Advertisement

ಯೋಗಗಳು ಯಾಕೆ ಕೈ ಕೊಡುತ್ತವೆ ಗೊತ್ತಾ? 

03:05 AM Nov 18, 2017 | |

ಯೋಗಗಳು ಎಂದರೆ ಅನೇಕ ಗ್ರಹಗಳು ಬೇರೆಬೇರೆ ಕಾರಣಗಳಿಂದಾಗಿ ಒಂದೇ ಮನೆ ಅಥವಾ ಒಂದೇ ಒಂದನ್ನು ಸುಸಂಬದ್ಧವಾಗಿ ಒಬ್ಬ ವ್ಯಕ್ತಿಗೆ ಒದಗಿಸಿಕೊಡಲು ಒಂದು ಸಂಪನ್ನ ಪ್ರಮಾಣದಲ್ಲಿ ತಮ್ಮ ಸಂಬಂಧಗಳನ್ನು ಒಂದು ವಿಶಿಷ್ಟ ಶಕ್ತಿಯನ್ನಾಗಿ ರೂಪಿಸಿಕೊಳ್ಳಲು ಸಾಧ್ಯವಾದಾಗ, ತಮ್ಮ ಸದಾ ಇದ್ದೇ ಇರುವ ಚಲನವಲನಗಳ ಸಂಬಂಧವಾಗಿ ಪರಿಣಾಮಕಾರಿಯಾದ ಸಕಾರಾತ್ಮಕ ಸ್ಪಂದನಗಳನ್ನು ನಿರ್ಮಿಸಿಕೊಡಲು ಸಾಧ್ಯವಾದಾಗ, ಒಳಿತನ್ನು ಮಾಡಿಕೊಡುವ ಒಳಾಂತರ್ಗತ ಶಕ್ತಿಯನ್ನು ಒಂದು ದಶಾಕಾಲದ ಅಥವಾ ದಶಾಕಾಲದ ಭುಕ್ತಿಯಲ್ಲಿ (ಸುಸಂಬದ್ಧವಾದ ಸರ್ವಾಧಿಕ್ಯ ಸೂಕ್ತ ಹೊಂದಾಣಿಕೆಗಳನ್ನು ದಶಾನಾಥನಿಗೂ, ಭುಕ್ತಿನಾಥನಿಗೂ ಆ ಕಾಲಘಟ್ಟದಲ್ಲಿ ಕ್ರೋಡೀಕರಿಸಿಕೊಳ್ಳಲು ಸಾಧ್ಯವಾಗುವ ಸ್ಥಿತಿ ಒದಗಿಬರುತ್ತದೆ) ಕಾಲಘಟ್ಟ ಹೊರಹೊಮ್ಮಿಸಲು ಸಾಧ್ಯವಾದಾಗ (ಯೋಗಗಳು ಸಾಮಾನ್ಯವಾಗಿ ಒಳಿತನ್ನೇ ಮಾಡುವ ವಿಚಾರವನ್ನು ವ್ಯಾಖ್ಯಾನಿಸುತ್ತವೆ) ಬದುಕಿನ  ಗೆಲುವಿಗೆ, ಕೀರ್ತಿಗೆ, ಧನ ಸಂಚಯನಕ್ಕೆ, ಇಷ್ಟಾರ್ಥ ಸಿದ್ಧಿಗೆ ದಾರಿ ಮಾಡಿಕೊಡುತ್ತವೆ. ಸಹಜವಾಗಿಯೇ ಆ ವ್ಯಕ್ತಿಯ ಜೀವನದಲ್ಲಿ ಸಂತೋಷ ಸಾಮಾನ್ಯ. 

