Advertisement

ಪಾಪುಗೆ ಮೆದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

11:37 PM Feb 26, 2020 | Lakshmi GovindaRaj |

ಹುಬ್ಬಳ್ಳಿ: ಹಿರಿಯ ಪತ್ರಕರ್ತ, ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅವರ ಮೆದುಳಿನ ಹೊರಭಾಗದಲ್ಲಿ ರಕ್ತಹೆಪ್ಪುಗಟ್ಟಿದ್ದ ಸಣ್ಣಗಾತ್ರದ ಭಾಗವನ್ನು ಕಿಮ್ಸ್‌ ಆಸ್ಪತ್ರೆಯ ತಜ್ಞ ವೈದ್ಯರು ಬುಧವಾರ ಬೆಳಗ್ಗೆ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದ್ದು, ಡಾ| ಪಾಪು ಅವರು ಆರೋಗ್ಯವಾಗಿದ್ದಾರೆ.

Advertisement

ಶ್ವಾಸಕೋಶ, ಮೂತ್ರಕೋಶ, ರಕ್ತದೊತ್ತಡ ಸಮಸ್ಯೆ ಸೇರಿದಂತೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಡಾ| ಪಾಪು ಅವರು ಫೆ.9ರಂದು ಕಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿಂದೆ ಅವರು ಹೋರಾಟದ ವೇಳೆ ಆಯತಪ್ಪಿ ಬಿದ್ದ ಪರಿಣಾಮ ಅವರ ಮೆದುಳಿನ ಹೊರಭಾಗದಲ್ಲಿ ಕ್ರಾನಿಕ್‌ ಸಬ್‌ಡೋರೆಲ್‌ ಹೆಮಟೋಮಾ (ರಕ್ತ ಹೆಪ್ಪುಗಟ್ಟುವುದು)ಆಗಿತ್ತು.

ಬುಧವಾರ ಬೆಳಗ್ಗೆ ಕಿಮ್ಸ್‌ನ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಹಾಗೂ ವೈದ್ಯಕೀಯ ಅಧೀಕ್ಷಕ ಡಾ| ಅರುಣಕುಮಾರ ಸಿ.ನೇತೃತ್ವದಲ್ಲಿ ನರರೋಗ ತಜ್ಞ ಡಾ| ಸುರೇಶ ದುಗ್ಗಾಣಿ, ಡಾ| ವಿಶ್ವನಾಥ, ಡಾ| ಗುರುಪಾದಪ್ಪ, ಅರವಳಿಕೆ ಶಾಸ್ತ್ರ ತಜ್ಞೆ ಡಾ| ಸೋಫಿಯಾ ಶೇಖ ಹಾಗೂ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞರುಳ್ಳ ವೈದ್ಯರು ಸುಮಾರು 45 ನಿಮಿಷಗಳ ಕಾಲ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೆಪ್ಪುಗಟ್ಟಿದ್ದ ಭಾಗವನ್ನು ತೆಗೆದರು.

ಡಾ|ಪಾಪು ಅವರ ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಣಕ್ಕೆ ಬಂದಿದೆ. ಇದೀಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಕಿಮ್ಸ್‌ನ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ.

ಪಿ.ಮಣಿವಣ್ಣನ್‌ ಭೇಟಿ: ಕಾರ್ಮಿಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ರಾಜ್ಯ ಸರ್ಕಾರದ ಕಾರ್ಯದರ್ಶಿ ಪಿ.ಮಣಿವಣ್ಣನ್‌ ಬುಧವಾರ ಆಸ್ಪತ್ರೆಗೆ ಭೇಟಿ ನೀಡಿ, ಪಾಪು ಅವರ ಆರೋಗ್ಯ ವಿಚಾರಿಸಿದರು. ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಭೇಟಿ ನೀಡಿದ ಅವರು, ಡಾ| ಪಾಪು ಅವರಿಗೆ ನೀಡುತ್ತಿರುವ ಚಿಕಿತ್ಸೆ, ವೈದ್ಯಕೀಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next