Advertisement

ನಾಡಿಗೆ ಒಬ್ಬರೇ ಸುಮತೀಂದ್ರರು 

06:00 AM Aug 12, 2018 | |

ಹೌದು, ಕವಿ ಸುಮತೀಂದ್ರ ನಾಡಿಗರು ಬಾಳಿನ ಪಯಣ ಮುಗಿಸಿ ನೇಪಥ್ಯಕ್ಕೆ ಸರಿದು ಹೋದರು. ಆದರೂ ಅವರು ನಮ್ಮ ಕಣ್ಣುಗಳಲ್ಲಿ , ಮನಸ್ಸಿನಲ್ಲಿ, ಹೃದಯದಲ್ಲಿ ಇದ್ದಾರೆ. ಕೊನೆಯ ದಿನಗಳಲ್ಲಿ ಅನಾರೋಗ್ಯದ ಹಲವಾರು ಎಳೆಗಳು ಅವರನ್ನು ಸುತ್ತಿಕೊಂಡರೂ ಅಪ್ಪಟವಾದ, ಅವರದೇ ಪೇಟೆಂಟ್‌ ಬ್ಯಾಂಡ್‌ ಆದ ಕಿರುನಗೆಯ ಪಣತಿ ದೀಪವನ್ನು ಹಚ್ಚಿಟ್ಟುಕೊಂಡೇ ಇದ್ದರು. ಜೀವನೋತ್ಸಾಹ ತುಂಬಿಯೇ ಇತ್ತು.  “”ಹೇಗಿದೆ ಸಾರ್‌ ಬೆನ್ನುನೋವು, ಕಾಲುನೋವು” ಎಂದು ಕೇಳಿದರೆ, “”ನಾನು ಎದ್ದಾಗ ಎದ್ದು ನಿಲ್ಲುತ್ತ, ಕುಳಿತಾಗ ಕುಳಿತುಕೊಳ್ಳುತ್ತ , ನಾಡಿಗನ ಜತೆಗೇ ಇದ್ದು ಬೇಸರವಾದಾಗ, ಸರ್ರನೆ ಮತ್ತೆಲ್ಲಿಗೋ ಹೋಗುತ್ತ, ತಾಳಲಾರದೆ ಮತ್ತೆ ಹಿಂತಿರುಗಿ ವಲಸೆ ಬರುತ್ತ ತನ್ನನ್ನು ಮರೆಯದಂತೆ ಪ್ರಯತ್ನ ನಡೆಸಿಕೊಂಡೇ ಇರುತ್ತಾನೆ” ಎಂದು ಕೊರಳು ಓರೆ ಮಾಡಿ ಹೇಳುತ್ತಿದ್ದಾಗ ನಮಗೆ ನೋವಾದರೂ ಅವರು ನೋವಿನಲ್ಲಿದ್ದಂತೆ ಅನಿಸುತ್ತಿರಲಿಲ್ಲ. ಲಿವರ್‌, ಕಿಡ್ನಿ, ಲಂಗ್ಸ್‌ ಅವರ ಮಾತು ಕೇಳುತ್ತಿರಲಿಲ್ಲ. ಆದರೆ, ಈ ಐದಾರು ವರ್ಷಗಳಿಂದ ತೊಂದರೆ ಇದ್ದರೂ ಅವುಗಳಿಗಾಗಿ ಗಾಬರಿಯಾದ ಜಾಯಮಾನವೇ ಅವರದ್ದಾಗಿರಲಿಲ್ಲ. ಹಾಗೆಂದು ನಿರ್ಲಕ್ಷಿಸುತ್ತಿರಲಿಲ್ಲ. ಸುಖ ದುಃಖೇ ಸಮೇಕೃತ್ವಾ ಲಾಭಾ ಲಾಭೌ ಜಯಾ ಜಯೌ ಎಂಬುದನ್ನು ಅಕ್ಷರಶಃ ನಂಬಿದ್ದರು, ಪಾಲಿಸಿದರು. ತನಗಿಂತ ಹಿರಿಯರ ಜತೆ ಎಷ್ಟು ಶ್ರದ್ಧೆ ಗೌರವದಿಂದ ಮಾತನಾಡುತ್ತಿದ್ದರೋ, ಕಿರಿಯರ ಬಳಿಯೂ ಅದೇ ಪ್ರೀತ್ಯಾದರ ಅವರ  ಸ್ವಭಾವವಾಗಿತ್ತು.