Advertisement

ಮೇಲೆ ಹೇಳಿದ ಯೋಗಗಳ ಹಾಗೆಯೇ ನಕಾರಾತ್ಮಕ ಸಿದ್ಧಿಗೆ ಕಾರಣವಾಗುವ ಹಾಗೆ, ಸೂಕ್ತವಲ್ಲದ ಕಾರಣಗಳಿಂದಾಗಿ ಸೂಕ್ತವಲ್ಲದ ಗ್ರಹಗಳು (ಒಬ್ಬ ವ್ಯಕ್ತಿಯ ಜಾತಕದಲ್ಲಿ ಇವು ಒಳಿತುಗಳನ್ನು ಒದಗಿಸುವುದನ್ನು ಬಿಟ್ಟು ಕೆಟ್ಟದ್ದಕ್ಕೇ ಕಾರಣವಾಗುತ್ತವೆ) ಒಬ್ಬ ವ್ಯಕ್ತಿಯ ಜಾತಕ ಕುಂಡಲಿಯಲ್ಲಿ ಕೆಟ್ಟ ಯೋಗಗಳನ್ನು ಹರಳುಗಟ್ಟಿಸುತ್ತವೆ. ಕಾರಾಗೃಹ ಯೋಗ, ಧನನಾಶ, ಕಾಳಸರ್ಪ, ಅಂಗಚ್ಛೇದನ, ಅನಿಷ್ಟಾರಿಷ್ಟ, ಸಂತಾನನಾಶ, ಕುಲ ನಾಶ, ದುರ್ಮರಣ ಯೋಗ ಇತ್ಯಾದಿ ಇತ್ಯಾದಿ. ಆದರೆ, ಯೋಗಗಳು ಒಳ್ಳೆಯದಿರಲಿ, ಕೆಟ್ಟದ್ದೇ ಇರಲಿ ಅವು ಸಂಭವಿಸಿ ಆ ಯೋಗಗಳು ಒಳಿತನ್ನೋ, ಕೆಡುಕನ್ನೋ ಮಾಡುವಾಗ ಎಲ್ಲವೂ ಕೂಡಿ ಬರಬೇಕು. ಆಗ ಯೋಗಗಳು ಕೂಡಿ ಬರುವ ಗ್ರಹಗಳು ತಂತಮ್ಮ ಕೆಲಸಗಳನ್ನು ಸದ್ದಿರದೆ ಮಾಡಿ ಮುಗಿಸುತ್ತವೆ. ಹೀಗೆ ಯೋಗ ಎಂದರೆ ಒಟ್ಟಿನಲ್ಲಿ ಹೊಂದಿಕೆ ಅಥವಾ ಕೂಡಿ ಬರುವುದು. ಅದೃಷ್ಟ ಯಾ ದುರದೃಷ್ಟ ಪ್ರಾಪ್ತಿ ಸಕಾರಾತ್ಮಕ ಯಾ ನಕಾರಾತ್ಮಕ ಸಂಯೋಜನೆ ಎಂದರ್ಥ. 

