Advertisement

ಸುಕನ್ಯೆಯ ಕುತೂಹಲ…ಚ್ಯವನ ಮಹರ್ಷಿಗಳ ಯೌವ್ವನದ ರಹಸ್ಯವೋ!

01:30 PM Jun 26, 2018 | Sharanya Alva |

ವೈವಸ್ವತ ಮನುವಿನ ಅನೇಕ ಮಂದಿ ಪುತ್ರರಲ್ಲಿ ಶರ್ಯಾತಿ ಎಂಬವನೂ ಒಬ್ಬನು ಇವನು ವೇದಗಳಲ್ಲಿನ ಇಂಗಿತಾರ್ಥಗಳನ್ನು ಬಲ್ಲವನು ಮಹಾ ಜ್ಞಾನಿಯು ಸಮರ್ಥನು ಆದ ರಾಜನಾಗಿದ್ದನು. ಒಮ್ಮೆ ಆಂಗೀರಸ ಮುನಿಯು ಯಜ್ಞ ಮಾಡುವಾಗ ಎರಡನೇ ದಿನದ ಕಾರ್ಯಕ್ರಮಗಳಾವುದೆಂದು ತಿಳಿಯದಿದ್ದಾಗ ಶರ್ಯಾತಿ  ಮಹಾರಾಜನು ಅಲ್ಲಿಗೆ ಹೋಗಿ ಎಲ್ಲ ವಿಧಾನಗಳನ್ನು ತಿಳಿಸಿಕೊಟ್ಟು ಯಜ್ಞವನ್ನು ಸಾಂಗವಾಗಿ ಮುಗಿಸಲು ಸಹಕರಿಸಿದನು.

Advertisement

ಇಂತಹ ಮಹಾಜ್ಞಾನಿಯಾದ ಶರ್ಯಾತಿಗೆ ಸುಕನ್ಯೆ ಎಂಬ ಒಬ್ಬಳೇ ಮಗಳಿದ್ದಳು. ಶರ್ಯಾತಿಯು ತನ್ನ ಮಮತೆಯ ಮಗಳನ್ನು ತಾನೆಲ್ಲಿಗೆ ಹೋದರೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದನು. ಒಮ್ಮೆ ಶರ್ಯಾತಿಯು ಬೇಟೆಗಾಗಿ ಆಪ್ತ ಪರಿವಾರದೊಂದಿಗೆ ಅರಣ್ಯಕ್ಕೆ ಹೊರಡುವಾಗ ಸುಕನ್ಯೆಯೂ ತನ್ನ ಗೆಳತಿಯರೊಂದಿಗೆ ತಂದೆಯೊಂದಿಗೆ ಹೊರಟಳು . ಅಡವಿಯಲ್ಲಿ ಬೇಟೆಯಾಡಿ ದಣಿದು ವಿಶ್ರಾಂತಿಗಾಗಿ ಸ್ಥಳವನ್ನು ಹುಡುಕುತ್ತಿರುವಾಗ ಚ್ಯವನ ಮಹರ್ಷಿಗಳ ಆಶ್ರಮ ಕಂಡಿತು, ರಾಜನು ತನ್ನ ಪರಿವಾರದೊಂದಿಗೆ ಅಲ್ಲಿಗೆ ಹೋಗಿ ತನ್ನ ಪರಿವಾರವನ್ನುದ್ದೇಶಿಸಿ ” ಇದು ಭೃಗು ಮಹರ್ಷಿಗಳ ಮಗನಾದ ಚ್ಯವನ ಮಹರ್ಷಿಗಳ ಆಶ್ರಮ, ನೀವು ಇಲ್ಲಿ ಎಲ್ಲಿಯೂ ಯಾವ ಕಾರಣಕ್ಕೂ ಆಶ್ರಮವನ್ನು ಅಶುಚಿಗೊಳಿಸಬಾರದು” ಎಂದು ಆದೇಶಿಸಿದನು . 