Advertisement

ನಾಡಿಗರ ಯಶಸ್ವೀ ಕವಿತೆಗಳಲ್ಲಿ ಒಂದಾದ ಕಪ್ಪು ದೇವತೆ ಎಂಬ ಕವಿತೆಯಲ್ಲಿ “ನನ್ನಂತರಂಗದ ಭೂತ ಅಮರತ್ವ ಪಡೆಯುವುದೇ ನನಗೆ ಬೇಕು’ ಎಂಬ ಸಾಲೊಂದು ಬರುತ್ತದೆ. ಕಪ್ಪು ದೇವತೆ, ನಿಮ್ಮ ಪ್ರೇಮ ಕುಮಾರಿಯ ಜಾತಕ, ಜಡ ಮತ್ತು ಚೇತನ, ನಟರಾಜ ಕಂಡ ಕಾಮನಬಿಲ್ಲು, ಕುಹುಗೀತ, ತಮಾಷೆ ಪದ್ಯಗಳು, ಉದ್ಘಾಟನೆ, ಭಾವಲೋಕ ಎಂಬ ಕವಿತಾ ಸಂಕಲನಗಳಲ್ಲದೆ ದಾಂಪತ್ಯ ಗೀತ, ಪಂಚಭೂತ ಎಂಬ ಖಂಡಕಾವ್ಯಗಳ ಮೂಲಕ ನವ್ಯದ ಪೋಷಾಕುಗಳೊಂದಿಗೆ ಬಂದ ಪಂಚಭೂತದ ಮೂಲಕ ಋಷಿ ಪರಂಪರೆಗೆ ಮಾರ್ಗ ನಿರ್ಮಿಸಲು ಮುಂದಾದರು. ನವ್ಯದ ಸರಕುಗಳು ಭಾರತೀಯ ಸಾಹಿತ್ಯ ಪರಂಪರೆಯ ಆಷೇìಯ ಚಿಂತನಗಳ ಎದುರು ತೀರಾ ದುರ್ಬಲ ಎಂದು ಅವರಿಗನಿಸುತ್ತ ಹೋದದ್ದೇ ಇದಕ್ಕೆ ಕಾರಣ. ಕನ್ನಡದ ಮುಂಚೂಣಿಯ ಕವಿಯಾಗಿದ್ದ ಸುಮತೀಂದ್ರ ನಾಡಿಗರು 1985ರಲ್ಲಿ ಹೊರತಂದ ದಾಂಪತ್ಯಗೀತ ಖಂಡಕಾವ್ಯದಲ್ಲೇ ಕನ್ನಡಕ್ಕೆ ಭಿನ್ನವಾದ ಕಾವ್ಯಧ್ವನಿ ಉಕ್ಕಿಸುವ ಹಣ್ಣು ಕಳಚಿದರೇನು ಹಣ್ಣಿನೊಳಗಡೆ ಬೀಜ, ಬೀಜದೊಳಗಡೆ ಹಣ್ಣು ಎಷ್ಟೊಂದಿವೆ ಪ್ರಶ್ನೆ ಎತ್ತಿದರು.

