Advertisement

ಚುನಾವಣಾ ಸ್ಪರ್ಧೆಗೆ ಸುಮಲತಾ ಪೂರ್ವಸಿದ್ಧತೆ

12:45 AM Feb 08, 2019 | Team Udayavani |

ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಂಬರೀಶ್‌ ಪತ್ನಿ ಸುಮಲತಾ ತೆರೆ-ಮರೆಯಲ್ಲಿ ಪೂರ್ವ ಸಿದ್ಧತೆ ಆರಂಭಿಸಿದ್ದಾರೆ. ರಾಜಕಾರಣದಲ್ಲಿ ಅಂಬರೀಶ್‌ ಜತೆ ಆಪ್ತರಾಗಿದ್ದ ನಾಯಕರೊಂದಿಗೆ ಚರ್ಚಿಸಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸಲಹೆ ಹಾಗೂ ಮಾರ್ಗದರ್ಶನ ಪಡೆಯು ತ್ತಿದ್ದಾರೆ. ಜತೆಗೆ ಚಿತ್ರರಂಗದ ಗಣ್ಯರೊಂದಿಗೆ ಮಾತುಕತೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆಂದು ತಿಳಿದು ಬಂದಿದೆ.

Advertisement

ಮೈತ್ರಿ ಅಭ್ಯರ್ಥಿ ಮಾಡುವಂತೆ ಒತ್ತಡ: ಅಂಬರೀಶ್‌ ರಾಜಕಾರಣದಲ್ಲಿದ್ದ ಸಮಯದಲ್ಲಿ ಅವರಿಗೆ ಆಪ್ತರಾಗಿದ್ದ ಕಾಂಗ್ರೆಸ್‌ ನಾಯಕರಾದ ಎಂ.ಬಿ.ಪಾಟೀಲ್‌, ಕೆ.ಜೆ.ಜಾರ್ಜ್‌, ಎಚ್.ಸಿ.ಮಹದೇವಪ್ಪ, ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌.ಮಲ್ಲಿಕಾರ್ಜುನ ಸೇರಿ ಹಲವಾರು ನಾಯಕರು ಸುಮಲತಾ ಅವರನ್ನು ಮೈತ್ರಿ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡುವಂತೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮೇಲೆ ಒತ್ತಡ ಹೇರುತ್ತಿದ್ದಾರೆ. ಅಂಬರೀಶ್‌ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಜೆಡಿಎಸ್‌ನ ಹಲವು ನಾಯಕರೂ ಕೂಡ ಸುಮಲತಾ ಅವರನ್ನು ಮೈತ್ರಿ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದರೆ ಜೆಡಿಎಸ್‌ಗೆ ರಾಜಕೀಯ ಲಾಭವಾಗಲಿದೆ. ಅದಕ್ಕಾಗಿ ಸುಮಲತಾ ಅವರನ್ನೇ ಕಣಕ್ಕಿಳಿಸುವಂತೆ ಪರೋಕ್ಷವಾಗಿ ಜೆಡಿಎಸ್‌ ವರಿಷ್ಠ ದೇವೇಗೌಡರನ್ನು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.

ಆದರೆ, ದೇವೇಗೌಡರ ಕುಟುಂಬದ ಮೂರನೇ ತಲೆಮಾರು ನಿಖೀಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಆಲೋಚಿಸುತ್ತಿದ್ದು, ಮೈತ್ರಿಯಾದಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕೆಂಬ ಬಗ್ಗೆ ವರಿಷ್ಠರಲ್ಲಿ ಜಿಜ್ಞಾಸೆ ಮೂಡಿಸಿದೆ. ಜೆಡಿಎಸ್‌ನ ಕೆಲ ನಾಯಕರು ಸುಮಲತಾಗೆ ಟಿಕೆಟ್ ನೀಡಿದಲ್ಲಿ ಹಾಲಿ ಪಕ್ಷದ ವರ್ಚಸ್ಸಿಗೆ ಉಂಟಾಗಿರುವ ಹಾನಿ ಹಾಗೂ ಜನರ ಮನಸ್ಸಿನಲ್ಲಿ ಪಕ್ಷದ ಬಗ್ಗೆ ಉಂಟಾಗಿರುವ ಅಸಮಾಧಾನವನ್ನು ದೂರ ಮಾಡಬಹುದೆಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಅಭಿಮಾನಿಗಳ ಒತ್ತಡ: ಜೆಡಿಎಸ್‌ ನಾಯಕರು ಅಂಬರೀಶ್‌ ಕುಟುಂಬದ ವಿರುದ್ಧ ಹಗುರವಾದ ಮಾತುಗಳನ್ನು ಹರಿಯಬಿಟ್ಟ ನಂತರವಂತೂ ಸುಮಲತಾ ಚುನಾವಣಾ ಸ್ಪರ್ಧೆಗೆ ಎಲ್ಲೆಡೆಯಿಂದ ಒತ್ತಡ ಹೆಚ್ಚಿದೆ. ಅಂಬರೀಶ್‌ ಅಭಿಮಾನಿಗಳಂತೂ ಸುಮಲತಾ ಅವರನ್ನು ಚುನಾವಣಾ ಅಖಾಡ ಪ್ರವೇಶಿಸುವಂತೆ ಒತ್ತಾಯಿಸುತ್ತಿದ್ದು, ಅಂತಿಮವಾಗಿ ಸುಮಲತಾ ಶೀಘ್ರವೇ ತಮ್ಮ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಅಂಬರೀಶ್‌ ಅಭಿಮಾನಿಗಳು ಈಗಾಗಲೇ ಗ್ರಾಮಮಟ್ಟದಲ್ಲಿ ಸುಮಲತಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುತ್ತಾ ಪೂರ್ವ ತಯಾರಿ ಆರಂಭಿಸಿದ್ದಾರೆ. ಮೈತ್ರಿ ಪಕ್ಷದ ಅಭ್ಯರ್ಥಿ ಯಾಗದಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಯಾದರೂ ಕಣಕ್ಕಿಳಿಸಲು ನಿರ್ಧರಿಸಿ ಸುಮಲತಾ ಅವರ ಮನವೊಲಿಸುತ್ತಿದ್ದಾರೆ.