ಯೋಗಗಳು ಯಾಕೆ ಕೈ ಕೊಡುತ್ತವೆ?
ಇಂಥದೊಂದು ಯೋಗವಿದೆ ಎಂದು ಜ್ಯೋತಿಷಿ ಹೇಳಿದಾಗಲೂ ಯೋಗಗಳು ಸಂಭವಿಸಿಲ್ಲ ಎಂದು ಗೊಣಗುವುದನ್ನು ನಾವು ಕೇಳುತ್ತಿರುತ್ತೇವೆ. ಯೋಗಗಳೇ ಇರದವರೂ ಒಳ್ಳೆಯ ರೀತಿಯಲ್ಲಿ ಜೀವನ ಸಾಗಿಸುತ್ತಿರುತ್ತಾರೆ. ಒಳ್ಳೆಯ ಜೀವನ ಸಾಗಿಸುತ್ತಿದ್ದವರಂತೆ ಕಾಣಿಸಿಕೊಳ್ಳುತ್ತಾರೆ. ಒಳ್ಳೆಯ ಧನಯೋಗ ಇದ್ದರೂ ದರಿದ್ರಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಒಳ್ಳೆಯದನ್ನು ಕಂಡು ಕೆಟ್ಟದ್ದಕ್ಕೆ ತಲುಪಿ ದಿವಾಳಿಯಾಗಿ ತಲೆಮರೆಸಿಕೊಂಡವರಿರುತ್ತಾರೆ. ಕೆಟ್ಟದ್ದನ್ನು ಅನುಭವಿಸುತ್ತಿದ್ದಾಗಲೇ ಸರ್ರನೆ ಒಳಿತಿಗೆ ದಾರಿ ಮಾಡಿಕೊಡುವ ಅದೃಷ್ಟ ಒದಗಿ ಅದ್ಭುತ ಯಶಸ್ಸಿಗೆ ಬಂದು ತಲುಪುತ್ತಾರೆ. ಜೀವನಪರ್ಯಂತ ಸುಖ ಕಾಣದೆ ಅಷ್ಟ ದರಿದ್ರಿಗಳಾಗಿರುತ್ತಾರೆ. ಸುಖ ಇದೆ ಎಂಬುದನ್ನು ತೋರಿಸುವವರಿದ್ದಾರೆ. ಸುಖ ಇದ್ದರೂ ಕಷ್ಟ ಕಷ್ಟ ಎಂದು ಅಳುತ್ತಲೇ ಇರುವವರಿದ್ದಾರೆ. ಅದ್ಭುತ ಅದೃಷ್ಟವನ್ನು ಒಂದು ಯೋಗದ ಕಾರಣದಿಂದಾಗಿ ಪಡೆಯುವಲ್ಲಿ ಆ ಅದೃಷ್ಟ ಕೊಡಬೇಕಾದ ಶಕ್ತಿಯನ್ನು ಸೂಕ್ತವಾಗಿ ಪಡೆಯದೇ ದುರ್ಬಲತೆಯನ್ನು ಪಡೆದಿದ್ದರೆ ಯೋಗಗಳಿದ್ದೂ ಫ‌ಲವಿರಲಾರದು. ಆಗ ಕೈ ಕೊಡುತ್ತವೆ. ನಮ್ಮ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವರ ಜಾತಕ ಪರಿಶೀಲನೆ ಮಾಡಿದಾಗ ರಾಜಯೋಗಗಳಿದ್ದೂ ಅವು ಕೈ ಕೊಡುವ ವಿಧಾನಗಳನ್ನು ಗಮನಿಸಬಹುದು. ರಾಮಕೃಷ್ಣ ಹೆಗಡೆ, ಲಾಲಕೃಷ್ಣ ಅಡ್ವಾಣಿ, ಸಿನಿಮಾರಂಗದ ಮೀನಾಕುಮಾರಿ, ರಾಜ್‌ ಕಪೂರ್‌, ಕ್ರಿಕೆಟ್‌ನ ವಿನೋದ್‌ ಕಾಂಬ್ಳಿ, ಬಿ.ಎಸ್‌.ಚಂದ್ರಶೇಖರ್‌, ಇ.ವಿ.ಎಸ್‌.ಪ್ರಸನ್ನ, ಶಿವಲಾಲ್‌ ಯಾದವ್‌, ಇಂದಿರಾಗಾಂಧಿ, ಸಂಜಯ ಗಾಂಧಿ, ರಾಜೀವ ಗಾಂಧಿ, ರಾಹುಲ್‌ ಗಾಂಧಿ, ಎನ್‌.ಟಿ.ರಾಮರಾವ್‌ ಮುಂತಾದವರು ತಲುಪಬೇಕಾದ ಶಿಖರಗಳು ಬಹಳವೇ ಇದ್ದವು. ಆದರೆ, ಬದುಕಿನ ಬಹುಮುಖ್ಯ ಘಟ್ಟಗಳಲ್ಲಿ ತೊಳಲಾಟಗಳನ್ನು ನಡೆಸಿದವರ ಪಟ್ಟಿಯಲ್ಲಿ ಈ ಹೆಸರುಗಳೆಲ್ಲ ಬರುತ್ತವೆ. ಪ್ರತಿ ವ್ಯಕ್ತಿ (ಈ ಮೇಲಿನ ಯಾದಿಯ)ಯ ಬಗೆಗೆ ಬರೆಯುವಾಗಲೂ ಒಂದು ಪ್ರತ್ಯೇಕ ಹೊತ್ತಿಗೆಯನ್ನೇ ಬರೆಯಬಹುದು. ಇಂದಿರಾ ಗಾಂಧಿಯವರಿಗೆ ತುರ್ತು ಪರಿಸ್ಥಿತಿ ಹೇರಲು ಮನಸ್ಸಿರಲಿಲ್ಲ ಎಂದರೆ ನಂಬುತ್ತೀರಾ? ಅವರು ತುರ್ತು ಪರಿಸ್ಥಿತಿ ಹೇರಿದ್ದೇ ಕಾರಣವಾಗಿ ಎಷ್ಟೆಲ್ಲ ಅನಾಮಧೇಯರು ಮುಂದಾಳುಗಳಾದರು? ಈ ಮುಂದಾಳುಗಳಲ್ಲಿ (ಎಲ್ಲರೂ ಅಲ್ಲ ಎಂಬುದು ಬೇರೆ ಪ್ರಶ್ನೆ) ಬಹುತೇಕರು ಈಗ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. 

