಖ್ಯಪ್ರಾಣ ದೇವರು ಮಧ್ವಾಚಾರ್ಯರಾಗಿ ಅವತರಿಸಿದ ದಿನವೂ ಈ ವಿಜಯ ದಶಮಿಯೇ. ಆಚಾರ್ಯ ತ್ರಯರಲ್ಲಿ ಈ ಮಧ್ವಾಚಾರ್ಯರು ನಮ್ಮ ಕರ್ನಾಟಕದಲ್ಲಿ ಅವತರಿಸಿದವರು ಎಂಬುದು ನಮ್ಮ ಕನ್ನಡಿಗರಿಗೊಂದು ಹೆಮ್ಮೆ. ಅದರಲ್ಲಿಯೂ ನಮ್ಮ ತುಳು ನಾಡಿನಲ್ಲಿ ಅವತರಿಸಿದ ಮಧ್ವಾಚಾರ್ಯರು ನಮ್ಮ ಉಡುಪಿ ಜಿಲ್ಲೆಗೆ ಕಿರೀಟಪ್ರಾಯರು.

ಶುಕ್ಲಾಶ್ವಿ‌ನದಶಮ್ಯಾಂ ತು ಜಯಂತ್ರೀ ಜಗದಾತ್ಮನಃ|ಪೂರ್ಣಬೋಧಮುನೇಃ ಕಾರ್ಯಾ ಕಾಮಿತಾರ್ಥ ಪ್ರದಾಯಿನೀ ||ಎಂದು ಸ್ಕಂದಪುರಾಣ ಹೇಳುವಂತೆ ವೈಭವದಿಂದ ಈ ದಿನದಂದು ಮಧ್ವ ಜಯಂತಿಯನ್ನು ಆಚರಿಸಬೇಕು. ಮಧ್ವಾ ಚಾರ್ಯರನ್ನು ವಾಯುದೇವರ ಪ್ರತಿಮೆಯಲ್ಲಾಗಲಿ, ಗ್ರಂಥಗಳಲ್ಲಾಗಲಿ ಅರ್ಚಿಸಿ, ಪೂಜಿಸಿ,ವೇದವತೀ ಶುಭಾಂ ಕಸಂಸ್ಥಿತಾಯ ದಿವ್ಯಾದ್ಭುತ ಬಾಲ ರೂಪಾಯ ಶ್ರೀವಾಸುದೇವಾಯ ತ್ರಿಲೋಕಗುರವೆ ಇದಮರ್ಘ್ಯಮ್‌ ಎಂದು ಮೂರು ಬಾರಿ ಅರ್ಘ್ಯವನ್ನು ನೀಡಿ, ಸದ್ಬುದ್ಧಿಯನ್ನು ಪ್ರಾರ್ಥಿಸಿಕೊಳ್ಳಬೇಕು.

ವಿದ್ಯಾದಶಮೀ
ಈ ದಿನದಂದು ವಿದ್ಯೆಯನ್ನು ಆರಂ ಭಿಸಲು ಬಹಳ ಪ್ರಶಸ್ತವಾಗಿದ್ದು ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸಲು ಅಥವಾ ವಿದ್ಯಾರ್ಥಿಗಳು ಯಾವುದಾದರೂ ಹೊಸ ಗ್ರಂಥಗಳನ್ನು ಅಭ್ಯಸಿಸಲು ಅತ್ಯುತ್ತ ಮವಾದ ಕಾಲ. ದೊಡ್ಡವರೇ ಆಗಲಿ ಚಿಕ್ಕವರೇ ಆಗಲಿ, ವೇದವ್ಯಾಸ ಪೂಜೆಯನ್ನು ಪೂರೈಸಿ, ಈ ದಿನದಂದು ಗುರುಗಳಲ್ಲಿ ಶಾಂತಿಪಾಠವನ್ನು ನಡೆಸಿ, ಸಚ್ಛಾಸ್ತ್ರಗಳ ಅಧ್ಯಯನದಲ್ಲಿ ತೊಡಗಿ ದವನಿಗೆ ಆ ವಿದ್ಯೆಯು ಸಿದ್ಧಿಸುವುದು ಖಚಿತ. ಇದಕ್ಕಾಗಿ ತಾರಾಬಲ- ಮುಹೂ ರ್ತವನ್ನೂ ನೋಡಬೇಕಾಗಿಲ್ಲ ಎನ್ನುವುದು ಈ ದಿನದ ವಿಶಿಷ್ಟತೆ ಗೊಂದು ಸಾಕ್ಷಿ.

