ಬೆಂಗಳೂರು: ಭ್ರಷ್ಟಾಚಾರ ರಹಿತ ಆಡಳಿತ ನಡೆಸಿರುವ, ದೇಶದ ರಕ್ಷಣೆಗೆ ಒತ್ತು ನೀಡಿರುವ ಬಿಜೆಪಿಯನನ್ನು ಪುನಃ ಅಧಿಕಾರಕ್ಕೆ ತರಲು ಮತದಾರರು ತಮ್ಮನ್ನು ಬೆಂಬಲಿಸಬೇಕು ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಮನವಿ ಮಾಡಿದರು. ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ಭಟ್ಟರಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪ ಗುರುವಾರ ಬೆಳಗ್ಗೆ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಪಾಕಿಸ್ತಾನ ಕಾಲು ಕೆರೆದುಕೊಂಡು ಗಡಿಯಲ್ಲಿ ತಂಟೆ ಮಾಡಿದರೆ ಹಿಂದಿದ್ದ ಸರಕಾರಗಳು ಕಠಿಣ ಕ್ರಮ ಕೈಗೊಳ್ಳುತ್ತಿರಲಿಲ್ಲ. ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ, ಪಾಕ್ಗೆ ನಡುಕ ಹುಟ್ಟಿಸಿದ್ದಾರೆ. ಸೈನಿಕರಿಗೆ ಬೆಂಬಲ ನೀಡಿ, ವೈರಿಗೆ ತಕ್ಕ ತಿರುಗೇಟು ನೀಡಿದ್ದಾರೆರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪುಲ್ವಾಮ ದಾಳಿ ನಂತರ ಪ್ರಧಾನಿ, ಸೈನಿಕರ ಬೆಂಬಲಕ್ಕೆ ನಿಂತರು. ಪರಿಣಾಮ, ಪಾಕಿಸ್ತಾನದ ಬಾಲಾಕೋಟ್ನ ಉಗ್ರರ ಶಿಬಿರಗಳ ಮೇಲೆ ದಾಳಿ ಮಾಡಿ ಉಗ್ರರನ್ನು ಮಟ್ಟ ಹಾಕಲಾಯಿತು. ಇದು ದೇಶದ ರಕ್ಷಣೆ ವಿಷಯದಲ್ಲಿ ಮೋದಿಯವರು ಕೈಗೊಂಡ ದಿಟ್ಟ ಕ್ರಮಕ್ಕೆ ಸಾಕ್ಷಿ ಎಂದು ಬಣ್ಣಿಸಿದರು.
ರಕ್ಷಣೆಯಲ್ಲಿ ರಾಜಿ ಇಲ್ಲ: ಮಾಜಿ ಶಾಸಕ ನಂದೀಶ್ ರೆಡ್ಡಿ ಮಾತನಾಡಿ, ದೇಶದ ರಕ್ಷಣೆ ವಿಷಯದಲ್ಲಿ ಬಿಜೆಪಿ ಎಂದಿಗೂ ರಾಜಿಯಾಗುವುದಿಲ್ಲ. ಐದು ವರ್ಷಗಳ ಬಿಜೆಪಿ ಆಡಳಿತ ಇದಕ್ಕೆ ಸಾಕ್ಷಿಯಾಗಿದೆ. ಕಳೆದ ಬಾರಿ ಬೆಂಬಲಿಸಿದಂತೆ ಈ ಬಾರಿಯೂ ಸದಾನಂದಗೌಡರನ್ನು ಕ್ಷೇತ್ರದ ಜನ ಬೆಂಬಲಿಸಬೇಕು. ಸರಳ ಸಜ್ಜನಿಕೆಯ ಸದಾನಂದಗೌಡರು, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಆದ್ದರಿಂದ ಅವರನ್ನು ಪುನರಾಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಚಿದಾನಂದ್, ಕೇಶವಮೂರ್ತಿ, ವೀರಣ್ಣ ಮತ್ತಿತರರು ಹಾಜರಿದ್ದರು.
ಬೃಹತ್ ಬೈಕ್ ರ್ಯಾಲಿ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರು ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕೆ.ಆರ್ .ಪುರ ವಿಧಾನಸಭೆ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಮೂಲಕ ಬಿರುಸಿನ ಪ್ರಚಾರ ಕೈಗೊಂಡರು. ಭಟ್ಟರಹಳ್ಳಿಯ ಆಂಜನೇಯ ಸ್ವಾಮಿ ದೇವಾಲಯದಿಂದ ಆರಂಭವಾದ ರ್ಯಾಲಿ, ಮೇಡಹಳ್ಳಿ, ರಾಮನ್ ದೇವಸ್ಥಾನ, ವೈಟ್ ಸಿಟಿ ಲೇಔಟ್, ಸೀಗೇಹಳ್ಳಿ, ಸೆಲ್ವರಾಜ್ ಲೇಔಟ್, ಬಸವನಪುರ, ದೇವಸಂದ್ರ, ವಿಜಿನಾಪುರ, ಕಲ್ಕೆರೆ, ಭೋವಿ ಕಾಲೋನಿ, ಜಯಂತಿ ಗ್ರಾಮ ಜಂಕ್ಷನ್, ಆನೆಪ್ಪ ಸರ್ಕಲ…, ಕೆ.ಚನ್ನಸಂದ್ರ ಮತ್ತಿತರ ಕಡೆ ಸಾಗಿತು.