Advertisement

ಸುಧಾಕರ್‌ಗೆ ಟೀಕಿಸುವ ನೈತಿಕತೆಯಿಲ್ಲ

04:38 PM May 09, 2022 | Team Udayavani |

ಹಿರಿಯೂರು: ವಾಜಪೇಯಿ ವಸತಿ ಯೋಜನೆ ಹಾಗೂ ಅಂಬೇಡ್ಕರ್‌ ವಸತಿ ಯೋಜನೆಗಳ ಅಡಿ ನಗರದಲ್ಲಿ ಸ್ಲಂ ಬೋರ್ಡ್‌ ವತಿಯಿಂದ ಮನೆಗಳನ್ನು ನಿರ್ಮಿಸಲಾಗುವುದು ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಹೇಳಿದರು.

Advertisement

ನಗರದ ಶಾಸಕರ ಕಾರ್ಯಾಲಯದಲ್ಲಿ ವಸತಿ ಯೋಜನೆ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಮೇ 10ರಂದು ಮಂಗಳವಾರ ವಸತಿ ಸಚಿವ ವಿ. ಸೋಮಣ್ಣ ನಗರಕ್ಕೆ ಆಗಮಿಸಲಿದ್ದು, ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ ಜಿ+2 ಮಾದರಿಯ 624 ಹಾಗೂ 1248 ಮನೆಗಳ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಅಲೆಮಾರಿ ಸಮುದಾಯಕ್ಕೆ ಈಗಾಗಲೇ ಮಂಜೂರಾದ 4448 ಮನೆಗಳ ಜೊತೆಗೆ ಹೆಚ್ಚುವರಿಯಾಗಿ 845 ಮನೆಗಳಿಗೆ ಇದೇ ಸಂದರ್ಭದಲ್ಲಿ ಹಕ್ಕುಪತ್ರ ವಿತರಿಸಲಾಗುವುದು. ಬಸವ ವಸತಿ ಹಾಗೂ ಅಂಬೇಡ್ಕರ್‌ ವಸತಿ ಯೋಜನೆಗಳ ಅಡಿಯಲ್ಲಿ ಗ್ರಾಮಾಂತರಕ್ಕೆ 1200 ಮನೆಗಳಿಗೆ ಮಂಜೂರಾತಿ ನೀಡಲಾಗಿದ್ದು, ಹೆಚ್ಚುವರಿಯಾಗಿ 1000 ಮನೆ ನಿರ್ಮಾಣಕ್ಕೆ ಮನವಿ ಮಾಡಲಾಗುವುದು ಎಂದರು.

ಜವಾಬ್ದಾರಿಯುತ ಶಾಸಕಿಯಾಗಿ ಮತದಾರರ ಋಣ ತೀರಿಸುತ್ತಿದ್ದೇನೆ. 8 ಕೋಟಿ ರೂ. ವೆಚ್ಚದ ಸಾರಿಗೆ ಡಿಪೋ ಮಂಜೂರಾಗಿದೆ. 25 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಲಿದೆ. ಮಿನಿ ವಿಧಾನಸೌಧಕ್ಕೆ 15 ಕೋಟಿ, ಧರ್ಮಪುರ ಕೆರೆಗೆ ನೀರು ಹರಿಸಲು 90 ಕೋಟಿ ರೂ., ನಗರದ ಜನತೆಯ ಅನುಕೂಲಕ್ಕೆ ಯುಜಿಡಿಗೆ 206 ಕೋಟಿ ರೂ. ಗಳನ್ನು ಅತಿ ಶೀಘ್ರದಲ್ಲಿ ಸರ್ಕಾರದಿಂದ ಮಂಜೂರು ಮಾಡಿಸಲಾಗುವುದು ಎಂದು ತಿಳಿಸಿದರು.

ತಾಲೂಕಿನಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಟೀಕೆ ಮಾಡಲು ಮಾಜಿ ಸಚಿವ ಡಿ. ಸುಧಾಕರ್‌ ಅವರಿಗೆ ಯಾವುದೇ ನೈತಿಕತೆ ಇಲ್ಲ. ಅವರು 10 ವರ್ಷಗಳ ಕಾಲ ಶಾಸಕರಾಗಿ, ಸಚಿವರಾಗಿ ಯಾವ ಬದ್ಧತೆಯಿಂದ ಕೆಲಸ ಮಾಡಿದ್ದಾರೆ, ಜನಪರವಾಗಿ ಅಭಿವೃದ್ಧಿ ಕೆಲಸ ಮಾಡಿದ್ದರೆ ಜನರು ಅವರನ್ನು ಆಯ್ಕೆ ಮಾಡುತ್ತಿದ್ದರು. ಜನರ ಮುಂದೆ ಸುಳ್ಳು ಹೇಳಿ ನಾಟಕ ಮಾಡಿದರೆ ಅದು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಮುಖಂಡ ಡಿ.ಟಿ. ಶ್ರೀನಿವಾಸ್‌ ಮಾತನಾಡಿ, ನನ್ನ ರಾಜಕೀಯ ಸ್ಥಾನಮಾನ ಏನೇ ಇರಲಿ ಅಥವಾ ಇಲ್ಲದಿರಲಿ, ಶಾಸಕಿಯ ಪತಿಯಾಗಿ ಅಷ್ಟೇ ಅಲ್ಲದೆ ಸಾಮಾಜಿಕ ಕಳಕಳಿ ಹೊಂದಿದ ವ್ಯಕ್ತಿಯಾಗಿದ್ದೇನೆ. ಕ್ಷೇತ್ರದಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಶಾಸಕರು ಹಾಗೂ ಸರ್ಕಾರಕ್ಕೆ ನಮ್ಮದೇ ಆದ ರೀತಿಯಲ್ಲಿ ಮನವರಿಕೆ ಮಾಡಿದ್ದೇನೆ. ಕ್ಷೇತ್ರದ ಜನರ ಬೇಡಿಕೆಗಳಿಗೆ ಸ್ಪಂದಿಸಲು ಅಧಿಕಾರ ಇರಬೇಕು ಎಂದೇನಿಲ್ಲ. ಜವಾಬ್ದಾರಿ ಹಾಗೂ ಕಳಕಳಿ ಪ್ರದರ್ಶಿಸಿ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಜನರ ದುಃಖ ದುಮ್ಮಾನಗಳಿಗೆ ಧ್ವನಿಯಾಗಿ ಕೆಲಸ ಮಾಡಿದ್ದೇನೆ ಎಂದರು.

Advertisement

ನಗರಸಭೆ ಸದಸ್ಯ ಎಂ.ಡಿ. ಸಣ್ಣಪ್ಪ ಮಾತನಾಡಿ, ಜನಗಳಿಗೆ ನೀರು, ಆಶ್ರಯ ರಹಿತರಿಗೆ ಸೂರು ಕಲ್ಪಿಸುವ ದೃಷ್ಟಿಯಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರನ್ನು ಮೀರಿಸುವ ಶಾಸಕರನ್ನು ಇದುವರೆಗೂ ಹಿರಿಯೂರು ಕ್ಷೇತ್ರ ಕಂಡಿಲ್ಲ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದವರಿಗೂ ಶಾಸಕರ ಸ್ಪಂದನೆ ಮಾದರಿ ಎಂದು ಬಣ್ಣಿಸಿದರು.

ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ ಮಾತನಾಡಿ, ವಾಣಿವಿಲಾಸ ಸಾಗರಕ್ಕೆ 100 ಟಿಎಂಸಿ ನೀರು ಹಾಗೂ ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ ಶಾಸಕರು ಮುಂದಾಗಬೇಕು. ಇದುವರೆಗೆ ರೈತರ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿರುವ ಶಾಸಕರು ಇನ್ನು ಮುಂದೆಯೂ ನಮ್ಮ ಬೇಡಿಕೆಗಳನ್ನು ಕಾರ್ಯರೂಪಕ್ಕೆ ತರಲು ಗಮನ ನೀಡಬೇಕೆಂದರು.

ನಗರಸಭೆ ಸದಸ್ಯ ಕೇಶವಮೂರ್ತಿ, ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್‌ ಮಾತನಾಡಿದರು. ನಗರಸಭೆ ಸದಸ್ಯರಾದ ಮಹೇಶ್‌ ಪಲ್ಲವ, ಗಣೇಶ್‌ ಕದ್ರು, ಮಾಜಿ ಸದಸ್ಯ ಬಿ.ಕೆ. ಕರಿಯಪ್ಪ, ಚಿರಂಜೀವಿ, ಕೆ.ಪಿ. ಶ್ರೀನಿವಾಸ್‌, ನಿತ್ಯಾನಂದ ಯಾದವ್‌, ಓಂಕಾರ್‌, ಶೋಭಾ, ಸರವಣ, ಘಾಟ್‌ ರವಿ, ಕೃಷ್ಣಮೂರ್ತಿ, ರಾಜಣ್ಣ ಮತ್ತಿತರರು ಇದ್ದರು.

ಶಾಸಕಿಯಾಗಿ ಅಲ್ಪ ಅವಧಿಯಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಸುಧಾಕರ್‌ ಅವರು ಇಡೀ ರಾಜಕೀಯ ಜೀವನದಲ್ಲೇ ಮಾಡಿಲ್ಲ. ಕ್ಷೇತ್ರದ ಜನ ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ನೋಡಿ ಅಸೂಯೆಯಿಂದ ಮಾಜಿ ಸಚಿವರು ಸುಳ್ಳು ಆರೋಪ ಮಾಡುತ್ತಾ ಕ್ಷೇತ್ರ ಪ್ರವಾಸ ಮಾಡುತ್ತಿದ್ದಾರೆ. ಮತದಾರರ ಮುಂದೆ ಅವರ ನಾಟಕ ನಡೆಯದು. -ಪೂರ್ಣಿಮಾ ಶ್ರೀನಿವಾಸ್‌, ಶಾಸಕಿ

Advertisement

Udayavani is now on Telegram. Click here to join our channel and stay updated with the latest news.

Next