Advertisement

ತೆಲುಗು, ತಮಿಳು ಚಿತ್ರರಂಗ ಬೆಂಬಲ: ಜೆಡಿಎಸ್‌ ನಾಯಕರ ಮಾತುಗಳಿಂದ ಧೃತಿಗೆಡದಂತೆ, ಮಾನಸಿಕ ಸ್ಥೈರ್ಯ ಕಳೆದುಕೊಳ್ಳದಂತೆ ತಮಿಳು ಚಿತ್ರರಂಗದ ರಜನೀಕಾಂತ್‌, ತೆಲುಗು ಚಿತ್ರರಂಗದ ಚಿರಂಜೀವಿ, ಮೋಹನ್‌ಬಾಬು ಸೇರಿ ಅನೇಕ ಗಣ್ಯರು ಸುಮಲತಾ ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಪ್ರಯತ್ನ ನಡೆಸಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದರೆ ಸಂಪೂರ್ಣ ಬೆಂಬಲ ನೀಡಿ ಜತೆಗೆ ನಿಲ್ಲುವ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.

ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಸುಮಲತಾ ಪರ ನಿಂತಿದೆ. ಸುಮಲತಾ ಚುನಾವಣೆಗೆ ಸ್ಪರ್ಧಿಸಿದರೆ ಪ್ರಚಾರದ ಉಸ್ತುವಾರಿಯನ್ನು ವಹಿಸಿಕೊಳ್ಳುವುದಾಗಿ ದರ್ಶನ್‌, ಯಶ್‌ ಸೇರಿದಂತೆ ಅಂಬಿ ಆಪ್ತರಾಗಿದ್ದ ನಟ-ನಟಿಯರೆಲ್ಲರೂ ಟೊಂಕ ಕಟ್ಟಿ ನಿಂತಿದ್ದಾರೆ.

ಪರಿಸ್ಥಿತಿ ನಿಭಾಯಿಸುವ ಬಗ್ಗೆ ಆಲೋಚನೆ: ರಾಜಕೀಯ ಬೆಳವಣಿಗೆಗಳು, ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ನಾಯಕರ ಅಭಿಪ್ರಾಯ, ಸಲಹೆ, ಸೂಚನೆ, ಮಾರ್ಗದರ್ಶನಗಳನ್ನೆಲ್ಲಾ ತಾಳೆ ಹಾಕುತ್ತಿರುವ ಸುಮಲತಾ, ಚುನಾವಣೆಗೆ ಸ್ಪರ್ಧಿಸುವುದರಿಂದ ಕುಟುಂಬದ ಮೇಲೆ ಉಂಟಾಗಬಹುದಾದ ಪರಿಣಾಮ, ರಾಜಕೀಯ ಅನುಭವವಿಲ್ಲದೆ ಪ್ರವೇಶ ಮಾಡಿ ಮುಖಭಂಗಕ್ಕೆ ಒಳಗಾಗದಂತೆ ಹಾಗೂ ಅಂಬರೀಶ್‌ ಗೌರವಕ್ಕೆ ಧಕ್ಕೆ ಉಂಟಾಗದಂತೆ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಆಲೋಚಿಸುತ್ತಿದ್ದಾರೆ ಎನ್ನಲಾಗಿದೆ.

ಇದರ ನಡುವೆಯೂ ಲೋಕಸಭಾ ಚುನಾವಣಾ ಸ್ಪರ್ಧೆಗೆ ಮಾನಸಿಕವಾಗಿ ಸಿದ್ಧರಾಗಿರುವಂತೆ ಕಂಡು ಬಂದಿರುವ ಸುಮಲತಾ, ಅಧಿಕೃತವಾಗಿ ರಾಜಕೀಯ ಪ್ರವೇಶವನ್ನು ಖಚಿತ ಪಡಿಸಬೇಕಿದೆ. ಅದು ಶೀಘ್ರವೇ ಹೊರಬೀಳಲಿದೆ ಎನ್ನುವುದು ಅಭಿಮಾನಿಗಳ ಮಾತಾಗಿದೆ. ಸುಮಲತಾ ಫೆ.11ರಿಂದ 15ರವರೆಗೆ ಮಲೇಷಿಯಾ ಪ್ರವಾಸಕ್ಕೆ ತೆರಳಲಿದ್ದು, ಅದಕ್ಕೆ ಮುನ್ನ ಅಥವಾ ನಂತರ ತಮ್ಮ ನಿರ್ಧಾರ ಪ್ರಕಟಿಸಬಹುದೆಂದು ತಿಳಿದು ಬಂದಿದೆ.

ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next