ಹಣ್ಣು ಕೊಯ್ದರು ಸಾವು ಬದುಕು ಸಾಯುವುದಿಲ್ಲ, ಮೃತ್ಯು ಜತೆ ಹೋರಾಟ ನಡೆಸುತ್ತಿದೆ.
ಹಲ್ಲುಗಳ ನಡುವಿರುವ ನಾಲಗೆಯ ಹಾಗೆಯೇ ಮೃತ್ಯು ದವಡೆಯ ಒಳಗೆ ಬದುಕಾಡಿದೆ –
ಎಂದಂದು ಸಾವು-ಬದುಕಿನ ಬಗೆಗಿನ ವ್ಯಾಖ್ಯೆಯನ್ನು ನಮ್ಮ ಭಾರತೀಯ ಪರಂಪರೆಯ ಉಪನಿಷದ್‌ನಲ್ಲಿ ಅಡಕಗೊಂಡ ಮೀಮಾಂಸೆಯಾದ ಓಂ ಪೂರ್ಣಮದಃ ಪೂರ್ಣಮಿದಂ, ಪೂರ್ಣಾತ್‌ ಪೂರ್ಣ ಮುದಚ್ಯತೆ, ಪೂರ್ಣಸ್ಯ ಪೂರ್ಣಮದಯ ಪೂರ್ಣಮೇವ ವಶಿಷ್ಯತೆ, ಓಂ ಶಾಂತಿಃ, ಶಾಂತಿಃ, ಶಾಂತಿಃ- ಈ ಸಾಲುಗಳನ್ನು-(ಅಪೂರ್ಣವಾದುದನ್ನು ಪೂರ್ಣತ್ವದ ಸಹಾಯದಿಂದ ಸ್ವೀಕರಿಸಿ, ಅಪೂರ್ಣದಲ್ಲೇ ಒಂದು ಪೂರ್ಣತ್ವವನ್ನು ಸಾಧಿಸಿಕೊಳ್ಳುವ ಕ್ರಿಯೆಗೆ ನಾಡಿಗರು ವಾಲಿದ್ದು ಸುಳ್ಳಲ್ಲ. ದಾಂಪತ್ಯಗೀತದಿಂದಲೇ ಅವರು ಕವಿ ನಾಡಿಗರಾದವರು ಋಷಿಯಾಗಲು ಹೆಜ್ಜೆ ಇರಿಸುತ್ತಾರೆ. ಪಂಚಭೂತ ಎಂಬ 2000ನೇ ಇಸವಿಯಲ್ಲಿ ಹೊರಬಂದ ಅವರ ಖಂಡಕಾವ್ಯದ ಜಿಜ್ಞಾಸೆಯು ಭವವನ್ನು , ದಿವವನ್ನು- ಅಪೂರ್ಣದಿಂದ ಪೂರ್ಣವನ್ನು ಅರಿಯುವ ಪ್ರಯತ್ನವಾಗಿ ಶ್ರೇಷ್ಠ ಎನಿಸುತ್ತದೆ.) ಅರಿತು ಭಿನ್ನತೆಗಾಗಿ ಪ್ರಯತ್ನಿಸಿದರು. ಇಶಾ ಉಪನಿಷದ್‌ನಲ್ಲಿ ಬರುವ ಈ ಸಾಲುಗಳಿಗೆ ಮನಸೋತು, ಸಂಸ್ಕೃತವನ್ನು ತಿಳಿದ ವಿದ್ವಾಂಸರಿಂದ ಶ್ರುತಿ, ಉಪನಿಷದ್‌, ಪುರಾಣ, ವೇದ, ಉಪವೇದ, ವೇದಾಂಗ, ಧರ್ಮಶಾಸ್ತ್ರಗಳನ್ನು ತಿಳಿಯಲು ಮುಂದಾಗುತ್ತಾರೆ.

