Advertisement

ಕೊಳವೆ ಬಾವಿಗಳಿಗೆ ವಿದ್ಯುತ್‌ ಪೂರೈಸಿ

12:36 PM Aug 17, 2019 | Suhan S |

ಶ್ರೀನಿವಾಸಪುರ: ಸಮುದಾಯ ಭವನಗಳಿಗೆ ಬಿಡುಗಡೆಯಾಗಿರುವ ಹಣ ಒಂದು ಪೈಸೆ ದುರ್ಬಳಕೆ ಮಾಡಬಾರದು. ಜನರಿಗೆ ಕುಡಿಯುವ ನೀರಿನ ಕೊರತೆ ಆಗದಂತೆ, ಗ್ರಾಮೀಣ ಭಾಗದ ಕೆಲವು ಕಡೆ 24 ಗಂಟೆ ಕರೆಂಟ್ ನಿಲ್ಲಿಸಿ ಗ್ರಾಮಸ್ಥರ ಕೊಳವೆ ಬಾವಿಗಳಿಗೆ ವಿದ್ಯುತ್‌ ಕೊಡಬೇಕೆಂದು ಬೆಸ್ಕಾಂ ಅಧಿಕಾರಿಗಳಿಗೆ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ನಿರ್ದೇಶನ ಮಾಡಿದರು.

Advertisement

ತಾಲೂಕಿನ ಹೊಗಳಗೆರೆ ಮಾವು ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನೆ, ತಾಲೂಕಿನ ವಿವಿಧ ಇಲಾಖೆ ಮತ್ತು ಪಿಡಿಒಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ಕ್ರಮ ಕೈಗೊಂಡು, ಸಮುದಾಯ ಭವನಗಳಿಗೆ ಹಣ ಸಮರ್ಪಕವಾಗಿ ಬಳಸಬೇಕೆಂದು ತಿಳಿಸಿದರು.

ಪ್ರಗತಿಗೆ ಸೂಚನೆ: ಅಧಿಕಾರಿಗಳಿಂದ ಪಂಚಾಯಿತಿ ಸದಸ್ಯರಿಂದ ಮಾಹಿತಿ ಪಡೆದ ಶಾಸಕರು, ಸರತಿಯಲ್ಲಿ ಪಂಚಾಯ್ತಿ ಅಧಿಕಾರಿಗಳನ್ನು ಕರೆದು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು, ಉದ್ಯೋಗ ಖಾತ್ರಿ, ಬಡವರಿಗೆ ವಸತಿ ಹಾಗೂ ಗ್ರಾಮಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನಗಳ ನಿರ್ಮಾಣ ಕುರಿತು ಪ್ರಥಮ ಆದ್ಯತೆ ನೀಡಿದ ಪ್ರಗತಿಗೆ ಸೂಚಿಸಿದರು. ಮಳೆ ಇಲ್ಲದೆ ಭೂಮಿ ಬರಡಾಗಿ ನೀರಿನ ಸಮಸ್ಯೆ ಬಗೆಹರಿಸಲು ಭಯವಾಗುತ್ತಿದೆ. ಪಿಡಿಒ ಅವರಿಂದ ಮಾಹಿತಿ ಪಡೆದ ಅವರು, ಚಲ್ದಿಗಾನಹಳ್ಳಿ ಪಂಚಾಯಿ ವ್ಯಾಪ್ತಿಯಲ್ಲಿ ಈಗ ಕೆಲವು ಗ್ರಾಮಗಳ ಬಳಿ ಕೊಳವೆ ಬಾವಿಗಳಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. 24 ಗಂಟೆ ಕರೆಂಟ್ ಕೊಟ್ಟು ಗ್ರಾಮ ಉಪಯೋಗಕ್ಕಾಗಿ ಕೊರೆದಿರುವ ಕೊಳವೆ ಬಾವಿಗಳು ಬತ್ತಿಹೋಗುತ್ತಿವೆ ಎಂದು ತಿಳಿಸಿದರು.

ಅವಶ್ಯವಿದ್ದಡೆ ಕರೆಂಟ್ ಕೊಡಿ: ಈ ವೇಳೆ ಬೆಸ್ಕಾಂ ಇಲಾಖೆ ಅಧಿಕಾರಿಗಳನ್ನು ಕರೆದು ಈ ಕೂಡಲೇ ಸಾರ್ವಜನಿಕರಿಗೆ ನೀರಿನ ಸಮಸ್ಯೆ ಆಗುತ್ತಿರುವ ಕಡೆ ಮಳೆ ಬರುವವರೆಗೆ 24 ಗಂಟೆ ಕರೆಂಟ್ ಸ್ಥಗಿತಗೊಳಿಸಿ, ಅತ್ಯವಸರವಿರುವ ಕಡೆಯಲ್ಲಿ ಕೊಟ್ಟು ಜನರ ಹಿತ ಕಾಯಬೇಕೆಂದು ಸೂಚಿಸಿದರು.

ಎತ್ತಂಗಡಿ ಮಾಡಿ: ಕೇತಗಾನಹಳ್ಳಿ ಮತ್ತು ಮೀಸಗಾನಹಳ್ಳಿ ಸಮೀಪ ಸರ್ಕಾರಿ ಕೊಳವೆ ಬಾವಿಯಿಂದ ಪಟ್ಟಭದ್ರರು ನೀರು ಬಳಸಿಕೊಂಡು ಕೃಷಿ ಬೆಳೆಗಳಿಗೆ ಬಳಸುತ್ತಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಅಧಿಕಾರಿಗಳು ಭಯ ಬಿದ್ದು ಹೇಳುತ್ತಿಲ್ಲ. ಅವರು ಎಂತಹ ಪ್ರಭಾವುಗಳಾದರೂ ಪರವಾಗಿಲ್ಲ. ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿ ಎತ್ತಂಗಡಿ ಮಾಡಬೇಕೆಂದು ಸರ್ಕಲ್ ಇನ್ಸ್‌ ಪೆಕ್ಟರ್‌ ರಾಘವೇಂದ್ರ ಪ್ರಕಾಶ್‌ ಅವರಿಗೆ ಖಡಕ್ಕಾಗಿ ತಿಳಿಸಿದರು.