ಮೊರಾರ್ಜಿಯವರಿಗೆ ಕೈಕೊಟ್ಟ ಯೋಗಗಳು:
ಭಾರತದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಆಡಳಿತದ ಆಳ ಅಗಲಗಳಲ್ಲಿನ ಹಿಡಿತ ಹಾಗೂ ಚಾಣಾಕ್ಷತೆ, ದಕ್ಷತೆ, ನಿಷ್ಠುರತೆ ಇತ್ಯಾದಿಗಳನ್ನು ಗಮನಿಸುವುದಾದರೆ ಜವಾಹರಲಾಲ್‌ ನೆಹರೂ ನಂತರ ಪ್ರಧಾನಿಯಾಗಿ ಇವರು ದೇಶವನ್ನು ಮುನ್ನಡೆಸಬೇಕಿತ್ತು. ಆದರೆ, ಇವರ ನಿಷ್ಠುರತೆ, ಮರಣ ಸ್ಥಾನದಲ್ಲಿ ಇವರ ಲಗ್ನಾಧಿಪತಿಯ ಉಪಸ್ಥಿತಿ (ಆದರೆ ಉಚ್ಚ ಗುರುವಿನ ದೃಷ್ಟಿ ಇವರ ಮರಣ ಸ್ಥಾನದ ಮೇಲಿದ್ದುದರಿಂದ ಹಾಗೆ ಇವರ ವರ್ಚಸ್ಸಿಗೆ ಧಕ್ಕೆ ಬರುವುದಿಲ್ಲ ಎಂಬುದು ಒಂದು ಯೋಗ) ಇವರು ಸದಾ ವಿರೋಧಿಗಳನ್ನು ಸೃಷ್ಟಿಸಿಕೊಂಡರು. ವಿರೋಧಿಗಳು ಇವರ ಕಾಲೆಳೆದರು. ಪ್ರಧಾನಿ ಪಟ್ಟ ಕೈ ತಪ್ಪುತ್ತಲೇ ಇತ್ತು. ಉತ್ತಮವಾದ ರಾಜಯೋಗ, ಪರಿವರ್ತನ ಯೋಗ ದುಃಸ್ಥಾನಗಳಲ್ಲಿ ಇದ್ದುದರಿಂದ ಎಲ್ಲಾ ಯೋಗ್ಯತೆಗಳಿದ್ದರೂ ಪ್ರಧಾನಿ ಪಟ್ಟ ಕೈ ತಪ್ಪುತ್ತ, ಇಂದಿರಾ ಪ್ರಭಾವದ ಎದುರು ಒಂದರ್ಥದಲ್ಲಿ ಮೊರಾರ್ಜಿ ಕಸದ ಬುಟ್ಟಿಗೆ ಎಸೆಯಲ್ಪಟ್ಟವರಂತೆ ದುರ್ಬಲರಾಗಿ ಹೋದರು. ಇವರ ಧೈರ್ಯ, ಮುಖಕ್ಕೆ ಹೊಡೆಯುವಂತೆ ಮಾತಾಡುವ (ವಾಸ್ತವದ, ಸತ್ಯದ ನುಡಿಗಳನ್ನೇ ಆದರೂ) ಶಕ್ತಿಯೋ, (ಇಲ್ಲ ಮಿತಿಯೊ) ಭ್ರಷ್ಟರನ್ನು ಮಟ್ಟ ಹಾಕಬೇಕೆಂಬ ಬಲವಾದ ಇಚ್ಛೆ ಇವರ ಪಾಲಿಗೆ ಮಿತ್ರರಿಗಿಂತ ಶತ್ರುಗಳು ಜಾಸ್ತಿಯಾಗಿ ಅಪ್ರಸ್ತುತರಾದರು. ಆದರೆ ಅವರ ವಿಧಿ ಅವರನ್ನು ದೀರ್ಘಾಯುಷಿಗಳನ್ನಾಗಿಸಿತ್ತು. 