ಆಗಲೇ ಅವರ ಹೊಸ ಖಂಡಕಾವ್ಯ ಶ್ರೀವತ್ಸ ಸ್ಮತಿ ಹೊರಬರಬೇಕಿತ್ತು. ಕೆಲವು ಕಾರಣಗಳಿಂದಾಗಿ ಅದು ಅವರು ಜೀವಿಸಿದ್ದಾಗಲೇ ಬರಲು ಸಾಧ್ಯವಾಗಲಿಲ್ಲ. ಆದರೆ ಅವರ ಕಾವ್ಯ ಜೀವನದ ಬಗೆಗಿನ ಶ್ರದ್ಧೆ , ಸಿದ್ಧಿ , ಬುದ್ಧಿ , ಮೇಧಾಶಕ್ತಿ, ಬಲಗಳೆಲ್ಲ ಅನನ್ಯವಾಗಿ ಹೊರಹೊಮ್ಮಿ ಮೂರ್ತಗೊಳಿಸಿದ ಶ್ರೀವತ್ಸ ಸ್ಮತಿ ವಾಸ್ತವವಾಗಿ ಭಾರತೀಯ ಪರಂಪರೆಯಲ್ಲಿ ಸುಖಮಯವಾದ ಜೀವನಕ್ಕೆ ಅವಶ್ಯವಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಬಗೆಗೆ ವ್ಯಾಖ್ಯಾನ ನಡೆಸುತ್ತದೆ.  ಶ್ರೀವತ್ಸ ಸ್ಮತಿ ಹೊರಬಂದಾಗ, ಹೊಸದೇ ರೀತಿಯಲ್ಲಿ ಓದಿ ಅರಗಿಸಿಕೊಳ್ಳಬೇಕಾದ ಕೃತಿಯಾಗುವುದರಲ್ಲಿ ಅನುಮಾನವಿಲ್ಲ. ಇಂದಿನ ಸೋಲುತ್ತಿರುವ ದಾಂಪತ್ಯಗಳು ಭಾರತವನ್ನು  ದುರ್ಬಲಗೊಳಿಸುತ್ತಿವೆ ಎಂಬುದನ್ನು ಹೇಳುತ್ತ, ದೇವೇಂದ್ರಾಣಿ ನಮಸ್ತುಭ್ಯಂ ದೇವೇಂದ್ರ ಪ್ರಿಯ ಭಾಮಿನಿ ಎನ್ನುವ ನಮ್ಮ ಪರಂಪರೆಯ ಭದ್ರ ಜೀವನಕ್ಕೆ ಬುನಾದಿಯಾಗುವ ಶಚಿ ಮಂತ್ರವನ್ನು ವಿಶ್ಲೇಷಿಸುತ್ತಾರೆ.

ನಿಜ, ಈ ಸಂಕಲನ ಹೊರ ಬರುವಾಗ ನಾಡಿಗರು ಇರಬೇಕಿತ್ತು. ಮಕ್ಕಳಿಗಾಗಿ ವಿಪುಲ ಕೃಷಿ ನಡೆಸಿದ್ದ ನಾಡಿಗರು, ಇನ್ನಿಷ್ಟು ಬರೆಯುವ ಚೈತನ್ಯ, ಅರ್ಹತೆ ಇಟ್ಟುಕೊಂಡು ಪಂಡಿತರಿಂದ ಹಿಡಿದು ಎಲ್ಲರಿಗೂ ಸಲ್ಲುವ ಕೃಷಿ ನಡೆಸಬಲ್ಲವರಾಗಿದ್ದರು. ಪಂಡಿತನ ಆತ್ಮ ಎಂಬ ಪುಸ್ತಕದ ಬಗೆಗಿನ ಕೆಲವು ಟಿಪ್ಪಣಿಗಳನ್ನು ಹೇಳುತ್ತ, ಜ್ಞಾನದ ಶಿಖರ ಏರಿದ ಮೇಲೆ ಮತ್ತೆ ಕತ್ತಲನ್ನೇ ಸೃಷ್ಟಿಸಿಕೊಳ್ಳುವ ಪಂಡಿತರ ಬಗ್ಗೆ ಬರೆಯಬೇಕಿರುವ ವಿಚಾರ ಪ್ರಸ್ತಾಪಿಸಿದ್ದರು. ವ್ಹಿಸ್ಕಿ ಮತ್ತು ಸಿಗರೇಟ್‌ ಅವರಿಗೆ ಪ್ರಿಯವಾದ ಘಟಕಗಳಾಗಿದ್ದವು. ಆದರೆ, ಅವುಗಳಿಂದ ಗಾವುದ ದೂರಕ್ಕೆ ಬಂದು ನಿಂತಿದ್ದರು. ಎಲ್ಲೋ ಒಮ್ಮೊಮ್ಮೆ ವಾಸ್ತವವಾಗಿ ತೀರಾ ಕಡಿಮೆ ಆಗಿತ್ತು. ಅನುವಾದಗಳನ್ನೂ ಮಾಡಿದ್ದ ನಾಡಿಗರಿಗೆ ಬಂಗಾಲಿ ಕವಿತೆಗಳ ಅನುವಾದ, ಅಯೊನೆಸ್ಕೊ ಬರೆದಿದ್ದ ಬೊಕ್ಕ ತಲೆಯ ನರ್ತಕಿ ಅಪಾರ ಪ್ರಶಂಸೆ ತಂದುಕೊಟ್ಟಿದ್ದವು. 