ಎಲ್ಲರೂ ಬಹಳ ದಕ್ಷತೆಯಿಂದ ಆಶ್ರಮದಲ್ಲಿ ವಿಶ್ರಾಂತಿ ಪಡೆಯುತ್ತ ಕಾಲಕಳೆದರು , ಸ್ವಲ್ಪಹೊತ್ತಿನಲ್ಲೇ ಎಲ್ಲರಿಗೂ ಮಲಮೂತ್ರವಿಸರ್ಜನೆಯು ನಿಂತುಹೋಗಿ ಎಲ್ಲರೂ ಸಂಕಟ ಪಡತೊಡಗಿದರು , ಇದಕ್ಕೆ ಕಾರಣವೇನೆಂದು ತಿಳಿಯದೆ ರಾಜನು ಆಶ್ರಮವು ಅಶುಚಿಯಾಗುವ ಕಾರ್ಯವನ್ನು ಯಾರಾದರೂ ಮಾಡಿದಿರಾ ಎಂದು ಪ್ರಶ್ನಿಸಿದನು . ಆಗ ಸುಕನ್ಯೆಯೂ ” ಅಪ್ಪ ನಾನು ಸಖಿಯರೊಂದಿಗೆ ವಿಹರಿಸುತ್ತಿರುವಾಗ ಒಂದುಕಡೆ ಉನ್ನತವಾಗಿ ಬೆಳೆದ ಹುತ್ತದಲ್ಲಿ ಎರಡು ತೇಜೋ ಪುಂಜವಾದ ಬೆಳಕು ಗೋಚರಿಸಿತು. ಕುತೂಹಲದಿಂದ ನಾನು ಅಲ್ಲಿಯೇ ಇದ್ದ ದರ್ಭೆಯನ್ನು ಕಿತ್ತು ಬೆಳಕಿನೆಡೆಗೆ ಚುಚ್ಚಿದೆ ಆಗ ಬೆಳಕು ನಂದಿಹೋಗಿ ಹುತ್ತದಿಂದ ತುಸು ರಕ್ತ ಹರಿದುಬಂತು ಭಯದಿಂದ ನಾವೆಲ್ಲರೂ ಇತ್ತ ಬಂದುಬಿಟ್ಟೆವು” ಎಂದು ಹೇಳಿದಳು .

ಆಗ ರಾಜನು ಮಗು ತಪ್ಪು ಮಾಡಿದೆ ಇದು ಅಪವಿತ್ರಗೊಳಿಸುವ ಕಾರ್ಯ ಎನ್ನುತ್ತಾ ಆ ಹುತ್ತ ಬೆಳೆದ ಸ್ಥಳಕ್ಕೆ ಶರ್ಯಾತಿಯು ಧಾವಿಸಿದನು, ಅಷ್ಟರಲ್ಲಿಯೇ ಹುತ್ತದೊಳಗಿಂದ ಧ್ಯಾನಾಸಕ್ತರಾಗಿದ್ದ ಚ್ಯವನಮಹರ್ಷಿಗಳು ಹೊರಗೆ ಬಂದು.  ರಾಜ ಹುತ್ತದಲ್ಲಿ ಧ್ಯಾನ ಮಾಡುತಿದ್ದ ನನಗೆ ನಿನ್ನ ಮಗಳು ದರ್ಬೆಯಿಂದ ನನ್ನ ಎರಡು ಕಣ್ಣುಗಳನ್ನು ಚುಚ್ಚಿ ನಾನು ಅಂಧನಾಗುವಂತೆ ಮಾಡಿದ್ದಾಳೆ, ನಾನು ವೃದ್ಧ, ಇನ್ನು ನನಗೆ ಓಡಾಡುವುದು ಕಷ್ಟಸಾಧ್ಯ. ನಾನು ಈ ಸ್ಥಿತಿಗೆ ಬರಲು ಕಾರಣಳಾದ ನಿನ್ನ ಮಗಳನ್ನು ನನಗೆ ಮದುವೆ ಮಾಡಿಕೊಟ್ಟು ನನಗೆ ಸಹಾಯಕಳಾಗಿರುವಂತೆ ಮಾಡು ಎಂದನು.