ರಾಜಯೋಗದ ಭಾಷೆಗೆ ಜೀವಂತಿಕೆ ಸಿಕ್ಕಿತು
ವರ್ಷ 81 ಆದಾಗ ಯಾರು ದೈಹಿಕರಾಗಿ ಪ್ರಬಲರಾಗಿರಲು ಸಾಧ್ಯ? ಆದರೆ ಮೊರಾರ್ಜಿ 81ರ ಪ್ರಾಯದಲ್ಲೂ ಲವಲವಿಕೆ, ಆರೋಗ್ಯ, ತೀಕ್ಷ್ಣತೆಯಿಂದಲೇ ಇದ್ದರು. ಉಚ್ಚನಾದ ಶನಿ, ಉಚ್ಚನಾದ ಗುರು, ಉಚ್ಚನಾದ ಮಂಗಳ ಆಯಸ್ಸನ್ನು ವೃದ್ಧಿಸುವ ಮರಣ ಸ್ಥಾನದಲ್ಲಿನ (ರಾಜಯೋಗ ಪ್ರಬಲವಾಗಿ ಮಂಗಳಕಾರಕನಾಗಿ ಬಹುಕಾಂತಿ ಹೊಂದಿದ ಚಂದ್ರನ ಸಮೃದ್ಧಿಯಿಂದಾಗಿ ಚೈತನ್ಯ, ಧೈರ್ಯಗಳೆಲ್ಲ ಮಿಳಿತವಾಗಿದ್ದರಿಂದ) ಲಗ್ನಾಧಿಪತಿ ಬುಧ (ಬುಧ ದಶಾಕಾಲವೂ ನಡೆಯುತ್ತಿದ್ದಾಗಲೇ)ನ ಸಂಪನ್ನತೆಗಳ ಫ‌ಲವಾಗಿ, ಜೆಪಿ ಚಳುವಳಿ, ಇಂದಿರಾರ ಜನಪ್ರಿಯತೆಯು ತುರ್ತು ಸ್ಥಿತಿ ಹೇರಿದ ಪರಿಣಾಮವಾಗಿ ಇವರಿಗೆ ನೆರವು ಒದಗಿ ಬಂದು ಪ್ರಧಾನಿಯಾದರು. 81ನೇ ವಯಸ್ಸಿಗೆ ಪ್ರಧಾನಿಯಾದರೂ ಶಕ್ತಿ, ಉತ್ಸಾಹಗಳಿದ್ದವು ಎಂಬುದನ್ನು ತಿಳಿಯುವುದು ಇಲ್ಲಿ ಅಗತ್ಯ. ಇದು ವಿಧಿ ವಿಲಾಸ. ಆದರೆ ರಾಜಯೋಗವು ಅಷ್ಟೇ ಕ್ಷಿಪ್ರವಾಗಿ ಕರಗುವ ದುರ್ಭಾಗ್ಯವೂ ಇದ್ದುದರಿಂದ 28 ತಿಂಗಳುಗಳಲ್ಲಿ ಪ್ರಧಾನಿಪಟ್ಟದಿಂದ ನಿರ್ಗಮನವೂ ನೆರವೇರಿತು. ಸಿದ್ಧಾಂತಗಳ ಕಾರಣಕ್ಕಾಗಿ ಅನ್ಯ ವಾಮಮಾರ್ಗಗಳಲ್ಲಿ ಹೆಜ್ಜೆ ಇಡಲಾರೆನೆಂಬ ಬದ್ಧತೆ ತಿರುಗಿ ಅವರನ್ನು ಮೂಲೆಗೆ ತಳ್ಳಿತು. 

Advertisement

ವಿಧಿಯ ಚದುರಂಗದಾಟ ಬೇರೆ ಬೇರೆ: 
ಬಿಜೆಪಿಯ ವಾಜಪೇಯಿ, ಅಡ್ವಾಣಿಯವರನ್ನೇ ಗಮನಿಸಿ. ರಾಜಯೋಗ ಇಬ್ಬರಿಗೂ ಇದೆ. ವಾಜಪೇಯಿ ಪ್ರಧಾನಿಗಳಾದರು. ಅಷ್ಟೇ ಶಕ್ತಿ ಇರುವ ಅಡ್ವಾಣಿಯವರು ಪ್ರಧಾನಿಯಾಗಲಿಲ್ಲ. ದೇವೇಗೌಡರು ಪ್ರಧಾನಿಗಳಾದರು. ಆದರೆ ಅಧಿಕಾರದಿಂದ ಉರುಳಿದರು. ರಾಮಕೃಷ್ಣ  ಹೆಗಡೆ ಪ್ರಧಾನಿಯಾಗಲಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾದರು. ಡಾ.ಪರಮೇಶ್ವರ್‌ ಆಗಲಿಲ್ಲ. ಕೂದಲೆಳೆಯಲ್ಲಿ ಎಲ್ಲವೂ ತಪ್ಪುತ್ತದೆ. ರಾಜಕೀಯದಿಂದ ದೂರವೇ ಉಳಿದರೂ ರಾಜೀವ್‌ ಪ್ರಧಾನಿ ಪಟ್ಟದಲ್ಲಿ ವಿಧಿ ರಟ್ಟೆ ಹಿಡಿದು ತಂದು ಕೂರಿಸಿತು. ರಾಹುಲ್‌ ಪ್ರಧಾನಿಯಾಗಬಹುದಿತ್ತು. ಆದರೆ, ಸೋನಿಯಾ ಮನಮೋಹನ್‌ರನ್ನು ಪ್ರಧಾನಿ ಮಾಡಿದರು. 

ಅನಂತ ಶಾಸ್ತ್ರಿ  ಬೆಂಗಳೂರು 

Advertisement

Udayavani is now on Telegram. Click here to join our channel and stay updated with the latest news.

Next