Advertisement

ಬೇಂದ್ರೆಯವರ ಜತೆ ಅವರ ಜಗಳವಿತ್ತು. ತನ್ನ ಗುರು, ಅಮೃತನಿಧಿ, ಸ್ನೇಹಿತ ಎಂದು ಸದಾ ಗೌರವಾದರ ಹೊಂದಿದ್ದ ಗೋಪಾಲಕೃಷ್ಣ ಅಡಿಗರ ಕಾವ್ಯದ ಬಗೆಗಿನ ವಿಮರ್ಶೆಯನ್ನು ನಡೆಸುತ್ತಿದ್ದರು. ಅವರ ಕೊರತೆ ಎಲ್ಲಿದೆ ಎಂಬುದರ ಬಗೆಗೂ ತನ್ನನ್ನು ಬಿಚ್ಚಿಕೊಳ್ಳುತ್ತಿದ್ದರು. ಆದರೆ, ಕೆಲವರು ಅಡಿಗರನ್ನು ಬಳಸಿಕೊಂಡು ಮೆರೆದರಲ್ಲ, ಅಡಿಗರನ್ನು ಮೂಲೆಗೆ ತಳ್ಳಿದರಲ್ಲ ಎಂಬುದರ ಬಗ್ಗೆ ದುಃಖೀಸುತ್ತಿದ್ದರು, ಕೋಪಗೊಳ್ಳುತ್ತಿದ್ದರು.

ತರುಣರಾಗಿದ್ದಾಗ ತನ್ನ ಕವಿತೆಗಳನ್ನು ಅಡಿಗರಿಗೆ ತೋರಿಸಿದಾಗ, “ಕವಿತೆಗಳಲ್ಲಿ ಕಾವ್ಯದ ಕಾವು ಕಾಣಿಸುತ್ತಿಲ್ಲ ನಾಡಿಗರೆ’ ಎಂದು ಹೇಳಿದಾಗ ಅಡಿಗರ ಬಗ್ಗೆ ಅಸಾಧ್ಯವಾದ ಸಿಟ್ಟು ಒತ್ತರಿಸಿ ಬಂದುದನ್ನು ನೆನಪಿಸಿಕೊಂಡು ಹೇಳುತ್ತಿದ್ದರು. ಆದರೆ, ನಂತರ ತನಗೇ ಅದು ಹೌದು ಎಂದನಿಸಿದಾಗ ನಾಚಿಕೆಯಾಗಿದ್ದ ಬಗೆಗೂ ಹೇಳುತ್ತಿದ್ದರು. ನಂತರ ಎಷ್ಟೋ ವರ್ಷಗಳ ನಂತರ ಅಡಿಗರೇ, “”ನಾಡಿಗ್‌, ನಾನೆಲ್ಲೋ ನಿಮಗೆ, ನಿಜಕ್ಕೂ ಕೊಡಬೇಕಾದ ಧ್ಯಾನವನ್ನು ಕೊಡಲಿಲ್ಲ ಎಂದು ಅನಿಸುತ್ತದೆ” ಎಂದು ನೊಂದಿದ್ದರಂತೆ. “”ಬಿಡಿ ಅಡಿಗರೆ, ಜೀವನದ ಸೌಂದರ್ಯ ಎಲ್ಲ ಸೋಲುಗೆಲುವುಗಳನ್ನು ಮೀರಿ ನಿಂತಿದೆ” ಎಂದು ತಾನು ಉತ್ತರಿಸಿದ ಬಗೆಗೆ ನಾಡಿಗ್‌ ಹೇಳುತ್ತಿದ್ದರು.