ಈ ಮಾತನ್ನು ಕೇಳಿ ಮಹಾರಾಜನು ಬಹಳ ದುಃಖಿಸತೊಡಗಿದನು ಈ ನನ್ನ ಮುದ್ದು ಮಗಳನ್ನು ವೃದ್ಧನಾದ ಹಾಗೂ ಅಂಧನಾದ ಈ ಋಷಿಗೆ ಧಾರೆಯೆರೆಯಬೇಕೆ….? ಆಗುವುದಿಲ್ಲ ವೆಂದು ಹೇಳಿದರೆ ಅದರ ಪರಿಣಾಮವೇನಾಗಬಹುದೋ ಎಂದು ಭಯಭೀತನಾದನು, ಇದನ್ನು ಅರಿತ ಸುಕನ್ಯೆಯೂ ” ಅಪ್ಪ ನನ್ನ ತಪ್ಪಿಗೆ ನನಗೆ  ಶಿಕ್ಷೆಯಾಗಲಿ ಋಷಿಯ ಶಾಪವನ್ನು ಕಟ್ಟಿಕೊಳ್ಳುವುದು ಬೇಡ, ನಾನೊಬ್ಬಳು ದುಃಖಿಯಾದರೂ ಇಡೀ ರಾಜ್ಯವೆಲ್ಲ ಉಳಿಯುವುದು, ನನ್ನನ್ನು ಈ ಚರ್ಮದ ಹೊದಿಕೆಯ ಎಲುಬಿನ ಹಂದರಕ್ಕೆ ಧಾರೆಯೆರೆದು ಬಿಡು. ನನ್ನ ದೈವವಿದ್ದಂತೆ ಆಗಲಿ”  ಎಂದಳು.  ಶರ್ಯಾತಿಗೆ ಬೇರೆ ಉಪಾಯವೇ ತೋರಲಿಲ್ಲ. ನಿರ್ವಾಹವಿಲ್ಲದೇ ತನ್ನ ಮಗಳನ್ನು ಚವನಮಹರ್ಷಿಗೆ ಲಗ್ನ ಮಾಡಿಕೊಟ್ಟು ಪರಿವಾರ ಸಹಿತ ರಾಜಧಾನಿಗೆ ಹೋದನು.

Advertisement

ಸುಕನ್ಯೆಯೂ ಚವನ ಮಹರ್ಷಿಗಳ ಸೇವೆಯಲ್ಲಿ ನಿರತಳಾಗಿ ಸಂಸಾರಸುಖದ ಆಸೆಯನ್ನು ಸಂಪೂರ್ಣ ತೊರೆದಳು, ಪೂಜ್ಯರ ಸೇವೆಯೇ ಮಹಾಭಾಗ್ಯವೆಂದು ವೈರಾಗ್ಯದಿಂದ ಬಾಳತೊಡಗಿದಳು.  ಆದರೆ ಚ್ಯವನಮಹರ್ಷಿಗಳ ಮನಸ್ಸು ಬೇರೆಯಾಗಿಯೇ ಯೋಚಿಸತೊಡಗಿತು, ಸುಂದರಿಯಾದ ತರುಣಿ ಸುಕನ್ಯೆಯು ಲೌಕಿಕ ಸುಖದಲ್ಲಿ ಬೆಳೆದವಳು ಇಂತಹವಳನ್ನು ನಾನು ವಿವಾಹವಾಗಿ ಸುಖದಿಂದ ವಂಚಿತಳನ್ನಾಗಿ ಮಾಡಿದೆನೆಂದು ಕೊರಗುತ್ತ ನೊಂದರು.

ಹೀಗಿರಲಾಗಿ ಒಂದು ದಿವಸ ದೇವವೈದ್ಯರಾದ ಅಶ್ವಿನಿ ಕುಮಾರರು ಋಷಿ ಆಶ್ರಮವನ್ನು ಪ್ರವೇಶಿಸಿದರು, ಋಷಿಗಳು ಅವರನ್ನು ಸ್ವಾಗತಿಸಿ ಆದರಿಸಿದರು ನಂತರ ದೇವವೈದ್ಯರೆ ” ನನ್ನದೊಂದು ಬಯಕೆಯಿದೆ. ಅದನ್ನು ನೀವು ನಡೆಸಿಕೊಟ್ಟರೆ ಅದಕ್ಕೆ ಪ್ರತಿಯಾಗಿ ನಾನು ನಿಮ್ಮನ್ನು ಯಜ್ಞ ಯಾಗಾದಿಯಲ್ಲಿ ಸೋಮಪಾನಾರ್ಹರನ್ನಾಗಿ  ಮಾಡುವೆನು ಎಂದು ಹೇಳಿದರು. ಅಶ್ವಿನಿದೇವತೆಗಳು ಏನದು ನಿಮ್ಮ ಬಯಕೆ ಎಂದು ಕೇಳಲು , ಚ್ಯವನ ಋಷಿಗಳು ” ವೃದ್ಧನೂ ಅಂಧನೂ ಆದ ನನ್ನನ್ನು ದೃಢಕಾಯದ ಸುಂದರ ದೃಷ್ಟಿಯುಳ್ಳ ತರುಣನನ್ನಾಗಿ ಮಾಡಿಬಿಡಿ”  ಎಂದರು.

