Advertisement

ಬಲಭಾಗದಲ್ಲಿದ್ದ ಹಸುಳೆಯ ಹೃದಯಕ್ಕೆ ಯಶಸ್ವಿ ಶಸ್ತ್ರ ಚಿಕಿತ್ಸೆ

06:20 AM Sep 30, 2018 | Team Udayavani |

ಬೆಳಗಾವಿ: ಬಲಭಾಗದಲ್ಲಿ ಹೃದಯ ಹೊಂದಿದ್ದ 20 ದಿನದ ಹಸುಳೆಗೆ ಕೆಎಲ್‌ಇ ಸಂಸ್ಥೆಯ ಡಾ| ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

Advertisement

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿ ಜನಿಸಿದ್ದ ಶಿಶು ಗಂಭೀರ ಸ್ಥಿತಿಯಲ್ಲಿತ್ತು. ಮಗುವಿನ ದೇಹದಲ್ಲಿ ಎಡಭಾಗದಲ್ಲಿರಬೇಕಾದ ಎಲ್ಲ ಅಂಗಾಂಗಗಳು ಬಲಭಾಗದಲ್ಲಿದ್ದವು. ಇದರಿಂದ ಮಗು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿತ್ತು. ಉಸಿರಾಟದ ತೊಂದರೆ ತೀವ್ರವಾಗಿತ್ತು. ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ್ದ ಮಗುವನ್ನು ಕೃತಕ ಉಸಿರಾಟದ ಸಹಾಯದಿಂದ ಡಾ| ಪ್ರಭಾಕರ ಕೋರೆ ಆಸ್ಪತ್ರೆಗೆ ತರಲಾಯಿತು.

ಚಿಕ್ಕಮಕ್ಕಳ ಹೃದಯ ಚಿಕಿತ್ಸಕ ಡಾ| ವೀರೇಶ ಮಾನ್ವಿ ಹಾಗೂ ಹೃದಯ ಶಸ್ತ್ರಚಿಕಿತ್ಸಕ ಡಾ| ಪ್ರವೀಣ ತಂಬ್ರಳ್ಳಿಮಠ ಮಗುವನ್ನು ಸಮಗ್ರವಾಗಿ ಪರೀಕ್ಷಿಸಿ ಪ್ರಮುಖ ಅಂಗಾಂಗಗಳು ಅದಲು-ಬದಲಾಗಿರುವುದನ್ನು ಖಚಿತಪಡಿಸಿಕೊಂಡರು. ಮಗು ಸೈಟಸ್‌ ಇನ್‌ವರ್ಸಸ್‌ ಟೊಟಾಲೀಸ್‌ ವಿಥ್‌ ಡೆಕ್ಸಟ್ರೊಕಾರ್ಡಿಯಾ ಹಾಗೂ ಟಿ ಟ್ರಾನ್ಸಪೋಸಿಶನ್‌ ಆಫ್‌ ಗ್ರೇಟ್‌ ಆರ್ಟರೀಸ್‌ ಎಂಬ ಹೃದಯ ಕಾಯಿಲೆಯಿಂದ ಬಳಲುತ್ತಿರುವುದು ದೃಢಪಟ್ಟಿತು.

ದೇಹದ ಎಡಭಾಗದಲ್ಲಿರುವ ಹೃದಯ ಬಲಭಾಗಕ್ಕೆ, ಬಲಭಾಗದಲ್ಲಿ ಇರಬೇಕಾದ ಲಿವರ್‌ ಎಡಭಾಗಕ್ಕೆ, ಶ್ವಾಸಕೋಶವೂ ಅದಲು-ಬದಲಾಗಿದ್ದು, ಮಗುವಿನ ದೇಹದ ಅಂಗಾಂಗ ರಚನೆ ಕನ್ನಡಿಯಲ್ಲಿ ಕಾಣುವಂತಿತ್ತು. ಜೀವನ್ಮರಣದ ಮಧ್ಯೆ ಸೆಣಸುತ್ತಿದ್ದ ಮಗುವಿಗೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರ ಎಂಬುದನ್ನು ವೈದ್ಯರು ಮನಗಂಡು ಅತ್ಯಂತ ಕ್ಲಿಷ್ಟ ಶಸ್ತ್ರಚಿಕಿತ್ಸೆಗೆ ಅಣಿಯಾದರು.

9 ಗಂಟೆ ನಿರಂತರ ಶಸ್ತ್ರಚಿಕಿತ್ಸೆ:
20 ದಿನ ಹಾಗೂ ಕೇವಲ 2.5 ಕೆ.ಜಿ. ತೂಕದ ಮಗುವಿನ ಹೃದಯ ಶಸ್ತ್ರಚಿಕಿತ್ಸೆಯನ್ನು ಪರಿಣಿತ ವೈದ್ಯ ಡಾ| ಪ್ರವೀಣ ತಂಬ್ರಳ್ಳಿಮಠ ಅವರ ನೇತೃತ್ವದಲ್ಲಿ ಡಾ| ನಿಕುಂಜ ವ್ಯಾಸ ಹಾಗೂ ತಂಡ, ಸುಮಾರು 9 ಗಂಟೆಗಳ ಕಾಲ ನಡೆಸಿತು. ಇದರಿಂದ ಉಸಿರಾಟದ ಪ್ರಕ್ರಿಯೆ ಸರಾಗವಾಗಿ, ಉಳಿದ ಅಂಗಾಂಗಗಳ ಕಾರ್ಯ ನಿರ್ವಹಣೆ ಸಹ ಸಮರ್ಪಕವಾಗಿ ನಡೆಯುವಂತಾಯಿತು. ಶಸ್ತ್ರಚಿಕಿತ್ಸೆ ನಂತರ ತುರ್ತು ನಿಗಾ ಘಟಕದಲ್ಲಿ ಚಿಕ್ಕಮಕ್ಕಳ ತಜ್ಞೆ ಡಾ| ನಿಧಿ ಗೋಯಲ್‌ ಮಾನ್ವಿ ನಿರಂತರ 15 ದಿನ ಮಗುವಿನ ಆರೈಕೆ ನಡೆಸಿದ್ದಾರೆ. ಪ್ರಪಂಚದಲ್ಲಿ ಇಂತಹ ಕೇವಲ ಐದು ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಕೆಎಲ್‌ಇ ಆಸ್ಪತ್ರೆಯಲ್ಲಿ ಈ 6ನೇ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ ಎಂದು ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ| ಎಂ.ವಿ. ಜಾಲಿ ತಿಳಿಸಿದ್ದಾರೆ. ಮಗು ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next