ಈ ದಶಮಿಯ ರಾತ್ರಿಯ ಕೊನೆ ಯಾಮ ಎಂದರೆ ಏಕಾದಶಿಯ ಮೊದಲ ಯಾಮದಿಂದ ಆರಂಭಿಸಿ ಒಂದು ತಿಂಗಳು ಪಶ್ಚಿಮಜಾಗರ ಪೂಜೆಯನ್ನು ಮಾಡಬೇಕು. ಯೋಗ ನಿದ್ರೆಯಲ್ಲಿರುವ ನಾರಾಯಣನು ಏಳುವ ಕಾಲ ಸನ್ನಿಹಿತವಾಗಿದೆ ಎಂಬ ಅನುಸಂಧಾನದಲ್ಲಿ ನಡೆಯುವ ಈ ಪೂಜೆ ಉಡುಪಿ ಶ್ರೀ ಕೃಷ್ಣ ಮಠ ಸಹಿತ ಹಲವು ಕ್ಷೇತ್ರಗಳಲ್ಲಿ ವೈಭವದಿಂದ ನಡೆಯುತ್ತದೆ.
ಶರದೃತುವಿನಲ್ಲಿ ಬಿಸಿಲಿನ ಉರಿತಾಪವೂ ಇಲ್ಲದೆ, ಮಳೆಯ ಆರ್ಭಟವೂ ಇಲ್ಲದೆ ತಿಳಿಯಾದ ವಾತಾವರಣ ಇರುವಂತೆ ಶರನ್ನವ ರಾತ್ರಿಯ ಆಚರಣೆಯಿಂದ ನಮ್ಮ ಸಮಾಜದಲ್ಲಿ ಬಡತನದ ಬೇಗೆಯೂ ಇಲ್ಲದೆ, ದಬ್ಟಾಳಿಕೆಯ ಅಸಹನೆಯ ಚೀರಾಟವೂ ಇಲ್ಲದೆ, ತಿಳಿಯಾದ ಶಾಂತಿ, ಧರ್ಮ, ಸುಖ-ಸದ್ಗುಣಗಳು ನೆಲೆಸಲಿ. ಆ ದುರ್ಗಾದೇವಿ ಬಂದು ದುಷ್ಟರನ್ನೆಲ್ಲ ಸಂಹರಿಸಿದ್ದು ಜಗತ್ತಿನ ಒಳಿತಿಗಾಗಿ, ಧರ್ಮದ ಪ್ರತಿಷ್ಠೆಗಾಗಿ. ಎಲ್ಲ ಹಬ್ಬಗಳ ಸದಾಚರಣೆಗಳ ಮೂಲ ಆಶಯವೂ ಲೋಕದಲ್ಲಿನ ಶಾಂತಿ, ಕ್ಷೇಮ, ಸಮೃದ್ಧಿ, ಸಾತ್ವಿಕ ಶಕ್ತಿಗಳ ವರ್ಧನೆಗಾಗಿ. ಈ ಕಲಿಯುಗದಲ್ಲಿ ಎಲ್ಲೆಡೆ ಪಸರಿಸಿದ ದುಷ್ಟ ಶಕ್ತಿಯನ್ನು ದಮನಿಸಲು, ಅಜ್ಞಾನವನ್ನು ಕಳೆಯಲು ಮನಮನದಲ್ಲೂ ದುರ್ಗಾದೀಪವನ್ನು ಬೆಳಗಿಸೋಣ. ಮನೆ ಮನೆಯಲ್ಲೂ ಹಬ್ಬವನ್ನು ಆಚರಿಸೋಣ. ದೇಶದೆಲ್ಲೆಡೆ ದೈವಿಕ ಶಕ್ತಿಯನ್ನು ಪ್ರತಿಷ್ಠಾಪಿಸೋಣ. ದೇಶದಲ್ಲಿ ಧರ್ಮವನ್ನು ಉಳಿಸೋಣ, ಬೆಳೆಸೋಣ. ಉದ್ಧಾರದ ಮಾರ್ಗದಲ್ಲಿ ಸಾಗೋಣ.

-ಸುದರ್ಶನ ಸಾಮಗ ಬಿ.ವಿ., ಕಲ್ಮಂಜೆ

Advertisement

Udayavani is now on Telegram. Click here to join our channel and stay updated with the latest news.

Next