Advertisement

ಸುಳ್ಯ: ಮುಖ್ಯ ರಸ್ತೆಯಲ್ಲೇ ಮಳೆ ನೀರು

02:02 AM Jun 24, 2019 | Team Udayavani |

ಸುಳ್ಯ : ಮುಂಗಾರು ಮಳೆ ಇಳೆಗೆ ಸುರಿಯಲು ಆರಂಭಿಸಿದ ಬೆನ್ನಲ್ಲೇ ನಗರದ ಚರಂಡಿ ಕಥೆ ಬಹಿರಂಗವಾಗಿದೆ. ಅಂದರೆ ಮಳೆ ನೀರು ಹರಿದು ಹೋಗಲು ನಗರದ ಚರಂಡಿಗಳು ಸಿದ್ಧ್ದಗೊಳ್ಳದ ಕಾರಣ ಸಣ್ಣ ಮಳೆಗೂ ರಸ್ತೆ ತೋಡಿನಂತಾಗಿದೆ. ರವಿವಾರ ಮಧ್ಯಾಹ್ನ ಮುಕ್ಕಾಲು ತಾಸು ಸುರಿದ ಮಳೆಗೆ ರಸ್ತೆ ಮಳೆ ನೀರಿನಿಂದ ತುಂಬಿ ಹೋಗಿತ್ತು.

Advertisement

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ನಗರದ ಮಧ್ಯದಲ್ಲೇ ಹಾದು ಹೋಗಿದೆ. ಇಲ್ಲಿ ಸಣ್ಣ ಮಳೆ ಬಂದರೂ ಕೃತಕ ನೆರೆ ಭೀತಿ ಉಂಟಾಗುತ್ತಿದೆ. ಪೈಚಾರು, ಹಳೆಗೇಟು, ಮೊಗರ್ಪಣೆ, ಜ್ಯೋತಿ ಸರ್ಕಲ್, ಜೂನಿಯರ್‌ ಕಾಲೇಜು ರಸ್ತೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಪ್ರವೇಶ ದ್ವಾರ, ಗಾಂಧಿನಗರ, ಪರಿವಾರಕಾನ ಹೀಗೆ ಹಲವು ಕಡೆಗಳಲ್ಲಿ ಮಳೆ ನೀರು ಹರಿದು ತೋಡಿನ ಸ್ವರೂಪ ಪಡೆಯುತ್ತಿದೆ.

ಮುಖ್ಯ ರಸ್ತೆ ಈಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಗೆ ಸೇರಿದೆ. ರಸ್ತೆ ಹಾದು ಹೋಗಿರುವ ಪ್ರದೇಶ ನ.ಪಂ. ವ್ಯಾಪ್ತಿಯೊಳಗಿದೆ. ಹಾಗಾಗಿ ಚರಂಡಿ ದುರಸ್ತಿ ಮಾಡುವ ಜವಾಬ್ದಾರಿ ಯಾರಿಗೆ ಸೇರಿದೆ ಎನ್ನುವ ಗೊಂದಲ ಇದೆ. ನ.ಪಂ ಇದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಜವಾಬ್ದಾರಿ ಎನ್ನುವ ನಿಲುವು ಹೊಂದಿದ್ದರೆ, ನಿರ್ಮಾಣ ಮಾತ್ರ ನಮ್ಮ ಹೊಣೆ, ಕಾಲ-ಕಾಲಕ್ಕೆ ನಿರ್ವಹಣೆ ಆಯಾ ವ್ಯಾಪ್ತಿಯ ಸ್ಥಳೀಯಾಡಳಿತಕ್ಕೆ ಸೇರಿದೆ ಎನ್ನುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಾದ. ಏನೇ ಆದರೂ ಇಲ್ಲಿ ಸಮಸ್ಯೆ ಸಾರ್ವಜನಿಕರಿಗೆ ತಪ್ಪಿದ್ದಲ್ಲ.

ಪುತ್ತೂರಿನಲ್ಲೂ ರವಿವಾರ ದಿನವಿಡೀ ಆಗಾಗ ಉತ್ತಮ ಮಳೆಯಾಗಿದೆ. ಹಾನಿ ವರದಿಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next