ಈಗ ಸುಮಾರು 28 ವರ್ಷಗಳ ಹಿಂದಿನ ಮಾತು. ನನ್ನ ಕವಿತೆಗಳನ್ನು ನಾಡಿಗರ ಭಾವ, ಖ್ಯಾತ ವಿಮರ್ಶಕ, ಚಿಂತಕ ಶ್ರೀನಿವಾಸ್‌ ರಾವ್‌ ಅವರಿಗೆ “ದಯಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ’ ಎಂದು ವಿನಂತಿಸಿ ಕೊಟ್ಟಿದ್ದೆ.  ಶ್ರೀನಿವಾಸ್‌ ರಾವ್‌ ನನ್ನ ಕವಿತೆಯ ಶಕ್ತಿಯ ಕುರಿತೇ ಮಾತನಾಡಿದ್ದರು. ಪೂರ್ತಿ ಖುಷಿಯಾಗಿದ್ದೆ ನಾನು. ಆದರೆ, ಇದನ್ನು ಕೇಳಿಸಿಕೊಂಡಿದ್ದ ನಾಡಿಗರು ನನ್ನನ್ನು ಒಂದೆಡೆ ಕರೆದು, “”ಮಹಾಬಲಮೂರ್ತಿ, ನಿಮ್ಮ ಕವಿತೆಗಳು ದುರ್ಬಲವಾಗಿವೆ. ಗಟ್ಟಿಯಾಗಬೇಕು. ಆಗುವ ಶಕ್ತಿ ಇದೆ” ಎಂದು ಅಂದಿದ್ದರು. ಸ್ವರ್ಗ ಮತ್ತು ಪಾತಾಳಗಳ ಎರಡೂ ದರ್ಶನ ಆ ದಿನ ನನಗಾಗಿತ್ತು. ಆದರೆ ನಾಡಿಗರು ನನ್ನ ಕತೆ, ಕಾದಂಬರಿಗಳನ್ನು ಮುಕ್ತವಾಗಿ ಹೊಗಳುತ್ತಿದ್ದರು. ಇತ್ತೀಚೆಗೆ ನನ್ನ ಕವಿತೆಗಳನ್ನೂ ಮೆಚ್ಚಿಕೊಳ್ಳುತ್ತಿದ್ದರು. ವಾಸ್ತವವನ್ನು ಮುಚ್ಚಿಡದೇ, ತೆರೆದು ಹೇಳಿಯೇ ತೀರುತ್ತಿದ್ದ ನಾಡಿಗರನ್ನು ನೆನೆದು ಈಗ ಕಣ್ಣು ನೀರಿಂದ ತುಂಬಿಕೊಳ್ಳುತ್ತಿವೆ.

ಮಹಾಬಲಮೂರ್ತಿ ಕೊಡ್ಲೆಕೆರೆ

Advertisement

Udayavani is now on Telegram. Click here to join our channel and stay updated with the latest news.

Next