ಸೋಮಪಾನರ್ಹತೆ ಸಿಗುವ ಆಸೆಯಿಂದ ಋಷಿಗಳ ಮಾತಿಗೆ ಒಪ್ಪಿ ಸಿದ್ದೌಷಧಿಗಳಿಂದಲೂ ವನಸ್ಪತಿಗಳಿಂದಲೂ ತೆಗೆದ ರಸದ ಮಡುವಿನಲ್ಲಿ ಚ್ಯವನರನ್ನು ಕರೆದೊಯ್ದು ನಿಲ್ಲಿಸಿ ತಾವು ಅದರಲ್ಲಿಳಿದರು. ಮೂವರೂ ಏಕಕಾಲಕ್ಕೆ ಮುಳುಗಿ ಮೇಲೆದ್ದರು. ಮೇಲಕ್ಕೆದ್ದ ಮೂವರೂ ಒಂದೇ ರೂಪ, ವಸ್ತ್ರ, ಆಭರಣಗಳಿಂದ ಕಂಗೊಳಿಸುತ್ತಿರುವುದನ್ನು ಕಂಡ ಸುಕನ್ಯೆಯು ಗಾಬರಿಯಿಂದ ಈ ಮೂವರಲ್ಲಿ ತನ್ನ ಪತಿಯಾರೆಂಬುದನ್ನು ಕಂಡುಹಿಡಿಯಲಾಗದೆ ಅಶ್ವಿನಿದೇವತೆಗಳನ್ನು ಸ್ತೋತ್ರ ಮಾಡುತ್ತಾ ನನಗೆ ನನ್ನ ಪತಿಯನ್ನು ತೋರಿಸಿಕೊಡಿ ಎಂದು ಪ್ರಾರ್ಥಿಸಿದಳು ಅವಳ ಭಕ್ತಿಗೆ ಮೆಚ್ಚಿದ ದೇವತೆಗಳು ಇವರೇ ನಿನ್ನ ಪತಿಯೆನ್ನುತ್ತ ಚ್ಯವನಋಷಿಯನ್ನು ಮುಂದೇ ನಿಲ್ಲಿಸಿ ಅದೃಶ್ಯರಾದರು. ಸುಕನ್ಯೆಯು ಆನಂದದಿಂದ ಪತಿಯ ಕರಪಿಡಿದು ಆಶ್ರಮಕ್ಕೆ ತೆರಳಿ ತನ್ನ ಪತಿಯೊಂದಿಗೆ ಸುಖವಾಗಿ ಜೀವಿಸತೊಡಗಿದಳು.

ಇತ್ತ ಶರ್ಯಾತಿಯು ತನ್ನ ಮಮತೆಯ ಮಗಳನ್ನು ನರಕದಲ್ಲಿ ನೂಕಿದೆನೆಂದು ದುಃಖಿಸುತ್ತಾ ಕಾಲಕಳೆಯುತ್ತಿದ್ದನು, ನೆಮ್ಮದಿಗಾಗಿ ಒಂದು ಯಜ್ಞವನ್ನು ಮಾಡಬೇಕು ಎಂದು ನಿಶ್ಚಯಿಸಿ ಅದಕ್ಕೆ ಮಗಳು ಮತ್ತು ಅಳಿಯನನ್ನು ಆಹ್ವಾನಿಸಲು ಆಶ್ರಮಕ್ಕೆ ಬಂದನು.

ಆಶ್ರಮದಲ್ಲಿ ತನ್ನ ಮಗಳು ಸುಕನ್ಯೆಯು ಮುಪ್ಪಾದ ಚ್ಯವನಋಷಿಯನ್ನು ಬಿಟ್ಟು ಬೇರೆ ತರುಣನೊಂದಿಗಿರುವುದನ್ನು ಕಂಡು ಬಹಳ ಸಿಟ್ಟಿಗೆದ್ದನು. ತಂದೆ ಬಂದದ್ದನ್ನು ಕಂಡು ಸುಕನ್ಯೆಯು ಧಾವಿಸಿ ಬಂದು ನಮಸ್ಕರಿಸಲು, ರಾಜನು ” ಏನಮ್ಮ ಇದು ಇಂದ್ರಿಯ ಚಾಪಲ್ಯಕ್ಕೊಳಗಾಗಿ ದಾರಿತಪ್ಪಿರುವೆಯಾ……? ಈತನ್ಯಾರು….? ಪೂಜ್ಯ ಚ್ಯವನರು ಎಲ್ಲಿ …?” ಎಂದು ದೀನರಾಗಿ ಕೇಳಿದರು.  ಅದಕ್ಕೆ ಸುಕನ್ಯೆಯು ನಗುತ್ತಾ ” ಅಪ್ಪಾ ಇವರೇ ನನ್ನ ಪತಿ ನಿನ್ನ ಅಳಿಯ ಚ್ಯವನರು” ಎಂದು ನಡೆದ ಘಟನೆಯನ್ನು ವಿವರಿಸಿದಳು. ಇದನ್ನು ಕೇಳಿದ ಮಹಾರಾಜನು ಆನಂದದಿಂದ ಅವರಿಬ್ಬರನ್ನು ಆಲಂಗಿಸಿ ರಾಜಧಾನಿಗೆ ಕರೆದೊಯ್ದನು