Advertisement

ಸಿಇಒ ಎಚ್ಚರಿಕೆ: ನೀರಿನ ಕೊರತೆಯಾದರೆ ಕೂಡಲೇ ಕೊಳವೆ ಬಾವಿಗಳು ಕೊರೆಸಿ ಸಮಸ್ಯೆ ಪರಿಹರಿಸುತ್ತೇನೆ. ಆದಷ್ಟು ಬೇಗ ಹಣ ಬಿಡುಗಡೆ ಮಾಡಿಸುತ್ತೇನೆಂದ‌ು ಗುತ್ತಿಗೆದಾರ ಕೃಷ್ಣಾರೆಡ್ಡಿ ಅವರಿಗೆ ಸಲಹೆ ಮಾಡಿದರು. 14ನೇ ಹಣಕಾಸು ಯೋಜನೆಯ ಹಣ ಶೇ.50 ಭಾಗ ಕುಡಿಯುವ ನೀರಿಗೆ ಬಳಸಬೇಕು. ಉಳಿದ ಹಣ ರಸ್ತೆ ಅಭಿವೃದ್ಧಿ, ಕೊಳವೆ ಬಾವಿಗಳ ರಿಪೇರಿಗೆ ಬಳಸಬೇಕು. ಇಲ್ಲವಾದರೆ ಹಣ ಬಿಡಿಗಡೆ ಮಾಡುವುದಿಲ್ಲವೆಂದು ಪಿಡಿಒಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಜಿ.ಜಗದೀಶ್‌ ಎಚ್ಚರಿಕೆ ನೀಡಿದರು.

ಅಂಬೇಡ್ಕರ್‌ ಭವನ, ವಾಲ್ಮಿಕಿ ಸಮುದಾಯ ಭವನ, ಬಲಿಜಗರ ಸಮುದಾಯ ಭವನ ಸೇರಿದಂತೆ ನಾನಾ ಗ್ರಾಮಗಳಲ್ಲಿ ನಿರ್ಮಿಸಲು ಮಂಜೂರಾಗಿರುವ ಕಟ್ಟಡಗಳಲ್ಲಿ ಹಣ ತಿನ್ನುವುದು ಬೇಡ. ಎಲ್ಲಾ ಸಮುದಾಯಗಳಲ್ಲಿನ ಬಡವರಿಗೆ ಈಗ ಮಂಜೂರಾಗಿರುವ 3,800 ವಸತಿಗಳು ವಿತರಿಸಲು ಪಕ್ಷಾತೀತವಾಗಿ ಫ‌ಲಾನುಭವಿಗಳನ್ನು ಆಯ್ಕೆ ಮಾಡಿ ಬಡವರಿಗೆ ಆಶ್ರಯ ಕಲ್ಪಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ರಸ್ತೆ ಅಭಿವೃದ್ಧಿ: ಲಕ್ಷ್ಮೀಪುರ, ಪುರಗೂರಕೋಟೆ, ಗೌನಿಪಲ್ಲಿ, ಕೋಡಿಪಲ್ಲಿ, ಲಕ್ಷ್ಮೀಸಾಗರ, ಬೈರಗಾನಹಳ್ಳಿ, ದಳಸನೂರು ಸೇರಿದಂತೆ 25 ಪಂಚಾಯ್ತಿಗಳ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಇನ್ನೂ ಗ್ರಾಮಗಳಲ್ಲಿ ಅಭಿವೃದ್ಧಿ ಆಗದ ರಸ್ತೆಗಳು ಮತ್ತು ಆಗಬೇಕಾಗಿರುವ ರಸ್ತೆಗಳ ಬಗ್ಗೆ ಪೂರ್ಣ ವಿವರ ಪಡೆದು ಜನರಿಗೆ ನೆರವಾಗುವಂತೆ ತಿಳಿಸಿದರು.

ಎ.ಕೊತ್ತೂರು, ಕರಿಪಲ್ಲಿ, ಚೀಲೇಪಲ್ಲಿ, ಬಂತೋನಿ ಕಟವ, ಜಿಂಕಲವಾರಿಪಲ್ಲಿ, ಮಂಚಿನೀಲ್ಲಕೋಟೆ ಸೇರಿದಂತೆ ಕೋಡಿಪಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಗ್ರಾಮ, ತಾಡಿಗೋಳು 1 ಗ್ರಾಮ, ನೆಲವಂಕಿ 1 ಗ್ರಾಮ, ಪುಲಗೂರಕೋಟೆ, ಸೋಮಯಾಜಲಹಳ್ಳಿ ಸೇರಿದಂತೆ ವಿವಿಧಡೆಯಿಂದ ಸಮಸ್ಯೆ ಬಗ್ಗೆ ಕರೆ ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು. ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಉಪವಿಭಾಗಾಧಿಕಾರಿ ವಿ.ಸೋಮಶೇಖರ್‌, ತಾಪಂ ಇಒ ಆನಂದ್‌, ವಿ.ನಾರಾಯಣಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ಕುಮಾರ್‌, ಎಪಿಎಂಸಿ ಅಧ್ಯಕ್ಷ ರಾಜೇಂದ್ರ ಪ್ರಸಾದ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next