ಚ್ಯವನಋಷಿಗಳೇ ಪ್ರಧಾನಹೋತೃಗಳಾಗಿ ಯಜ್ಞವನ್ನು ಸಾಂಗವಾಗಿ ನೆರವೇರಿಸಿದರು ಈ ಯಜ್ಞಕ್ಕೆ ಸಕಲ ದೇವತೆಗಳೂ, ಋಷಿಗಳೂ, ಬ್ರಾಹ್ಮಣರೂ, ರಾಜಮಹಾರಾಜರೂ ಬಂದಿದ್ದರು. ಯಜ್ಞಾನ್ತ್ಯದಲ್ಲಿ ಚ್ಯವನ ಋಷಿಗಳೂ ಅಶ್ವಿನಿ ಕುಮಾರರಿಗೆ ಸೋಮರಸವನ್ನು ಪಾನಮಾಡಲು ನೀಡಿದರು. ಇದನ್ನು ಕಂಡ ದೇವೇಂದ್ರನು ಬಹಳ ಸಿಟ್ಟಿನಿಂದ ಇವರು ಸೋಮಪಾನರ್ಹರಲ್ಲ ಅವರಿಗೆ ಸೋಮರಸವನ್ನು ಕೊಡಬೇಡಿ ಎಂದು ಆರ್ಭಟಿಸಿದನು. ಇಂದ್ರನ ಮಾತನ್ನು ಚ್ಯವನರು ಕಡೆಗಣಿಸಲು ಕೋಪಗೊಂಡ ಇಂದ್ರನು ಚ್ಯವನರನ್ನು ಕೊಲ್ಲಲ್ಲು ವಜ್ರಾಯುಧವನ್ನು ಮೇಲಕ್ಕೆತ್ತಿದನು. ಎತ್ತಿದ ಕೈ ಹಾಗೆ ನಿಲ್ಲಲಿ ಎಂದು ಚ್ಯವನರು ಶಪಿಸಲು ಇಂದ್ರನ ತೋಳು ಹಾಗೆ ಮೇಲಕ್ಕೆ ನಿಂತುಬಿಟ್ಟಿತ್ತು. ಇದನ್ನು ಕಂಡ ಸಕಲ ದೇವತೆಗಳೂ ಋಷಿಗಳಿಗೆ ಶರಣು ಬಂದು ಇಂದ್ರನನ್ನು ಕ್ಷಮಿಸಲು ಪ್ರಾರ್ಥಿಸಿದರು. ಇಂದ್ರನೂ ಕೂಡ ಮೆತ್ತಗಾಗಿ ಪೂಜ್ಯರೇ ನನ್ನ ಅಪರಾಧವನ್ನು ಕ್ಷಮಿಸಿ ಅಶ್ವಿನಿಕುಮಾರರು ಇಂದಿನಿಂದ ದೇವತೆಗಳ ಸಾಲಿನಲ್ಲಿ ಕುಳಿತು ಸೋಮಪಾನ ಮಾಡಲು ನನ್ನ ಒಪ್ಪಿಗೆ ಇದೆ ಎಂದು ಹೇಳಿದನು. ದಯಾಳುವಾದ ಚ್ಯವನರು ಇಂದ್ರನಿಗೆ ಕೃಪಾದೃಷ್ಟಿ ಬೀರಲು ಇಂದ್ರನ ತೋಳು ಮೊದಲಿನಂತಾಯಿತು. ಅಂದಿನಿಂದ ಅಶ್ವಿನಿ ದೇವತೆಗಳಿಗೆ ಸೋಮಪಾನ ಅರ್ಹತೆ ಪ್ರಾಪ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next